ಈ ಟಿವಿ ಸ್ಪರ್ಧಿಗಳಿಗೆ ಜಯಂತ್ ಕಾಯ್ಕಿಣಿ ಕಿವಿಮಾತು
ಬೆಂಗಳೂರು, ಜು.25: ಕರ್ನಾಟದಲ್ಲಿ ಸಂಗೀತ ಪ್ರತಿಭೆಗಳನ್ನು ಹುಡುಕಲು ಏರ್ಟೆಲ್ ಸಹಯೋಗದೊಂದಿಗೆ ಈಟಿವಿ ಕನ್ನಡ ವಾಹಿನಿ ಸಮರ್ಪಿಸುತ್ತಿರುವ ವಿಶಿಷ್ಟ ಕಾರ್ಯಕ್ರಮ 'ವಾಯ್ಸ್ ಆಫ್ ಕರ್ನಾಟಕ' ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಗುರುವಾರ ವಿಜೃಂಭಣೆಯಿಂದ ನಡೆಯಿತು.
ಕಳೆದ ಕೆಲವು ವಾರಗಳಿಂದ ನಡೆದ ಈ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಪ್ರದೇಶಗಳ 8 ಮಂದಿ ಹಾಡುಗಾರರು ಅಂತಿಮ ಹಂತಕ್ಕೆ ಪ್ರವೇಶಿಸಿದ್ದರು. ಈ ಎಂಟು ಮಂದಿಯಲ್ಲಿ ಸಹ್ಯಾದ್ರಿ ಕರ್ನಾಟಕದ ಸ್ಪರ್ಧಿ ಅನನ್ಯ ಭಗತ್ ವಾಯ್ಸ್ ಆಫ್ ಕರ್ನಾಟಕ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದರು. ಗೆದ್ದ ಸ್ಪರ್ಧಿಗೆ ಖ್ಯಾತ ಹಿನ್ನಲೆ ಗಾಯಕಿ ಕವಿತಾ ಕೃಷ್ಣಮೂರ್ತಿ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಾಹಿತಿ, ಗೀತರಚನೆಕಾರ ಜಯಂತ ಕಾಯ್ಕಿಣಿ ಸ್ಪರ್ಧಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ವಿನಯದಿಂದ ನಡೆದುಕೊಂಡಾಗಲಷ್ಟೇ ಉನ್ನತ ಸ್ತರಕ್ಕೆ ಏರಲು ಸಾಧ್ಯ ವಾಗುತ್ತದೆ ಎಂದರು. ಅವಕಾಶ ಸಿಕ್ಕಂತಹವರು ಅವಕಾಶ ವಂಚಿತರಿಗೆ ನೋವಾಗುವಂತೆ ನಡೆದುಕೊಳ್ಳಬಾರದು ಎಂದು ಸ್ಪರ್ಧಾಳುಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತ ವಿದ್ವಾಂಸರಾದ ರಾಜನ್, ನಾಗರಾಜರಾವ್ ಹವಾಲ್ದಾರ್, ಪಿಚ್ಚ್ಚಳ್ಳಿ ಶ್ರೀನಿವಾಸ್, ಪ್ರವೀಣ್ ಗೋಡ್ಕಿಂಡಿ, ಬಿ.ಕೆ.ಸುಮಿತ್ರಾ, ಆನೂರು ಅನಂತ ಕೃಷ್ಣ ಶರ್ಮ ಮುಂತಾದ ಗಣ್ಯರು ಉಪಸ್ಥಿತರಿದ್ದರು.
(ದಟ್ಸ್ಕನ್ನಡ ವಾರ್ತೆ)


Click it and Unblock the Notifications











