ಭಗವಂತನೊಂದಿಗೆ ಹಂಸಲೇಖರ ಪದಸರಸ
ಒಂದೆರಡಲ್ಲ, ಮೂರೂವರೆ ದಶಕಗಳ ಹಿಂದೆಯೇ ಕನ್ನಡ ಚಿತ್ರರಂಗಕ್ಕೆ ಬಂದವರು ಹಂಸಲೇಖ. ಆ ದಿನಗಳಲ್ಲಿ ಸಕ್ಸಸ್ಗಾಗಿ ಅವರು ವಿಪರೀತ ಕಷ್ಟಪಟ್ಟರು. ಆರಂಭಿಕ ದಿನಗಳಲ್ಲಿ ಗೆಲುವೆಂಬುದು ಹಂಸಲೇಖ ಅವರನ್ನು ಹತ್ತಿರಕ್ಕೂ ಬಿಟ್ಟುಕೊಳ್ಳಲಿಲ್ಲ. ಗೆಲುವಿನ ಕನವರಿಕೆಯಲ್ಲಿ ಹೋದಾಗ ಕೂಡ ಸೋಲೆಂಬ ಸೋಲೇ ಜೊತೆಯಾಗುತ್ತಿತ್ತಲ್ಲ. ಆ ಕಾರಣದಿಂದ ಸಹಜವಾಗಿಯೇ ಬೇಸರಗೊಂಡಿದ್ದರು ಹಂಸಲೇಖ.
ಈ ಪರಿಯ ಸಂಕಟಿಗಳಿಗೆಲ್ಲ ಆ ದೇವರ ಅನುಗ್ರಹ ಇಲ್ಲದಿರುವುದೇ ಎಂಬ ಭಾವ ಅವರ ಕೈಹಿಡಿದದ್ದೇ ಆಗ. ಅದೇ ಸಿಟ್ಟಿನಲ್ಲಿ ಅವರು "ನೀನಾ ಭಗವಂತಾ, ಜಗಕುಪಕರಿಸಿ ನನಗಪಕರಿಸೋ ಲೋಕಾದ್ಧಾರಕ ನೀನೇನಾ?"ಎಂಬ ಹಾಡು ಬರೆದರು. ಅದನ್ನು "ತ್ರಿವೇಣಿ" ಚಿತ್ರಕ್ಕೆ ಬಳಸಿಕೊಂಡದ್ದೂ ಆಯಿತು.
ಮುಂದೆ, ಯಶಸ್ಸಿನ ಗೌರಿಶಂಕರ ಹತ್ತಿದರಲ್ಲ. ಆಗ ಮತ್ತದೇ ಹಂಸಲೇಖರ ಬಳಿಗೆ ಹೋದ ಪತ್ರಕರ್ತರು ಕೇಳಿದರಂತೆ : ಅಲ್ರೀ ಆಗೇನೋ ದೇವರು ಏನನ್ನೂ ಅನುಗ್ರಹಿಸಲಿಲ್ಲ, ನೀನೇನಾ ಭಗವಂತಾ ಅಂತ ಬೈದು ಬರೆದುಬಿಟ್ರಿ. ಈಗ ನಿಮಗೆ ಬಯಸಿದ್ದೆಲ್ಲ ಸಿಕ್ಕಿದೆ. ಇಂಥ ಸಂದರ್ಭದಲ್ಲಿ ಅದೇ ಭಗವಂತನ ಮೇಲೆ ಹಾಡು ಬರೆಯಪ್ಪ ಅಂದ್ರೆ ಹೇಗೆ ಬರಿತೀರೀ ?
ಜಾಣ ಹಂಸಲೇಖ ಒಮ್ಮೆ ಜೋರಾಗಿ ನಕ್ಕು ಹೇಳಿದರಂತೆ : ಈಗಾಗಿದ್ರೆ "ನೀನಾ ಭಗವಂತಾ" ಎಂದು ಬೈಯುವ ಬದಲು, "ನೀನೇ ಭಗವಂತಾ" ಎಂದು ಹಾಡಿ ಹೊಗಳಿ ಬರೀತಿದ್ದೆ...!
ಇದನ್ನೂ ಓದಿ:
ಗಾಯಕರಿಗೆ ಎಸ್ಪಿಬಿ 'ತಣ್ಣನೆಯ' ಕಿವಿಮಾತು


Click it and Unblock the Notifications











