'ಡೊಳ್ಳು' ಚಿತ್ರದ ಮೊದಲ ಹಾಡು ರಿಲೀಸ್: 'ಮಾಯಾನಗರಿ'ಯಲ್ಲಿ ಕಳೆದು ಹೋದ ಡಾಲಿ!
ನಿರ್ದೇಶಕ, ನಟ ಪವನ್ ಒಡೆಯರ್ ನಿರ್ಮಾಣದ ಚೊಚ್ಚಲ ಸಿನಿಮಾ 'ಡೊಳ್ಳು'. 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಭಾಜನವಾಗಿದ್ದ ಈ ಸಿನಿಮಾ ಇದೀಗ ಬಿಡುಗಡೆಗೆ ಸಿದ್ಧವಾಗುತ್ತಿದೆ. ಇಂತಹ ಹೊತ್ತಲೇ ಚಿತ್ರದ ಮೊದಲ ಹಾಡು 'ಮಾಯಾನಗರಿ' ಹೊರ ಬಂದಿದೆ.
ಕಂಟೆಂಟ್ ಕಾರಣಕ್ಕೆ 'ಡೊಳ್ಳು' ಸಿನಿಮಾ ಬಹಳ ನಿರೀಕ್ಷೆ ಮೂಡಿಸಿದೆ. ಕರ್ನಾಟಕದ ಗಂಡು ಕಲೆ ಆಧರಿಸಿ ನಿರ್ದೇಶಕ ಸಾಗರ್ ಪುರಾಣಿಕ್ ಈ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಒಡೆಯರ್ ಮೂವೀಸ್ ಬ್ಯಾನರ್ನಲ್ಲಿ ಪವನ್ ಒಡೆಯರ್ ಹಾಗೂ ಅಪೇಕ್ಷಾ ಪುರೋಹಿತ್ ದಂಪತಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನಟ ರಾಕ್ಷಸ ಡಾಲಿ ಧನಂಜಯ 'ಡೊಳ್ಳು' ಚಿತ್ರದ ಮೊದಲ ಹಾಡನ್ನು ರಿಲೀಸ್ ಮಾಡಿ ಶುಭ ಹಾರೈಸಿದ್ದಾರೆ.
'ಡೊಳ್ಳು' ಚಿತ್ರದಲ್ಲಿ ಕಾರ್ತಿಕ್ ಮಹೇಶ್ ನಾಯಕನಾಗಿ ನಟಿಸಿದ್ದು, ನಿಧಿ ಹೆಗ್ಡೆ ನಾಯಕಿಯಾಗಿ ಬಣ್ಣ ಹಚ್ಚಿದ್ದು, ಉಳಿದಂತೆ ಬಾಬು ಹಿರಣಯ್ಯ, ಚಂದ್ರ ಮಯೂರ್, ಶರತ್ ಮುಂತಾದವರು ತಾರಾಗಣದಲ್ಲಿದ್ದಾರೆ. ಶ್ರೀನಿಧಿ ಚಿತ್ರಕಥೆ ಸಂಭಾಷಣೆ ಬರೆದಿದ್ದು, ಅನಂತ್ ಕಾಮಂತ್ ಸಂಗೀತ, ಅಭಿಲಾಷ್ ಕಲಾಥಿ ಕ್ಯಾಮೆರಾ ಚಿತ್ರಕ್ಕಿದೆ. ಜನಪದ ಕಲೆ ಮಹತ್ವ ಎತ್ತಿ ತೋರಿಸುವ 'ಡೊಳ್ಳು' ಸಿನಿಮಾ ಬಿಡುಗಡೆಗೂ ಮೊದಲೇ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.

ಹಾಡು ನೋಡಿ ಧನಂಜಯ ಮೆಚ್ಚುಗೆ
ನಟ ಡಾಲಿ ಧನಂಜಯ್ 'ಮಯಾನಗರಿ' ಹಾಡನ್ನು ಬಿಡುಗಡೆ ಮಾಡಿ, ತಾವು ಬೆಂಗಳೂರಿಗೆ ಬಂದ ದಿನದ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಹಳ್ಳಿಯಿಂದ ಕೆಲಸ ಅರಸಿ ಬೆಂಗಳೂರಿಗೆ ಬರುವ ನಾಯಕನ ಕಣ್ಣಲ್ಲಿ ಮಯಾನಗರಿ ಸೊಬಗನ್ನು ತೆರೆದಿಡುವ ಈ ಹಾಡಿಗೆ ಪ್ರದ್ಯುಮ್ನ ನರಹಳ್ಳಿ ಪ್ರಾಸಬದ್ಧ ಪದಪುಂಜಗಳನ್ನು ಪೋಣಿಸಿ ಸಾಹಿತ್ಯ ಬರೆದಿದ್ದು, ಆನಂತ್ ಕಾಮನ್ ಸಂಗೀತವಿದೆ. ಸ್ವತಃ ನಿರ್ದೇಶಕರಾದ ಸಾಗರ್ ಪುರಾಣಿಕ್ ಈ ಹಾಡನ್ನು ಹಾಡಿದ್ದು ಈ ಮೂಲಕ ಗಾಯಕರಾಗಿಯೂ ಅವರು ಪರಿಚಿತರಾಗಿದ್ದಾರೆ.

ಹಾಡಿನಲ್ಲಿ 'ಮಯಾನಗರಿ'ಯ ದರ್ಶನ
ಆಟೋ ಏರಿ ನಾಯಕ ಮೊದಲ ಬಾರಿಗೆ ಮಾಯಾನಗರಿಯನ್ನು ಬೆರಗುಗಣ್ಣಿನಿಂದ ನೋಡುವ ಚಿತ್ರಣವನ್ನು ಹಾಡಿನಲ್ಲಿ ಕಟ್ಟಿಕೊಡಲಾಗಿದೆ. ನಗರದ ಗಗನಚುಂಬಿ ಕಟ್ಟಡಗಳು, ವಿಧಾನ ಸೌಧ ಸೇರಿದಂತೆ ನಗರ ರಸ್ತೆಗಳಲ್ಲಿ ಹಾಡು ನೋಡುಗರನ್ನು ಕರೆದುಕೊಂಡು ಹೋಗುತ್ತದೆ. ನಿಜಕ್ಕೂ 'ಮಾಯಾನಗರಿ'ಯ ದರ್ಶನವನ್ನು ಹಾಡು ಮಾಡಿಸುತ್ತಿದೆ.

'ಡೊಳ್ಳು' ಚಿತ್ರಕ್ಕೆ 2 ರಾಷ್ಟ್ರಪ್ರಶಸ್ತಿ ಗೌರವ
2020ನೇ ಸಾಲಿನ ಸಿನಿಮಾಗಳಿಗೆ ಇತ್ತೀಚೆಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ ಮಾಡಲಾಗಿದ್ದು,'ಡೊಳ್ಳು' ಚಿತ್ರಕ್ಕೆ 'ಅತ್ಯುತ್ತಮ ಪ್ರಾದೇಶಿಕ ಕನ್ನಡ ಚಿತ್ರ' ಪ್ರಶಸ್ತಿ ಮತ್ತು ಅತ್ಯುತ್ತಮ ಆಡಿಯೋಗ್ರಫಿ (ಲೊಕೇಶನ್ ಸೌಂಡ್ ರೆಕಾರ್ಡಿಸ್ಟ್) ಪ್ರಶಸ್ತಿ ಜೋಬಿನ್ ಜಯನ್ಗೆ ಸಿಕ್ಕಿದೆ. ನಿರ್ಮಾಣದ ಮೊದಲ ಚಿತ್ರಕ್ಕೆ ಈ ರೀತಿ ರಾಷ್ಟ್ರಪ್ರಶಸ್ತಿ ಸಿಕ್ಕಿದ್ದು ಪವನ್ ಒಡೆಯರ್ ದಂಪತಿ ಬಹಳ ಸಂತಸ ತಂದಿತ್ತು. ಶೀಘ್ರದಲ್ಲೇ ಪ್ರಶಸ್ತಿ ಪ್ರದಾನ ಸಮಾರಂಭ ಕೂಡ ನಡೆಯಲಿದೆ.

ಆಗಸ್ಟ್ 26ಕ್ಕೆ ತೆರೆಮೇಲೆ 'ಡೊಳ್ಳು'
ಈಗಾಗಲೇ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನದಲ್ಲಿ ಕಂಡು ಭಾರೀ ಮೆಚ್ಚುಗೆ ಪಡೆದಿರುವ ಡೊಳ್ಳು ಸಿನಿಮಾ ಇದೇ ಆಗಸ್ಟ್ 26ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. "ಡೊಳ್ಳು ಹಣ ಮಾಡುವುದಕ್ಕಾಗಿ ನಿರ್ಮಾಣ ಮಾಡಿದ ಸಿನಿಮಾ ಅಲ್ಲ. ನನ್ನ ನಾಡಿಗೆ, ನನ್ನ ನಾಡ ಕಲೆಗೆ ನಮ್ಮಿಂದ ಋಣ ಸಂದಾಯ ಎಂದಕೊಂಡು ಮಾಡಿದ ಸಿನಿಮಾ" ಎಂದು ನಿರ್ಮಾಪಕ ಪವನ್ ಒಡೆಯರ್ ಹೇಳಿದ್ದರು. ಜನಪದ ಕಲೆಯ ಮಹತ್ವ ಎತ್ತಿ ತೋರಿಸುವ 'ಡೊಳ್ಳು' ಚಿತ್ರಕ್ಕೆ ಶುಭವಾಗಲಿ.


Click it and Unblock the Notifications











