ಮ್ಯೂಸಿಕ್ ಮಾಫಿಯಾ ವಿರುದ್ಧ ದಂಗೆ?: ಸೋನು ನಿಗಂ ಬೆಂಬಲಕ್ಕೆ ಅದ್ನಾನ್ ಸಮಿ, ಅಲಿಶಾ
ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಬಾಲಿವುಡ್ನಲ್ಲಿ ಭುಗಿಲೆದ್ದಿರುವ ಸ್ವಜನಪಕ್ಷಪಾತದ ಚರ್ಚೆ ಸಂಗೀತ ಕ್ಷೇತ್ರಕ್ಕೂ ಕಾಲಿರಿಸಿದೆ. ಬಾಲಿವುಡ್ನ ಸಂಗೀತ ವಲಯದಲ್ಲಿನ ಸ್ವಜನಪಕ್ಷಪಾತ, ಹೊಸ ಪ್ರತಿಭೆಗಳಿಗೆ ಅವಕಾಶ ಸಿಗದೆ ಇರುವುದರ ಬಗ್ಗೆ ಹಿರಿಯ ಗಾಯಕ ಸೋನು ನಿಗಂ ಕಿಡಿಕಾರಿದ್ದರು. ಸಂಗೀತ ಕ್ಷೇತ್ರದಲ್ಲಿಯೂ ಆತ್ಮಹತ್ಯೆಯಂತಹ ಘಟನೆಗಳು ನಡೆದರೆ ಅಚ್ಚರಿಯಿಲ್ಲ ಎಂದಿದ್ದರು.
Recommended Video
ಮತ್ತೊಂದು ವಿಡಿಯೋ ಮಾಡಿದ್ದ ಸೋನು ನಿಗಂ, ಅದರಲ್ಲಿ ಬಾಲಿವುಡ್ನ ದಿಗ್ಗಜ ಮ್ಯೂಸಿಕ್ ಸಂಸ್ಥೆ ಟಿ-ಸೀರೀಸ್ನ ಅಧ್ಯಕ್ಷ ಭೂಷಣ್ ಕುಮಾರ್ ಹೆಸರನ್ನು ನೇರವಾಗಿ ಉಲ್ಲೇಖಿಸುವ ಮೂಲಕ ಅಲ್ಲೋಲಕಲ್ಲೋಲ ಉಂಟುಮಾಡಿದ್ದಾರೆ. ಇನ್ನೊಂದೆಡೆ ಕೆಲವು ಗಾಯಕರು, ಇಲ್ಲಿ ಸ್ವಜನಪಕ್ಷಪಾತವೇನೂ ಇಲ್ಲ ಎಂದು ಹೇಳಿಕೆ ನೀಡುತ್ತಿದ್ದರೆ, ಅನೇಕರು ಈ ವಿಚಾರವಾಗಿ ಮಾತನಾಡುವ ಧೈರ್ಯ ಪ್ರದರ್ಶಿಸಿಲ್ಲ.
ಈ ಮಧ್ಯೆ ಗಾಯಕರಾದ ಅದ್ನಾನ್ ಸಮಿ ಮತ್ತು ಅಲಿಶಾ ಚಿನೈ, ಸೋನು ಹೇಳಿಕೆಯನ್ನು ಬೆಂಬಲಿಸಿದ್ದರೆ, ಗಾಯಕಿ ನೇಹಾ ಭಾಸಿನ್ ಕೂಡ ಸಂಗೀತ ಕ್ಷೇತ್ರದ ಭ್ರಷ್ಟಾಚಾರದ ವಿರುದ್ಧ ಕಿಡಿಕಾರಿದ್ದಾರೆ. ಸ್ವಪರಿಶ್ರಮದಿಂದ ಹೆಸರು ಮಾಡಿದ ಇನ್ನೊಬ್ಬ ಗಾಯಕಿ ನೇಹಾ ಕಕ್ಕರ್ ಸಾಮಾಜಿಕ ಜಾಲತಾಣವನ್ನೇ ತೊರೆದಿದ್ದಾರೆ. ಮುಂದೆ ಓದಿ...

ಪ್ರತಿಭೆಗಳ ಶೋಷಣೆ
ಸಂಗೀತ ಉದ್ಯಮದಲ್ಲಿನ ಏಕಸ್ವಾಮದ ವಿರುದ್ಧ ಅದ್ನನ್ ಸಮಿ ಹಾಗೂ ಅಲಿಶಾ ಚಿನೈ ದನಿ ಎತ್ತಿದ್ದಾರೆ. ಹೊಸ ಪ್ರತಿಭೆಗಳನ್ನು ಶೋಷಿಸಲಾಗುತ್ತಿದೆ. ಅವರ ಸೃಜನಶೀಲತೆಯನ್ನು ಹತ್ತಿಕ್ಕಲಾಗುತ್ತಿದೆ ಎಂದು ಆರೋಪಿಸಿರುವ ಅದ್ನಾನ್ ಸಮಿ, ರೀಮೇಕ್ ಮತ್ತು ರೀಮಿಕ್ಸ್ ಟ್ರೆಂಡ್ಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಸುದೀರ್ಘ ಬರಹ ಹಂಚಿಕೊಂಡಿದ್ದಾರೆ.

ಸೃಜನಶೀಲತೆ ಎಂಬುದೇ ತಿಳಿದಿಲ್ಲ
'ಭಾರತೀಯ ಸಿನಿಮಾ ಮತ್ತು ಸಂಗೀತ ಉದ್ಯಮದಲ್ಲಿ ಗಂಭಿರವಾಗಿ ಆಮೂಲಾಗ್ರ ಬದಲಾವಣೆಯ ಅಗತ್ಯವಿದೆ. ಮುಖ್ಯವಾಗಿ ಮ್ಯೂಸಿಕ್, ಹೊಸ ಹಾಡುಗಾರರು, ಹಿರಿಯ ಗಾಯಕರು, ಸಂಗೀತ ನಿರ್ದೇಶಕರು ಮತ್ತು ಸಂಗೀತ ನಿರ್ಮಾಪಕರ ವಿಚಾರದಲ್ಲಿ ಬದಲಾಗಬೇಕಿದೆ. ಏಕೆಂದರೆ ಅವರನ್ನು ಕತ್ತಿಯ ಅಂಚಿನಲ್ಲಿ ನಿಲ್ಲಿಸಿ ಶೋಷಿಸಲಾಗುತ್ತಿದೆ. ಹೇಳಿದ್ದನ್ನು ಕೇಳು, ಇಲ್ಲವೇ ಹೊರ ಹೋಗು... ಸೃಜನಶೀಲತೆಯ ಬಗ್ಗೆ ಕಿಂಚಿತ್ತೂ ತಿಳಿದಿರದ ಜನರು ಸೃಜನಶೀಲತೆಯನ್ನು ನಿಯಂತ್ರಿಸುತ್ತಿರುವಾಗ ಮತ್ತು ದೇವರಂತೆ ತಮ್ಮನ್ನು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಏಕೆ? ಎಂದು ಕೇಳಿದ್ದಾರೆ.

ಇತಿಹಾಸದಿಂದ ಕಲಿತುಕೊಳ್ಳಿ
ದೇವರ ದಯೆಯಿಂದ ಭಾರತದಲ್ಲಿ 1.3 ಬಿಲಿಯನ್ ಜನರಿದ್ದೇವೆ. ಇಲ್ಲಿ ನಮಗೆ ರೀಮೇಕ್ ಮತ್ತು ರೀಮಿಕ್ಸ್ಗಳನ್ನು ಮಾಡಲು ಆಫರ್ ನೀಡಲಾಗುತ್ತಿದೆ. ಇದನ್ನು ನಿಲ್ಲಿಸಿ!! ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿ, ಹಿರಿಯ ಗಾಯಕರಿಗೆ ಉಸಿರಾಡಲು ಬಿಡಿ. ನಿಮ್ಮ ಸೃಜನಶೀಲತೆಯನ್ನು ಸಂಗೀತಮಯ ಮತ್ತು ಸಿನಿಮಾಮಯ ಮಾಡಿ. ನೀವು, ಸಿನಿಮಾ ಮತ್ತು ಸಂಗೀತ ಮಾಫಿಯಾ ನಿಮ್ಮಷ್ಟಕ್ಕೆ ನೀವೇ ಸ್ವಯಂ ಅಧಿಕಾರ ಪಡೆದುಕೊಂಡು ಮತ್ತು ಸ್ವಯಂ ನೇಮಿತ ದೇವರು ಎಂದುಕೊಂಡಿದ್ದೀರಿ. ಕಲೆಯನ್ನು ಮತ್ತು ಯಾವುದೇ ಕ್ಷೇತ್ರದ ಸೃಜನಶೀಲತೆಯ ಪರಿಸರ ವ್ಯವಸ್ಥೆಯನ್ನು ನಿಮ್ಮಿಂದ ನಿಯಂತ್ರಿಸಲು ಸಾಧ್ಯವಿಲ್ಲ ಎಂಬ ಬಗ್ಗೆ ಇತಿಹಾಸದಿಂದ ನೀವು ಏನನ್ನೂ ಕಲಿತುಕೊಂಡಿಲ್ಲ. ಸಾಕು. ಅದರಿಂದ ಬದಲಾಗಿ. ಬದಲಾವಣೆ ಇಲ್ಲಿದೆ ಮತ್ತು ನಿಮ್ಮ ಬಾಗಿಲನ್ನು ತಟ್ಟುತ್ತಿದೆ. ಸಿದ್ಧರಾಗಿ ಅಥವಾ ಇಲ್ಲವೇ, ಅದು ಬರುತ್ತಿದೆ ಎಂದು ಅದ್ನಾನ್ ಸಮಿ ಹೇಳಿದ್ದಾರೆ.

ನೈತಿಕತೆಯೇ ಇಲ್ಲ
ಅದ್ನಾನ್ ಸಮಿ ಅವರ ಪೋಸ್ಟ್ನ ಕೆಲವು ಅಂಶಗಳನ್ನು 'ಮೇಡ್ ಇನ್ ಇಂಡಿಯಾ' ಖ್ಯಾತಿಯ ಗಾಯಕಿ ಅಲಿಶಾ ಚಿನ್ನೈ ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 'ಇದು ನಂಜಿನ ಉದ್ಯಮ. ಸಿನಿಮಾ ಮತ್ತು ಸಂಗೀತ ಮಾಫಿಯಾ ನಿಮ್ಮನ್ನು ಭಯದಿಂದ ಮತ್ತು ಶಕ್ತಿ ಬಳಸಿ ನಿಯಂತ್ರಿಸಲು ಪ್ರಯತ್ನಿಸುತ್ತದೆ. ಇದು ಶೂನ್ಯ ನೈತಿಕತೆಯ ಕೆಲಸ. ಇಲ್ಲಿ ನ್ಯಾಯವಿಲ್ಲ ಎಂದು ಅಲಿಶಾ ಸುದೀರ್ಘ ಬರಹ ಬರೆದುಕೊಂಡಿದ್ದಾರೆ.

ನೇಹಾ ಭಾಸಿನ್ ಕಿಡಿ
ಸಂಗೀತ ನಿರ್ದೇಶಕ ಅನು ಮಲಿಕ್ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಈ ಹಿಂದೆ ಆರೋಪ ಮಾಡಿದ್ದ ಗಾಯಕಿ ನೇಹಾ ಭಾಸಿನ್, ಸಂಗೀತ ಕ್ಷೇತ್ರದಲ್ಲಿ ಮಾಫಿಯಾ ಇರುವುದು ಚೆನ್ನಾಗಿ ಕಾಣಿಸುತ್ತದೆ. ಟಿ ಸೀರಿಸ್ ಜತೆಗಿನ ನನ್ನ ಭಿನ್ನಾಭಿಪ್ರಾಯದಿಂದಾಗಿ ನನ್ನ ಹಾಡನ್ನು ಅದರಿಂದ ಕಿತ್ತುಹಾಕಲಾಗಿತ್ತು. ನನಗೆ ನೋವಾಗಿತ್ತು, ಭಯವಾಗಿತ್ತು. ಆದರೆ ನನ್ನ ಗಂಡ ಹೇಳಿದರು, 'ನಿನ್ನ ವೃತ್ತಿ ಬದುಕು ನೀಡಿದ್ದು ಅವರಲ್ಲ, ಅದನ್ನು ರೂಪಿಸಿಕೊಂಡಿದ್ದು ನೀನು' ಎಂದು ಎಂಬುದಾಗಿ ಹೇಳಿದ್ದಾರೆ.

ನೇಹಾ ಕಕ್ಕರ್
ಸಾಯುತ್ತಿಲ್ಲ, ಹೆದರಬೇಡಿ- ನೇಹಾ ಕಕ್ಕರ ಗದ್ದಲಗಳ ನಡುವೆಯೇ, ಬಾಲಿವುಡ್ನಲ್ಲಿ ಸ್ವಯಂ ಪರಿಶ್ರಮದಿಂದ ಬೆಳೆದ ಗಾಯಕಿ ನೇಹಾ ಕಕ್ಕರ್, ಸಾಮಾಜಿಕ ಜಾಲತಾಣಗಳಿಂದ ಕೆಲವು ಸಮಯ ವಿರಾಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. 'ನಾನು ಮಲಗಲು ಹೋಗುತ್ತಿದ್ದೇನೆ. ಸ್ವಾತಂತ್ರ್ಯ, ಪ್ರೀತಿ, ಗೌರವ, ಕಾಳಜಿ, ಖುಷಿ, ಸ್ವೀಕಾರಾರ್ಹತೆ, ಉತ್ತಮ ಜನರು ಇರುವ, ದ್ವೇಷಿಸದ, ಸ್ವಜನಪಕ್ಷಪಾತವಿಲ್ಲದ, ಹೊಟ್ಟೆಕಿಚ್ಚು, ತೀರ್ಪು, ಯಜಮಾನಿಕೆಯ ಜನರು, ಹಿಟ್ಲರ್ಗಳು, ಕೊಲೆಗಳು, ಆತ್ಮಹತ್ಯೆಗಳು, ಕೆಟ್ಟ ಜನರು ಇಲ್ಲದಿರುವ ಒಳ್ಳೆಯ ಪ್ರಪಂಚ ಸೃಷ್ಟಿಯಾದಾಗ ನನ್ನನ್ನು ಎಬ್ಬಿಸಿ. ಗುಡ್ ನೈಟ್. ಚಿಂತಿಸಬೇಡಿ, ನಾನು ಸಾಯುತ್ತಿಲ್ಲ. ಕೆಲವು ದಿನಗಳ ಮಟ್ಟಿಗೆ ದೂರ ಹೋಗುತ್ತಿದ್ದೇನಷ್ಟೇ' ಎಂದು ನೇಹಾ ಬರೆದಿದ್ದಾರೆ.


Click it and Unblock the Notifications











