ಸಿಹಿ ಧ್ವನಿಯ ಮೂಲಕ 'ತೀರ್ಥಹಳ್ಳಿ ಸಿರಿ'ಯಾದ ಅನನ್ಯ
ಮಲೆನಾಡಿನ ಸಾಹಿತ್ಯದ ತವರೂರಾದ ತೀರ್ಥಹಳ್ಳಿ ರಾಷ್ಟ್ರಕವಿ ಕುವೆಂಪು ಅವರನ್ನು ನೀಡಿದೆ. ಅದೇ ತೀರ್ಥಹಳ್ಳಿಯಿಂದ ಬಂದ ಪ್ರತಿಭಾವಂತ ಗಾಯಕಿ ದಿನೇ ದಿನೇ ಹೆಸರು ಮಾಡುತ್ತಿದ್ದಾರೆ. ಅವರೇ ಅನನ್ಯ ಭಗತ್.
ಅನನ್ಯ ಭಗತ್ ತೀರ್ಥಹಳ್ಳಿ ಸಮೀಪದ ಕೌರಿಬೈಲೆಂಬ ಪುಟ್ಟಗ್ರಾಮದ ಕೃಷಿಕ ಕುಟುಂಬದ ಸತೀಶ್ ಭಗತ್ ಹಾಗೂ ಸಾವಿತ್ರಿ ಭಗತ್ ದಂಪತಿಗಳ ಪುತ್ರಿ. ಗ್ರಾಮೀಣ ಪ್ರದೇಶದ ಅನಾನುಕೂಲತೆಗಳ ನಡುವೆಯೂ ಹೆತ್ತವರ ಅಪಾರ ಪ್ರೋತ್ಸಾಹ ಮತ್ತು ಶ್ರಮದಿಂದ ಸಂಗೀತ ಕ್ಷೇತ್ರದಲ್ಲಿ ಮುನ್ನಡೆಯುತ್ತಿದ್ದಾರೆ.
ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದಲ್ಲಿ ಎಂಎ (ಸಂಗೀತ), ಎಂಫಿಲ್ ಮುಗಿಸಿ, ಪ್ರಸ್ತುತ ಡಾ||ಮೀರಾ ರಾಜಾರಾಂ ಪ್ರಾಣೇಶ್ ಅವರ ಮಾರ್ಗದರ್ಶನದಲ್ಲಿ ಪಿ.ಹೆಚ್ ಡಿ (ಸಂಗೀತ) ಸಂಶೋಧನೆಯನ್ನು ನಡೆಸುತ್ತಿದ್ದಾರೆ. ಬಾಲ್ಯದಲ್ಲಿಯೇ ಸಂಗೀತ ಅಭ್ಯಾಸದಲ್ಲಿ ತೊಡಗಿಸಿಕೊಂಡ ಅನನ್ಯ ಸಂಗೀತದ ಶಿಕ್ಷಣವನ್ನು ವಿದ್ವಾನ್ ಚಿಂತಾಮಣಿ ಶ್ರೀನಿವಾಸ್, ಡಾ|| ಸುಕನ್ಯಾ ಪ್ರಭಾಕರ್, ವಿದುಷಿ ಎಂ.ಎಸ್.ಶೀಲಾ ಅವರಲ್ಲಿ ಪಡೆದು, ಪ್ರಸ್ತುತ ಪದ್ಮಶ್ರೀ ಆರ್.ಎನ್.ತ್ಯಾಗರಾಜನ್ ಅವರ ಬಳಿ ಸಂಗೀತ ಶಿಕ್ಷಣವನ್ನು ಮುಂದುವರಿಸಿದ್ದಾರೆ. ಮುಂದೆ ಓದಿ...

ವಾಹಿನಿಗಳ ಪ್ರಮುಖ ಕಾರ್ಯಕ್ರಮಗಳಲ್ಲಿ ಭಾಗಿ
ಅನನ್ಯ ವಿವಿಧ ವಾಹಿನಿಗಳ ಪ್ರಖ್ಯಾತ ಕಾರ್ಯಕ್ರಮಗಳಲ್ಲಿ ಹಾಡಿರುವ ಖ್ಯಾತಿ ಪಡೆದಿದ್ದಾರೆ. 'ಎದೆ ತುಂಬಿ ಹಾಡುವೆನು', ‘ಎಂದೂ ಮರೆಯದ ಹಾಡು', ‘ರಾಗ ರಂಜಿನಿ' ಮುಂತಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ತಮ್ಮ 16ನೇ ವಯಸ್ಸಿನಲ್ಲಿ ಈ.ಟಿವಿ ವಾಹಿನಿಯವರು ನಡೆಸಿದ ‘ವಾಯ್ಸ್ ಆಫ್ ಕರ್ನಾಟಕ' ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಸಿನಿಮಾ ಹಾಡುಗಳಿಗೆ ಗಾಯನ
ಅನನ್ಯ ಕಂಠ ಅವರನ್ನು ಚಿತ್ರರಂಗಕ್ಕೆ ಸಹ ಕರೆದುಕೊಂಡು ಹೋಗಿದೆ. ಯೋಗರಾಜ್ ಭಟ್ ನಿರ್ದೇಶನದ 'ಮನಸಾರೆ', 'ಪಂಚರಂಗಿ', 'ಲೈಫು ಇಷ್ಟೇನೆ', 'ಮೀರಾ ಮೀಟ್ಸ್ ಮುರಳಿ', 'ಮಾತುಕಥೆ', 'ಎರಡು ಕನಸು', 'ಹೊಂಬಣ್ಣ', 'ಕಾಫಿ ತೋಟ', 'ನಾನಿ', 'ನೀರ್ ದೋಸೆ', 'ಮನಸಿನ ಮರೆಯಲಿ', 'ಕವಿ' ಮುಂತಾದ ಚಲನಚಿತ್ರಗಳಿಗೆ ಹಿನ್ನಲೆ ಗಾಯಕಿ ಅನನ್ಯ ಹಾಡು ಹಾಡಿದ್ದಾರೆ.

ದಿಗ್ಗಜರ ಜೊತೆಗೆ ವೇದಿಕೆ ಕಾರ್ಯಕ್ರಮ
ಸಂಗೀತ ಕ್ಷೇತ್ರದ ದಿಗ್ಗಜರುಗಳಾದ ಗಾಯಕ ಕುನಾಲ್ ಗಾಂಜಾವಾಲಾ, ಸಂಗೀತ ನಿರ್ದೇಶಕ ಮನೋಮೂರ್ತಿ, ಮಣಿಕಾಂತ್ ಕದ್ರಿ, ಸಾಧು ಕೋಕಿಲಾ ಮುಂತಾದವರ ಜೊತೆಗೆ ವೇದಿಕೆಯನ್ನು ಹಂಚಿಕೊಂಡಿದ್ದಾರೆ. ಇದರೊಂದಿಗೆ ಹಲವಾರು ಮ್ಯೂಸಿಕ್ ಆಲ್ಬಮ್ ಮತ್ತು ನೃತ್ಯ ರೂಪಕಗಳಿಗೆ ದನಿಯಾಗಿದ್ದಾರೆ. ಆಕಾಶವಾಣಿಯ ಬಿ-ಹೈ ಗ್ರೇಡ್ ಕಲಾವಿದೆಯೂ ಹೌದು.

ಅನನ್ಯಗೆ ಸಿಕ್ಕ ಪ್ರಶಸ್ತಿ ಪುರಸ್ಕಾರಗಳು
ಕರ್ನಾಟಕ ಕಲೆ ಮತ್ತು ಸಾಧನೆ ಅಕಾಡೆಮಿ ಅವರು 2014-15 ಸಾಲಿನ ಅತ್ಯುತ್ತಮ ಹಿನ್ನಲೆ ಗಾಯಕಿ ಪ್ರಶಸ್ತಿಯನ್ನು ಅನನ್ಯರಿಗೆ ನೀಡಿದ್ದಾರೆ. 'ನೀರ್ ದೋಸೆ' ಚಿತ್ರದ ಗಾಯನಕ್ಕೆ ಕರ್ನಾಟಕ ಚಿತ್ರ ರಸಿಕರ ಸಂಘದವರ 2016-17 ಸಾಲಿನ ಅತ್ಯುತ್ತಮ ಹಿನ್ನಲೆ ಗಾಯಕಿ ಪ್ರಶಸ್ತಿಯು ದೊರಕಿದೆ. 2018 ಸಾಲಿನ ರೇಡಿಯೋ ಸಿಟಿ ಸಿನಿ ಅವಾರ್ಡ್ಸ್ ಅತ್ಯುತ್ತಮ ಹಿನ್ನೆಲೆ ಗಾಯಕಿ (ನೀರ್ ದೋಸೆ) ಪ್ರಶಸ್ತಿಯನ್ನು ಪಡೆದಿದ್ದಾರೆ.

'ತೀರ್ಥಹಳ್ಳಿ ಸಿರಿ' ಪ್ರಶಸ್ತಿ
ಜನವರಿ 2019ರಲ್ಲಿ ತೀರ್ಥಹಳ್ಳಿಯಲ್ಲಿ ನಡೆದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ತೀರ್ಥಹಳ್ಳಿ ಸಿರಿ' ಪ್ರಶಸ್ತಿಯನ್ನು ಅನನ್ಯರಿಗೆ ನೀಡಿ ಗೌರವಿಸಲಾಗಿದೆ. ಕಳೆದ 15 ವರ್ಷಗಳಿಂದ ಭಕ್ತಿಸಂಗೀತ, ಚಿತ್ರ ಸಂಗೀತ, ಕರ್ನಾಟಕ ಶಾಸ್ತ್ರೀಯ ಸಂಗೀತದ ಕಾರ್ಯಕ್ರಮಗಳನ್ನು ದೇಶ ಹಾಗೂ ವಿದೇಶದಲ್ಲಿ ನೀಡುತ್ತಾ ಬಂದಿದ್ದಾರೆ.

'ಈ ಕನಸಿನ ಆರಂಭಕೆ' ಹಾಡು
'ಈ ಕನಸಿನ ಆರಂಭಕೆ' ಅನನ್ಯ ಅವರ ಹೊಸ ಕನಸಾಗಿದೆ. ಇದೊಂದು ವಿಡಿಯೋ ಆಲ್ಬಂ ಆಗಿದೆ. ಈ ಹಾಡಿನ ಟೀಸರ್ ಈಗಾಗಲೇ ಹೊರ ಬಂದಿದೆ. ತೀರ್ಥಹಳ್ಳಿಯ ಸುಂದರ ವಾತವರಣದಲ್ಲಿ ಈ ಹಾಡಿನ ಚಿತ್ರೀಕರಣ ಮಾಡಲಾಗಿದೆ. ಅಭಿರಾಮ್ ಹಾಡಿನ ಸಾಹಿತ್ಯ ಬರೆದಿದ್ದು, ಶಮಂತ್ ದವಲಗಿ ಇದನ್ನು ನಿರ್ದೇಶನ ಮಾಡಿದ್ದಾರೆ.


Click it and Unblock the Notifications











