ಸೂರಿ ನಿರ್ದೇಶನದ 'ಕೆಂಡ ಸಂಪಿಗೆ' ಧ್ವನಿಸುರುಳಿ ವಿಮರ್ಶೆ
ಕೆಂಡ ಸಂಪಿಗೆ ಸಿನಿಮಾ ತನ್ನ ಶೀರ್ಷಿಕೆಯಿಂದಲೇ ಪರಿಮಳ ಪಸರಿಸುತ್ತಿರುವ ಹೊಸ ಕನ್ನಡ ಸಿನಿಮಾ. ದುನಿಯಾ ಸೂರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಏಳನೇ ಚಿತ್ರ ಇದಾಗಿದ್ದು ಇಬ್ಬರೂ ಹೊಸ ಪ್ರತಿಭೆಗಳನ್ನು ಸ್ಯಾಂಡಲ್ ವುಡ್ ಗೆ ಪರಿಚಯ ಮಾಡಿಕೊಟ್ಟಿದ್ದಾರೆ.
ಸೂರಿಯವರ ಕಾರ್ ಡ್ರೈವರ್ ಆಗಿದ್ದ ವಿಕ್ಕಿ ಈಗ ಈ ಚಿತ್ರದ ನಾಯಕನಾಗಿ ಕಾಣಿಸಿಕೊಂಡಿದ್ದಾರೆ ಮತ್ತು ರೇಡಿಯೋ ಜಾಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮಾನ್ವಿತ ಈ ಚಿತ್ರದ ನಾಯಕಿ. ಇಬ್ಬರಿಗೂ ಇದು ಮೊದಲ ಸಿನಿಮಾವಾಗಿದ್ದು ಸೂರಿಯಂಥಹ ಹೆಸರಾಂತ ನಿರ್ದೇಶಕರೊಟ್ಟಿಗೆ ಕಾರ್ಯನಿರ್ವಹಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿರುವ ಕೆಂಡ ಸಂಪಿಗೆ ಚಿತ್ರತಂಡ, ಇತ್ತೀಚೆಗಷ್ಟೇ ತಮ್ಮ ಚಿತ್ರದ ಹಾಡುಗಳನ್ನು ಕೇಳುಗರ ಕಿವಿಗೆ ತಲುಪಿಸಿದೆ. ಸಂಪೂರ್ಣ ಮಾಧುರ್ಯಕ್ಕೆ ಒತ್ತು ಕೊಟ್ಟಿದ್ದಾರೆ ಕನ್ನಡದ ಜನಪ್ರಿಯ ಸಂಗೀತ ನಿರ್ದೇಶಕ ವಿ ಹರಿಕೃಷ್ಣ.
ಒಟ್ಟು ನಾಲ್ಕು ಹಾಡುಗಳಿರುವ ಈ ಅಲ್ಬಂ ನಲ್ಲಿ ಡಾ. ಜಯಂತ್ ಕಾಯ್ಕಿಣಿಯವರು ಮೂರು ಹಾಡುಗಳಿಗೆ ಪದ ಪೋಣಿಸಿದ್ದರೆ, ಯೋಗರಾಜ್ ಭಟ್ ಒಂದು ಗೀತೆಗೆ ಸಾಹಿತ್ಯ ಒದಗಿಸಿದ್ದಾರೆ
ಈ ನಾಲ್ಕು ಹಾಡುಗಳು ಸಾಹಿತ್ಯದ ದೃಷ್ಟಿಯಿಂದ ಎಲ್ಲರ ಗಮನ ಸೆಳೆಯುತ್ತಿರುವುದು ವಿಶೇಷ .. ಸಾಹಿತ್ಯದ ವಿಶೇಷತೆ ತಿಳಿಯಲು ಸ್ಲೈಡ್ ಕ್ಲಿಕ್ಕಿಸಿ..

1. ನೆನಪೆ ನಿತ್ಯ ಮಲ್ಲಿಗೆ
ಸಾಹಿತ್ಯ : ಜಯಂತ್ ಕಾಯ್ಕಿಣಿ
ಗಾಯಕರು: ಕಾರ್ತಿಕ್
ಸಾಹಿತ್ಯದಿಂದಲೇ ಹೆಚ್ಚು ಗಮನ ಸೆಳೆಯುವ ಹಾಡು, ಹಾಗಾಗಿ ಇದರ ಸಂಪೂರ್ಣ ಕ್ರೆಡಿಟ್ ಜಯಂತ್ ಕಾಯ್ಕಿಣಿಯವರಿಗೆ ಸಲ್ಲಬೇಕು. ವಿವಿಧ ಬಗೆಯ ಹೂಗಳಿಂದ ( ಹೂಗಳಿಗೆ ) ನಾಯಕಿಯನ್ನು ಹೋಲಿಸುವ ಈ ಹಾಡು ಕಾರ್ತಿಕ್ ಕಂಠ ಸಿರಿಯಲ್ಲಿ ಅದ್ಭುತವಾಗಿ ಮೂಡಿಬಂದಿದ್ದು ಕೇಳುಗರು ಮತ್ತೆ ಮತ್ತೆ ಗುನುಗುವಂತೆ ಮಾಡಿದೆ. ನೆನಪೆ ನಿತ್ಯ ಮಲ್ಲಿಗೆ, ಕನಸು ಕೆಂಡಸಂಪಿಗೆ, ಎಷ್ಟು ಚೆಂದ ಶಿಕ್ಷೆ ಒಂದು ಸಣ್ಣ ತಪ್ಪಿಗೆ ಹೀಗೆ ಸಾಗುತ್ತೆ ಹಾಡಿನ ಸಾಹಿತ್ಯ.

2. ಕನಸಲಿ ನಡೆಸು ಬಿಸಿಲಾದರೆ
ಸಾಹಿತ್ಯ : ಜಯಂತ್ ಕಾಯ್ಕಿಣಿ
ಗಾಯಕರು: : ಶ್ವೇತಾ ಮೋಹನ್
ಇದು ಮತ್ತೊಂದು ಜಯಂತ್ ಕಾಯ್ಕಿಣಿ ಯವರ ಮುದ್ದಾದ ಸಾಹಿತ್ಯದಲ್ಲಿ ಹೊರಹೊಮ್ಮಿರುವ ಗೀತೆ . ನಾಯಕಿ ತನ್ನ ಮನಸ್ಸಿನ ತಲ್ಲಣಗಳನ್ನು ಅಭಿವ್ಯಕ್ತಿ ಪಡಿಸುವ ಹಾಡು ಇದಾಗಿದ್ದು ಖ್ಯಾತ ಗಾಯಕಿ ಸುಜಾತಾ ಮೋಹನ್ ರ ಪುತ್ರಿ ಶ್ವೇತಾ ಮೋಹನ ಹಾಡಿದ್ದು ಕನ್ನಡಕ್ಕೊಂದು ಹೊಸ ಧ್ವನಿಯ ಪರಿಚಯವಾಗಿದೆ. ಈ ಹಾಡಿಗೆ ಹೀಗಿದೆ ನೋಡಿ ಕಾಯ್ಕಿಣಿಯವರ ಸಾಹಿತ್ಯ.. ಕನಸಲಿ ನಡೆಸು ಬಿಸಿಲಾದರೆ, ಒಲವನು ಮೂಡಿಸು ಹಸಿವಾದರೆ, ಜಗವ ಮರೆಸು ನಗುವ ಮುಡಿಸು

3. ಇಳಿಜಾರು ಹಾದಿಲಿ
ಸಾಹಿತ್ಯ : ಯೋಗರಾಜ್ ಭಟ್
ಗಾಯಕರು: ವಿಜಯ್ ಪ್ರಕಾಶ್
ಟಿಪಿಕಲ್ ಯೋಗರಾಜ್ ಭಟ್ ಶೈಲಿಯಲ್ಲಿ ಮೂಡಿ ಬಂದಿರುವ ಆದಿ ಮತ್ತು ಅಂತ್ಯ ನಡುವಿನ ಬದುಕಿನ ಪಾಠವ ಬೋಧಿಸುವ ಈ ಹಾಡು ಜೈಹೋ ಖ್ಯಾತಿಯ ವಿಜಯ್ ಪ್ರಕಾಶ್ ಹಾಡಿದ್ದು ಎಲ್ಲರ ಮನಸಿನಲ್ಲಿ ನೆಲೆಯೂರುವುದರಲ್ಲಿ ಯಾವುದೇ ಸಂಶಯವಿಲ್ಲ. ಇಳಿಜಾರು ಹಾದಿಯಿದು ಮುಗಿದಂತೆ ಕಾಣುವುದು, ಹಿಂತಿರುಗಿ ನೋಡಿದರೆ ಅಲ್ಲೊಂದು ತುದಿ, ಮುಂತಿರುಗಿ ಓಡಿದರೆ ಮುಂದೊಂದು ತುದಿ..! ಹೀಗೆ ಸಾಗುತ್ತೆ ಸಾಹಿತ್ಯ.

4. ಮರೆಯದೆ ಕ್ಷಮಿಸು
ಸಾಹಿತ್ಯ : ಜಯಂತ್ ಕಾಯ್ಕಿಣಿ
ಗಾಯಕರು: ಬಲರಾಮ್
ಮರೆಯದೆ ಕ್ಷಮಿಸು ಈ ಚಿತ್ರದಲ್ಲಿ ಬರುವ ವಿರಹ ಗೀತೆ . ಜಯಂತ್ ಕಾಯ್ಕಿಣಿ ಪೋಣಿಸಿರುವ ಈ ಹಾಡು ಬಲರಾಮ್ ಎಂಬ ತಮಿಳು ಗಾಯಕ ಹಾಡಿದ್ದು ಕನ್ನಡಕ್ಕೆ ಮತ್ತೊಂದು ಧ್ವನಿ ಪರಿಚಯವಾಗಿದೆ ಮತ್ತು ಹಾಡು ಅದ್ಭುತವಾಗಿ ಮೂಡಿಬಂದಿದೆ.

ಹಾಡುಗಳು ಚೆನ್ನಾಗಿವೆ
ಒಟ್ಟಾರೆ ಕೆಂಡ ಸಂಪಿಗೆ ಚಿತ್ರದ ಎಲ್ಲಾ ನಾಲ್ಕು ಹಾಡುಗಳು ಕೇಳುಗರ ಹೃದಯದಲ್ಲಿ ಶಾಶ್ವತವಾಗಿ ಸ್ಥಾನ ಗಿಟ್ಟಿಸುವುದರಲ್ಲಿ ಸಂಶಯವಿಲ್ಲ.


Click it and Unblock the Notifications











