ವಂಚನೆ ಪ್ರಕರಣ: ನ್ಯಾಯಾಲಯದಲ್ಲಿ ಶರಣಾದ ಮಾಜಿ ಬಿಗ್ಬಾಸ್ ಸ್ಪರ್ಧಿ
ವಂಚನೆ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಮಾಜಿ ಬಿಗ್ಬಾಸ್ ಸ್ಪರ್ಧಿ, ನಟಿ ಹಾಗೂ ಗಾಯಕಿ ಸಪ್ನಾ ಚೌಧರಿ ಲಖನೌ ನ್ಯಾಯಾಲಯದಲ್ಲಿ ನಿನ್ನೆ (ಸೆಪ್ಟೆಂಬರ್ 19) ಶರಣಾಗಿದ್ದಾರೆ.
2018ರಲ್ಲಿ ಇವೆಂಟ್ ಒಂದರಲ್ಲಿ ಗಾಯನ ಹಾಗೂ ನೃತ್ಯ ಪ್ರದರ್ಶನ ನೀಡಲು ಸಪ್ನಾ ಚೌಧರಿ ಲಕ್ಷಾಂತರ ಹಣವನ್ನು ಅಡ್ವಾನ್ಸ್ ಆಗಿ ಪಡೆದಿದ್ದರು ಆದರೆ ಕೊನೆಯ ಕ್ಷಣದಲ್ಲಿ ಕಾರ್ಯಕ್ರಮಕ್ಕೆ ಹಾಜರಾಗದೆ ವಂಚನೆ ಎಸಗಿದ್ದರು. ಇದರಿಂದಾಗಿ ಆಯೋಜಕರಿಗೆ ನಷ್ಟವಾಗಿತ್ತು. ಅವರು ದೂರು ಸಹ ಸಲ್ಲಿಸಿದ್ದರು.
ಈ ಹಿಂದಿನ ವಿಚಾರಣೆಗಳಿಗೆ ಸಪ್ನಾ ಚೌಧರಿ ಹಾಜರಾಗಿರಲಿಲ್ಲ, ನ್ಯಾಯಾಲಯಕ್ಕೆ ಅರ್ಜಿಯನ್ನೂ ಸಲ್ಲಿಸಿರಲಿಲ್ಲ ಹಾಗಾಗಿ ಇದೇ ವರ್ಷದ ಆಗಸ್ಟ್ ತಿಂಗಳಲ್ಲಿ ಸಪ್ನಾ ಚೌಧರಿ ವಿರುದ್ಧ ಬಂಧನ ವಾರೆಂಟ್ ಜಾರಿಯಾಗಿತ್ತು. ಇದೀಗ ಗಾಯಕಿಯು ಲಖನೌನ ಮ್ಯಾಜಿಸ್ಟ್ರೇಟ್ ಮುಂದೆ ಶರಣಾಗಿದ್ದು, ತಮ್ಮಿಂದ ತಪ್ಪಾಗಿದ್ದಾಗಿಯೂ, ಇನ್ನು ಮುಂದೆ ವಿಚಾರಣೆಗೆ ಹಾಜರಾಗುವುದಾಗಿಯೂ ಹೇಳಿ ತಮ್ಮ ವಿರುದ್ಧ ಜಾರಿಯಾಗಿರುವ ಅರೆಸ್ಟ್ ವಾರೆಂಟ್ ಅನ್ನು ರದ್ದು ಮಾಡುವಂತೆ ಕೋರಿದ್ದಾರೆ.

ಅಂತೆಯೇ ನ್ಯಾಯಾಲಯವು ಸಪ್ನಾ ವಿರುದ್ಧದ ಅರೆಸ್ಟ್ ವಾರೆಂಟ್ ಅನ್ನು ರದ್ದು ಮಾಡಿದ್ದು, ಸೆಪ್ಟೆಂಬರ್ 30 ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
2018 ರಲ್ಲಿ ಜುನೈದ್ ಅಹ್ಮದ್, ನವೀನ್ ಶರ್ಮಾ, ಇವಾದ್ ಅಲಿ, ಅಮಿತ್ ಪಾಂಡೆ ಅವರುಗಳು ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ಸಪ್ನಾ ಚೌಧರಿ ಪ್ರದರ್ಶನ ನೀಡಬೇಕಿತ್ತು. ಇದಕ್ಕೆಂದು ಹಣ ಅಡ್ವಾನ್ಸ್ ಪಡೆದಿದ್ದದ ಸಪ್ನಾ, ಕಾರ್ಯಕ್ರಮಕ್ಕೆ ಬರಲೇ ಇಲ್ಲ. ಆಯೋಜಕರು ಅಕ್ಟೋಬರ್ 14, 2018 ರಂದು ಸಪ್ನಾ ವಿರುದ್ಧ ಲಖನೌನ ಆಶಿಯಾನಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಇದೇ ವರ್ಷದ ಆರಂಭದಲ್ಲಿ ಸಪ್ನಾ ಚೌಧರಿ ಹಾಗೂ ಆಕೆಯ ತಾಯಿ, ಸಹೋದರನ ವಿರುದ್ಧ ಮ್ಯಾನೇಜ್ಮೆಂಟ್ ಸಂಸ್ಥೆಯೊಂದು ಸಹ ದೆಹಲಿ ಪೊಲೀಸರ ಆರ್ಥಿಕ್ ಅಪರಾಧ ವಿಭಾಗಕ್ಕೆ ದೂರು ಸಲ್ಲಿಸಿತ್ತು. ಸಪ್ನಾ ಚೌಧರಿಗಾಗಿ ಕೆಲಸ ಮಾಡುತ್ತಿದ್ದ ಸೆಲೆಬ್ರಿಟಿ ಮ್ಯಾನೇಜ್ಮೆಂಟ್ ಸಂಸ್ಥೆಯೊಂದು, ಸಪ್ನಾ ವಿರುದ್ಧ ವಿಶ್ವಾಸ ದ್ರೋಹ, ಪಿತೂರಿ, ವಂಚನೆ ಹಾಗೂ ಹಣಕಾಸು ಅವ್ಯವಹಾರದ ಆರೋಪ ಹೊರಿಸಿ ನೀಡಿದೆ.
ಸಪ್ನಾ ಚೌಧರಿ ಹರಿಯಾಣಾದ ಜನಪ್ರಿಯ ಗಾಯಕಿಯಾಗಿದ್ದಾರೆ. ಈ ಹಿಂದೆ ಹಿಂದಿ ಬಿಗ್ಬಾಸ್ ಸೀಸನ್ 11 ನಲ್ಲೂ ಸಪ್ನಾ ಭಾಗವಹಿಸಿದ್ದರು. ಆ ಸಮಯದಲ್ಲಿ ದೊಡ್ಡ ಜನಪ್ರಿಯತೆಯನ್ನು ಅವರು ಗಳಿಸಿದರು.


Click it and Unblock the Notifications











