Don't Miss!
- News Namma Metro: 2023-24ರಲ್ಲಿ ಮೆಟ್ರೋ ವಾರ್ಷಿಕ ಆದಾಯದಲ್ಲಿ ಭಾರೀ ಏರಿಕೆ: ಖರ್ಚು-ಆದಾಯದ ಮಾಹಿತಿ?
- Automobiles Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- Sports IPL 2024: ಮುಂಬೈ ಇಂಡಿಯನ್ಸ್ ವಿರುದ್ಧ ಶತಕ; ರೋಹಿತ್, ಕೊಹ್ಲಿಗೆ ಕ್ರೆಡಿಟ್ ನೀಡಿದ ಯಶಸ್ವಿ ಜೈಸ್ವಾಲ್!
- Technology Itel: ಭಾರತದಲ್ಲಿ ಐಟೆಲ್ S24 ಲಾಂಚ್! 108MP ಕ್ಯಾಮೆರಾ.. ಬೆಲೆ ಇಷ್ಟೇ
- Lifestyle ಪ್ರವಾಹಕ್ಕೆ ಕಾರಣವಾಗೋದು ಮಳೆಯಲ್ಲ ಬೇಸಿಗೆಯ ಬಿಸಿಲು..! ನಂಬಲು ಸಾಧ್ಯವಿಲ್ಲ ಅಂದ್ರೆ ಈ ವಿಡಿಯೋ ನೋಡಿ..!
- Finance ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 10 ಹಳದಿ ಅನಕೊಂಡ ಸಹಿತ ವ್ಯಕ್ತಿ ಬಂಧನ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮತ್ತೊಂದು ವಿವಾದ ಎಬ್ಬಿಸಿದ 'ಪುಷ್ಪ' ಐಟಂ ಹಾಡು: ದೇವಿಶ್ರೀ ಪ್ರಸಾದ್ ವಿರುದ್ಧ ಬಿಜೆಪಿ ಶಾಸಕ ದೂರು
ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಸಿನಿಮಾ ಡಿಸೆಂಬರ್ 17 ರಂದು ಬಿಡುಗಡೆ ಆಗಿ ದೊಡ್ಡ ಹಿಟ್ ಆಗಿದೆ. ಸಿನಿಮಾದ ಹಾಡುಗಳು ಈಗಾಗಲೇ ಯೂಟ್ಯೂಬ್ನಲ್ಲಿ ಬಿಡುಗಡೆ ಆಗಿ ಹಿಟ್ ಆಗಿದ್ದವು. ಹಾಡುಗಳೇ ಜನರನ್ನು ಚಿತ್ರಮಂದಿರಕ್ಕೆ ಕರೆತಂದಿವೆ ಎಂಬ ಮಾತುಗಳು ಸಹ ಕೇಳಿ ಬರುತ್ತಿದೆ.
'ಪುಷ್ಪ' ಸಿನಿಮಾದ ಹಾಡುಗಳು ಹಿಟ್ ಆದ ಖುಷಿಯಲ್ಲಿರುವ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ಗೆ ಸಂಕಷ್ಟವೊಂದು ಎದುರಾಗಿದೆ. ದೇವಿಶ್ರೀ ಪ್ರಸಾದ್ ಮೇಲೆ ದೂರು ದಾಖಲಾಗಿದೆ.
'ಪುಷ್ಪ' ಸಿನಿಮಾ ಬಿಡುಗಡೆಗೆ ಮುನ್ನ ಹೈದರಾಬಾದ್, ಚೆನ್ನೈ, ಬೆಂಗಳೂರು, ಮುಂಬೈ, ತಿರುವನಂತಪುರಂ ಇನ್ನೂ ಕೆಲವೆಡೆಗಳಲ್ಲಿ ಸಿನಿಮಾದ ಪ್ರಚಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಿನಿಮಾದ ಸುದ್ದಿಗೋಷ್ಠಿಯನ್ನು ಸಹ ಆಯೋಜಿಸಲಾಗಿತ್ತು.
ಹೈದರಾಬಾದ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವಿಶ್ರೀ ಪ್ರಸಾದ್, ''ಕೇಳುಗರಿಗೆ ಐಟಂ ಸಾಂಗ್, ಲವ್ ಸಾಂಗ್ ಎಂದು ಭಿನ್ನವಾಗಿರಬಹುದೇನೋ ಆದರೆ ನನಗೆ ಎಲ್ಲವೂ ಒಂದೇ, ಐಟಂ ಹಾಡು ಸಹ ನನಗೆ ದೇವರ ಹಾಡಿನಂತೆಯೇ ನಿರ್ಮಲ, ಅದೊಂದು ಧ್ಯಾನ'' ಎಂದಿದ್ದರು.
ಜೊತೆಗೆ ತಮ್ಮದೇ ಸಂಗೀತ ನಿರ್ದೇಶನದ 'ಆರ್ಯ 2' ಸಿನಿಮಾದ ಐಟಂ ಹಾಡು 'ರಿಂಗ ರಿಂಗ' ಹಾಡಿಗೆ ದೇವರ ಸಾಹಿತ್ಯ ಬೆರೆಸಿ ಹಾಡಿ ರಂಜಿಸಿದರು. ಭಕ್ತಿ ಗೀತೆಯಾಗಲಿ, ಐಟಂ ಹಾಡಾಗಲಿ ನನಗೆ ಎಲ್ಲವೂ ಒಂದೇ, ಎಲ್ಲವನ್ನೂ ನಾನು ಧ್ಯಾನಿಸಿಯೇ ಮಾಡಿರುತ್ತೇನೆ'' ಎಂದರು.
ಮುಂದುವರೆದು, 'ಊ ಅಂಟಾವ ಊ ಹು ಅಂಟಾವ ಮಾವ' ಹಾಡನ್ನು ಭಕ್ತಿಪೂರಕವಾಗಿ ಸಹ ಹಾಡಬಹುದು. ಹಲವು ಅನ್ನಮಯ್ಯ ಕೀರ್ತನೆಗಳನ್ನು ಹಾಡಿರುವ ಗಾಯಕಿ ಶೋಭಾ ರಾಜ್ ಅವರು ನಮ್ಮ 'ಊ ಅಂಟಾವ ಮಾನ ಊ ಹುಂ ಅಂಟಾವ' ಹಾಡನ್ನು ಭಕ್ತಿಗೀತೆಯಾಗಿ ಹಾಡಿ ಅದರ ವಿಡಿಯೋವನ್ನು ಹರಿಬಿಟ್ಟಿದ್ದಾರೆ. 'ಊ ಅಂಟಾವ ಮಾಧವ, ಊ ಹೂ ಅಂಟಾವ' ಎಂದು ಅವರು ಐಟಂ ಹಾಡನ್ನು ಭಕ್ತಿಗೀತೆಯಾಗಿ ಬದಲಾವಣೆ ಮಾಡಿದ್ದಾರೆ'' ಎಂದು ಉದಾಹರಣೆ ನೀಡಿದರು ದೇವಿಶ್ರೀ ಪ್ರಸಾದ್.
ಆದರೆ ದೇವಿಶ್ರೀ ಪ್ರಸಾದ್ ಅವರು ಐಟಂ ಹಾಡನ್ನು ಭಕ್ತಿ ಗೀತೆಗೆ ಹೋಲಿಸಿರುವುದನ್ನು ಕೆಲವರಿಗೆ ಸಹಿಸಲಾಗಿಲ್ಲ. ಘೋಷ್ಮಹಲ್ ಕ್ಷೇತ್ರದ ಬಿಜೆಪಿ ಶಾಸಕ ರಾಜಾ ಸಿಂಗ್, ದೇವಿಶ್ರೀ ಪ್ರಸಾದ್ ವಿರುದ್ಧ ಆಕ್ರೋಶ ಹೊರಹಾಕಿದ್ದು, ನಿನ್ನೆ ವಿಡಿಯೋ ಒಂದನ್ನು ಬಿಡುಗಡೆ ಮಾಡಿ, ದೇವಿಶ್ರೀ ಪ್ರಸಾದ್ಗೆ ಎಚ್ಚರಿಕೆ ನೀಡಿದ್ದರು. ಇದೀಗ ರಾಜಾ ಸಿಂಗ್, ದೇವಿಶ್ರೀ ಪ್ರಸಾದ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
''ದೇವಿಶ್ರೀ ಪ್ರಸಾದ್, ದೇವರ ಹಾಡುಗಳಿಗೆ ಐಟಂ ಹಾಡುಗಳಿಗೆ ಹೋಲಿಕೆ ಮಾಡಿರುವುದು ಹಿಂದು ಭಾವನೆಗಳಿಗೆ ಧಕ್ಕೆ ತಂದಿದೆ. ಅವರ ವಿರುದ್ಧ ಶೀಘ್ರವಾಗಿ ಕ್ರಮ ಕೈಗೊಳ್ಳಬೇಕು'' ಎಂದು ರಾಜಾ ಸಿಂಗ್ ದೂರಿನಲ್ಲಿ ಮನವಿ ಮಾಡಿದ್ದಾರೆ.
ವಿಡಿಯೋ ಪ್ರಕಟಿಸಿದ್ದ ರಾಜಾ ಸಿಂಗ್, ''ಅನವಶ್ಯಕವಾಗಿ ಹಿಂದುಗಳ ತಂಟೆಗೆ ನೀವು ಬರುತ್ತಿದ್ದೀರ. ನೀವು ಈ ಕೂಡಲೇ ಕ್ಷಮೆ ಕೋರಬೇಕು, ಒಂದು ವೇಳೆ ಕ್ಷಮೆ ಕೋರಲಿಲ್ಲವಾದರೆ ತೆಲಂಗಾಣದ ಹಿಂದು ಸಮಾಜದ ಜನ ನಿಮ್ಮನ್ನು ಓಡಿಸಿ-ಓಡಿಸಿ ಹೊಡೆಯುತ್ತಾರೆ'' ಎಂದಿದ್ದರು. ಮುಂದುವರೆದು, ''ನಮ್ಮದು ಹಿಂದು ಸೈನ್ಯ ಇದೆ. ಅವರು ಮಾತನಾಡುವುದಿಲ್ಲ ಆದರೆ ಚಪ್ಪಲಿ ಮೂಲಕವೇ ನಿಮಗೆ ಉತ್ತರ ನೀಡುತ್ತಾರೆ ಎಚ್ಚರ'' ಎಂದು ಧಮ್ಕಿ ಹಾಕಿದ್ದರು ರಾಜಾ ಸಿಂಗ್.
'ಪುಷ್ಪ' ಸಿನಿಮಾದ ಐಟಂ ಹಾಡು 'ಊ ಅಂಟಾವ ಮಾವ ಊ ಹು ಅಂಟಾವ' ಬಿಡುಗಡೆ ಆದಾಗಿನಿಂದಲೂ ವಿವಾದಕ್ಕೆ ಕಾರಣವಾಗುತ್ತಲೇ ಇದೆ. ಹಾಡು ಬಿಡುಗಡೆ ಆದ ಬಳಿಕ ಪುರುಷರ ಸಂಘ ಹಾಡಿನ ಸಾಹಿತ್ಯಕ್ಕೆ ತಕರಾರು ಎತ್ತಿತ್ತು. ಹಾಡಿನಲ್ಲಿ ಪುರುಷರನ್ನು ಕಾಮಲೋಲುಪರೆಂದು, ಯುವತಿಯರ ಸೌಂದರ್ಯಕ್ಕೆ ದಾಸರೆಂದು, ಚಂಚಲ ಮನೋವೃತ್ತಿಯವರೆಂದು ಚಿತ್ರಿಸಲಾಗಿದೆ. ಹಾಗಾಗಿ ಈ ಹಾಡಿನ ವಿರುದ್ಧ ತಡೆ ನೀಡಬೇಕು ಎಂದು ಕೋರ್ಟ್ ಮೆಟ್ಟಿಲೇರಿದ್ದರು. ಹಾಡಿನಲ್ಲಿ ಸಮಂತಾ ಅತಿಯಾದ ಮಾದಕತೆಯಿಂದ ಕುಣಿದಿರುವುದಕ್ಕೂ ಕೆಲವರು ಆಕ್ಷೇಪಣೆ ವ್ಯಕ್ತಪಡಿಸಿದ್ದರು.