ಹಂಪಿ ಉತ್ಸವ: ಗಾಯಕ ಕೈಲಾಶ್ ಖೇರ್ ಮೇಲೆ ಬಾಟಲಿ ಎಸೆತ, ಇಬ್ಬರು ವಶಕ್ಕೆ!
ಕೆಲವು ದಿನಗಳ ಹಿಂದಷ್ಟೆ ಹಂಪಿ ಉತ್ಸವದಲ್ಲಿ ಕಾರ್ಯಕ್ರಮ ನೀಡಿದ ಗಾಯಕಿ ಮಂಗ್ಲಿ ಕಾರಿಗೆ ಹಾನಿ ಮಾಡಿದ ಬೆನ್ನಲ್ಲೆ ಈಗ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಹಾಡು ಹಾಡಿರುವ ಬಾಲಿವುಡ್ ಗಾಯಕ ಕೈಲಾಶ್ ಖೇರ್ ಮೇಲೆ ಬಾಟಲಿ ಎಸೆದಿರುವ ಘಟನೆ ನಡೆದಿದೆ.
ಹಂಪಿ ಉತ್ಸವದ ಬೃಹತ್ ವೇದಿಕೆಯಲ್ಲಿ ಕಾರ್ಯಕ್ರಮದ ವೇಳೆ ಬಹುಭಾಷಾ ಗಾಯಕ ಕೈಲಾಶ್ ಖೇರ್ ಕಿಡಿಗೇಡಿಗಳು ಬಾಟಲಿ ಎಸೆದಿದ್ದು, ಘಟನೆಗೆ ಸಂಬಂಧಿಸಿದಂತೆ ವಿಜಯನಗರ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಹಂಪಿ ಉತ್ಸವದ ಸಮಾರೋಪ ಸಮಾರಂಭದ ಅಂಗವಾಗಿ ಭಾನುವಾರ ತಡರಾತ್ರಿ ಗಾಯಕ ವಿಜಯ್ ಪ್ರಕಾಶ್ ಹಾಗೂ ಬಹುಭಾಷಾ ಗಾಯಕ ಕೈಲಾಶ್ ಖೇರ್ ಅವರ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾತ್ರಿ 1:30ರ ಗಂಟೆ ಸುಮಾರಿಗೆ ಗಾಯಕ ಕೈಲಾಶ್ ಖೇರ್ ಅವರು ಹಂಪಿ ಗಾಯತ್ರಿ ಪೀಠದ ಪ್ರಧಾನ ವೇದಿಕೆಯಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಈ ವೇಳೆ ಅವರ ಮೇಲೆ ಪ್ರೇಕ್ಷಕರ ಗ್ಯಾಲರಿಯಿಂದ ಯಾರೋ ನೀರು ತುಂಬಿದ ಪ್ಲಾಸ್ಟಿಕ್ ಬಾಟಲಿಯನ್ನು ವೇದಿಕೆಗೆ ಎಸೆದಿದ್ದಾರೆ.

ಕಾರ್ಯಕ್ರಮದ ವೇಳೆ ವೇದಿಕೆ ಮೇಲೆ ಬಾಟಲಿ ಬಿದ್ದಿರುವ ದೃಶ್ಯವು ವಿಡಿಯೋದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಕನ್ನಡ ಹಾಡು ಹಾಡಿಲ್ಲ ಎನ್ನುವ ಕಾರಣಕ್ಕೆ ಕಿಡಿಗೇಡಿಗಳು ಗಾಯಕ ಕೈಲಾಶ್ ಖೇರ್ ಮೇಲೆ ನೀರಿನ ಬಾಟಲಿ ಎಸೆದಿದ್ದಾರೆ ಎನ್ನಲಾಗಿದೆ. ಬಾಟಲಿ, ಕೈಲಾಶ್ ಖೇರ್ ಅವರಿಂದ ಸ್ವಲ್ಪ ದೂರದಲ್ಲೇ ಬಿದ್ದಿದೆ. ಈ ಘಟನೆ ನಡೆದ ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ನೂರಾರು ಜನರ ನಡುವೆ ಘಟನೆಗೆ ಕಾರಣರಾದ ಇಬ್ಬರು ಯುವಕರನ್ನು ವಶಕ್ಕೆ ಪಡೆದಿದ್ದಾರೆ.
ಸದ್ಯ ಕಿಡಿಗೇಡಿಗಳು ಪೊಲೀಸರ ವಶದಲ್ಲಿದ್ದು, ಯಾಕಾಗಿ ಈ ಕೃತ್ಯ ಎಸೆಗಿದ್ದಾರೆ ಹಾಗೂ ಆರೋಪಿಗಳ ಬಗ್ಗೆ ಮಾಹಿತಿ ಈವರೆಗೂ ಲಭ್ಯವಾಗಿಲ್ಲ.
ಬೃಹತ್ ವೇದಿಕೆಯಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದಲ್ಲಿ ಕಿಡಿಗೇಡಿಗಳು ತಮ್ಮೆಡೆಗೆ ಬಾಟಲಿ ಎಸೆದರೂ ಸಹ ಗಾಯಕ ಕೈಲಾಶ್ ಖೇರ್ ತಮ್ಮ ಗಾಯನ ಮುಂದುವರೆಸಿದ್ದರು. ತಡರಾತ್ರಿ 2:30ರ ವರೆಗೆ ಕೈಲಾಶ್ ಖೇರ್ ಹಾಗೂ ತಂಡ ಹಂಪಿ ಉತ್ಸವದಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಕೈಲಾಶ್ ಖೇರ್ ಅವರ ಹಾಡಿನ ಮೋಡಿಗೆ ವಿಜಯನಗರ ಜಿಲ್ಲೆಯ ಜನರು ಹುಚ್ಚೆದ್ದು ಕುಣಿದು ಸಂಭ್ರಮಿಸಿದ್ದಾರೆ.


Click it and Unblock the Notifications











