'ಗುಮ್ಮ'ನನ್ನ ಮೆಚ್ಚಿದ ಸ್ಯಾಂಡಲ್ ವುಡ್ ತಾರೆಯರು
ವಿಶೇಷವಾದ ಟ್ರೈಲರ್ ಮತ್ತು ಹಾಡುಗಳ ಮೂಲಕ ಆಕರ್ಷಿಸುತ್ತಿರುವ ಸಿನಿಮಾ ಭೂತಃಕಾಲ. ಬಿಡುಗಡೆಗೆ ಸಜ್ಜಾಗಿರುವ ಈ ಸಿನಿಮಾ ಈಗ ಹಾಡುಗಳಿಂದ ಹೆಚ್ಚು ಸದ್ದು ಮಾಡ್ತಿದೆ.
ಭೂತಃಕಾಲ ಚಿತ್ರದ 'ಗುಮ್ಮ ಬರುವನಮ್ಮಾ' ಹಾಡಿಗೆ ಸ್ಯಾಂಡಲ್ ವುಡ್ ತಾರೆಯರು ಫಿದಾ ಆಗಿದ್ದಾರೆ. ಲಾಲಿ ಹಾಡುಗಳ ವಿಭಾಗಕ್ಕೆ ಸೇರುವಂತಿರುವ ಗುಮ್ಮ ಹಾಡು ಕೇಳುಗರನ್ನ ಮತ್ತೆ ಬಾಲ್ಯಕ್ಕೆ ಕರೆದುಕೊಂಡು ಹೋಗುತ್ತಿದೆ. ಸಚಿನ್ ಬಾದ ಅವರು ಬರೆದಿರುವ ಅಚ್ಚ ಕನ್ನಡದ ಸಾಹಿತ್ಯಕ್ಕೆ ಪ್ರಮೋದ್ ಸೂರ್ಯ ಧ್ವನಿಯಾಗಿದ್ದಾರೆ.
ಈ ಹಾಡು ಕೇಳಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ''ತುಂಬಾ ಚೆನ್ನಾಗಿದೆ, ಈ ಹಾಡು ಕೇಳ್ತಿದ್ರೆ ನನ್ನ ಬಾಲ್ಯ ನೆನಪಾಗುತ್ತೆ. ಊಟ ಮಾಡಿಲ್ಲ ಅಂದ್ರೆ ಗುಮ್ಮ ಬರ್ತಾನೆ ಅಂತ ಎದುರಿಸ್ತಿದ್ರು. ಈ ಹಾಡು ಒಂದು ರೀತಿ ಲಾಲಿ ಹಾಡಿನಂತಿದೆ. ಕೇಳ್ತಿದ್ರೆ ಮಲಗಬೇಕು ಅನ್ಸುತ್ತೆ. ತುಂಬಾ ಚೆನ್ನಾಗಿದೆ'' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ನಟಿ ಹರಿಪ್ರಿಯಾ ಕೂಡ ಗುಮ್ಮ ಹಾಡನ್ನ ಕೇಳಿ ಖುಷಿಯಾಗಿದ್ದಾರೆ. ''ತುಂಬಾ ಅರ್ಥಭರಿತವಾಗಿದೆ. ಮಗುವನ್ನ ನಿದ್ದೆ ಮಾಡಿಸುವಾಗ ಬರುವ ಹಾಡಿದು. ತುಂಬಾ ಚೆನ್ನಾಗಿದೆ'' ಎಂದು ಆಲ್ ದಿ ಬೆಸ್ಟ್ ತಿಳಿಸಿದ್ದಾರೆ.
ಗಾಯಕಿ ಅನನ್ಯ ಭಟ್, ಅನುರಾಧ ಭಟ್, ಹಾಗೂ ಶ್ರೀಧರ್ ವಿ ಸಂಭ್ರಮ್ ಕೂಡ ಈ ಹಾಡಿನ ಬಗ್ಗೆ ಮಾತನಾಡಿದ್ದು, ''ಈ ಹಾಡು ಕೇಳುಗರ ಮನಸ್ಸಲ್ಲಿ ಉಳಿದುಕೊಳ್ಳುತ್ತೆ, ತುಂಬಾ ಬ್ಯೂಟಿಫುಲ್ ಆಗಿದೆ'' ಎಂದಿದ್ದಾರೆ.
ಆಪರೇಷನ್ ಅಲಮೇಲಮ್ಮ ಖ್ಯಾತಿಯ ನಟ ರಿಷಿ, ಮಜಾ ಟಾಕೀಸ್ ಖ್ಯಾತಿಯ ಕುರಿ ಪ್ರತಾಪ್, ಪವನ್, ಮಂಡ್ಯ ರಮೇಶ್, ಶ್ವೇತಾ ಚೆಂಗಪ್ಪ, ನಟ ಸೃಜನ್ ಲೋಕೇಶ್ ಕೂಡ ಗುಮ್ಮ ಹಾಡನ್ನ ಕೇಳಿ ಮೆಚ್ಚಿಕೊಂಡಿದ್ದಾರೆ.
ಹೀಗೆ, ಸೆಲೆಬ್ರಿಟಿಗಳೆಲ್ಲಾ ಗುಮ್ಮ ಹಾಡು ಕೇಳಿ ಥ್ರಿಲ್ ಆಗಿದ್ದು, ಭೂತಃಕಾಲ ಸಿನಿಮಾ ನೋಡ್ಬೇಕು ಎಂಬ ಅಭಿಲಾಷೆಯನ್ನ ವ್ಯಕ್ತಪಡಿಸಿದ್ದಾರೆ. ಚಿತ್ರದ ಟ್ರೈಲರ್ ಹಾಗೂ ಹಾಡುಗಳನ್ನ ಕೇಳಿದ್ರೆ ಈ ಫೀಲ್ ಬಂದೇ ಬರುತ್ತೆ. ಅಷ್ಟರ ಮಟ್ಟಿಗೆ ಭೂತಃಕಾಲ ಸದ್ದು ಮಾಡ್ತಿದೆ.
ಇನ್ನುಳಿದಂತೆ ಭೂತಃಕಾಲ ಸಸ್ಪೆನ್ಸ್ ಥ್ರಿಲ್ಲರ್ ಕಥೆಯಾಗಿದ್ದು, ಸಚಿನ್ ಬಾದ ಅವರು ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ಆನಂದ್ ಗಣೇಶ್, ರಕ್ಷಿತಾ ಬಂಗೇರಾ ಹಾಗೂ ಅನನ್ಯ ಭಟ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಪಿ.ಆರ್.ಕೆ ಆಡಿಯೋ ಸಂಸ್ಥೆ ಆಡಿಯೋ ಹಕ್ಕು ಖರೀದಿಸಿದೆ. ಹಂಸ ಶ್ರೀಕಾಂತ್ ಈ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ.


Click it and Unblock the Notifications











