ಸಖತ್ 'ಸೌಂಡ್ 'ಮಾಡ್ತಿದೆ 'ಸೋಮು' ಸಾಂಗು ; ಹೇಗಿದೆ ಸೂರಿ 'ಶಿಷ್ಯ'ನ ಶ್ರದ್ಧೆ-ಬದ್ದತೆ ಹಾಗೂ ಪ್ರೀತಿ ಗುಂಗು..?
ದುನಿಯಾ ಸೂರಿ ಅವರ ಮಾರ್ಗದರ್ಶನದಲ್ಲಿ, ಚಿತ್ರರಂಗದ ಪಟ್ಟುಗಳನ್ನ ಕಲಿತವರು ಅಭಿ. ಹೆಚ್ಚು ಕಡಿಮೆ 09 ವರ್ಷ ಸೂರಿ ಜೊತೆ ಸಹಾಯಕ ಸಹ ನಿರ್ದೇಶಕನಾಗಿದ್ದ ಅಭಿ, ಆ ನಂತರ ದುನಿಯಾ ವಿಜಯ್ ಪಾಳಯಕ್ಕೆ ಕಾಲಿಟ್ಟರು. ಸಲಗ ಸಿನಿಮಾಗಾಗಿ ದುಡಿದಿದ್ದರು. ಸಹ ನಿರ್ದೇಶನದ ಸಹವಾಸದಿಂದ ಹೊರಬಂದು ನಿರ್ದೇಶಕನಾದರು. ಆ ಚಿತ್ರದ ಹೆಸರು ಸೋಮು ಸೌಂಡ್ ಇಂಜಿನಿಯರ್. ಸದ್ಯಕ್ಕೆ ಈ ಚಿತ್ರದ ಹಾಡೊಂದು ಬಿಡುಗಡೆಯಾಗಿದೆ. ಯುಟ್ಯೂಬ್ ಎಂಬ ಮಾಯಾಲೋಕದಲ್ಲಿ ಎಲ್ಲರ ಗಮನವನ್ನೂ ಸೆಳೆಯುತ್ತಿದೆ.
ಪ್ರೀತಿಯಲ್ಲಿ ಬಿದ್ದು.. ಎದ್ದು.. ವಾಲಾಡ್ತಿರುವ ಪ್ರೇಮಿಗಳಿಗೆ ಹೇಳಿ ಮಾಡಿಸಿದಂತೆ ಇರುವ ಈ ಹಾಡನ್ನ ಧನಂಜಯ್ ರಂಜನ್ ಬರೆದಿದ್ದಾರೆ. ಇನ್ನೂ.. ಚಂದವಳ್ಳಿ ಚಂದಾಕೆಯನ್ನ ಹುಣ್ಣಿಮೆಗೆ ಹೋಲಿಸುವ ನಿಟ್ಟಿನಲ್ಲಿ ತಯಾರಾದ ಈ ಹಾಡಿಗೆ ಟ್ಯೂನು ಹಾಕಿರುವುದು ಬೇರೆ ಯಾರು ಅಲ್ಲ ಬದಲಿಗೆ ಚರಣ್ ರಾಜ್. ಸಾಮಾಜಿಕ ಜಾಲತಾಣದಲ್ಲಿ ಹಾಡು ಸದ್ದು ಮಾಡುತ್ತಿರುವುದಕ್ಕೆ, ಎಲ್ಲರ ಹೃದಯ ಗೆಲ್ಲುತ್ತಿರುವುದಕ್ಕೆ ಇದು ಕೂಡ ಒಂದು ಕಾರಣ

ಸಿದ್ದಾರ್ಥ ಹಾಗೂ ಮೇಘನಾ ಭಟ್ ಈ ಚೆಂದದ ಹಾಡನ್ನ ಹಾಡಿದ್ದಾರೆ. ಇನ್ನೂ 'ಒಂದಾಗಿ ಸಾಗಬೇಕು ಜೊತೆಯಾಗಿ' ಎಂಬ ಕನಸನ್ನ ಇಲ್ಲಿ ಕಾಣ್ತಿರೋದು ಶ್ರೇಷ್ಠ ಹಾಗೂ ನಿವಿಶ್ಕಾ ಪಾಟೀಲ್. ಸಲಗ ಸಿನಿಮಾದಲ್ಲಿ ಕೆಂಡ ಪಾತ್ರದ ಮೂಲಕವೇ ಹೆಸರು ಮಾಡಿದ ಶ್ರೇಷ್ಠ ಈ ಚಿತ್ರದ ಮೂಲಕ ನಾಯಕ ನಟನಾಗಿ ಬಡ್ತಿಯನ್ನ ಪಡೆದಿದ್ದಾರೆ.
ಜಹಾಂಗೀರ್ .. ಯಶ್ ಶೆಟ್ಟಿ.. ಮುಂತಾದ ಕೆಲವರನ್ನ ಹೊರತು ಪಡಿಸಿದ್ರೇ ಚಿತ್ರದಲ್ಲಿರುವುದು ಬಹುತೇಕ ರು ಸಾಮಾನ್ಯರೇ. ಸಿನಿಮಾದ ನಂಟು ಇರದ.. ಆರ್ಟಿಸ್ಟ್ ಎಂಬ ಐಡೆಂಟಿಟಿ ಕಾರ್ಡು ಇಲ್ಲದವರನ್ನ ಕರೆದು ನಿಲ್ಲಿಸಿ ಚಿತ್ರದ ನಿರ್ದೇಶಕ ಅಭಿ ಇಲ್ಲಿ ಕೆಲಸ ಮಾಡಿಸಿಕೊಂಡಿದ್ದಾರೆ. ಪಾತ್ರಗಳನ್ನ ಹೆಣೆದು.. ಪಾತ್ರಕ್ಕೆ ಹೊಂದುವಂತಹವರನ್ನ ಹುಡುಕಿ ಅವರಿಂದ ಅಭಿನಯವನ್ನ ತೆಗೆಸಿದ್ದಾರೆ ಅನ್ನುವುದು ಈ ಚಿತ್ರದ ಇನ್ನೊಂದು ಇಂಟ್ರೆಸ್ಟಿಂಗ್ ವಿಚಾರವಾದರೆ, ಚಿತ್ರದ ಚಿತ್ರೀಕರಣವನ್ನ ಸಂಪೂರ್ಣ ಉತ್ತರ ಕರ್ನಾಟಕದ ಭಾಗದಲ್ಲಿ ಮಾಡಿರುವುದು ಚಿತ್ರದ ವಿಶೇಷತೆಯಲ್ಲಿ ಒಂದು
ನಮ್ಮೂರಿನಲ್ಲಿ ನಡೆದ ಘಟನೆಯೊಂದರ ಸುತ್ತ ನಡೆದ ವಿಚಾರವನ್ನೇ ಕಾಡುವಂತೆ ಕಟ್ಟಿದ್ದಾರೆ ಅನ್ನೋದರ ಸೂಚನೆಯನ್ನ ಟೀಸರ್ ಮೂಲಕ ಈ ಹಿಂದೆ ಕೊಟ್ಟಿದ್ದ ಸೋಮು ಸೌಂಡ್ ಇಂಜಿನಿಯರ್ ಚಿತ್ರವನ್ನ ತಂತ್ರಜ್ಞರ ಸಿನಿಮಾ ಅಂದರೆ ಅದು ತಪ್ಪಾಗಲಿಕ್ಕಿಲ್ಲ. ಯಾಕೆಂದರೆ ಚಿತ್ರದ ಹಿಂದೆ ಇರುವವರೆಲ್ಲ ಅವರ ಕ್ಷೇತ್ರದಲ್ಲಿ ಈಗಾಗ್ಲೇ ಹೆಸರು ಮಾಡಿದವರೇ. ಖ್ಯಾತಿಯ ಶಿಖರವನ್ನೇರಿದವರೇ. ಟಗರು ಮತ್ತು ಸಲಗ ಈ ಎರಡು ಚಿತ್ರದ ಹಿಂದೆ ಇದ್ದವರೇ.

ಇದಕ್ಕೆ ಚರಣ್ ರಾಜ್ ಒಂದು ಉದಾಹರಣೆಯಾದರೆ, ಕನ್ನಡ ಚಿತ್ರರಂಗದ ಬೇಡಿಕೆಯ ಸಂಭಾಷಣೆಗಾರ ಮಾಸ್ತಿ, ಸೋಮು ಸೌಂಡ್ ಇಂಜಿನಿಯರ್ ಗೆ ನಿರ್ದೇಶಕ ಅಭಿ ಜೊತೆ ಕುಳಿತು ಮಾತನ್ನ ಪೋಣಿಸಿದ್ದಾರೆ. ಇನ್ನೂ ಮುಂಗಾರು ಮಳೆ.. ದುನಿಯಾ.. ಒಂದಕ್ಕಿಂತ ಒಂದು ಚಿತ್ರಕ್ಕೆ ಕತ್ತರಿ ಪ್ರಯೋಗ ಮಾಡಿದ್ದ ಸಂಕಲನಕಾರ ದೀಪು ಎಸ್ ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿದೆ. ಸಲಗ ಹಾಗೂ ಭೀಮ ಖ್ಯಾತಿಯ ಶಿವಸೇನಾ ತಮ್ಮ ಕ್ಯಾಮರಾದಲ್ಲಿ ಚಿತ್ರವನ್ನ ಸೆರೆ ಹಿಡಿದಿದ್ದಾರೆ. ಇವೆಲ್ಲ ಕಾರಣಕ್ಕೆ ಈ ಚಿತ್ರದ ಮೇಲೆ ಮೊದಲಿಂದ ನಿರೀಕ್ಷೆ ಇದ್ದೇ ಇದೆ. ಆ ನಿರೀಕ್ಷೆಯನ್ನ ಬಿಡುಗಡೆಯಾಗಿರುವ ಹಾಡು ಈಗ ಇನ್ನಷ್ಟು ಹೆಚ್ಚಿಸಿದೆ.
ಇನ್ನೂ ಹೊಸತನದ ಕನಸು ಹೊತ್ತವರನ್ನ ನಂಬಿ.. ಅವರ ಕನಸನ್ನ ನೀರೇರೆದು ಪೋಷಿಸುವುದು ಸುಲಭದ ಮಾತಲ್ಲ. ದುಡ್ಡು ಹೂಡುವುದು ಈ ಕಾಲದಲ್ಲಿ ತಮಾಷೆಯೂ ಅಲ್ಲ. ಆದರೂ ಈ ಸವಾಲನ್ನ ಸ್ವೀಕರಿಸಿ ಚೊಚ್ಚಲ ಪ್ರಯತ್ನದಲ್ಲಿ ನಿರ್ಮಾಪಕ ಕ್ರಿಸ್ಟೋಫರ್ ಕಿಣಿ ಸೋಮು ಸೌಂಡ್ ಇಂಜಿನಿಯರ್ ಗೆ ಯಾವುದೇ ಕೊರತೆಯಾಗದಂತೆ ನೋಡಿಕೊಂಡಿದ್ದಾರೆ. ಚಿತ್ರವನ್ನ ನಿರ್ಮಾಣವನ್ನ ಮಾಡಿದ್ದಾರೆ.

ಒಟ್ಟಿನಲ್ಲಿ ಕನ್ನಡ ಚಿತ್ರರಂಗದ ಮಟ್ಟಿಗೆ ಉತ್ತರ ಕರ್ನಾಟಕದಿಂದ ಬಂದ ಹುಡುಗರು ನಿರ್ದೇಶಕರಾಗಿ ಗೆದ್ದಿರೋದು ಕಡಿಮೆ. ಈ ಹಿಂದೆ ಬಂದ ಸೋಮು ಸೌಂಡ್ ಇಂಜಿನಿಯರ್ ಚಿತ್ರದ ಟೀಸರ್ ಹಾಗೂ ನಿನ್ನೆ ಬಿಡುಗಡೆಯಾದ ಹಾಡನ್ನ ನೋಡಿದರೆ ಅಭಿ ಸ್ಯಾಂಡಲ್ ವುಡ್ ನಲ್ಲಿ ಪರ್ಮನೆಂಟಾಗಿ ನೆಲೆಲಿಲ್ಲುವ ನಿರ್ದೇಶಕರಾಗುತ್ತಾರೆ ಅಂತನ್ನಿಸುತ್ತಿದೆ. ಕಥಾನಾಯಕ ಶ್ರೇಷ್ಠ ಹಾಗೂ ನಾಯಕಿ ನಿವಿಶ್ಕಾ ಬದುಕಿನ ಪಥವನ್ನ ಸೋಮು ಸೌಂಡ್ ಇಂಜಿನಿಯರ್ ಚಿತ್ರ ಬದಲಿಸುತ್ತೆ ಅನ್ನುವ ಮಾತು ಕೇಳಿ ಬರುತ್ತಿದೆ. ನಿರ್ಮಾಪಕ ಕ್ರಿಸ್ಟೋಫರ್ ಕಿಣಿ ಕೂಡ ಕನ್ನಡ ಚಿತ್ರರಂಗಕ್ಕೆ ಭವಿಷ್ಯದಲ್ಲಿ ಅಸೆಟ್ ಆಗುವ ಲಕ್ಷಣ ಕಂಡು ಬರುತ್ತಿದೆ. ಈ ಅನಿಸಿಕೆ, ಅಭಿಪ್ರಾಯಗಳೆಲ್ಲಾ ನಿಜವಾಗಲಿ ಅನ್ನುವುದು ಈ ಚಿತ್ರದ ಮೊದಲ ಹಾಡನ್ನ ನೋಡಿ ಮೆಚ್ಚಿರುವ ಕಲಾ ಪ್ರೇಮಿಗಳ ಆಶಯ. ಅಂದ್ಹಾಗೇ ಸೋಮು ಸೌಂಡ್ ಇಂಜಿನಿಯರ್ ಈ ಮಾರ್ಚ್ 15ಕ್ಕೆ ನಿಮ್ಮ ಹತ್ತಿರದ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ.


Click it and Unblock the Notifications











