ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ಆರೋಪ, ದೇವಿಶ್ರೀ ಪ್ರಸಾದ್ ವಿರುದ್ಧ ದೂರು
ತೆಲುಗು, ತಮಿಳು ಚಿತ್ರರಂಗದ ಬಹು ಜನಪ್ರಿಯ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪವನ್ನು ದೇವಿಶ್ರೀ ಪ್ರಸಾದ್ ವಿರುದ್ಧ ಹೊರಿಸಲಾಗಿದೆ.
ದೇವಿಶ್ರೀ ಪ್ರಸಾದ್ ಅವರು ಹಿಂದಿ ಭಾಷೆಯಲ್ಲಿ ಹೊಸ ಹಾಡೊಂದನ್ನು ಬಿಡುಗಡೆ ಮಾಡಿದ್ದು, ಆ ಹಾಡು ಇದೀಗ ಹಿಂದೂ ಸಂಘಟನೆಗಳ ಕಣ್ಣು ಕೆಂಪಾಗುವಂತೆ ಮಾಡಿದೆ.
'ಓ ಪರಿ' ಹೆಸರಿನ ಹಾಡನ್ನು ದೇವಿಶ್ರೀ ಪ್ರಸಾದ್ ಬಿಡುಗಡೆ ಮಾಡಿದ್ದು, ಹಾಡಿನಲ್ಲಿ ಸ್ವತಃ ತಾವೇ ವಿದೇಶಿ ಸಹನರ್ತಕಿಯರೊಟ್ಟಿಗೆ ನರ್ತಿಸಿದ್ದಾರೆ. ಹಾಡೇನೋ ಚೆನ್ನಾಗಿದೆ. ಆದರೆ ಹಾಡಿನ ನಡುವೆ 'ರಾಮ ಹರೇ, ಕೃಷ್ಣ ಹರೆ' ಎಂಬ ವಾಕ್ಯ ಕೇಳಿ ಬರುತ್ತದೆ. ಇದರ ಬಗ್ಗೆ ಹಿಂದೂಪರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ.

'ರಾಮ-ಕೃಷ್ಣ' ಎಂದಿರುವ ಹಾಡಿಗೆ ವಿದೇಶಿ ನರ್ತಕಿಯರಿಗೆ ಬಿಕಿನಿ ಹಾಕಿಸಿ ಡ್ಯಾನ್ಸ್ ಮಾಡಿಸಲಾಗಿದೆ ಎಂದು ಕೆಲವರು ಆಕ್ಷೇಪಣೆ ಎತ್ತಿದ್ದು, ದೇವಿಶ್ರೀ ಪ್ರಸಾದ್ ವಿರುದ್ಧ ದೂರು ಸಹ ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಸೈಬರ್ ಕ್ರೈಂ ವಿಭಾಗದ ಪೊಲೀಸರು ಸಂಗೀತ ನಿರ್ದೇಶಕನಿಗೆ ನೊಟೀಸ್ ನೀಡಲಿದ್ದಾರೆ.
ನಟಿ, ಮಾಜಿ ಬಿಗ್ಬಾಸ್ ಸ್ಪರ್ಧಿ ಕರಾಟೆ ಕಲ್ಯಾಣಿ ದೇವಿಶ್ರೀ ಪ್ರಸಾದ್ ಈ ಬಗ್ಗೆ ದೂರು ನೀಡಿದ್ದು, ''ದೇವಿಶ್ರೀ ಪ್ರಸಾದ್ಗೆ ಹಿಂದೂ ಧರ್ಮದ ಬಗ್ಗೆ ಗೌರವ ಇಲ್ಲ. ಬಿಕಿನಿ ಧರಿಸಿದ ಯುವತಿಯರಿಂದ ದೇವರ ಭಜನೆಗೆ ನೃತ್ಯ ಮಾಡಿಸಿದ್ದಾನೆ. ಆತನಿಗೆ ಹಿಂದೂ ಧರ್ಮದ ಬಗ್ಗೆ ನಂಬಿಕೆ ಇಲ್ಲದೇ ಇದ್ದರೆ ಸಹಿಸಿಕೊಳ್ಳಬಹುದು ಆದರೆ ಹಿಂದೂ ಧರ್ಮಕ್ಕೆ ಅಪಮಾನ ಎಸಗಿದರೆ ಅದನ್ನು ಸಹಿಸಲಾಗುವುದಿಲ್ಲ'' ಎಂದಿದ್ದಾರೆ.
1999 ರಲ್ಲಿ ಬಿಡುಗಡೆ ಆದ 'ದೇವಿ' ಸಿನಿಮಾದಿಂದ ಸಂಗೀತ ನಿರ್ದೇಶನ ಆರಂಭಿಸಿದ ದೇವಿಶ್ರೀ ಪ್ರಸಾದ್ ಈಗಿನ ವರೆಗೂ ತೆಲುಗು ಚಿತ್ರರಂಗದಲ್ಲಿ ಟಾಪ್ ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ಬಿಡುಗಡೆ ಆಗಿ ಸೂಪರ್ ಹಿಟ್ ಆದ 'ಪುಷ್ಪ' ಸಿನಿಮಾಕ್ಕೂ ದೇವಿಶ್ರೀ ಪ್ರಸಾದ್ ಅವರೇ ಸಂಗೀತ ನಿರ್ದೇಶನ ಮಾಡಿದ್ದಾರೆ.


Click it and Unblock the Notifications











