ಡೋಂಟ್ ಮೆಸ್ ವಿತ್ ಹಿಮ್, ಇರಲಿ ಜಾಗೃತೆ: 'ಕ್ರಾಂತಿ'ಯ ಹೊಸ ಮಾಸ್ ಹಾಡು ಬಿಡುಗಡೆ
ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾದ ಹೊಸ ಹಾಡು ಇಂದು ಬಿಡುಗಡೆ ಆಗಿದೆ. 'ಡೋಂಟ್ ಮೆಸ್ ವಿತ್ ಹಿಮ್' ಎಂಬ ಈ ಹಾಡು ಸಖತ್ ಮಾಸ್ ಆಗಿದೆ.
'ಕ್ರಾಂತಿ' ಸಿನಿಮಾದ ಹಾಡುಗಳನ್ನು ರಾಜ್ಯದ ಬೇರೆ ಬೇರೆ ನಗರಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಅಂತೆಯೇ ಇಂದು ಹೊಸ ಹಾಡನ್ನು ತುಮಕೂರಿನಲ್ಲಿ ಅಭಿಮಾನಿಗಳ ಮಧ್ಯೆ ಬಿಡುಗಡೆ ಮಾಡಲಾಯ್ತು.
ಹಾಡು ಬಿಡುಗಡೆ ಕಾರ್ಯಕ್ರಮ ಆರಂಭವಾಗುವ ಮುನ್ನವೇ 'ಕ್ರಾಂತಿ' ಸಿನಿಮಾದ ಈ ಹಿಂದೆ ಬಿಡುಗಡೆ ಆದ ಹಾಡುಗಳಿಗೆ ದರ್ಶನ್ ಅಭಿಮಾನಿಗಳು ನೃತ್ಯ ಮಾಡಿ ಕಾರ್ಯಕ್ರಮದ ಜೋಶ್ ಹೆಚ್ಚಿಸಿದರು. ಅದರ ಜೊತೆಗೆ 'ಡೋಂಟ್ ಮೆಸ್ ವಿತ್ ಹಿಮ್' ಎಂಬ ಈ ಜೋಶ್ ಭರಿತ ಮಾಸ್ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿತು.
ತುಮಕೂರಿನ ಬಿಎಚ್ ರಸ್ತೆ, ಶಿವಕುಮಾರ ಸ್ವಾಮಿ ವೃತ್ತದಲ್ಲಿ 'ಕ್ರಾಂತಿ' ಸಿನಿಮಾದ ಹಾಡನ್ನು ಬಿಡುಗಡೆ ಮಾಡಲಾಯ್ತು. ಜೊತೆಗೆ ಡೀ ಬೀಟ್ಸ್ ಯೂಟ್ಯೂಬ್ ಚಾನೆಲ್ನಲ್ಲಿಯೂ ಹಾಡು ಬಿಡುಗಡೆ ಆಗಿದ್ದು ಹಾಡು ವೈರಲ್ ಆಗುತ್ತಿದೆ.
'ಡೋಂಟ್ ಮೆಸ್ ವಿತ್ ಹಿಮ್' ಹಾಡು ಪಕ್ಕಾ ಮಾಸ್ ಹಾಡಾಗಿದ್ದು ನಾಯಕ ನಟನ ರಗಡ್ ವ್ಯಕ್ತಿತ್ವವನ್ನು ಬಿಂಬಿಸುವ ಹಾಡು ಇದಾಗಿದೆ. ಚೇತನ್ ಕುಮಾರ್ ಬರೆದಿರುವ ಈ ಹಾಡಿನಲ್ಲಿ ದರ್ಶನ್ಗೆ ಸಖತ್ ಬಿಲ್ಡಪ್ ಸಹ ನೀಡಲಾಗಿದೆ. ದರ್ಶನ್ ಅಭಿಮಾನಿಗಳಿಗೆ ಪಕ್ಕಾ ಇಷ್ಟವಾಗುವ ಹಾಡು ಇದಾಗಿದೆ.
ಹರಿಕೃಷ್ಣ ಸಂಗೀತ ನಿರ್ದೇಶನ ನೀಡಿರುವ ಈ ಹಾಡನ್ನು ಹಾಡಿರುವುದು ಟಿಪ್ಪು, ರಂಜಿತ್ ಹಾಗೂ ಅನಿರುದ್ಧ್ ಶಾಸ್ತ್ರಿ. ಹಾಡು ಬರೆದಿರುವವರು ಚೇತನ್ ಕುಮಾರ್.

'ಕ್ರಾಂತಿ' ಸಿನಿಮಾದ ನಾಲ್ಕು ಹಾಡುಗಳು ಈವರೆಗೆ ಬಿಡುಗಡೆ ಆಗಿವೆ. ಒಂದೊಂದು ಹಾಡನ್ನು ರಾಜ್ಯದ ಒಂದೊಂದು ನಗರದಲ್ಲಿ ಬಿಡುಗಡೆ ಮಾಡಿರುವುದು ವಿಶೇಷ. ಈ ವರೆಗೆ ಬಿಡುಗಡೆ ಆಗಿರುವ 'ಧರಣಿ', 'ಪುಷ್ಪವತಿ', 'ಬೊಂಬೆ' ಹಾಡುಗಳು ಹಿಟ್ ಆಗಿದ್ದು, ಇದೀಗ 'ಡೋಂಟ್ ಮೆಸ್ ವಿತ್ ಹಿಮ್' ಹಾಡು ಸಹ ಹಿಟ್ ಆಗುವ ನಿರೀಕ್ಷೆ ಹುಟ್ಟಿಸಿದೆ.
ಇನ್ನು 'ಕ್ರಾಂತಿ' ಸಿನಿಮಾವು ಶಿಕ್ಷಣ ವ್ಯವಸ್ಥೆಯ ಕುರಿತಾದ ಕತೆಯನ್ನು ಹೊಂದಿದ್ದು, ಸಿನಿಮಾದಲ್ಲಿ ದರ್ಶನ್ ಎನ್ಆರ್ಐ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ರಚಿತಾ ರಾಮ್ ನಟಿಸಿದ್ದಾರೆ. ಸಿನಿಮಾದಲ್ಲಿ ರವಿಚಂದ್ರನ್ ಸಹ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಹಿಟ್ ಸಿನಿಮಾ 'ಯಜಮಾನ' ನಿರ್ಮಿಸಿದ್ದ ತಂಡವೇ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ದರ್ಶನ್ರ ಆತ್ಮೀಯ ಗೆಳೆಯ ವಿ ಹರಿಕೃಷ್ಣ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಸಿನಿಮಾವು ಜನವರಿ 25 ರಂದು ತೆರೆಗೆ ಬರಲಿದೆ.


Click it and Unblock the Notifications











