Garadi: ಯಶಸ್ ಸೂರ್ಯ, ದರ್ಶನ್ ನಟನೆಯ 'ಗರಡಿ' ಟೈಟಲ್ ಸಾಂಗ್ ಯೂಟ್ಯೂಬ್ನಲ್ಲಿ ಟ್ರೆಂಡಿಂಗ್
ಯೋಗರಾಜ್ ಭಟ್ ನಿರ್ದೇಶನದ 'ಗರಡಿ' ಚಿತ್ರದ ಟೈಟಲ್ ಟ್ರ್ಯಾಕ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ವನಜಾ ಬಿ.ಸಿ ಪಾಟೀಲ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಯೋಗರಾಜ್ ಭಟ್ ಬರೆದಿರುವ 'ಲೋಕಾನೆ ಗರಡಿ.. ಬಾಳೇ ಅಖಾಡ' ಎನ್ನುವ ಅದ್ಭುತ ಹಾಗೂ ಅರ್ಥಗರ್ಭಿತ ಗೀತೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
'ಗರಡಿ' ಚಿತ್ರದಲ್ಲಿ ಯಶಸ್ ಸೂರ್ಯ ಹಾಗೂ ಸೋನಲ್ ಮಂತೆರೋ ಲೀಡ್ ರೋಲ್ಗಳಲ್ಲಿ ನಟಿಸಿದ್ದಾತೆ. ಚಿತ್ರಕ್ಕೆ ಸಂಗೀತ ಸಂಯೋಜಿಸಿರುವ ವಿ.ಹರಿಕೃಷ್ಣ ಈ ಹಾಡನ್ನು ಹಾಡಿದ್ದಾರೆ. ಹರಿಕೃಷ್ಣ ಜೊತೆಗೆ ಸಾಕಷ್ಟು ಪ್ರತಿಭಾವಂತ ಗಾಯಕರು ಸಹ ಈ ಹಾಡಿಗೆ ಧ್ವನಿಯಾಗಿದ್ದಾರೆ. ಇತ್ತೀಚೆಗೆ ನಡೆದ ಈ ಹಾಡಿನ ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡದ ಸದಸ್ಯರು ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು.

ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಗರಡಿ' ಚಿತ್ರದ ಅತಿಥಿ ಪಾತ್ರದಲ್ಲಿ ಮಿಂಚಿದ್ದಾರೆ. ನಾಯಕನ ಅಣ್ಣನ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಗರಡಿ ಮನೆ, ಅಲ್ಲಿ ತಾಲೀಮು ಮಾಡುವ ಪೈಲ್ವಾನರು. ಆ ಜಗಜಟ್ಟಿಗಳ ಹಾಡು ಪಾಡನ್ನು ಸಾಲುಗಳನ್ನು ಭಟ್ರು ಕಟ್ಟಿಕೊಟ್ಟಿದ್ದಾರೆ. ಹಳ್ಳಿ ಹೈದನಾಗಿ ಯಶಸ್ ಹೆಜ್ಜೆ ಹಾಕಿದ್ದಾರೆ. ಗರಡಿ ಮನೆ ಗುರುಗಳಾಗಿ ಬಿ. ಸಿ ಪಾಟೀಲ್ ಕಾಣಿಸಿಕೊಂಡಿದ್ದಾರೆ. ಹಾಡಿನದಲ್ಲಿ ಅವರು ಭುಜ ತಟ್ಟಿ ನಿಂತಿದ್ದಾರೆ.
'ಗರಡಿ' ಅಂದರೆ ಒಂದು ಊರನ್ನು ಕಾಯುವ ಪೊಲೀಸ್ ಠಾಣೆ ಇದ್ದ ಹಾಗೆ ಎಂದು ಮಾತು ಆರಂಭಿಸಿದ ನಿರ್ದೇಶಕ ಯೋಗರಾಜ್ ಭಟ್, ಹಿಂದೆ ಒಂದು ಊರಿನ ರಕ್ಷಣೆಗೆ 'ಗರಡಿ' ಬಹು ಮುಖ್ಯವಾಗಿತ್ತು. ಊರಿನವರು ಸಹ 'ಗರಡಿ' ಮನೆಯ ಕುಸ್ತಿಪಟುಗಳನ್ನು ತಮ್ಮ ಮನೆಯವರಂತೆಯೇ ನೋಡಿಕೊಳ್ಳುತ್ತಿದ್ದರು. ಅಂತಹ 'ಗರಡಿ' ಸುತ್ತ ನಮ್ಮ ಚಿತ್ರದ ಕಥೆ ಸಾಗುತ್ತದೆ. ಗರಡಿ ಮನೆಯ ಯಜಮಾನನಾಗಿ ಬಿ.ಸಿ.ಪಾಟೀಲ್ ಅಭಿನಯಿಸಿದ್ದಾರೆ. ಅವರ ಶಿಷ್ಯನಾಗಿ ಸೂರ್ಯ ಅಭಿನಯಿಸಿದ್ದಾರೆ. ಇದು ಒಂದು ರೀತಿ ದ್ರೋಣಾಚಾರ್ಯ ಹಾಗೂ ಏಕಲವ್ಯನ ಕಥೆ ಎನ್ನಬಹುದು" ಎಂದರು.
ಹಿರಿಯ ನಟ ಬಿ.ಸಿ.ಪಾಟೀಲ್ ಮಾತನಾಡಿ "ಈ ಸಿನಿಮಾ ಆರಂಭವಾಗಿ ವರ್ಷಗಳಾಯಿತು. ನನ್ನ ಹುಟ್ಟುಹಬ್ಬಕ್ಕೆ ಈ ಚಿತ್ರ ಆರಂಭವಾಗಿತ್ತು. ದರ್ಶನ್ ಅವರು ಶೀರ್ಷಿಕೆ ಅನಾವರಣ ಮಾಡಿದ್ದರು. ಈ ಬಾರಿಯ ಹುಟ್ಟುಹಬ್ಬದ ಸಂದರ್ಭದಲ್ಲಿ (ನವೆಂಬರ್ 10) ಚಿತ್ರ ಬಿಡುಗಡೆಯಾಗುತ್ತದೆ. ಯೋಗರಾಜ್ ಭಟ್ ಅವರು ಬಹಳ ಶ್ರಮವಹಿಸಿ ಚಿತ್ರವನ್ನು ಉತ್ತಮವಾಗಿ ನಿರ್ದೇಶನ ಮಾಡಿದ್ದಾರೆ. ನಾನು ಈಗಾಗಲೇ ಚಿತ್ರವನ್ನು ಸಾಕಷ್ಟು ಸಲ ನೋಡಿ ಖುಷಿ ಪಟ್ಟಿದ್ದೇನೆ" ಎಂದಿದ್ದಾರೆ.
"ಈ ಚಿತ್ರದಲ್ಲೂ ನನ್ನ ಹೆಸರು ಸೂರ್ಯ ಅಂತ. ಎಲ್ಲರೂ "ಗರಡಿ ಸೂರಿ" ಅಂತ ಕರೆಯುತ್ತಿರುತ್ತಾರೆ. ಈ ಚಿತ್ರದಲ್ಲಿ ನನಗೆ ಅವಕಾಶ ಸಿಗಲು ದರ್ಶನ್ ಅವರು ಕಾರಣ. ಅವರು ಸಹ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟೈಟಲ್ ಸಾಂಗ್ ನಲ್ಲಿ ನಾನು ಸಖತ್ ಡ್ಯಾನ್ಸ್ ಮಾಡಿದ್ದೇನೆ. ಯೋಗರಾಜ್ ಭಟ್ ಅವರ ಸಾಹಿತ್ಯ ಹಾಗೂ ಹರಿಕೃಷ್ಣ ಅವರ ಸಂಗೀತದಲ್ಲಿ ಹಾಡು ಅದ್ಭುತವಾಗಿ ಮೂಡಿಬಂದಿದೆ ಎನ್ನುತ್ತಾರೆ ನಾಯಕ ಸೂರ್ಯ.
ನಾಯಕಿ ಸೋನಾಲ್ ಮಾಂತೆರೊ, ಚಿತ್ರದಲ್ಲಿ ನಟಿಸಿರುವ ಸುಜಯ್, ಧರ್ಮಣ್ಣ, ರಾಘು, ಛಾಯಾಗ್ರಾಹಕ ನಿರಂಜನ್ ಬಾಬು, ನೃತ್ಯ ನಿರ್ದೇಶಕ ಧನಂಜಯ ಚಿತ್ರದ ಕುರಿತು ಮಾತನಾಡಿದರು. ನಿರ್ಮಾಪಕಿ ವನಜಾ ಪಾಟೀಲ್ ಎಲ್ಲರಿಗೂ ಧನ್ಯವಾದ ತಿಳಿಸಿದರು. ಕಾರ್ಯಕಾರಿ ನಿರ್ಮಾಪಕಿ ಸೃಷ್ಟಿ ಪಾಟೀಲ್ 'ಗರಡಿ' ಚಿತ್ರ ಸಾಗಿ ಬಂದ ಬಗ್ಗೆ ಮಾಹಿತಿ ನೀಡಿದರು. ನವೆಂಬರ್ 10ಕ್ಕೆ ಸಿನಿಮಾ ತೆರೆಗೆ ಬರಲಿದೆ. ದರ್ಶನ್ ಅಭಿಮಾನಿಗಳು ಕೂಡ ಸಿನಿಮಾ ನೋಡಲು ಬಹಳ ಕಾತರದಿಂದ ಕಾಯುತ್ತಿದ್ದಾರೆ.


Click it and Unblock the Notifications











