ದಾವೂದ್ ನ ನಿದ್ದೆಗೆಡಿಸಿದ್ದ ಮಂದಾಕಿನಿ, 26 ವರ್ಷಗಳ ನಂತರ ಮರಳಿ ಬಂದಳು ಬಾಲಿವುಡ್ಗೆ!
ರಾಜ್ ಕಪೂರ್ ಅವರ 1985 ರ ಬಿಡುಗಡೆಯಾದ 'ರಾಮ್ ತೇರಿ ಗಂಗಾ ಮೈಲಿ'ಯಲ್ಲಿ ರಾಜು ಕಪೂರ್ ಜೊತೆಯಲ್ಲಿ ನಟಿಸಿದ ಮಂದಾಕಿನಿ ಚಿತ್ರ ಬಿಡುಗಡೆಯ ನಂತರ ಮನೆಮಾತಾದರು. ನಂತರ, ಅವರು 'ಡ್ಯಾನ್ಸ್ ಡ್ಯಾನ್ಸ್', 'ತೇಜಾದ್ಬ್', 'ಲಡಾಯಿ', 'ಕಹಾನ್ ಹೈ ಕಾನೂನ್', 'ನಾಗ್ ನಾಗಿನ್', 'ಪ್ಯಾರ್ ಕೆ ನಾಮ್ ಕುರ್ಬಾನ್' ಮತ್ತು 'ಪ್ಯಾರ್ ಕರ್ಕೆ ದೇಖೋ' ಮತ್ತು ಇನ್ನೂ ಅನೇಕ ಯಶಸ್ವಿ ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು. ಮಂದಾಕಿನಿ ಕೊನೆಯದಾಗಿ 1996 ರಲ್ಲಿ ಬಿಡುಗಡೆಯಾದ 'ಜೋರ್ದಾರ್ 'ಚಿತ್ರದಲ್ಲಿ ಗೋವಿಂದ, ಆದಿತ್ಯ ಪಾಂಚೋಲಿ ಮತ್ತು ನೀಲಂ ಕೊಠಾರಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡರು, ನಂತರ ಅವರು ಮನರಂಜನಾ ಉದ್ಯಮವನ್ನು ತೊರೆಯಲು ನಿರ್ಧರಿಸಿದರು. ಈಗ, 26 ವರ್ಷಗಳ ನಂತರ ಮತ್ತೆ ಮರಳಲು ಸಿದ್ಧರಾಗಿದ್ದಾರೆ, ಅವರ ಮಗ ರಬ್ಬಿಲ್ ಠಾಕೂರ್ ಅವರ ಸಂಗೀತ ವೀಡಿಯೊದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇಟೈಮ್ಸ್ಗೆ ನೀಡಿರುವ ಸಂದರ್ಶನದಲ್ಲಿ ತನ್ನ ಪುನರಾಗಮನ ಪ್ರಾಜೆಕ್ಟ್ ಕುರಿತು ಮಾತನಾಡುತ್ತಾ, ಮಂದಾಕಿನಿ 'ಮ್ಯೂಸಿಕ್ ವೀಡಿಯೊವನ್ನು ನಿರ್ದೇಶಿಸುತ್ತಿರುವ ಸಜನ್ ಅಗರ್ವಾಲ್ ಅವರೊಂದಿಗೆ ಸಹಭಾಗಿಯಾಗಲು ತುಂಬಾ ಸಂತೋಷವಾಗಿದೆ' ಎಂದು ಹೇಳಿದ್ದಾರೆ. ಈ ಹಾಡು ತಾಯಿಯ ಹಾಗಾಗಿ ಹಾಡಿಗೆ 'ಮಾ ಓ ಮಾ' ಎಂದು ಶೀರ್ಷಿಕೆ ನೀಡಲಾಗಿದೆ. ಇದಲ್ಲದೆ, ಇದು 'ತುಂಬಾ ಸುಂದರವಾದ ಹಾಡು, ಹಾಡಿನ ಉತ್ತಮ ಭಾಗವೆಂದರೆ ನನ್ನ ಮಗ ನಾಯಕನಾಗಿ ನಟಿಸುತ್ತಿರುವುದು. ತಿಂಗಳಾಂತ್ಯದಲ್ಲಿ ನಾವು ಈ ಹಾಡಿನ ಚಿತ್ರೀಕರಣವನ್ನು ಪ್ರಾರಂಭಿಸುತ್ತೇವೆ" ಎಂದು ಅವರು ಹೇಳಿದ್ದಾರೆ.
ನಿರ್ದೇಶಕ ಸಜನ್ ಅಗರ್ವಾಲ್ ಮಂದಾಕಿನಿ ಬಗ್ಗೆ ಮಾತನಾಡುತ್ತಾ, 'ಮಂದಾಕಿನಿ ನನ್ನ ಊರಿಗೆ (ಮೀರತ್) ಸೇರಿದವರು ಮತ್ತು ಇದು ಅವರ ಮಗನ ಚೊಚ್ಚಲ ಆಲ್ಬಮ್ ಗೀತೆ ಕೂಡ ಆಗಿದೆ. ಇದು ಮಂದಾಕಿನಿ ಅವರ ಮಗನ ಬಾಲಿವುಡ್ ಪ್ರವೇಶ ಕೂಡ ಆಗಿದೆ. ಮಂದಾಕಿನಿಯನ್ನು ನಿರ್ದೇಶಿಸುವುದು ನನ್ನ ಕನಸಾಗಿತ್ತು' ಅಂತ ಹೇಳಿಕೊಂಡು ಬಂದಿದ್ದಾರೆ. 'ಮಾ ಓ ಮಾ' ಸಾಹಿತ್ಯವನ್ನು ಸಹ ಸಾಜನ್ ರಚಿಸಿದ್ದಾರೆ, ಬಬ್ಲಿ ಹಕ್ ಮತ್ತು ಮೀರಾ ಸಂಗೀತ ಸಂಯೋಜಿಸಿದ್ದಾರೆ. ಇದನ್ನು ರಿಷಬ್ ಗಿರಿ ಹಾಡಿದ್ದಾರೆ ಮತ್ತು ಗುರೂಜಿ ಕೈಲಾಶ್ ರಾಯ್ಗರ್ ನಿರ್ಮಿಸಲಿದ್ದಾರೆ. ಸಜನ್ ಅವರು ಮಂದಾಕಿನಿಯನ್ನು ಒಳಗೊಂಡ ಕಿರುಚಿತ್ರವನ್ನು ನಿರ್ದೇಶಿಸಲು ಯೋಜಿಸುತ್ತಿದ್ದಾರೆ ಎಂದು ವರದಿಯು ಹೇಳುತ್ತದೆ.

ಮಂದಾಕಿನಿ ಸಿನಿಮಾರಂಗ ತೊರೆದಿದ್ದು ಯಾಕೆ?
26 ವರ್ಷಗಳ ಹಿಂದೆ ರಾಜ್ ಕಪೂರ್ ಮಂದಾಕಿನಿಯನ್ನು ಕಂಡುಹಿಡಿದು 'ರಾಮ್ ತೇರಿ ಗಂಗಾ ಮೈಲಿ'ಯಲ್ಲಿ ಆಕೆಯ ಮೈಮಾಟವನ್ನು ತೋರಿಸಿದ್ದೆ ತಡ, ಇಡೀ ಭಾರತ ಇವಳ ಚೆಲುವಿನ ಕಡೆಗೆ ನೋಡಿತು. ಮಂದಾಕಿನಿ ತುಂಬಾ ಸುಂದರವಾಗಿದ್ದಳು ಮತ್ತು ಎಲ್ಲರೂ ಅವಳ ಸೌಂದರ್ಯದಿಂದ ಪ್ರಭಾವಿತರಾಗಿದ್ದರು. 1985ರಲ್ಲಿ ಬಂದ 'ರಾಮ್ ತೇರಿ ಗಂಗಾ ಮೈಲಿ' ಮಂದಾಕಿನಿಯನ್ನು ರಾತ್ರೋರಾತ್ರಿ ತಾರೆಯನ್ನಾಗಿ ಮಾಡಿತು. ಆ ಸಮಯದಲ್ಲಿ ಪ್ರತಿಯೊಬ್ಬ ನಿರ್ಮಾಪಕ-ನಿರ್ದೇಶಕರು ತಮ್ಮ ಚಿತ್ರದಲ್ಲಿ ಮಂದಾಕಿನಿಯನ್ನು ತೆಗೆದುಕೊಳ್ಳಬೇಕೆಂದು ಬಯಸಿದ್ದರು. ಮಂದಾಕಿನಿಯ ಸೌಂದರ್ಯದ ಚರ್ಚೆಗಳು ಟಾಕ್ ಅಪ್ ದ ಟೌನ್ ಆಯ್ತು. ಮಂದಾಕಿನಿ ಸೌಂದರ್ಯ ಭೂಗತ ಪಾತಕಿ ದಾವೂದ್ ಇಬ್ರಾಹಿಂನ್ನು ಬಿಡಲಿಲ್ಲ. ಹುಚ್ಚುಚ್ಚಾಗಿ ಅವಳನ್ನು ಪ್ರೀತಿಸಲು ಅವನು ಮುಂದಾದ. ಅವಳು ಕೂಡ ಅವನ ಜೊತೆಯಲ್ಲಿ ತುಂಬಾ ಸಲುಗೆಯಿಂದಲೇ ಇದ್ದಳು. ಆದರೆ ಕೊನೆಗೆ ದಾವೂದ್ ಇಬ್ರಾಹಿಂ ಜೊತೆಗಿನ ರಹಸ್ಯ ಸಂಬಂಧದಿಂದಾಗಿ ಮಂದಾಕಿನಿ ಚಿತ್ರಗಳನ್ನು ಬಿಡಬೇಕಾಯಿತು ಎಂದು ಹೇಳಲಾಗುತ್ತದೆ.

ಮಂದಾಕಿನಿ ಸಂಬಂಧ ದಾವೂದ್ ಜೊತೆ ಶುರುವಾಗಿದ್ದು ಯಾವಾಗ?
ಮಂದಾಕಿನಿ ಮತ್ತು ದಾವೂದ್ ಅವರ ಚರ್ಚೆಗಳು 1990ರಲ್ಲಿ ಪ್ರಾರಂಭವಾದವು. ದಾವೂದ್ ಇಬ್ರಾಹಿಂನೊಂದಿಗೆ ಮಂದಾಕಿನಿಯ ಹೆಸರು ಸೇರಲು ಪ್ರಾರಂಭಿಸಿದ ತಕ್ಷಣ, ಅವಳ ಚಲನಚಿತ್ರ ವೃತ್ತಿಜೀವನವು ಇಳಿಜಾರಿನತ್ತ ಸಾಗಲು ಪ್ರಾರಂಭಿಸಿತು. 1994ರಲ್ಲಿ ಮಂದಾಕಿನಿ ಮತ್ತು ದಾವೂದ್ ಇಬ್ರಾಹಿಂ ಬಗ್ಗೆ ಚರ್ಚೆ ಶುರುವಾಗಿದ್ದು, ಆ ವೇಳೆ ದುಬೈನ ಕ್ರಿಕೆಟ್ ಸ್ಟೇಡಿಯಂನಿಂದ ಮಂದಾಕಿನಿ ದಾವೂದ್ ಇಬ್ರಾಹಿಂ ಜೊತೆಗಿನ ಚಿತ್ರಗಳು ಹೊರಬಂದಾಗ ಎಲ್ಲೆಡೆ ಸಂಚಲನ ಮೂಡಿಸಿತ್ತು. ದಾವೂದ್ ಜೊತೆ ಮಂದಾಕಿನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಇಂಡಸ್ಟ್ರಿಯಲ್ಲಿ ಸುದ್ದಿಯಾಗಿತ್ತು.

ಬೌದ್ಧ ಸನ್ಯಾಸಿಯೊಂದಿಗೆ ಮದುವೆಯಾದ ಮಂದಾಕಿನಿ!
ದಾವೂದ್ ಜೊತೆಗಿನ ಸಂಬಂಧದಿಂದ ಸುದ್ದಿಯಾದ ಮಂದಾಕಿನಿ ಇದೆ ಕಾರಣದಿಂದಲೇ ಕೊನೆಗೆ ಬಾಲಿವುಡ್ ತೊರೆಯಬೇಕಾಗಿ ಬಂತು. ಕೊನೆಗೆ 'ರಾಮ್ ತೇರಿ ಗಂಗಾ ಮೈಲಿ' ನಟಿ ಬೌದ್ಧ ಸನ್ಯಾಸಿಯೊಂದಿಗಿನ ವಿವಾಹವಾದ ನಂತರ ನಟನೆಯನ್ನು ತೊರೆದರು. ಅದಕ್ಕೂ ಒಂದು ವರ್ಷ ಮೊದಲು ಅಂದರೆ 1994ರಲ್ಲಿ ಮುಂಬೈ ಮಾಯಾನಗರಿ ಬಾಂಬ್ ಸ್ಫೋಟದಿಂದ ತತ್ತರಿಸಿತು. ಈ ಸ್ಫೋಟದ ಪ್ರಮುಖ ಆರೋಪಿ ದಾವೂದ್ ಇಬ್ರಾಹಿಂ ಆಗ ಭಾರತದಿಂದ ಪರಾರಿಯಾಗಿದ್ದ. ಇಂತಹ ಪರಿಸ್ಥಿತಿಯಲ್ಲಿ ದಾವೂದ್ ಇಬ್ರಾಹಿಂ ಜೊತೆಗಿನ ಮಂದಾಕಿನಿಯ ಚಿತ್ರಗಳು ವೈರಲ್ ಆಗುತ್ತಿದ್ದಂತೆ ಎಲ್ಲರ ಮನದಲ್ಲಿ ಭಯ ಹುಟ್ಟಿಸಿತ್ತು. ದಾವೂದ್ ಗೆ ಮಂದಾಕಿನಿ ಸ್ಪೆಷಲ್ ಎಂಬ ಚರ್ಚೆ ನಡೆಯಿತು. ದಾವೂದ್ ಇಬ್ರಾಹಿಂ ಮಂದಾಕಿನಿ ಮೇಲೆ ಎಷ್ಟು ವ್ಯಾಮೋಹ ಹೊಂದಿದ್ದನೆಂದರೆ, ಆಕೆಯನ್ನು ತಮ್ಮ ಚಿತ್ರಗಳಲ್ಲಿ ತೆಗೆದುಕೊಳ್ಳುವಂತೆ ಚಿತ್ರ ನಿರ್ಮಾಪಕರಿಗೆ ಬೆದರಿಕೆ ಹಾಕುತ್ತಿದ್ದ.

''ದಾವೂದ್ ಇಬ್ರಾಹಿಂ ಬಗ್ಗೆ ಇನ್ನುಮುಂದೆ ಮಾತನಾಡುವುದಿಲ್ಲ''
ಆ ಸಮಯದಲ್ಲಿ ದಾವೂದ್ ಇಬ್ರಾಹಿಂ ಬಾಲಿವುಡ್ನಲ್ಲಿ ಸಾಕಷ್ಟು ಪ್ರಾಬಲ್ಯ ಹೊಂದಿದ. ಹಿಂದಿ ಚಿತ್ರೋದ್ಯಮದಲ್ಲಿ ಅವನ ಮಾತು ನಡೆಯುತ್ತಿತ್ತು. ಮಂದಾಕಿನಿ ಕೂಡ ದಾವೂದ್ನ ಅಭಿಮಾನಿಯಾಗಿದ್ದಳು, ಆದರೆ ನಂತರ ಸಂದರ್ಶನವೊಂದರಲ್ಲಿ ಇದನ್ನು ನಿರಾಕರಿಸಿದಳು ಮತ್ತು ದಾವೂದ್ ಇಬ್ರಾಹಿಂ ಜೊತೆ ಕೇವಲ ಸ್ನೇಹ ಸಂಬಂಧವನ್ನು ಹೊಂದಿದ್ದಾಗಿ ಹೇಳಿದ್ದಾರೆ. 2010 ರಲ್ಲಿ 'ಮಿಡ್ ಡೇ'ಗೆ ನೀಡಿದ ಸಂದರ್ಶನದಲ್ಲಿ, ದಾವೂದ್ ಇಬ್ರಾಹಿಂ ಜೊತೆಗಿನ ಸಂಬಂಧದ ಬಗ್ಗೆ ಪ್ರಶ್ನೆಗಳನ್ನು ಕೇಳಿದಾಗ, ಮಂದಾಕಿನಿ, ಇನ್ನು ಮುಂದೆ ಅವನ ಬಗ್ಗೆ ಮಾತನಾಡಲು ಬಯಸುವುದಿಲ್ಲ ಎಂದು ಹೇಳಿದರು.

ಅವನೊಂದಿಗಿನ ಸಂಬಂಧ ಮುಗಿದ ಅಧ್ಯಾಯ
ದಾವೂದ್ ಇಬ್ರಾಹಿಂ ಜೊತೆಗಿನ ಸಂಬಂಧದ ಬಗ್ಗೆ ಮಂದಾಕಿನಿ 'ಜನರು ಈಗ ನನ್ನ ಹೆಸರನ್ನು ದಾವೂದ್ನೊಂದಿಗೆ ಸಂಯೋಜಿಸಲು ಅಥವಾ ಆ ಘಟನೆಯ (ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ತೆಗೆದಿರುವ ಫೋಟೋ) ಬಗ್ಗೆ ಯೋಚಿಸಲು ನಾನು ಬಯಸುವುದಿಲ್ಲ. ಈಗ ಅದು ಹಿಂದಿನ ವಿಷಯ. ಆ ಘಟನೆಯನ್ನು ಲಿಂಕ್ ಮಾಡುವ ಮೂಲಕ ಜನರು ಇನ್ನೂ ನನ್ನ ಹೆಸರಿನಲ್ಲಿ ಹಣ ಪಡೆಯುತ್ತಿರುವುದನ್ನು ನೋಡಿದರೆ ನನಗೆ ತುಂಬಾ ಬೇಸರವಾಗಿದೆ. ಆದರೆ ನಾನು ಆ ಸಮಯದಲ್ಲಿ ಎಲ್ಲವನ್ನೂ ಯೋಚಿಸಿ ನಿರ್ಧಾರಕ್ಕೆ ಬಂದಿದ್ದೆ. ಈಗ ಅದೆಲ್ಲವನ್ನು ನಾನು ಮರೆಯಲು ಬಯಸಿದ್ದೇನೆ ಮತ್ತು ನನ್ನ ಇಮೇಜ್ ಡ್ಯಾಮೇಜ್ ಮಾಡುವ ಕಾರ್ಯ ಆಗಾಗ ಎಲ್ಲರೂ ಮಾಡುತ್ತಲೇ ಇರುತ್ತಾರೆ' ಎಂದು ತಮ್ಮ ಬೇಸರ ಹೊರಹಾಕಿದ್ದಳು.

ಯಾರು ಆಕೆಗೆ ಚಿತ್ರಗಳನ್ನು ನೀಡುತ್ತಿರಲಿಲ್ಲ!
ಮುಂಬೈ ಸ್ಫೋಟದ ನಂತರದಾವೂದ್ ಪಾಕಿಸ್ತಾನಕ್ಕೆ ಹೋಗಿ ಅಡಗಿ ಕುಳಿತ ದಾವೂದ್ ಜೊತೆ ಹೆಸರು ತಳುಕು ಹಾಕಿಕೊಂಡಿದ್ದರಿಂದ ಒಂದಡೆ ಪೊಲೀಸರಿಂದ ವಿಚಾರಣೆಗೂ ಕೂಡ ಮಂದಾಕಿನಿ ಒಳಪಟ್ಟರು. ಇದೇ ಕಾರಣದಿಂದಲೇ ಆಕೆಗೆ ಸಿನಿಮಾಗಳನ್ನು ನೀಡಲು ಯಾವುದೇ ಚಿತ್ರ ನಿರ್ಮಾಪಕರು ಮತ್ತು ನಿರ್ದೇಶಕರು ಮುಂದೆ ಬರಲಿಲ್ಲ. ಈ ಪ್ರಕರಣದಲ್ಲಿ ಮಂದಾಕಿನಿ ನಂತರ ಕ್ಲೀನ್ ಚಿಟ್ ಪಡೆದರೂ ಅವರ ಸಿನಿಮಾ ಕೆರಿಯರ್ ಹಾಳಾಗಿತ್ತು. ಜೊತೆಗೆ ಆಕೆಯನ್ನು ಸದಾ ಸಂಶಯದ ದೃಷ್ಟಿಯಿಂದಲೇ ಎಲ್ಲರೂ ನೋಡುತ್ತಿದ್ದರು ಹೀಗಾಗಿ ಕೊನೆಗೆ ಎಲ್ಲಾ ಒತ್ತಡಗಳನ್ನು ತಾಳಲಾಗದೆ ಮಂದಾಕಿನಿ ಚಲನಚಿತ್ರಗಳನ್ನು ತೊರೆದು ಬೌದ್ಧ ಸನ್ಯಾಸಿ ಡಾ. ಕಗ್ಯೂರ್ ಟಿ. ರಿಂಪೋಚೆ ಠಾಕೂರ್ ಅವರನ್ನು ವಿವಾಹವಾಗಿ ಶಾಶ್ವತವಾಗಿ ಬಾಲಿವುಡ್ ಮತ್ತು ಮುಂಬೈ ತೊರೆದು ಹೊರಟು ಹೋದಳು. ಈಗ 26 ವರ್ಷಗಳ ನಂತರ ಮತ್ತೆ ಬಾಲಿವುಡ್ ಗೆ ಆಲ್ಬಮ್ ಹಾಡಿನೊಂದಿಗೆ ಮರಳಿ ಬರುತ್ತಿದ್ದಾಳೆ ಮಂದಾಕಿನಿ.


Click it and Unblock the Notifications











