'ಗುರುದೇವ್ ಹೊಯ್ಸಳ' ಹತ್ರ ವಿಷ್ಯ 'ಬ್ಯಾರೇನೇ ಐತಿ': ಭಟ್ಟರ ಕರಾಮತ್ತು ಐತಿ!
ವಿಭಿನ್ನ ಕಥೆಗಳನ್ನು ಹುಡುಕಿಕೊಂಡು ಹೋಗುವ ನಟ ಡಾಲಿ ಧನಂಜಯ್. ಒಂದೇ ತರಹದ ಸಿನಿಮಾಗಳಲ್ಲಿ ನಟಿಸೋಕೆ ಅಷ್ಟಾಗಿ ಇಷ್ಟ ಪಡುವುದಿಲ್ಲ. ಇನ್ನು 25ನೇ ಸಿನಿಮಾ ಅಂದ್ರೆ, ಸುಮ್ನೆನಾ? ಸ್ಟೋರಿಯಿಂದ ಹಿಡಿದು ಪಾತ್ರಗಳ ಆಯ್ಕೆ ಕೂಡ ವಿಭಿನ್ನವಾಗಿಯೇ ಇರುತ್ತೆ.
ಡಾಲಿ ಧನಂಜಯ್ ಅಭಿನಯದ 'ಗುರುದೇವ್ ಹೊಯ್ಸಳ' ಸಿನಿಮಾ ಇದೇ ಮಾರ್ಚ್ 30ಕ್ಕೆ ರಿಲೀಸ್ ಆಗುತ್ತಿದೆ. ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುವ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದು, ಅಲ್ಲಿನ ಶೈಲಿಯಲ್ಲೇ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ.
ಧನಂಜಯ್ ಗುರುದೇವ್ ಪಾತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದ್ಹಾಗೆ ಉತ್ತರ ಕರ್ನಾಟಕದ ಭಾಗಗಳಲ್ಲಿಯೇ ಹೆಚ್ಚಾಗಿ ಚಿತ್ರೀಕರಣವನ್ನು ಮಾಡಲಾಗಿದೆ. ಇನ್ನೇನು ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ ಅನ್ನುವಾಗಲೇ ಮೂರನೇ ಹಾಡನ್ನು ಬಿಡುಗಡೆ ಮಾಡಲಾಗಿದೆ. ಅದುವೇ "ಬ್ಯಾರೇನೇ ಐತಿ..".

'ಗುರುದೇವ್ ಹೊಯ್ಸಳ' ಸಿನಿಮಾದ ಮೂರನೇ ಹಾಡು 'ಬ್ಯಾರೇನೇ ಐತಿ' ಉತ್ತರ ಕರ್ನಾಟಕದಲ್ಲಿ ವಾಸವಿರುವ ಅಲೆಮಾರಿಗಳ ಬದುಕಿನ ಮೇಲೆ ಚಿತ್ರೀಕರಣ ಮಾಡಲಾಗಿದೆ. ಅಲೆಮಾರಿಗಳ ಬದುಕು ಹೇಗಿರುತ್ತೆ? ಅನ್ನೋದನ್ನು ಈ ಹಾಡಿನಲ್ಲಿ ಕಟ್ಟಿಕೊಡಲಾಗಿದೆ. ಈ ಹಾಡಿಗೆ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದು, ಅಜನೀಶ್ ಲೋಕನಾಥ್ ಟ್ಯೂನ್ ಹಾಕಿದ್ದಾರೆ.
ವಿಶೇಷ ಅಂದರೆ, ಇದೇ ಕೆಆರ್ಜಿ ನಿರ್ಮಿಸಿದ್ದ ಧನಂಜಯ್ ಸಿನಿಮಾ 'ರತ್ನನ್ ಪ್ರಪಂಚ'ದಲ್ಲಿ "ಅಲೆಮಾರಿಯೇ.." ಅನ್ನೋ ಸಾಲಿನ ಹಾಡೊಂದನ್ನು ಇಡಲಾಗಿತ್ತು. ಈಗ ಇದೇ ಕಾಂಬಿನೇಷನ್ನಲ್ಲಿ ಅಲೆಮಾರಿ ಬದುಕಿನ ಅನಾವರಣ ಆಗಿದೆ. ಅಷ್ಟಕ್ಕೂ ಅಲೆಮಾರಿಗಳಿಗೂ ಈ ಸಿನಿಮಾಗೂ ಏನು ಸಂಬಂಧ? ಯಾಕೆ ಆ ಪಂಗಡವನ್ನು ಈ ಸಿನೆಮಾದಲ್ಲಿ ಸೇರಿಸಲಾಗಿದೆ ಅನ್ನೋದು ಸಿನೆಮಾದಲ್ಲೇ ನೋಡಬೇಕಿದೆ.
ಡಾಲಿ ಧನಂಜಯ ನಟಿಸಿದ 25ನೇ ಸಿನೆಮಾ 'ಗುರುದೇವ್ ಹೊಯ್ಸಳ' ದಿನದಿಂದ ದಿನಕ್ಕೆ ಕುತೂಹಲವನ್ನು ದುಪ್ಪಟ್ಟು ಮಾಡುತ್ತಿದೆ. ಈಗಾಗಲೇ ಮಾಸ್ ಟ್ರೈಲರ್ ಹಾಗೂ ಹಾಡುಗಳನ್ನು ರಿಲೀಸ್ ಮಾಡಿ ಸಕ್ಸಸ್ ಕಂಡಂತಿದೆ.
ಕೆಆರ್ಜಿ ಸ್ಟುಡಿಯೋಸ್ ಬ್ಯಾನರ್ನಲ್ಲಿ ಯೋಗಿ ಜಿ. ರಾಜ್ ಹಾಗೂ ಕಾರ್ತಿಕ್ ಗೌಡ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. 'ಗುರುದೇವ್ ಹೊಯ್ಸಳ' ಸಿನಿಮಾ ಇದೇ ಮಾರ್ಚ್ 30ರಂದು ವಿಶ್ವದಾದ್ಯಂತ ತೆರೆಕಾಣುತ್ತಿದೆ.

ವಿಜಯ್ ಎನ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಮಾಸ್ ಮತ್ತು ಖಡಕ್ ಪೊಲೀಸ್ ಪಾತ್ರದಲ್ಲಿ ಮಿಂಚಿರೋ ಡಾಲಿಗೆ ಜೋಡಿಯಾಗಿ ಅಮೃತಾ ಅಯ್ಯಂಗಾರ್ ಕಾಣಿಸಿಕೊಂಡಿದ್ದಾರೆ. ಹಾಗೇ ಅಚ್ಯುತ್ ಕುಮಾರ್, ನವೀನ್ ಶಂಕರ್, ಅವಿನಾಶ್, ಪ್ರತಾಪ್ ನಾರಾಯಣ್, ರಾಜೇಶ್ ನಟರಂಗ, ನಾಗಭೂಷಣ್ ಈ ಚಿತ್ರದಲ್ಲಿ ನಟಿಸಿದ್ದಾರೆ.


Click it and Unblock the Notifications











