'ಸಿಂಗರ್ ದರ್ಶನ್' ಬಗ್ಗೆ ನಿಮಗೆಷ್ಟು ಗೊತ್ತು? ಚಾಲೆಂಜಿಂಗ್ ಸ್ಟಾರ್ ಹಾಡುಗಳಿಗೆ ದನಿ ನೀಡಿರುವ ಚಿತ್ರಗಳಿವು
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಳೆ ( ಫೆಬ್ರವರಿ 16 ) ತಮ್ಮ 46ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಕಳೆದ ಕೆಲ ವರ್ಷಗಳ ಹಾಗೆ ಈ ವರ್ಷವೂ ಸಹ ಕೇಕ್, ಹಾರ ತಂದು ದುಂದು ವೆಚ್ಚ ಮಾಡುವ ಬದಲು ಆಹಾರ ತಯಾರಿಸಲು ಬೇಕಾದ ಸಾಮಗ್ರಿಗಳನ್ನು ತನ್ನಿ, ಅಗತ್ಯ ಇರುವವರಿಗೆ ತಲುಪಿಸೋಣ ಎಂದು ದರ್ಶನ್ ತಮ್ಮ ಅಭಿಮಾನಿಗಳಿಗೆ ಕರೆ ನೀಡಿದ್ದು, ಅದರಂತೆ ಅವರ ಅಭಿಮಾನಿಗಳೂ ಸಹ ದಿನಸಿ ಸಾಮಗ್ರಿಗಳನ್ನು ಮೂಟೆಗಟ್ಟಲೆ ಹೊತ್ತೊಯ್ದು ದರ್ಶನ್ ಮನೆ ತಲುಪಿಸಿದ್ದಾರೆ.
ಸದ್ಯ ದರ್ಶನ್ ಹುಟ್ಟುಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದ್ದು, ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸಲು ದರ್ಶನ್ ಅಭಿಮಾನಿಗಳು ರಾಜ್ಯದ ಮೂಲೆ ಮೂಲೆಗಳಿಂದ ದರ್ಶನ್ ಮನೆ ಕಡೆ ಪಯಣ ಬೆಳೆಸಿದ್ದಾರೆ. ಅದರಲ್ಲೂ ಕಳೆದ ವರ್ಷ ನಟ ಪುನೀತ್ ರಾಜ್ಕುಮಾರ್ ನಿಧನದ ಕಾರಣದಿಂದಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದೇ ಇದ್ದ ದರ್ಶನ್ ಅವರ ಹುಟ್ಟುಹಬ್ಬವನ್ನು ಈ ಬಾರಿ ಅವರ ಅಭಿಮಾನಿಗಳು ಬಹಳ ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸಿದ್ದು, ಸಾಮಾಜಿಕ ಜಾಲತಾಣದ ಹಾಗೂ ಆಫ್ಲೈನ್ನಲ್ಲಿ ಸಂಭ್ರಮಾಚರಣೆ ಆರಂಭಗೊಂಡಿದೆ.
ಇನ್ನು ಇಂದು ಚಾಲೆಂಜಿಂಗ್ ಸ್ಟಾರ್ ಆಗಿ, ಬಾಕ್ಸ್ ಆಫೀಸ್ ಸುಲ್ತಾನ್ ಆಗಿ ಮೆರೆಯುತ್ತಿರುವ ದರ್ಶನ್ ಆರಂಭದ ದಿನಗಳಲ್ಲಿ ನಟನಾಗಿ ಅವಕಾಶ ಗಿಟ್ಟಿಸಿಕೊಳ್ಳಲು ಸೈಕಲ್ ಹೊಡೆದವರೇ. ದೊಡ್ಡ ನಟ ತೂಗುದೀಪ ಶ್ರೀನಿವಾಸ್ ಅವರ ಮಗನಾದರೂ ಸಹ ದರ್ಶನ್ಗೆ ಚಿತ್ರರಂಗದಲ್ಲಿ ಯಾರೂ ಸಹ ನೇರವಾಗಿ ನಟನಾಗುವ ಅವಕಾಶ ನೀಡಲಿಲ್ಲ. ಮೊದಲಿಗೆ ಲೈಟ್ ಬಾಯ್ ಆಗಿ ಕೆಲಸ ಆರಂಭಿಸಿದ್ದ ದರ್ಶನ್ ಮಹಾಭಾರತ ಸಿನಿಮಾದಲ್ಲಿ ಬಣ್ಣ ಹಚ್ಚುವ ಮೂಲಕ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದರು. ಬಳಿಕ 2002ರಲ್ಲಿ ಬಿಡುಗಡೆಗೊಂಡ ಮೆಜೆಸ್ಟಿಕ್ ಸಿನಿಮಾ ಮೂಲಕ ಪರಿಪೂರ್ಣ ನಟನಾಗಿ ಬಡ್ತಿ ಪಡೆದರು. ಹೀಗೆ ಅಂದು ಶುರುವಾದ ದರ್ಶನ್ ಓಟ ಎಲ್ಲೂ ನಿಲ್ಲದೇ ಸಾಗುತ್ತಿದೆ. ಇನ್ನು ದರ್ಶನ್ ಕೇವಲ ನಟ ಮಾತ್ರವಲ್ಲದೇ ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕನಾಗಿ, ವಿತರಕನಾಗಿ ಹಾಗೂ ಗಾಯಕನಾಗಿಯೂ ಸಹ ಕೆಲಸ ನಿರ್ವಹಿಸಿದ್ದಾರೆ. ಇನ್ನು ಗಾಯನದಿಂದ ದೊಡ್ಡ ಮಟ್ಟದ ಅಂತರ ಕಾಯ್ದುಕೊಂಡಿರುವ ದರ್ಶನ್ ಯಾವ ಸಿನಿಮಾದ ಹಾಡುಗಳಿಗೆ ದನಿ ನೀಡಿದ್ದಾರೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

ಈ ಮೂರು ಹಾಡುಗಳಿಗೆ ದನಿ ನೀಡಿದ್ದ ದರ್ಶನ್
* ಚಾಲೆಂಜಿಂಗ್ ಸ್ಟಾರ್ ದರ್ಶನ್ ತೀರ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾಗ ಬಿಡುಗಡೆಯಾಗಿ ಕೈಹಿಡಿದು ದೊಡ್ಡ ತಿರುವು ನೀಡಿದ್ದ ಚಿತ್ರವೆಂದರೆ ಅದು ಸಾರಥಿ. ಈ ಚಿತ್ರದ ಮೂಲಕ ಮೊದಲ ಬಾರಿಗೆ ದರ್ಶನ್ ಹೆಡ್ಫೋನ್ ಹಾಕಿಕೊಂಡು ಮೈಕ್ ಮುಂದೆ ಬಂದು ಹಾಡಿಗಾಗಿ ದನಿ ನೀಡಿದ್ರು. ಈ ಚಿತ್ರದ 'ಹಾಗೋ ಹೀಗೋ ಇದ್ದೆ ನಾನು' ಎಂಬ ಡ್ಯುಯೆಟ್ ಹಾಡಿಗೆ ದರ್ಶನ್ ನೀಡಿದ್ರು. ಹಾಡಿನಲ್ಲಿ ಬರುವ ನಾಯಕಿಯ ಸಾಲುಗಳನ್ನು ವಾಣಿ ಹರಿಕೃಷ್ಣ ಹಾಡಿದರೆ, ತಮ್ಮ ಸಾಲುಗಳನ್ನು ದರ್ಶನ್ ಹೇಳಿದ್ರು.
* 2014ರಲ್ಲಿ ಬಿಡುಗಡೆಗೊಂಡಿದ್ದ ತಮ್ಮದೇ ಮತ್ತೊಂದು ಚಿತ್ರವಾದ ಅಂಬರೀಶದಲ್ಲೂ ಸಹ ದರ್ಶನ್ ಹಾಡೊಂದಕ್ಕೆ ದನಿ ನೀಡಿದ್ರು. ಈ ಚಿತ್ರದ ಖೇಲ್ ಖತಮ್ ಹಾಡಿನಲ್ಲಿ ಬರುವ ಕೆಲ ಸಾಲುಗಳಿಗೆ ದರ್ಶನ್ ದನಿ ನೀಡಿದ್ರು.
* ಹೀಗೆ ತಮ್ಮ ಎರಡು ಚಿತ್ರಗಳ ಹಾಡುಗಳಿಗೆ ದನಿ ನೀಡಿದ್ದ ದರ್ಶನ್ 2019ರಲ್ಲಿ ಬಿಡುಗಡೆಗೊಂಡಿದ್ದ ರವಿಚಂದ್ರನ್ ನಟನೆಯ ದಶರಥ ಚಿತ್ರದ ಟೈಟಲ್ ಹಾಡಿನ ಸಾಲುಗಳಿಗೆ ದನಿ ನೀಡಿದ್ದರು.

ದರ್ಶನ್ ಹಾಡು ಹಾಡಿಲ್ಲ, ದನಿ ನೀಡಿದ್ರು!
ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ತನಗೆ ಚೆನ್ನಾಗಿ ಹಾಡಲು ಬರುವುದಿಲ್ಲ ಎಂಬುದನ್ನು ಹಲವು ಬಾರಿ ಹೇಳಿಕೊಂಡಿದ್ದಾರೆ. ಮೇಲ್ಕಂಡ ಮೂರು ಹಾಡುಗಳಲ್ಲೂ ಸಹ ದರ್ಶನ್ ಸಾಲುಗಳನ್ನು ಹಾಡಿಲ್ಲ, ಬದಲಾಗಿ ಹಾಡುಗಳ ನಡುವೆ ಬರುವ ಡೈಲಾಗ್ಗಳಿಗೆ ದನಿ ನೀಡಿದ್ದಾರೆ. ಆದರೆ ಹಾಡಿನ ನಡುವೆ ಬರುವ ಯಾವುದೇ ಪದಕ್ಕಾದರೂ ದನಿ ನೀಡಿದರೆ ಅವರನ್ನು ಗಾಯಕರೆಂದೇ ಕರೆಯಲಾಗುತ್ತದೆ.

ಹುಟ್ಟುಹಬ್ಬಕ್ಕೆ ಮುಂದಿನ ಚಿತ್ರದ ಟೈಟಲ್
ಸದ್ಯ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ದರ್ಶನ್ ನಟನೆಯ 56ನೇ ಚಿತ್ರದ ಟೈಟಲ್ ಕೂಡ ಈ ಶುಭದಿನದಂದೇ ರಿವೀಲ್ ಆಗಲಿದೆ. ತರುಣ್ ಸುಧೀರ್ ನಿರ್ದೇಶನ ಹಾಗೂ ರಾಕ್ಲೈನ್ ವೆಂಕಟೇಶ್ ನಿರ್ಮಾಣವಿರಲಿರುವ ಈ ಚಿತ್ರದ ಟೈಟಲ್ ಕುರಿತು ದೊಡ್ಡ ಮಟ್ಟದ ಚರ್ಚೆಗಳು ಆಗುತ್ತಿದ್ದು, ಕಾಟೇರಾ ಹಾಗೂ ಚೌಡಯ್ಯ ಎಂಬ ಶೀರ್ಷಿಕೆ ಇಡುವ ಸಾಧ್ಯತೆಗಳಿವೆ ಎಂಬ ಸುದ್ದಿಗಳೂ ಸಹ ಹರಿದಾಡಿದ್ದವು. ಆದರೆ ಚಿತ್ರತಂಡ ಯಾವ ಟೈಟಲ್ ಅನ್ನು ಇಟ್ಟಿದೆ ಎಂಬುದು ನಾಳೆಯಷ್ಟೇ ಬಹಿರಂಗವಾಗಲಿದೆ.


Click it and Unblock the Notifications











