'Don't Blame ಬೆಂಗಳೂರು': ಮಹಾನಗರದ ಮಹತ್ವ ಹೇಳುವ ಹಾಡು
ಕೊರೊನಾ ಎಂಬ ಸಾಂಕ್ರಾಮಿಕ ರೋಗ ದೇಶವನ್ನು ಮಾತ್ರವಲ್ಲದೆ ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವುದು ಗೊತ್ತಿರುವ ಸಂಗತಿ. ಇಂತಹ ಸಮಯದಲ್ಲಿ ಅನೇಕರು ಬೆಂಗಳೂರು ಬಿಟ್ಟು ನಕಾರಾತ್ಮಕ ಭಾವನೆ ತಳೆದು, ಕಡೆಗಣಿಸಿ, ಬೈದುಕೊಂಡು ತಮ್ಮ ತಮ್ಮ ಊರುಗಳತ್ತ ಸಾಗಿದ್ದೂ ಉಂಟು.
ತಮ್ಮ ಗ್ರಾಮಗಳಲ್ಲಿ ಕೆಲಸವಿಲ್ಲದೆ ಪರದಾಡುವಾಗ, ಅವಮಾನಿತರಾದಾಗ ಎಲ್ಲಿಗೆ ಹೋಗುವುದು ಎಂದು ಯೋಚಿಸುವಾಗ ಥಟ್ಟನೇ ತಲೆಗೆ ಬರುವುದು ಬೆಂಗಳೂರು. ನಾನಾ ಕನಸುಗಳೊಂದಿಗೆ, ಕಷ್ಟಗಳೊಂದಿಗೆ ಊರು ಬಿಟ್ಟು ಬಂದವರಿಗೆ ಯಾವುದೇ ಭೇದವಿಲ್ಲದೆ. ಅನ್ನ, ಉದ್ಯೋಗ, ಸೂರು ನೀಡಿ ತನ್ನ ಒಡಲಿನಲ್ಲಿ ಅಪ್ಪಿಕೊಳ್ಳುವ ಬೆಂಗಳೂರು ಸಹವಾಸವೇ ಬೇಡ ಹೋದವರು ಅದೇಷ್ಟೋ ಜನ.
ಕೊರೊನಾ ಕಾಟ ಎಂಬ ಕಾರಣಕ್ಕೆ ಸಿಲಿಕಾನ್ ಸಿಟಿ ಬಿಟ್ಟು ತಮ್ಮ ಊರುಗಳಿಗೆ ಹೊರಟ ಅನೇಕ ಮಂದಿ ಬೆಂಗಳೂರನ್ನು ಮಾತುಗಳಲ್ಲಿ ಜರಿದು ಹೋದರು. ಇಷ್ಟು ದಿನ ಸುಖವಾಗಿದ್ದ ಜನ, ಕಷ್ಟ ಬಂದ ತಕ್ಷಣ ಅನ್ನ, ಸೂರು ಕೊಟ್ಟ ಊರನ್ನು ಜರಿಯುವುದಾದರೂ ಎಷ್ಟು ಸರಿ?

ಹೀಗಾಗಿಯೇ ಈ ಊರಿನ ಮಾತೃ ಹೃದಯ ಎಂತಹದ್ದು ಎಂದು ತಿಳಿಸುವ ನಿಟ್ಟಿನಲ್ಲಿ ಇಲ್ಲೊಂದು ತಂಡ ಬೆಂಗಳೂರಿನ ಹಿರಿಮೆ ಸಾರುವ ಕುರಿತು 'ಡೋಂಟ್ ಬ್ಲೇಮ್ ಬೆಂಗಳೂರು' ಎಂಬ ವಿಡಿಯೋ ಸಾಂಗ್ ಮಾಡಿದೆ. ಜೂನ್ 5 ರಂದು ಆರ್.ಜೆ ಸುನೀಲ್ ಪ್ರಾಂಕ್ ಕಾಲ್ಸ್ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಿದ್ದು, ಸದ್ಯ ವೈರಲ್ ಆಗಿದೆ.
ಇದರ ಪರಿಕಲ್ಪನೆ, ಸಾಹಿತ್ಯ ಮತ್ತು ಸಂಗೀತ ಸಂಯೋಜನೆಯನ್ನು ತಿಮ್ಮೇಗೌಡ ಮಾಡಿದ್ದಾರೆ. ಅಶ್ವಿನ್ ಶರ್ಮ ಧ್ವನಿ ನೀಡಿದ್ದಾರೆ. ಪಂಕಜ್ ಅವರು ಸಂಗೀತ ನಿರ್ಮಾಣ ಮಾಡಿದ್ದು, ಕ್ರಿಯೇಟಿವ್ ಹೆಡ್ ಆಗಿ ಅಭಿಷೇಕ್, ಎಡಿಟಿಂಗ್ನಲ್ಲಿ ಕಿರಣ್, ಪ್ರೋಡಕ್ಷನ್ ವಿನ್ಯಾಸಕಾರರಾಗಿ ಮಮತಾ ಮಾರ್ದಲ ಅವರು ಕೆಲಸ ಮಾಡಿದ್ದಾರೆ.

ಈ ವಿಡಿಯೋ ಹಾಡಿನಲ್ಲಿ ಹಿರಿಯ ಸಂಗೀತ ನಿರ್ದೇಶಕ ವಿ.ಮನೋಹರ್, ನಟರಾದ ಮಂಡ್ಯ ರಮೇಶ್, ಅನಿರುದ್ಧ, ವಸಿಷ್ಠ ಸಿಂಹ, ಗಾಯಕಿಯರಾದ ಅನುರಾಧ ಭಟ್, ಶಮಿಕಾ ಮಲ್ನಾಡ್, ನಟಿಯರಾದ ಹರ್ಷಿಕ ಪೊನ್ನಚ್ಚ, ಪ್ರಣೀತಾ ಸುಭಾಷ್, ಸೋನುಗೌಡ, ರೂಪಿಕಾ ಸೇರಿದಂತೆ ಅನೇಕ ಪ್ರಮುಖರು ಕಾಣಿಸಿಕೊಳ್ಳುವ ಮೂಲಕ ಬೆಂಬಲಿಸಿದ್ದಾರೆ.


Click it and Unblock the Notifications











