'ಎಂಜಾಯ್ ಎಂಜಾಮಿ' ಇದು ಕೇವಲ ಹಾಡಲ್ಲ, ಬರಿಗೈಲಿ ಬಂದ ಬಡವರ ಕತೆ
'ಎಂಜಾಯ್ ಎಂಜಾಮಿ' ತಮಿಳಿನ ಈ ರ್ಯಾಪ್ ಹಾಡು ಬಹಳ ವೈರಲ್ ಆಗಿದೆ. ಎ.ಆರ್.ರೆಹಮಾನ್, ತಮಿಳು ನಟ ಸೂರ್ಯ, ವಿಜಯ್ ಇನ್ನೂ ಹಲವರು ಹಾಡು ಕೇಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಹಾಡಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ನಡೆಯುತ್ತಿವೆ. ಅದಕ್ಕೆ ಕಾರಣ ಇದು ಕೇವಲ ಹಾಡು ಮಾತ್ರವೇ ಅಲ್ಲ, ಇದು ದಮನಿತರ ಕತೆ.
ಹೌದು, 'ಎಂಜಾಯ್ ಎಂಜಾಮಿ' ಹಾಡು ನೋಡಿದ ಕೂಡಲೆ ಆಫ್ರಿಕಾ, ಕೆರೆಬಿಯನ್ ರ್ಯಾಪ್ ಹಾಡುಗಳ ಮಾದರಿ ಕಣ್ಣಮುಂದೆ ಬರುತ್ತದೆ. ಆದರೆ ಇದು ಅಪ್ಪಟ ದ್ರಾವಿಡ ನೆಲದ ಹಾಡು. ಇದು ತಮಿಳಿಗರ ಹಾಡು ಆ ಮೂಲಕ ಎಲ್ಲ ದಮನಿತರ ಪಾಡು.
ಹಾಡು ಬರೆದಿರುವುದು ಅರಿವು ಎಂಬ ತಮಿಳು ಹುಡುಗ. ಈತನ ಅಜ್ಜಿಯ ಹಾಗೂ ಆಕೆಯ ಸಮಕಾಲೀನವರ ಜೀವನವೇ 'ಎಂಜಾಯ್ ಎಂಜಾಮಿ' ಹಾಡು. ಹಾಡಿನಲ್ಲಿ 'ಎಂಜಾಯ್' ಎಂದರೆ ಮಜಾ ಮಾಡು ಎಂದರ್ಥವಲ್ಲ ಬದಲಿಗೆ ಎನ್ನ ತಾಯಿ ಎಂದರ್ಥ. ಎಂಜಾಮಿ ಎಂದರೆ 'ಎನ್ನ ಸಾಮಿ'. ಗುಲಾಮರು ಅವರ ಒಡೆಯರನ್ನು ಕರೆಯುತ್ತಿದ್ದಿದು ಹೀಗೆಯೇ. ಅರಿವು ಅವರ ಅಜ್ಜಿಯೂ ಅರಿವು ಅನ್ನು 'ಎಂಜಾಮಿ' ಎಂದೇ ಕರೆಯುತ್ತಿದ್ದರಂತೆ. ಎಂಜಾಮಿ ಎಂದರೆ ಸ್ವಚ್ಛಂದ ಪಕ್ಷಿ ಎಂಬರ್ಥವೂ ಇದೆ.
ಭಾರತದಿಂದ ಶ್ರೀಲಂಕಾ, ಮಲೇಷ್ಯಾಗಳಿಗೆ ಕಾಫಿ, ರಬ್ಬರ್ ಪ್ಲಾಂಟ್ ಗಳಿಗೆ ದುಡಿಯಲು ಹೋಗಿ ವರ್ಷಗಟ್ಟಲೆ ದುಡಿದು ಬರಿಗೈಲಿ ವಾಪಸ್ಸಾದ ತಮಿಳು ಕಾರ್ಮಿಕರ ಬದುಕಿನ ಸಂಭ್ರಮಾಚರಣೆ!

ಬಂಗಾರ ಬೆಳೆದರು ಬರಿಗೈಲಿ ವಾಪಸ್ಸಾದವರ ಕತೆ
ಒಡೆಯರ ಮರ್ಜಿಗೆ ತಕ್ಕಂತೆ ವರ್ಷಗಟ್ಟಲೆ ದುಡಿದು ಬೆಟ್ಟಗಳನ್ನು ಹಸನು ಮಾಡಿ ಫ್ಲಾಂಟುಗಳನ್ನಾಗಿ ಮಾಡಿ ಕಾಫಿ, ರಬ್ಬರ್ ಅಂಥ 'ಬಂಗಾರ' ಬೆಳೆದರೂ ಒಂದು ತುಂಡು ಭೂಮಿಯೂ ಪಡೆಯಲಾಗದೆ ಶ್ರೀಲಂಕಾ, ಮಲೇಷಿಯಾಗಳಿಂದ ಭಾರತಕ್ಕೆ ಅಟ್ಟಿಸಿಕೊಂಡ ತಮಿಳು ಕಾರ್ಮಿಕರ ಬದುಕನ್ನು ಇದ್ದಂತೆ ಕಟ್ಟಿಕೊಡುವ ಹಾಡು 'ಎಂಜಾಯ್ ಎಂಜಾಮಿ'. ಅರಿವು ಅವರ ಅಜ್ಜಿ ಸಹ ಹೀಗೆಯೇ ಶ್ರೀಲಂಕಾದ ಫ್ಲಾಂಟುಗಳಲ್ಲಿ ದುಡಿದು ಬರಿಗೈಲಿ ಭಾರತಕ್ಕೆ ವಾಪಸ್ಸಾದವರು.

ಹಾಡು ಬಂಡಾಯ ಗೀತೆಯಲ್ಲ
ಇಡೀಯ ಹಾಡು ಮೊಮ್ಮಗ ಹಾಗೂ ಅಜ್ಜಿಯ ನಡುವೆ ನಡುವೆ ಸಂವಾದದ ರೂಪದಲ್ಲಿದೆ. ಹಾಡಿನಲ್ಲಿ ಸಾಹಿತ್ಯ ಮಾತ್ರವಲ್ಲ, ಚಿತ್ರೀಕರಿಸಿರುವ ರೀತಿಯೂ ಕತೆಯೊಂದನ್ನು ಹೇಳುತ್ತಿದೆ. ಹಾಡಿನ ವಿಶೇಷವೆಂದರೆ ಹಾಡಿನಲ್ಲಿ ಒಡೆಯರನ್ನು ಬೈಯಲಾಗಿಲ್ಲ, ಒಡೆಯರು ಅನ್ಯಾಯ ಎಸಗಿದರು ಎಂದಿಲ್ಲ, ಯಾವ ಬಂಡಾಯವನ್ನೂ ಪ್ರದರ್ಶಿಸಲಾಗಿಲ್ಲ. ಆದರೂ ಈ ಹಾಡು ಬಂಡಾಯದ ಭಾವವೊಂದನ್ನು ಕೇಳುಗನಲ್ಲಿ ಮೂಡಿಸುತ್ತದೆ.

ಅರಿವು ಅವರ ಅಜ್ಜಿಯೂ ಇದ್ದಾರೆ ಹಾಡಿನಲ್ಲಿ
ಹಾಡಿನಲ್ಲಿ ಅರಿವು ಅವರ ಅಜ್ಜಿ ಸಹ ಇದ್ದಾರೆ ಅಷ್ಟೇ ಅಲ್ಲ ಹಾಡಿನ ಕೊನೆಯಲ್ಲಿ ಕಾಣುವ ಮುಖಗಳು ಅರಿವು ಅವರ ಊರಿನವರದ್ದೇ. ಕಾಫಿ ಫ್ಲಾಂಟುಗಳಲ್ಲಿ ಒಡೆಯರ ಕೈ ಕೆಳಗೆ ಗುಲಾಮಗಿರಿ ಮಾಡಿದವರ ಮುಖಗಳವು. ಈಗಲೂ ನಗುತ್ತಲೇ ಇವೆ.
Recommended Video

ಭಾರಿ ವೈರಲ್ ಆಗಿರುವ ಹಾಡು 'ಎಂಜಾಯ್ ಎಂಜಾಮಿ'
'ಎಂಜಾಯ್ ಎಂಜಾಮಿ' ಹಾಡನ್ನು ಧೀ ಹಾಡಿ ನಟಿಸಿದ್ದಾರೆ. ಸಾಹಿತ್ಯ ಬರೆದಿರುವ ಅರಿವು ಸಹ ಇದ್ದಾರೆ. ಅವರೂ ಹಾಡಿಗೆ ಧ್ವನಿ ಸೇರಿಸಿದ್ದಾರೆ. ಹಾಡನ್ನು ರಿಚ್ ಆಗಿ ನಿರ್ಮಾಣ ಮಾಡಿರುವುದು ಸಂಗೀತ ನಿರ್ದೇಶಕ ಸಂತೋಷ್ ನಾರಾಯಣ್. ನಿರ್ದೇಶನ ಮಾಡಿರುವುದು ಅಮಿತ್ ಕೃಷ್ಣನ್. ಕೆಲವೇ ದಿನಗಳಲ್ಲಿ ಹತ್ತು ಕೋಟಿ ವೀವ್ಸ್ ದಾಟಿ ಬಹುವೇಗವಾಗಿ ಮುಂದೆ ಸಾಗುತ್ತಿದೆ 'ಎಂಜಾಯ್ ಎಂಜಾಮಿ' ಹಾಡು.


Click it and Unblock the Notifications











