ವೆಂಟಿಲೇಟರ್ ಸಿಗದೆ ಹಿರಿಯ ಗಾಯಕ ಜಿ.ಆನಂದ್ ನಿಧನ
ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ಗಾಯಕ ಜಿ. ಆನಂದ್ ಕೊರೊನಾಗೆ ಬಲಿಯಾಗಿದ್ದಾರೆ. ಇತ್ತೀಚಿಗೆ ಕೊರೊನಾಗೆ ಅನೇಕ ಸಿನಿಮಾಗಣ್ಯರು ಬಲಿಯಾಗಿದ್ದಾರೆ. ಇದೀಗ ದಕ್ಷಿಣದ ಚಿತ್ರರಂಗ ಮತ್ತೋರ್ವ ಪ್ರತಿಭಾವಂತ ಗಾಯಕನನ್ನು ಕಳೆದುಕೊಂಡಿದೆ.
ಕೊರೊನಾ ಸೋಂಕಿಗೆ ತುತ್ತಾಗಿದ್ದ 67 ವರ್ಷದ ತೆಲುಗಿನ ಖ್ಯಾತ ಗಾಯಕ ಆನಂದ್ ಅವರ ಆಕ್ಸಿಜನ್ ಪ್ರಮಾಣ 55ಕ್ಕೆ ಇಳಿಕೆಯಾಗಿತ್ತು. ಆಕ್ಸಿಜನ್ ಮತ್ತು ವೆಂಟಿಲೇಟರ್ ಗಾಗಿ ಅಂಗಲಾಚಿದರು ತಕ್ಷಣಕ್ಕೆ ಸಿಗದೆ ಕೊನೆಯುಸಿರೆಳೆದಿದ್ದಾರೆ. ಆಕ್ಸಿಜನ್ ಮತ್ತು ವೆಂಟಿಲೇಟರ್ ಗಾಗಿ ಅವರ ಸ್ನೇಹಿತರು ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿಕೊಂಡಿದ್ದರು. ವೆಂಟಿಲೇಟರ್ ಸಿಗುವಷ್ಟೊತ್ತಿಗೆ ಆನಂದ್ ಕೊನೆಯುಸಿರೆಳಿದ್ದಾರೆ.
ಆಂಧ್ರಪ್ರದೇಶದ ತಿರುಮಲ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು, ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಹಿನ್ನಲೆ ಗಾಯಕ ವೇಣು ವೆಂಟಿಲೇಟರ್ ಮತ್ತು ಆಕ್ಸಿಜನ್ ಗಾಗಿ ಆರ್ ಆರ್ ಆರ್ ಸಿನಿಮಾ ನಿರ್ಮಾಪಕರು ಮತ್ತು ಮೈತ್ರಿ ಮೂವಿಸ್ ಗೆ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದರು.

ಗಾಯಕ ಆನಂದ್ 1976ರಲ್ಲಿ ಅಮೆರಿಕ ಅಮ್ಮಾಯಿ ಸಿನಿಮಾ ಮೂಲಕ ವೃತ್ತಿ ಜೀವನ ಪ್ರಾರಂಭ ಮಾಡಿದ್ದರು. ಅನೇಕ ಗೀತೆಗಳಿಗೆ ಧ್ವನಿಯಾಗಿರುವ ಜಿ.ಆನಂದ್ ಇನ್ನು ನೆನಪು ಮಾತ್ರ. ಸ್ವರ ಮಾಧುರಿ ಎನ್ನುವ ಸಂಗೀತ ತಂಡವನ್ನು ಕಟ್ಟಿದ್ದರು. ಈ ತಂಡದ ಮೂಲಕ ಪ್ರಪಂಚದಾದ್ಯಂತ ಸಾಕಷ್ಟು ಲೈವ್ ಪ್ರದರ್ಶನಗಳನ್ನು ನಡೆಸಿಕೊಟ್ಟಿದ್ದಾರೆ.
ತೆಲುಗು ನಟ ಚಿರಂಜೀವಿ ಸಂತಾಪ ಸೂಚಿಸಿ, 'ಜಿ ಆನಂದ್ ಅವರ ನಿಧನದ ಸುದ್ದಿ ತಿಳಿದು ತೀವ್ರ ಆಘಾತಗೊಂಡಿದ್ದೇನೆ. ಅವರು ಹಾಡಿದ ಹಾಡಿಗೆ ನಾನು ಮೊದಲ ಬಾರಿಗೆ ತೆರೆಮೇಲೆ ನೃತ್ಯ ಮಾಡಿದ್ದೇನೆ. ಅದು ಅವರ ಜೊತೆಗಿನ ಉತ್ತಮ ಸಂಬಂಧವನ್ನು ಬೆಳೆಸಿತ್ತು. ಅವರ ನಿಧನ ತೀವ್ರ ದುಃಖದ ಸಂಗತಿಯಾಗಿದೆ' ಎಂದು ಟ್ವೀಟ್ ಮಾಡಿದ್ದಾರೆ.


Click it and Unblock the Notifications











