Don't Miss!
- Sports ಟಿ20 ವಿಶ್ವಕಪ್ಗೆ ಭಾರತ ತಂಡದಲ್ಲಿ ಕೆಎಲ್ ರಾಹುಲ್ಗೆ ಸ್ಥಾನ?; ರಾಬಿನ್ ಉತ್ತಪ್ಪ ಹೇಳಿದ್ದೇನು?
- News karnataka Rain: ಬೆಂಗಳೂರಿನಲ್ಲಿ ಏ.23ರವರೆಗೆ ಮಳೆ- ಬೆಳಗಾವಿ ಮಂದಿಗೆ ಕುಂದಾ ಕೊಟ್ಟ ವರುಣ ಧಾರವಾಡ ಮಂದಿಗಿಂದು ಪೇಡಾ ಕೊಡ್ತಾನಾ?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸರಳಾತಿ ಸರಳ ವ್ಯಕ್ತಿತ್ವದ ಅಣ್ಣಾವ್ರು ಇವರೇನಾ?
ಸರಳಾತಿ ಸರಳ ವ್ಯಕ್ತಿತ್ವದ ಅಣ್ಣಾವ್ರು ಇವರೇನಾ? ಎನ್ನುವಷ್ಟರಮಟ್ಟಿಗೆ ನಾನು ಅಕ್ಷರಶಃ ತಲ್ಲಣಗೊಂಡಿದ್ದೆ. ಯಾರ ಕಾಲಿಗೂ ಬೀಳದ ನಾನು ಅವತ್ತು ಆ ಮೇರುಕಲಾವಿದನ ಪಾದಗಳೆಡೆಗೆ ಶಿರಬಾಗಿದ್ದು ಇಂದಿಗೂ ನನ್ನ ಪಾಲಿಗೆ ಅಚ್ಚರಿಯ ಸಂಗತಿ. ಅವರ ವಾತ್ಸಲ್ಯದ ಹಸ್ತ ನನ್ನ ಶಿರವನ್ನು ಸೋಕುತ್ತಿದ್ದಂತೆಯೇ ಒಂದು ಬಗೆಯ ಅತೀವ ಪುಳಕ ನನ್ನನ್ನು ಕದಲಿಬಿಟ್ಟಿತ್ತು.
"ತಲ್ಲಣಿಸದಿರು ಕಂಡ್ಯ ತಾಳು ಮನವೇ ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ..." ಎಂದು ಆರಂಭವಾಗುವ ಕನಕದಾಸರ ಕೀರ್ತನೆಯನ್ನು ಅಣ್ಣಾವ್ರು ಒಳಗೆ ಭಾವತುಂಬಿ ಹಾಡುತ್ತಿದ್ದರು. ಗುರೂಜಿ ಟೇಕ್ ತಗೊಳ್ತಾ ಇದ್ದರು. ಲಿರಿಕ್ಸ್ ಶೀಟ್ ನ ಇನ್ನೊಂದು ಕಾಪಿ ನನ್ನ ಕೈಲಿತ್ತು. ಮೊದಲ ಕೆಲವು ಸಾಲುಗಳು ಮಾತ್ರ ಕನಕದಾಸರದ್ದಾಗಿದ್ದು, ಉಳಿದ ಸಾಲುಗಳನ್ನು ಕೆ.ಕಲ್ಯಾಣ್ ಬರೆದಿದ್ದರು.
ಆ ದಿನ ಕಲ್ಯಾಣ್ ಬಂದಿರಲಿಲ್ಲ. ಹಾಗಾಗಿ, ಕನಕದಾಸರು ಹಾಗೂ ಕಲ್ಯಾಣ್ ಪರವಾಗಿ 'ಗಾಯಕ/ಗಾಯಕಿ ಶ್ರುತಿ,ತಾಳ, ಎಮೋಷನ್ನುಗಳ ಕಡೆ ಚಿತ್ತವನ್ನು ಕೇಂದ್ರೀಕರಿಸಿ ಹಾಡುತ್ತಿರಬೇಕಾದರೆ ಒಮ್ಮೊಮ್ಮೆ ಕಣ್ತಪ್ಪಿನಿಂದ ಕಾಗುಣಿತ ಅಥವಾ ಉಚ್ಚಾರಣಾ ದೋಷಗಳು ಸಂಭವಿಸುವುದುಂಟು' ಎಂಬ ಮಾತಿನನ್ವಯ ಎರಡೂ ಕಿವಿಗಳನ್ನು ತೆರೆದು ನಾನು ಕೂರಬೇಕಾಗಿತ್ತು.
ಡಾ.ರಾಜ್ ಕುಮಾರ್ ಥರದ ಗಾಯಕರ ವಿಷಯದಲ್ಲಿ ಈ ಮೇಲ್ಕಾಣಿಸಿದ ಮಾತು ಅಷ್ಟು ಸಮಂಜಸವಲ್ಲ ಅಂತ ನನಗವತ್ತನಿಸಿತ್ತು. ಏಕೆಂದರೆ, ಅಣ್ಣಾವ್ರಿಗೆ ಒಲಿದಿದ್ದ ಭಾಷಾಶುದ್ಧತೆ, ಒಂದೊಂದು ಅಕ್ಷರವನ್ನೂ ಉಚ್ಚರಿಸುವಾಗಿನ ಜಾಗ್ರತೆ ಅಂಥಾದ್ದು. ಸಾಹಿತ್ಯವನ್ನು ಜೀರ್ಣಿಸಿಕೊಂಡು ಅದರೊಳಗಿನ ಜೀವಂತಸೆಲೆಗೆ ಕುಂದು ಬಾರದಂತೆ ಮೈದುಂಬಿ ಹಾಡಿ ತಕ್ಕ ನ್ಯಾಯ ಒದಗಿಸಬಲ್ಲ ಕನ್ನಡದ ಕೆಲವೇ ಕೆಲವು ಗಾಯಕರಲ್ಲಿ ರಾಜಣ್ಣ ಪ್ರಮುಖರು. ಆದರೂ, ಅಂಥದೊಂದು ಅಪೂರ್ವ ಅನುಭವ ನನ್ನ ಪಾಲಿಗೆ ಸದಾ ಜೋಪಾನ ಮಾಡಿಕೊಳ್ಳಬೇಕಾದುದೇ.
ಇಷ್ಟಕ್ಕೂ ಅಣ್ಣಾವ್ರು ಹಾಡಿದ್ದ ಅನೇಕ ಗೀತೆಗಳನ್ನು ಆವರೆಗೆ ರೇಡಿಯೋದಲ್ಲಿ, ಟಿವಿಯಲ್ಲಿ, ಯಾರಾದರೂ ಅಯ್ಯಪ್ಪಸ್ವಾಮೀ ಮಾಲೆ ಹಾಕಿಕೊಂಡಲ್ಲಿ, ದೇವಸ್ಥಾನಗಳಲ್ಲಿ, ಹಬ್ಬ, ಮದುವೆ, ಜಾತ್ರೆಗಳಂಥ ಸಂದರ್ಭಗಳಲ್ಲಿ, ಗಣೇಶನ ಉತ್ಸವ, ರಾಜ್ಯೋತ್ಸವಗಳ ನೆಪದ ಆರ್ಕೆಸ್ಟ್ರಾಗಳಲ್ಲಿ ಮಾತ್ರ ಕೇಳಿದ್ದುಂಟು. ಆನಂದಿಸಿದ್ದುಂಟು. ಅಂಥ ಎಲ್ಲಾ ಸಂದರ್ಭಗಳಲ್ಲಿ ರಾಜಣ್ಣ ಪಕ್ಕದಲ್ಲೇ ಕುಳಿತು ಹಾಡ್ತಾ ಇದಾರೋ ಏನೋ! ಅನ್ನುವಷ್ಟರಮಟ್ಟಿಗೆ ಹೃದಯ ಗೆದ್ದುಬಿಡುತ್ತಿದ್ದರು. ನನ್ನನ್ನು ಸಂಪೂರ್ಣ ತಮ್ಮ ಸುಪರ್ದಿಗೆ ಎಳೆದುಕೊಂಡುಬಿಡುತ್ತಿದ್ದರು. ಅಂಥ ಸಾಕ್ಷಾತ್ ರಾಜ್ ಕುಮಾರ್ ರವರು ಹಾಡುವುದನ್ನು ಯಥಾವತ್ತು ಕಣ್ತುಂಬಿಕೊಳ್ಳುವುದಿದೆಯಲ್ಲಾ ಅಂಥ ಅದೃಷ್ಟ ಎಲ್ಲರಿಗೂ ಸಿಗುವಂಥದಲ್ಲ. ಆ ಮಟ್ಟಿಗೆ ನಾನು ಭಾಗ್ಯವಂತ. (ಕೃಪೆ: ಪಂಜು)