ದಸರಾ ಹಬ್ಬದಲ್ಲಿ 'ಹುಚ್ಚುಡುಗ್ರು' ಧ್ವನಿ ಸುರುಳಿ
ನಾಡ ಹಬ್ಬ ದಸರಾ ಸಂದರ್ಭದಲ್ಲಿ 'ಹುಚ್ಚುಡುಗ್ರು' ಚಿತ್ರಕ್ಕೆ ಒಂದು ಸುವರ್ಣಾವಕಾಶ ಒದಗಿ ಬಂದಿದೆ. ಯುವ ದಸರಾ ಉತ್ಸವವೂ ಮೈಸೂರಿನಲ್ಲಿ ಜರಗುವುದರಿಂದ ಅಕ್ಟೋಬರ್ 7ನೇ ದಿವಸ ಈ ಸಿನೆಮಾದ ಧ್ವನಿ ಸುರುಳಿ ಬಿಡುಗಡೆ ಜೊತೆಗೆ ಸಿನೆಮಾದ ಪಬ್ಲಿಸಿಟಿ ಕೆಲಸವೂ ಪ್ರಾರಂಭವಾಗಲಿದೆ. ಅಂದು ಈ ಚಿತ್ರ ತಂಡ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ್ದು ಸಹಸ್ರಾರು ನೋಡುಗರನ್ನು ಆಕರ್ಷಿಸಲಿದೆ.
ಯುವ ತಂಡ 'ಹುಚ್ಚುಡುಗ್ರು' ಸಿನೆಮಾ ಮಾಡುತ್ತಿರುವದರಿಂದ 'ಯುವ ದಸರಾ' ಉತ್ಸವದಲ್ಲಿ ಮನರಂಜನೆಯ ಹೊಳೆ ಹರೆಯುವುದು ಗ್ಯಾರಂಟಿ. 'ಹುಚ್ಚುಡುಗ್ರು' ತಂಡ ಯೋಜನೆಯಂತೆ ಮಾತಿನ ಬಾಗದ ಚಿತ್ರೀಕರಣ ಮುಗಿಸಿದೆ. ಭಗವತಿ ಪಿಕ್ಚರ್ಸ್ ಲಾಂಛನದಲ್ಲಿ ಈ ಚಿತ್ರದಲ್ಲಿ ನಾಲ್ಕು ನಾಯಕರುಗಳಿಗೆ ಶಿವನ ಪರ್ಯಾಯ ಹೆಸರುಗಳನ್ನು ಇಟ್ಟಿರುವುದರ ಜೊತೆಗೆ ಚಿತ್ರೀಕರಣ ಸಹ ಮೈಸೂರು, ನಂಜನಗೂಡಿನ ಸುತ್ತ ಮುತ್ತ ಮಾಡಿರುವುದು ವಿಶೇಷ.

ನಿರ್ದೇಶಕ ಪ್ರೇಮ್ ಅವರ ಬಳಿ ಕರಿಯ ಸಿನೆಮಾದಿಂದ 'ರಾಜ್ ದಿ ಶೋಮ್ಯಾನ್' ವರೆಗೆ ಸಹಾಯಕರಾಗಿ ದುಡಿದ ರಘು ಹಾಸನ್ ಅವರು ಚಿತ್ರದ ಕಥೆ, ಚಿತ್ರಕಥೆ, ನಿರ್ಮಾಣದ ಕೆಲಸವನ್ನು ನೋಡಿಕೊಳ್ಳುತ್ತಿದ್ದಾರೆ. ಗೀತೆಗಳ ಸಾಹಿತ್ಯ ಆನಂದಪ್ರಿಯ, ಕಲ್ಯಾಣ್ ಹಾಗೂ ಸುದರ್ಶನ್ ಅವರು ನೀಡುತ್ತಿದ್ದಾರೆ. ಸಂಭಾಷಣೆಯನ್ನು ಸುದರ್ಶನ್, ಛಾಯಾಗ್ರಹಣ ಶಮನ್ ಮಿತೃ ಅವರು ಚಿತ್ರಕ್ಕೆ ಒದಗಿಸಿದ್ದಾರೆ.
'ಹುಚ್ಚುಡುಗ್ರು' ಚಿತ್ರದ ಶೀರ್ಷಿಕೆ ಗೀತೆ ನಿರ್ದೇಶಕ ಪ್ರೇಮ್ ಹಾಡಿದ್ದಾರೆ, "ಹರಕಲು ಅಂಗಿ, ತ್ಯಾಪೆ ಚಡ್ಡಿ, ಕುರುಚಲು ಗಣ್ಣ, ಲೂಸು ತಲೆ ಹುಚ್ಚ್ ಹುಡುಗರು.. ಎಂಬುವ ಹಾಡನ್ನು ಸಂಗೀತ ನಿರ್ದೇಶಕ ಜೋಷುವ ಶ್ರೀಧರ್ ಅವರು ಧ್ವನಿ ಮುದ್ರಿಸಿ ಕೊಂಡಿದ್ದಾರೆ. ಚಿತ್ರದ ತಾರಾಗಣದಲ್ಲಿ ಚೇತನ್ ಚಂದ್ರ, ಅಮಿತ್, ಪ್ರತಾಪ್, ದೇವ, ಅದಿತಿ ರಾವು, ರವಿಶಂಕರ್ ಹಾಗೂ ಇತರರು ಇದ್ದಾರೆ. ಜೋಶ್ವ ಶ್ರೀಧರ್ ಸಂಗೀತ ಒದಗಿಸಿದ್ದಾರೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











