Gowri ; ಉತ್ತರ ಕರ್ನಾಟಕದ ಸೊಗಡು, ಹುಬ್ಬಳ್ಳಿಯಲ್ಲಿ ಬಿಡುಗಡೆ ಆಯಿತು ಗೌರಿಯ ಹೊಚ್ಚ ಹೊಸ ಹಾಡು...?
ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕ ಇಂದ್ರಜಿತ್ ಕಾಣಿಸಿಕೊಂಡರು ಅಂದರೆ, ಅಲ್ಲಿ ಏನೋ ಹೊಸತನ, ಯಾರೂ ಮಾಡದ ಸಾಹಸ, ಟ್ರೆಂಡ್ಗಳು ಸೃಷ್ಟಿಯಾಗುತ್ತವೆ ಅನ್ನೋದು ನಿಜ. ಅದಕ್ಕೆ ಅವರ ಈ ಹಿಂದಿನ ಸಿನಿಮಾಗಳೇ ಸಾಕ್ಷಿ. ಸದ್ಯ ಇಂದ್ರಜಿತ್ ಲಂಕೇಶ್ ತಮ್ಮ ಮಗ ಸಮರ್ಜಿತ್ ಅವರನ್ನು ಗೌರಿ ಚಿತ್ರದ ಮೂಲಕ ಲಾಂಚ್ ಮಾಡುತ್ತಿದ್ದಾರೆ. ಈ ವಿಚಾರ ನಿಮಗೆ ಗೊತ್ತೇ ಇರಬೇಕು. ಯಾಕೆಂದರೆ.. ಆರಂಭವಾದ ದಿನದಿಂದ ನಾನಾ ಕಾರಣಕ್ಕೆ ಸದ್ದು ಮಾಡ್ತಾನೇ ಬರ್ತಿರುವ ಸಿನಿಮಾ ಇದು. ಇಂತಹ ಸಿನಿಮಾದ ಮತ್ತೊಂದು ಹಾಡು ಸದ್ಯಕ್ಕೆ ಬಿಡುಗಡೆಯಾಗಿದೆ. ಅದು ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಅನ್ನುವುದು ವಿಶೇಷ.
ಶಿವು ಬೆರ್ಗಿ ಅವರ ಸಾಹಿತ್ಯ ಮತ್ತು ಸಂಗೀತ ಇರುವ ಪಕ್ಕಾ ಉತ್ತರ ಕರ್ನಾಟಕ ಶೈಲಿಯ ಈ ಹಾಡನ್ನ ಅನಿರುದ್ಧ ಶಾಸ್ತ್ರೀ ಮತ್ತು ಅನನ್ಯಾ ಭಟ್ ಹಾಡಿದ್ದಾರೆ. ಇನ್ನೂ ಸಮರ್ಜಿತ್ ಮತ್ತು ಸಾನ್ಯಾ ಅಯ್ಯರ್ ಅವರನ್ನ ತಾಳಕ್ಕೆ ತಕ್ಕಂತೆ ಭಜರಂಗಿ ಮೋಹನ್ ಕುಣಿಸಿದ್ದಾರೆ. ಸದ್ಯಕ್ಕೆ ಈ ಜೋಡಿಯ ಹೆಜ್ಜೆ ಯೂಟ್ಯೂಬ್ ನಲ್ಲಿ ಸದ್ದು ಮಾಡುತ್ತಿದೆ. ಅನೇಕರ ಕಣ್ಮನ ಸೆಳೆಯುತ್ತಿದೆ.
ಇನ್ನೂ ಗೌರಿ ಎಂಬ ಹೆಸರು ಕೇಳಿದ ತಕ್ಷಣ, ಅನೇಕರಿಗೆ ಯುವಜನತೆಗೆ, ಪತ್ರಕರ್ತರಿಗೆ, ಹೋರಾಟಗಾರರಿಗೆ ಸ್ಫೂರ್ತಿಯ ಚಿಲುಮೆಯಾದ ಗೌರಿ ಲಂಕೇಶ್ ನೆನಪಾಗಬಹುದು. ಈ ಚಿತ್ರಕ್ಕೆ ಮತ್ತು ಗೌರಿ ಲಂಕೇಶ್ ಅವರ ಬದುಕಿಗೆ ಸಂಬಂಧ ಇರಬಹುದಾ ಎಂಬ ಪ್ರಶ್ನೆ ಮೂಡಬಹುದು. ಇದಕ್ಕೆ ಉತ್ತರವನ್ನ ಈ ಹಾಡು ಬಿಡುಗಡೆ ಸಮಾರಂಭದಲ್ಲಿ ನೀಡಿರುವ ಇಂದ್ರಜಿತ್ ಲಂಕೇಶ್, ಪತ್ರಕರ್ತೆ, ಮಾನವ ಹಕ್ಕು ಹೋರಾಟಗಾರ್ತಿ, ಸಾಮಾಜಿಕ ಕಾರ್ಯಕರ್ತೆಯಾಗಿದ್ದ ಗೌರಿಯ ಸಿದ್ಧಾಂತ ಈ ಚಿತ್ರದಲ್ಲಿ ಇಲ್ಲ ಅಂದಿದ್ದಾರೆ. ಅಕ್ಕನ ಮೇಲಿನ ಅಭಿಮಾನಕ್ಕೆ ಚಿತ್ರಕ್ಕೆ ಗೌರಿ ಎಂದು ಹೆಸರನ್ನ ಇಟ್ಟಿದ್ದೇವೆ ಎಂದಿದ್ದಾರೆ.
ಇನ್ನೂ ಸಮರ್ಜಿತ್ ಲಂಕೇಶ್ ಮತ್ತು ಸಾನ್ಯಾ ಐಯ್ಯರ್ಗೆ ಇದು ಮೊದಲ ಕನಸು..ಕನವರಿಕೆ. ಈ ಕಾರಣಕ್ಕೆ ಇಬ್ಬರಲ್ಲಿ ಪುಳಕ ಇದೆ. ಜನ ಹೇಗೆ ತಮ್ಮನ್ನ ಸ್ವೀಕರಿಸುತ್ತಾರೆ ಎಂಬ ಚಿಕ್ಕ ಅಳುಕು ಇದೆ. ಹೀಗಾಗಿಯೇ ಜುಲೈನಲ್ಲಿ ತೆರೆಗೆ ಬರಲಿರುವ ನಮ್ಮ ಚಿತ್ರವನ್ನ ಚಿತ್ರಮಂದಿರದಲ್ಲಿಯೇ ನೋಡಿ ನಮ್ಮನ್ನ ಹರಸಿ ಹಾರೈಸಿ ಎಂಬ ಮನವಿಯನ್ನ ಹುಬ್ಬಳ್ಳಿಯಿಂದ ಇಡೀ ಕರುನಾಡಿಗೆ ಮಾಡಿಕೊಂಡಿದ್ಧಾರೆ ಇವರಿಬ್ಬರು

ಅಂದ್ಹಾಗೇ ಇಂದ್ರಜಿತ್ ಲಂಕೇಶ್ ಕೇವಲ ನಿರ್ದೇಶಕರಷ್ಟೇ ಅಲ್ಲ ಬದಲಿಗೆ ಈ ಮಣ್ಣಿನ ಹಿರಿಯ ಪತ್ರಕರ್ತರು ಹೌದು. ಇನ್ನೂ.. ನಿಮಗೆ ಗೊತ್ತು. 2021ರಲ್ಲಿ ದರ್ಶನ್ ಮತ್ತು ಇಂದ್ರಜಿತ್ ನಡುವೆ ವಿವಾದ ಭುಗಿಲೆದ್ದಿತ್ತು. ಈ ಹಿನ್ನೆಲೆ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಕುರಿತು ಇಂದ್ರಜಿತ್ ಲಂಕೇಶ್ ಅವರ ನಿಲುವು ಏನಿರಬಹುದು ಎಂಬ ಸಹಜ ಕುತೂಹಲ ಹಾಡು ಬಿಡುಗಡೆ ಸಮಾರಂಭಕ್ಕೆ ಸಾಕ್ಷಿಯಾದವರಲ್ಲಿ ಇದ್ದೇ ಇತ್ತು.
ಹೀಗಾಗಿಯೇ ಉತ್ತರವನ್ನ ನೀಡಿದ ಇಂದ್ರಜಿತ್ ಲಂಕೇಶ್ ಅವರ ಜೊತೆ ನಾನು ಸಿನಿಮಾ ಮಾಡಿದ್ದೇನೆ. ಪತ್ರಕರ್ತನಾಗಿ ನಾನು ಕೆಲವು ವಿಚಾರಗಳ ಬಗ್ಗೆ ಧ್ವನಿ ಎತ್ತಿದ್ದೆ ಅಷ್ಟೆ. ಅದು ಬಿಟ್ಟರೆ ನಮ್ಮ ನಡುವೆ ಏನು ಇಲ್ಲ. ಅನ್ಯಾಯ ಆದಾಗ ಧ್ವನಿ ಎತ್ತುವ ಬಗ್ಗೆ ನನ್ನ ತಂದೆ ಲಂಕೇಶ್ ಅವರಿಂದ ಕಲಿತ್ತಿದ್ದು . ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು. ವಿಜಯಲಕ್ಷ್ಮಿ ಹಾಗೂ ಅವರ ಮಗನಿಗೆ ದೇವರು ಶಕ್ತಿ ಕೊಡಲಿ ಎಂದಷ್ಟೇ ಹೇಳಿದರು. ಇದೇ ಸಮಯದಲ್ಲಿ ಸಾಮಾಜಿಕ ಜಾಲತಾಣಗಳ ದುರ್ಬಳಕೆಯ ಬಗ್ಗೆ ಕಿಡಿಯನ್ನೂ ಕಾರಿದರು ಇಂದ್ರಜಿತ್ ಲಂಕೇಶ್.

ಉಳಿದಂತೆ ಗೌರಿ ಚಿತ್ರದಲ್ಲಿ ಲೂಸ್ ಮಾದ ಯೋಗಿ, ಪ್ರಿಯಾಂಕಾ ಉಪೇಂದ್ರ, ಅಕುಲ್ ಬಾಲಾಜಿ ಸೇರಿದಂತೆ ಅನೇಕ ಕಲಾವಿದರು ಅಭಿನಯಿಸಿದ್ದಾರೆ. ಇನ್ನೂ ಜೆಸ್ಸಿ ಗಿಫ್ಟ್, ಶಿವು ಬೆರ್ಗಿ, ಚಂದನ್ ಶೆಟ್ಟಿ ಮತ್ತು ಅನಿರುದ್ಧ ಶಾಸ್ತ್ರೀ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಬಿಎ ಮಧು, ರಾಜಶೇಖರ್ ಕೆಎಲ್, ಮಾಸ್ತಿ, ಮನು ತಪಸ್ವಿ ಈ ಚಿತ್ರಕ್ಕೆ ಮಾತುಗಳನ್ನ ಬರೆದಿದ್ದಾರೆ.
ಒಟ್ನಲ್ಲಿ ತಮ್ಮ ಕ್ರಿಯೆಟಿವ್ ಐಡಿಯಾಗಳಿಂದನೇ ಕಾಲ..ಕಾಲಕ್ಕೆ.. ಎಲ್ಲರ ಚಿತ್ತ ಕದಿಯುವ ಇಂದ್ರಜಿತ್ ಲಂಕೇಶ್ ʻಗೌರಿʼ ಸಿನಿಮಾ ಬಿಡುಗಡೆಯ ಹೊತ್ತಿಗೆ ಇನ್ನೂ ಏನೇನು ಕ್ರೇಜ್ ಕ್ರಿಯೇಟ್ ಮಾಡುತ್ತಾರೋ ಅನ್ನುವುದಕ್ಕೆ ಉತ್ತರ ಈ ಜುಲೈನಲ್ಲಿ ಸಿಗಲಿದೆ. ಅಲ್ಲಿವರೆಗೆ ಬಿಡುಗಡೆಯಾಗಿರುವ ಈ ಹಾಡೊಂದನ್ನ ಕೇಳಲು ಮರೆಯಬೇಡಿ


Click it and Unblock the Notifications











