ಮುನಿಸಿಕೊಂಡ 'ಕಾಟೇರ'ನ ಹಿಂದೆ ಬಿದ್ದು 'ಪಸಂದಗವನೇ' ಎಂದು ಹಾಡಿ ಕುಣಿದ ಪ್ರಭಾವತಿ
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕಾಟೇರ' ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. 'ಪಸಂದಗವನೇ' ಎಂದು ಶುರುವಾಗುವ ಹಾಡಿನಲ್ಲಿ ಕಾಟೇರ ದರ್ಶನ್ ಸುತ್ತಾಮುತ್ತಾ ಪ್ರಭಾವತಿ ಆಗಿ ಆರಾಧನಾ ಹಾಡಿ ಕುಣಿದಿದ್ದಾರೆ. ತರುಣ್ ಸುಧೀರ್ ನಿರ್ದೇಶನದ ಈ ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತವಿದೆ.
ರಾಕ್ಲೈನ್ ವೆಂಕಟೇಶ್ ನಿರ್ಮಾಣದ 'ಕಾಟೇರ' ಸಿನಿಮಾ ಡಿಸೆಂಬರ್ 29ಕ್ಕೆ ರಿಲೀಸ್ ಆಗಲಿದೆ. ಅದಕ್ಕೂ ಮುನ್ನ ಒಂದೊಂದೇ ಹಾಡು ಹೊರ ಬೀಳಲಿದೆ. ಹಳ್ಳಿ ಸೊಗಡಿನ ಚಿತ್ರಕ್ಕೆ ತಕ್ಕಂತೆ ಹಾಡುಗಳನ್ನು ಕಟ್ಟಿಕೊಡಲಾಗಿದೆ. 'ಪಸಂದಗವನೇ' ಹಾಡನ್ನು ತೆಲುಗು ಗಾಯಕಿ ಮಂಗ್ಲಿ ಹಾಡಿದ್ದಾರೆ. ಡುಯೆಟ್ ಸಾಂಗ್ ಅನ್ನು ಸಿಕ್ಕಾಪಟ್ಟೆ ಕಲರ್ಫುಲ್ ಆಗಿ ಕಟ್ಟಿಕೊಡಲಾಗಿದೆ. ಭೂಷಣ್ ಮಾಸ್ಟರ್ ಕೊರಿಯೋಗ್ರಫಿಯಲ್ಲಿ ಒಂದಷ್ಟು ಡ್ಯಾನ್ಸರ್ಸ್ ನಾಯಕಿಗೆ ಸಾಥ್ ಕೊಟ್ಟಿದ್ದಾರೆ.

ಮುನಿಸಿಕೊಂಡ ನಾಯಕನ ಹಿಂದೆ ಬಿದ್ದು ನಾಯಕಿ ಕಾಡಿ ಬೇಡುವ ಸನ್ನಿವೇಶದಲ್ಲಿ 'ಪಸಂದಗವನೇ' ಹಾಡು ಮೂಡಿ ಬಂದಿದೆ. ನೂರಾರು ಡ್ಯಾನ್ಸರ್ಸ್ ಬಳಸಿಕೊಂಡು ಮೇಲುಕೋಟೆ ಸುತ್ತಾ ಮುತ್ತಾ ಬಹಳ ಅದ್ಧೂರಿಯಾಗಿ ಹಾಡನ್ನು ಸೆರೆ ಹಿಡಿಯಲಾಗಿದೆ. ಅಂದಹಾಗೆ ಈ ಹಾಡಿಗೆ ಬಹದ್ದೂರ್ ಚೇತನ್ ಕುಮಾರ್ ಸಾಹಿತ್ಯ ಬರೆದಿದ್ದಾರೆ. ಮಂಗ್ಲಿ ವಾಯ್ಸ್ನಲ್ಲಿ ಹಾಡಿಗೆ ಮತ್ತಷ್ಟು ಪವರ್ ಬಂದಿದೆ.
ಹಾಡಿನುದ್ದಕ್ಕೂ ದರ್ಶನ್ ಲುಂಗಿ, ಅಂಗಿಯಲ್ಲಿ ಕಾಣಿಸಿಕೊಂಡಿದ್ದು ಆರಾಧನಾ ಲಂಗಾ ದಾವಣಿಯಲ್ಲಿ ಕಂಗೊಳಿಸಿದ್ದಾರೆ. ಕೆಂಪು ಹಸಿರು ಲಂಗಾ ದಾವಣಿಯಲ್ಲಿ ಡ್ಯಾನ್ಸರ್ಸ್ ಸಾಥ್ ಸಿಕ್ಕಿದೆ. ಜಾನಪದ ಶೈಲಿಯಲ್ಲಿ ಬರುವಂತೆ ಹಾಡನ್ನು ಡಿಸೈನ್ ಮಾಡಲಾಗಿದೆ. ಶೂಟಿಂಗ್ ವೇಳೆ ಮಾಲಾಶ್ರೀ ಮಗಳ ಜೊತೆಗಿದ್ದು ಸಲಹೆ, ಸೂಚನೆಗಳನ್ನು ನೀಡಿದ್ದಾರೆ. ಸುಧಾಕರ್ ರಾಜ್ ಅಂಡ್ ಟೀಂ ಹಾಡನ್ನು ಸೊಗಸಾಗಿ ಸೆರೆಹಿಡಿದಿದೆ.
ವಿಡಿಯೋ ಸಾಂಗ್ ರಿಲೀಸ್ ಮಾಡಿ ಕಾಟೇರ ಚಿತ್ರತಂಡ ಗಮನ ಸೆಳೆದಿದೆ. ಇತ್ತೀಚೆಗೆ ಚಿತ್ರದ ಫಸ್ಟ್ ಗ್ಲಿಂಪ್ಸ್ ರಿಲೀಸ್ ಆಗಿತ್ತು. ದರ್ಶನ್ ಬೀಡಿ ಸೇದುವ ಸ್ಟೈಲ್, ಸ್ವ್ಯಾಗ್ ಅಭಿಮಾನಿಗಳ ಮನಗೆದ್ದಿತ್ತು. ವರ್ಷದ ಕೊನೆಗೆ ಬರುತ್ತಿರುವ 'ಕಾಟೇರ' ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ.
ಚಿತ್ರದಲ್ಲಿ 'ಉಳುವವನೆ ಭೂಮಿಯ ಒಡೆಯ' ಕಾಯ್ದೆ ಸುತ್ತ ನಡೆದ ಸಂಘರ್ಷದ ಕತೆಯಿದೆ. ತರುಣ್ ಸುಧೀರ್ ಚಿತ್ರಕ್ಕೆ ಕತೆ, ಚಿತ್ರಕತೆ ಸಿದ್ಧಪಡಿಸಿದ್ದು ಮಾಸ್ತಿ ಸಂಭಾಷಣೆ ಚಿತ್ರಕ್ಕಿದೆ. ಕನ್ನಡದಲ್ಲಿ ಮಾತ್ರ 'ಕಾಟೇರ' ರಿಲೀಸ್ ಪ್ಲ್ಯಾನ್ ನಡೀತಿದೆ. ಪ್ರೇಕ್ಷಕರ ರೆಸ್ಪಾನ್ಸ್ ನೋಡಿಕೊಂಡು ಬೇರೆ ಭಾಷೆಗಳಲ್ಲಿ ಡಬ್ ಮಾಡಿ ರಿಲೀಸ್ ಮಾಡುವ ಆಲೋಚನೆಯಲ್ಲಿದೆ ಚಿತ್ರತಂಡ. ಆನಂದ್ ಆಡಿಯೋ ಸಂಸ್ಥೆ ಚಿತ್ರದ ಆಡಿಯೋ ಖರೀದಿಸಿದೆ. ಜೀ ಸಂಸ್ಥೆ ಡಿಜಿಟಲ್ ಹಾಗೂ ಸ್ಯಾಟಲೈಟ್ ರೈಟ್ಸ್ ತನ್ನದಾಗಿಸಿಕೊಂಡಿದೆ.
'ಸಲಾರ್', 'ಡಂಕಿ' ಸಿನಿಮಾಗಳ ರಿಲೀಸ್ ಬೆನ್ನಲ್ಲೇ 'ಕಾಟೇರ' ಸಿನಿಮಾ ತೆರೆಗೆ ಬರ್ತಿದೆ. ದರ್ಶನ್ ಚಿತ್ರಕ್ಕೆ ಒಳ್ಳೆ ಓಪನಿಂಗ್ ಸಿಗುತ್ತಾ? ಥಿಯೇಟರ್ಗಳು ಹೆಚ್ಚಿನ ಸಂಖ್ಯೆಯಲ್ಲಿ ಸಿಗುತ್ತಾ? ಎನ್ನುವ ಚರ್ಚೆ ನಡೀತಿದೆ. ಆದರೆ ಚಿತ್ರತಂಡ ಮಾತ್ರ ಸಿನಿಮಾ ಮೇಲೆ ಬಹಳ ಭರವಸೆಯಿಂದ ಇದೆ. ಡಿಸೆಂಬರ್ 29ಕ್ಕೆ ಸಿನಿಮಾ ರಿಲೀಸ್ ಮಾಡಲು ಮುಂದಾಗಿದೆ.
ದರ್ಶನ್ ನಟನೆಯ 'ರಾಜವೀರ ಮದಕರಿ ನಾಯಕ' ಚಿತ್ರವನ್ನು ಮೊದಲಿಗೆ ರಾಕ್ಲೈನ್ ವೆಂಕಟೇಶ್ ಕೈಗೆತ್ತಿಕೊಂಡಿದ್ದರು. ಆದರೆ ಕೊರೊನಾ ಹಾವಳಿಯಿಂದ ಆ ಸಿನಿಮಾ ನಿಂತು ಹೋಗಿತ್ತು. ಆ ಬಳಿಕ 'ಕಾಟೇರ' ಚಿತ್ರಕ್ಕೆ ಚಾಲನೆ ಸಿಕ್ಕಿತ್ತು. ಕಳೆದ ವರ್ಷ ರವಿಶಂಕರ್ ಗುರೂಜಿ ಆಶ್ರಮದಲ್ಲಿ ಸಿನಿಮಾ ಸೆಟ್ಟೇರಿತ್ತು. ಹೈದರಾಬಾಸ್, ಮೈಸೂರು, ಕನಕಪುರ ಸೇರಿದಂತೆ ಸಾಕಷ್ಟು ಕಡೆಗಳಲ್ಲಿ ಸಿನಿಮಾ ಚಿತ್ರೀಕರಣ ನಡೆದಿದೆ. ಅಂತೂ ಇಂತೂ ಈಗ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ದರ್ಶನ್ ಅಭಿಮಾನಿಗಳು ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದಾರೆ.


Click it and Unblock the Notifications











