'ಕಬಾಲಿ', 'ಕಲ್ಕಿ' ಮ್ಯೂಸಿಕ್ ಡೈರೆಕ್ಟರ್ ಸ್ಯಾಂಡಲ್ವುಡ್ ಎಂಟ್ರಿ; ಟೈಗರ್ 'ಬಲರಾಮನ ದಿನಗಳು' ಕಿಕ್ ಸ್ಟಾರ್ಟ್
ಟೈಗರ್ ವಿನೋದ್ ಪ್ರಭಾಕರ್ 25ನೇ ಸಿನಿಮಾ ಅದ್ಧೂರಿಯಾಗಿ ಅನೌನ್ಸ್ ಆಗಿದೆ. 'ಆ ದಿನಗಳು' ಖ್ಯಾತಿಯ ಕೆ.ಎಂ ಚೈತನ್ಯ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ವಿನೋದ್ ಪ್ರಭಾಕರ್ ಹಾಗೂ ಕೆ.ಎಂ.ಚೈತನ್ಯ ಅವರ ಮೊದಲ ಕಾಂಬಿನೇಷನ್ ಸಿನಿಮಾವಿದು. ಅಂದ್ಹಾಗೆ ಈ ಸಿನಿಮಾದ ಹೆಸರು 'ಬಲರಾಮನ ದಿನಗಳು'.
ಇದೊಂದು ಗ್ಯಾಂಗ್ಸ್ಟರ್ ಸಿನಿಮಾ ಅನ್ನೋದು ಚಿತ್ರತಂಡವೇ ಈಗಾಗಲೇ ಹೇಳಿಕೊಂಡಿದೆ. ವಿಶೇಷ ಅಂದರೆ, ಈ ಸಿನಿಮಾಗೆ 'ಕಬಾಲಿ', 'ಕಾಲ' 'ಕಲ್ಕಿ'ಯಂತಹ ಮೆಗಾ ಬ್ಲಾಕ್ಬಸ್ಟರ್ ಸಿನಿಮಾಗಳಿಗೆ ಸಂಗೀತ ನೀಡಿರುವ ಸಂತೋಷ್ ನಾರಾಯಣನ್ ಟ್ಯೂನ್ ಹಾಕುತ್ತಿದ್ದಾರೆ.

ಗ್ಯಾಂಗ್ಸ್ಟರ್ ಸಿನಿಮಾಗಳಿಗೆ ಸಂತೋಷ್ ನಾರಾಯಣನ್ ಸಂಗೀತ ನೀಡುವುದರಲ್ಲಿ ಎಕ್ಸ್ಪರ್ಟ್. ಅದರಲ್ಲೂ ಇವರ ಬಿಜಿಎಂಗೆ ಪ್ರತ್ಯೇಕ ಫ್ಯಾನ್ ಫಾಲೋವಿಂಗ್ ಇದೆ. ಇತ್ತೀಚೆಗಷ್ಟೇ ಚಿತ್ರತಂಡ ಸಂತೋಷ್ ನಾರಾಯಣನ್ ಅವನ್ನು ಕರೆಸಿತ್ತು. ಅವರು ಕನ್ನಡದ ಬಗ್ಗೆ, ಸಿನಿಮಾ ಬಗ್ಗೆ ಮನಸಾರೆ ಮಾತಾಡಿದ್ದಾರೆ.
ಸಂತೋಷ್ ನಾರಾಯಣನ್ ನಿರ್ದೇಶಕ ಪ.ರಂಜಿತ್ ಅವರ 'ಅಟ್ಟಕತ್ತಿ' ಸಿನಿಮಾದ ಮೂಲಕ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. 'ಕಬಾಲಿ', 'ಕಾಲ', 'ದಸರಾ' ಹಾಗೂ ಇತ್ತೀಚೆಗೆ 'ಕಲ್ಕಿ 2898 AD'ಸಿನಿಮಾ ಸೇರಿದಂತೆ ಸುಮಾರು 50 ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಇದೇ ಸಂಗೀತ ನಿರ್ದೇಶಕನ 51ನೇ ಸಿನಿಮಾ 'ಬಲರಾಮನ ದಿನಗಳು'.
"ನನ್ನ ತಾಯಿಗೆ ಕನ್ನಡ ಬರುತ್ತದೆ. ಅವರು ನನಗೂ ಸ್ವಲ್ಪ ಕನ್ನಡ ಹೇಳಿಕೊಟ್ಟಿದ್ದಾರೆ. ಬೆಂಗಳೂರಿಗೆ ಆಗಾಗ ಬರುತ್ತಿರುತ್ತೇನೆ. ಬಲರಾಮನ ದಿನಗಳು' ನನ್ನ 51ನೇ ಸಿನಿಮಾ, ಹಾಗೇ ನಾನು ಸಂಗೀತ ನೀಡುತ್ತಿರುವ ಕನ್ನಡದ ಮೊದಲ ಸಿನಿಮಾ. ರಘು ದೀಕ್ಷಿತ್ ಅವರ ನಿನ್ನ ಪೂಜೆಗೆ ಬಂದೆ ಮಾದೇಶ್ವರ' ಸೇರಿದಂತೆ ಕೆಲವು ಹಾಡುಗಳಿಗೆ ಪ್ರೋಗ್ರಾಮರ್ ಆಗಿ ಕೆಲಸ ಮಾಡಿದ್ದೇನೆ. ಅಜನೀಶ್ ಲೋಕನಾಥ್ ಹಾಗೂ ರವಿ ಬಸ್ರೂರ್ ಸಂಗೀತ ಇಷ್ಟ" ಎಂದು ಸಂತೋಷ್ ನಾರಾಯಣನ್ ಹೇಳಿದ್ದಾರೆ.
ಹಾಗೇ ವಿನೋದ್ ಪ್ರಭಾಕರ್ಗೆ ಈ ಸಿನಿಮಾ ಸ್ಪೆಷಲ್ ಸಿನಿಮಾ. ಯಾಕಂದ್ರೆ ಬಲರಾಮನ ದಿನಗಳು ಇವರ 25ನೇ ಸಿನಿಮಾ. "ಬಲರಾಮನ ದಿನಗಳು ಸಿನಿಮಾಗೆ ಬಲ ನೀಡುವುದಕ್ಕೆ ಸಂತೋಷ್ ನಾರಾಯಣನ್ ಇಲ್ಲಿಗೆ ಬಂದಿದ್ದಾರೆ. ಸಂತೋಷ್ ನಾರಾಯಣನ್ ಅವರೇ ಯಾಕೆ? ಎಂಬ ಪ್ರಶ್ನೆ ಬರಬಹುದು. ಅವರ ಕೆಲಸವನ್ನು ನಮ್ಮಲ್ಲಿ ಜನ ಒಪ್ಪಿಕೊಂಡಿದ್ದಾರೆ. ಅವರ ಮುಖ ನೋಡದೆ ಇರಬಹುದು. ಆದರೆ, ಗ್ಯಾಂಗ್ಸ್ಟರ್ ಸಿನಿಮಾ ಸಂಬಂಧ ಪಟ್ಟ ಯಾವುದೇ ಸಿನಿಮಾ ನೋಡಿ, ಇವರ ಸಿಗ್ನೇಚರ್ ಮ್ಯೂಸಿಕ್ ಇದ್ದೇ ಇರುತ್ತದೆ." ಎಂದು ವಿನೋದ್ ಪ್ರಭಾಕರ್ ಖುಷಿ ವ್ಯಕ್ತಪಡಿಸಿದ್ದಾರೆ.
ಬಹಳ ದಿನಗಳ ಬಳಿಕ ಕೆ.ಎಂ.ಚೈತನ್ಯ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. "ಇದು 90 ರ ದಶಕದ ಕಾಲಘಟ್ಟದ ಭೂಗತಲೋಕದ ಕಥೆ. ಯಾವುದೇ ನೈಜ ಘಟನೆ ಅಥವಾ ವ್ಯಕ್ತಿಯ ಕುರಿತಾದ ಚಿತ್ರವಲ್ಲ. ಇದೊಂದು ಕಾಲ್ಪನಿಕ ಕಥೆ. ಟೈಗರ್ ವಿನೋದ್ ಪ್ರಭಾಕರ್ ಸಿನಿಮಾ ನಿರ್ದೇಶಿಸುವ ಆಸೆಯಿತ್ತು. ಅದು ಈ ಚಿತ್ರದ ಮೂಲಕ ಈಡೇರಿದೆ" ಎಂದು ಕೆ.ಎಂ.ಚೈತನ್ಯ ಹೇಳಿದ್ದಾರೆ.


Click it and Unblock the Notifications











