ಕಲಾವಿದರಿಗೆ ನೆರವಾಗಲು 'ಕಲಾನಿಧಿ' ಕಾರ್ಯಕ್ರಮ, ದಿಗ್ಗಜರಿಂದ ಗಾಯನ
ಕೋವಿಡ್ ಸಮಯದಲ್ಲಿ ಕಲಾವಿದರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು ಅವರಿಗೆ ನೆರವಾಗಲು ನಿಧಿ ಸಂಗ್ರಹಿಸುವ ಉದ್ದೇಶದಿಂದ ಗಾಯಕರು, ಸಂಗೀತ ನಿರ್ದೇಶಕರುಗಳು ಸೇರಿ ಸಂಸದರು, ಸಚಿವರ ಸಹಯೋಗದೊಂದಿಗೆ 'ಕಲಾನಿಧಿ' ಕಾರ್ಯಕ್ರಮ ನಡೆಸುತ್ತಿದ್ದಾರೆ.
ಗಾಯಕ ವಿಜಯ್ಪ್ರಕಾಶ್ ನೇತೃತ್ವದಲ್ಲಿ ಡಿಸಿಎಂ ಅಶ್ವತ್ಥನಾರಾಯಣ ಹಾಗೂ ಸಂಸದ ತೇಜಸ್ವಿ ಸೂರ್ಯ ಸಹಕಾರದೊಂದಿಗೆ ಕಾರ್ಯಕ್ರಮ ನಡೆದಿದ್ದು, ಜೂನ್ 25 ರಿಂದ ಜೂನ್ 27 ರ ವರೆಗೆ ಕಲಾನಿಧಿ ಕಾರ್ಯಕ್ರಮವು ಪ್ರಸಾರವಾಗಲಿದೆ.
ವಿಜಯ್ ಪ್ರಕಾಶ್, ಸೋನು ನಿಗಮ್, ಶಂಕರ್ ಮಹದೇವನ್, ಗುರುಕಿರಣ್, ರಘು ದೀಕ್ಷಿತ್, ವಿದ್ಯಾಭೂಷಣ್, ಅರ್ಜುನ್ ಜನ್ಯ, ಹರಿಹರನ್, ರಾಜಶ್ ಕೃಷ್ಣನ್, ಸಂಜಿತ್ ಹೆಗ್ಡೆ, ಪುತ್ತೂರು ನರಸಿಂಹ ನಾಯಕ್, ಆನೂರು ಅನಂತಕೃಷ್ಣ ಶರ್ಮಾ, ಅನುರಾಧ ಭಟ್, ಇನ್ನೂ ಹಲವಾರು ಗಾಯಕರು, ಸಂಗೀತ ನಿರ್ದೇಶಕರು ಕಲಾ ಪ್ರದರ್ಶನ ನೀಡಲಿದ್ದಾರೆ. ಆ ಮೂಲಕ ನಿಧಿ ಸಂಗ್ರಹ ಮಾಡಲಿದ್ದಾರೆ. ನಿಧಿಯ ಮೂಲಕ ಸಂಕಷ್ಟದಲ್ಲಿರುವ ಕಲಾವಿದರಿಗೆ ನೆರವಾಗಲಿದ್ದಾರೆ.

'ಕಲಾನಿಧಿ' ಕಾರ್ಯಕ್ರಮ ಈಗಾಗಲೇ ನಡೆದಿದ್ದು ಅದನ್ನು ಸಿಎಂ ಯಡಿಯೂರಪ್ಪ ಉದ್ಘಾಟನೆ ಮಾಡಿದ್ದಾರೆ. ಆ ಕಾರ್ಯಕ್ರಮದ ಪ್ರಸಾರ ಜೂನ್ 25 ರಿಂದ ಆಗಲಿದೆ. ನಿಧಿ ಸಂಗ್ರಹ ಪ್ರಕ್ರಿಯೆಯು ಆನ್ಲೈನ್ ಮೂಲಕ ನಡೆಯುತ್ತಿದ್ದು ಈವರೆಗೆ (ಜೂನ್ 24, ಮಧ್ಯಾಹ್ನ)ದ ವರೆಗೆ 24,000 ಸಂಗ್ರಹಿಸಲಾಗಿದೆ. ಒಟ್ಟು 1 ಕೋಟಿ ರು. ಹಣ ಸಂಗ್ರಹಿಸುವ ಗುರಿಯನ್ನು ಹೊಂದಿದ್ದಾರೆ ಆಯೋಜಕರು.
ಈ ಬಗ್ಗೆ ಇಂದು ಸುದ್ದಿಗೋಷ್ಠಿ ನಡೆಸಿದ ಡಿಸಿಎಂ ಅಶ್ವತ್ಥನಾರಾಯಣ್, ಗಾಯಕ ವಿಜಯ್ಪ್ರಕಾಶ್ ''ಕಲಾವಿದರಿಗೆ ನೆರವು ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಮಾಡುತ್ತಿದ್ದೇವೆ. ಹಲವಾರು ಖ್ಯಾತ ಗಾಯಕರು ಈ ಕಾರ್ಯಕ್ರಮಕ್ಕೆ ಹಣ ಪಡೆಯದೇ ಹಾಡಿದ್ದಾರೆ. ಸಾರ್ವಜನಿಕರು ತುಂಬು ಮನಸ್ಸಿನಿಂದ ಸಹಾಯ ಮಾಡಬೇಕು. ಸಂಗ್ರಹವಾಗುವ ಹಣವನ್ನು ನೇರವಾಗಿ ಕಲಾವಿದರ ಖಾತೆಗಳಿಗೆ ಕಳಿಸಲಾಗುತ್ತದೆ. ಒಂದು ರು. ಸಹ ದುರ್ಬಳಕೆ ಆಗುವುದಿಲ್ಲ'' ಎಂದು ಭರವಸೆ ನೀಡಿದ್ದಾರೆ.


Click it and Unblock the Notifications











