ಗಣೇಶನ ಆಶೀರ್ವಾದದಿಂದ ಗಾಯಕರಾದ ಅರಸು ಅಂತಾರೆ
ಇಷ್ಟ ದಿನ ಒಳ್ಳೆ ಒಳ್ಳೆಯ ಹಾಡುಗಳನ್ನು ಹಾಳೆಯ ಮೇಲೆ ಮೂಡಿಸುತ್ತಿದ್ದ ಅರಸು ಅಂತಾರೆ ಈಗ ಹಾಡುಗಾರನಾಗಿದ್ದಾರೆ. ಗಣೇಶನ ಆಶೀರ್ವಾದದಿಂದ ಈ ಪ್ರತಿಭಾವಂತ ಚಿತ್ರ ಸಾಹಿತಿ ಗಾಯಕನಾಗಿದ್ದಾರೆ.
'ಕಳ್ಬೆಟ್ಟದ ದರೋಡೆಕೋರರು' ಸಿನಿಮಾದ ಮೊದಲ ಹಾಡು ಇದೀಗ ಬಿಡುಗಡೆಯಾಗಿದೆ. ಕೆಲವೇ ದಿನಗಳಲ್ಲಿ ಗಣೇಶನ ಹಬ್ಬ ಬರಲಿದ್ದು, ಈ ಬಾರಿ ಗಣೇಶನ ಮುಂದೆ ಇದೇ ಹಾಡು ಮೊಳಗಲಿದೆ. ಸಿನಿಮಾದ ಹಾಡಿಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ.
ಅನೂಪ್ ಸೀಳಿನ್ ಸಂಗೀತ ಹಾಗೂ ಅರಸು ಅಂತಾರೆ ಸಾಹಿತ್ಯ ಈಗಾಗಲೇ ಅನೇಕ ಸಿನಿಮಾಗಳಲ್ಲಿ ಮೋಡಿ ಮಾಡಿದೆ. ವಿಶೇಷ ಅಂದರೆ, ಈಗ ಅನೂಪ್ ಸಂಗೀತದ ಮೂಲಕವೇ ಅರಸು ಗಾಯಕನ ಪಟ್ಟ ಪಡೆದಿದ್ದಾರೆ. ಅರಸು ಅಂತಾರೆ ಜೊತೆಗೆ ವ್ಯಾಸರಾಜ್ ಧ್ವನಿಯೂ ಹಾಡಿನಲ್ಲಿದೆ.

ಚಿತ್ರದ ಕಥೆಯ ಕೋಟೆ ಬೀದಿ ಗಣೇಶ ಮತ್ತು ಆನೆಸಾಲು ಬೀದಿ ಗಣೇಶ ಈ ಎರಡು ಏರಿಯಾಗಳ ಗಣೇಶನ ಉತ್ಸವದಲ್ಲಿ ಈ ಹಾಡು ಬರಲಿದೆ. ನಮ್ ಗಣೇಶ್ ಗ್ರೇಟು ಎಂದು ಎರಡು ಗ್ಯಾಂಗ್ ಹುಡುಗರು ಹಾಡುವ ವಿಶೇಷ ಹಾಡು ಇದಾಗಿದೆ. ಮದ್ದೂರಿನ ಒಂದು ಹಳ್ಳಿಯಲ್ಲಿ ಹಾಡನ್ನು ಚಿತ್ರೀಕರಣ ಮಾಡಲಾಗಿದೆ.
ಅಂದಹಾಗೆ, ದೀಪಕ್ ಮಧುವನಹಳ್ಳಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. 'ರಾಮಾ ರಾಮಾ ರೇ' ಖ್ಯಾತಿಯ ನಟರಾಜ್ ಹಾಗೂ 'ರಾಧಾ ರಮಣ' ಖ್ಯಾತಿಯ ಶ್ವೇತ ಪ್ರಸಾದ್ ಚಿತ್ರದ ಲೀಡ್ ರೋಲ್ ನಲ್ಲಿ ನಟಿಸಿದ್ದಾರೆ.


Click it and Unblock the Notifications











