ಗಂಡನ ಮನೆಯವರಿಂದ ಚಿತ್ರಹಿಂಸೆ: ಕನ್ನಡ ಸಿನಿಮಾ ಗಾಯಕಿ ಸುಶ್ಮಿತಾ ಆತ್ಮಹತ್ಯೆ.!
ಗಂಡನ ಮನೆಯವರು ನೀಡುತ್ತಿದ್ದ ಚಿತ್ರಹಿಂಸೆ ತಾಳಲಾರದೆ, ಗಾಯಕಿ ಸುಶ್ಮಿತಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನ ಮಾಳಗಾಳದಲ್ಲಿರುವ ತಾಯಿ ಮನೆಯಲ್ಲಿ 26 ವರ್ಷದ ಗಾಯಕಿ ಸುಶ್ಮಿತಾ ರಾಜೇ ಆತ್ಮಹತ್ಯೆ ಮಾಡಿಕೊಂಡಿದ್ದು, ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತಾಯಿ ಮತ್ತು ತಮ್ಮನಿಗೆ ಗಾಯಕಿ ಸುಶ್ಮಿತಾ ವಾಟ್ಸ್ ಆಪ್ ಮೂಲಕ ಸಂದೇಶ ಕಳುಹಿಸಿದ್ದರು. ''ನನ್ನ ಸಾವಿಗೆ ಶರತ್, ವೈದೇಹಿ ಮತ್ತು ಗೀತಾ ನೇರವಾಗಿ ಕಾರಣ'' ಎಂದು ತಾಯಿಗೆ ಕಳುಹಿಸಿರುವ ಸಂದೇಶದಲ್ಲಿ ಸುಶ್ಮಿತಾ ಉಲ್ಲೇಖಿಸಿದ್ದಾರೆ. ವರದಕ್ಷಿಣೆಗಾಗಿ ಸುಶ್ಮಿತಾ ಪತಿ ಶರತ್ ಮತ್ತು ಮನೆಯವರು ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.

ಯಾವ ಚಿತ್ರಗಳಲ್ಲಿ ಸುಶ್ಮಿತಾ ಹಾಡಿದ್ದರು.?
26 ವರ್ಷದ ಸುಶ್ಮಿತಾ ಇನ್ನೂ ಯುವ ಗಾಯಕಿ. ಸುಗಮ ಸಂಗೀತ ಗಾಯಕಿಯಾಗಿ, ಚಲನಚಿತ್ರ, ಧಾರಾವಾಹಿಗಳಲ್ಲಿ ಹಿನ್ನಲೆ ಗಾಯಕಿಯಾಗಿ ಸುಶ್ಮಿತಾ ಗುರುತಿಸಿಕೊಂಡಿದ್ದರು. 'ಹಾಲು ತುಪ್ಪ', 'ಶ್ರೀ ಸಾಮಾನ್ಯ' ಮುಂತಾದ ಚಿತ್ರಗಳ ಹಾಡುಗಳಿಗೆ ಸುಶ್ಮಿತಾ ದನಿಯಾಗಿದ್ದರು.

ತಾಯಿಗೆ ಕಳುಹಿಸಿರುವ ಸಂದೇಶದಲ್ಲಿ ಏನಿದೆ.?
''ಅಮ್ಮ.. ನನ್ನನ್ನು ಕ್ಷಮಿಸು. ನಾನೇ ಮಾಡಿಕೊಂಡ ತಪ್ಪಿಗೆ ನಾನೇ ಶಿಕ್ಷೆ ಅನುಭವಿಸುತ್ತಿದ್ದೇನೆ. ನನ್ನನ್ನು ದಯವಿಟ್ಟು ಕ್ಷಮಿಸು. ನನಗೆ ಅವರ ದೊಡ್ಡಮ್ಮನ ಮಾತು ಕೇಳಿಕೊಂಡು ಚಿತ್ರಹಿಂಸೆ ಕೊಡುತ್ತಿದ್ದರು. ಮಾತೆತ್ತಿದ್ದರೆ, ಮನೆ ಬಿಟ್ಟು ಹೋಗು ಅಂತಿದ್ರು. ಮಾನಸಿಕವಾಗಿ ತುಂಬಾ ಹಿಂಸೆ ಆಗಿತ್ತು. ಅವರನ್ನ ಮಾತ್ರ ಸುಮ್ಮನೆ ಬಿಡಬೇಡ''

ಸಾವಿಗೆ ಕಾರಣ ಯಾರು.?
''ನನ್ನ ಸಾವಿಗೆ ಶರತ್, ವೈದೇಹಿ ಮತ್ತು ಗೀತಾ ನೇರವಾಗಿ ಕಾರಣರಾಗಿರುತ್ತಾರೆ. ಎಷ್ಟು ಬೇಡಿಕೊಂಡರೂ, ಕಾಲು ಹಿಡಿದರೂ, ಅವನ ಮನಸ್ಸು ಕರಗಲಿಲ್ಲ. ಅವರ ಮನೆಯಲ್ಲಿ ನನಗೆ ಸಾಯಲು ಇಷ್ಟವಿರಲಿಲ್ಲ. ಮದುವೆ ಆದಾಗಿನಿಂದ ಇದೇ ರೀತಿ ಹಿಂಸೆ. ಯಾರ ಹತ್ತಿರವೂ ಹೇಳಿಕೊಂಡಿರಲಿಲ್ಲ''

ಅವರನ್ನ ಮಾತ್ರ ಸುಮ್ಮನೆ ಬಿಡಬೇಡ.!
''ನನ್ನನ್ನ ನಮ್ಮ ಊರಿನಲ್ಲಿ ಮಣ್ಣು ಮಾಡು. ಅಥವಾ ಸುಡು. ನನ್ನ ಕಾರ್ಯವನ್ನು ನನ್ನ ತಮ್ಮನೇ ಮಾಡಲಿ. ಅವರನ್ನ ಮಾತ್ರ ಸುಮ್ಮನೆ ಬಿಡಬೇಡ. ಇಲ್ಲವಾದರೆ ನನ್ನ ಆತ್ಮಕ್ಕೆ ಶಾಂತಿ ದೊರೆಯುವುದಿಲ್ಲ. ಅಮ್ಮ.. ಮಿಸ್ ಯೂ. ನಿನಗೋಸ್ಕರ ನನ್ನ ತಮ್ಮ ಸಚಿನ್ ಇದ್ದಾನೆ. ಅವನನ್ನು ಚೆನ್ನಾಗಿ ನೋಡಿಕೋ. ಮತ್ತೊಮ್ಮೆ ಕ್ಷಮೆಯಾಚಿಸುತ್ತಿದ್ದೇನೆ'' ಎಂದು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತಾಯಿಗೆ ವಾಟ್ಸ್ ಆಪ್ ಮೂಲಕ ಸಂದೇಶ ರವಾನಿಸಿದ್ದರು ಗಾಯಕಿ ಸುಶ್ಮಿತಾ.


Click it and Unblock the Notifications











