ಹಾಡಿನ ರೂಪ ಪಡೆಯಿತು ಭಟ್ಟರು ಮೆಚ್ಚಿದ ಸಾಹಿತ್ಯ
ವರ್ಷದ ಕೊನೆಯಲ್ಲಿ ನಿರ್ದೇಶಕ ಯೋಗರಾಜ್ ಭಟ್ ಒಂದು ಹಾಡು ಕೊಟ್ಟಿದ್ದರು. ಚಳಿಗಾಲಕ್ಕೆ ತಕ್ಕ ಹಾಗೆ ಶೃಂಗಾರವನ್ನ ಬೆರೆಸಿ ನೀಡಿದ್ದ 'ಪಂಚತಂತ್ರ' ಸಿನಿಮಾದ ಹಾಡು ಕನ್ನಡಿಗರಿಗೆ ಬಹಳ ಇಷ್ಟ ಆಗಿತ್ತು.
ಈಗ ಇದೇ ಹಾಡು ಹೊಸ ರೂಪ ಪಡೆದುಕೊಂಡಿದೆ. ಇದೇ ಹಾಡಿನ ಸಂಗೀತಕ್ಕೆ ಹೊಸ ಸಾಹಿತ್ಯ ಹಾಗೂ ಧ್ವನಿ ಬೆರತಿದ್ದು, ಶೃಂಗಾರ ಮತ್ತೊಂದು ಮಗ್ಗಲಿನ ದರ್ಶನವಾಗಿದೆ.
ಈ ಹೊಸ ಹಾಡನ್ನು ಯುವ ಸಾಹಿತಿ ರಾಘವೇಂದ್ರ ಸಿ ವಿ ಬರೆದಿದ್ದಾರೆ. ನಮ್ಮ ಒನ್ ಇಂಡಿಯಾ/ ಫಿಲ್ಮಿ ಬೀಟ್ ಸಿಬ್ಬಂದಿ ರಾಘವೇಂದ್ರ ತಮ್ಮ ಹವ್ಯಾಸಕ್ಕಾಗಿ ಬರವಣಿಗೆ ಶುರು ಮಾಡಿದರು.

ಈಗ ಅವರ ಆ ಬರವಣಿಗೆ ಬೆಳ್ಳಿ ಪರದೆ ಮೇಲೆ ಮೂಡುತ್ತಿದೆ. 'ತಾಯಿಗೆ ತಕ್ಕ ಮಗ' ಸಿನಿಮಾದ ಹಾಡಿನ ಮೂಲಕ ಸಿನಿ ಸಾಹಿತಿಯಾಗಿ ತಮ್ಮ ಪಯಣ ಶುರು ಮಾಡಿದ್ದ ರಾಘವೇಂದ್ರ ಈಗ ಶೃಂಗಾರವನ್ನು ಪದಗಳಲ್ಲಿ ವರ್ಣಿಸಿದ್ದಾರೆ.
ರಾಘವೇಂದ್ರ ಸಾಹಿತ್ಯವನ್ನು ಯೋಗರಾಜ್ ಭಟ್ ಸಹ ಮೆಚ್ಚಿಕೊಂಡಿದ್ದು, ಅವರ ಫೇಸ್ ಬುಕ್ ಫೇಜ್ ನಲ್ಲಿ ಸಾಹಿತ್ಯದ ಬಗ್ಗೆ ಬರೆದುಕೊಂಡಿದ್ದರು. ಭಟ್ಟರು ಮೆಚ್ಚಿದ ಈ ಸಾಹಿತ್ಯ ಇದೀಗ ಹಾಡಿನ ರೂಪ ಪಡೆದುಕೊಂಡಿದೆ.
ಶ್ರೀನಿಧಿ ಡಿ ಆರ್ ಹಾಡಿಗೆ ಧ್ವನಿ ನೀಡಿದ್ದು, ಸಾಹಿತ್ಯ, ಸಂಗೀತಕ್ಕೆ ಜೀವ ಬಂದಿದೆ. ಯೂ ಟ್ಯೂಬ್ ನಲ್ಲಿ ಹಾಡಿಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ.
ಅಂದಹಾಗೆ, ಈ ಹಾಡನ್ನು ಹೊಸ ವರ್ಷದ ವಿಶೇಷವಾಗಿ ಇಂದು ಒನ್ ಇಂಡಿಯಾ ಕಚೇರಿಯಲ್ಲಿ ಬಿಡುಗಡೆ ಮಾಡಲಾಯಿತು. ಸಂಪಾದಕರಾದ ಪ್ರಸಾದ್ ನಾಯಿಕ ಸೇರಿದಂತೆ ಇಡೀ ತಂಡ ಈ ಖುಷಿಯಲ್ಲಿ ಭಾಗಿಯಾಗಿತ್ತು.


Click it and Unblock the Notifications











