twitter
    For Quick Alerts
    ALLOW NOTIFICATIONS  
    For Daily Alerts

    ''ಬೈಟೇ ಬೈಟೇ..'' ಪದ್ಯಗಾರ ಚೇತನ್ ಡೈರೆಕ್ಟರ್ ಆದ ಕಥೆ

    By Harshitha
    |

    'ಸ್ವೀಟಿ' ಸಿನಿಮಾ ನೆನಪಿದೆಯಾ...? ಬಹು ವರ್ಷಗಳ ಗ್ಯಾಪ್ ನಂತ್ರ ರಾಧಿಕಾ ಕುಮಾರಸ್ವಾಮಿ ಬಣ್ಣ ಹಚ್ಚಿದ ಸಿನಿಮಾ 'ಸ್ವೀಟಿ'. ಹಿಂದೆಂದಿಗಿಂತಲೂ ಸಖತ್ ಹಾಟ್ ಆಗಿ ಮಿಂಚಿದ ರಾಧಿಕಾ ಮೇಡಂ, ಎಲ್ಲರೂ ಬಾಯಿ ಮೇಲೆ ಬೆರಳಿಡುವ ಹಾಗೆ ಕುಣಿದು ಕುಪ್ಪಳಿಸಿದ್ದು ಈ ಚಿತ್ರದಲ್ಲೇ..!

    ''ಐ ವಾನಾ ಸಿಂಗ್ ಎ ಸಾಂಗು....'' ಅಂತ ರಾಧಿಕಾ ಹೆಜ್ಜೆ ಮೇಲೆ ಹೆಜ್ಜೆ ಹಾಕುತ್ತಿದ್ದರೆ, ಕೂತಲ್ಲೇ ತಲೆದೂಗಿದವರು ಅದೆಷ್ಟೋ ಮಂದಿ. 2013 ರ ಬಿಗೆಸ್ಟ್ ಹಿಟ್ ಆಗಿದ್ದ ಈ ಹಾಡನ್ನ ಬರೆದವರು ಯಾರು ಹೇಳಿ..?

    Chethan Kumar

    ಈ ಪ್ರಶ್ನೆಗೆ ಉತ್ತರಿಸುವುದಕ್ಕೆ ಬಹುಶಃ ನಿಮಗೆ ಕಷ್ಟವಾಗಬಹುದು. ಹಾಗೆ, ಉತ್ತರ ಕೇಳಿದ ಮೇಲೂ ನಿಮಗೆ ಪರಿಚಯ ಸಿಗದೇ ಇರಬಹುದು. ಹಾಗೆ, ಎಲೆ ಮರೆಯ ಕಾಯಿಯಂತಿರುವ ಪ್ರತಿಭೆಯನ್ನ ಇಂದು ನಮ್ಮ 'ಫಿಲ್ಮಿಬೀಟ್ ಕನ್ನಡ' ಮೂಲಕ ನಿಮಗೆ ಪರಿಚಯಿಸುತ್ತಿದ್ದೀವಿ ನೋಡಿ....

    ರಾಧಿಕಾ ಮೇಡಂ ಸೂಪರ್ ಸ್ಟೆಪ್ ಹಾಕುವ ಹಾಗೆ ಅರ್ಜುನ್ ಜನ್ಯ ಸಂಯೋಜಿಸಿದ ತಾಳಕ್ಕೆ ತಕ್ಕ ಸಾಹಿತ್ಯ ಬರೆದುಕೊಟ್ಟಿದ್ದು ಚೇತನ್ ಕುಮಾರ್. ಯುವ ಪ್ರತಿಭೆ ಚೇತನ್ ಬಗ್ಗೆ ಹೇಳ್ಬೇಕು ಅಂದ್ರೆ, ಮೊದಲು 'ಬಹದ್ದೂರ್' ಚಿತ್ರದ ಬಗ್ಗೆ ಮಾತನಾಡಲೇ ಬೇಕು.

    ಕಳೆದ ವರ್ಷದ ಸೂಪರ್ ಡ್ಯೂಪರ್ ಹಿಟ್ 'ಬಹದ್ದೂರ್' ಚಿತ್ರದ ನಿರ್ದೇಶಕ ಈ ಚೇತನ್ ಕುಮಾರ್. ಡೈರೆಕ್ಟರ್ ಕ್ಯಾಪ್ ತೊಟ್ಟ ಮೊದಲ ಚಿತ್ರದಲ್ಲೇ ಶತಕ ಬಾರಿಸಿರುವ ಪ್ರತಿಭಾವಂತ. [ಹತ್ತು ದಿನಗಳಲ್ಲಿ ರು.9 ಕೋಟಿ ಬಾಚಿದ ಬಹದ್ದೂರ್]

    Chethan Kumar

    ಇಂತಿಪ್ಪ ಚೇತನ್ ಇಂಡಸ್ಟ್ರಿಗೆ ಕಾಲಿಟ್ಟು ನಾಲ್ಕು ವರ್ಷಗಳಾಗಿವೆ. ಅಷ್ಟು ಬೇಗ, ಪರಿಶ್ರಮದ ಪ್ರತಿಫಲವಾಗಿ ಯಶಸ್ಸಿನ ಸವಿಯನ್ನ ಸವಿದಿದ್ದಾರೆ ಚೇತನ್ ಕುಮಾರ್.

    ಕೊಳ್ಳೇಗಾಲದಲ್ಲಿ ಹುಟ್ಟಿದ ಚೇತನ್ ಕುಮಾರ್, ಬೆಳೆದದ್ದು, ಓದಿದ್ದೆಲ್ಲಾ ಮೈಸೂರಿನಲ್ಲಿ. ಬರವಣಿಗೆಯಲ್ಲಿ ಸದಾ ಮುಂದಿರುತ್ತಿದ್ದ ಚೇತನ್ ಎರಡನೆಯ ವರ್ಷದ ಪಿ.ಯು.ಸಿ ಓದುವಾಗಲೇ 'ನುಡಿ ಮನವೇ' ಅನ್ನುವ ಪುಸ್ತಕವನ್ನ ಬರೆದಿದ್ದರು.

    ಪಿ.ಎಚ್.ಡಿ ಮಾಡುವ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದ್ದ ಭಜನ ಗೀತಗಳ ಕುರಿತಾದ ಇವರ ಪುಸ್ತಕವನ್ನ ಆಗಲೇ ಗಮನಿಸಿ ಸರ್ಕಾರ ಖರೀದಿ ಮಾಡಿತ್ತು. ಇದರೊಂದಿಗೆ ಭಕ್ತಿಗೀತೆಗಳ 5 ಆಲ್ಬಂಗಳಿಗೆ ಸಾಹಿತ್ಯ ಬರೆದು ಕೊಟ್ಟಿದ್ದ ಚೇತನ್, ಚಿತ್ರರಂಗಕ್ಕೆ ಕಾಲಿಟ್ಟಿದ್ದು ಅಚಾನಕ್ಕಾಗಿ.

    Chethan Kumar

    'ಕಲಾಮಂದಿರ'ದಲ್ಲಿ ನಾಟಕಗಳಿಗೆ ಸಂಭಾಷಣೆ ಬರೆಯುತ್ತಿದ್ದ ಚೇತನ್ ಗೆ, ಸ್ನೇಹಿತನ ಮುಖಾಂತರ ನಿರ್ದೇಶಕ ತುಷಾರ್ ರಂಗನಾಥ್ ಪರಿಚಯವಾಯ್ತು. ತುಷಾರ್ ರಂಗನಾಥ್ ಬಳಿ ಸ್ಕ್ರಿಪ್ಟ್ ರೈಟರ್ ಆಗಿ ಸೇರಿಕೊಂಡ ಚೇತನ್, 'ಕಂಠೀರವ', 'ಕರಿಚಿರತೆ', 'ದೇವರು' ಮುಂತಾದ ಚಿತ್ರಗಳಿಗೆ ಡೈಲಾಗ್ಸ್ ಬರೆಯುವ ಅವಕಾಶ ಸಿಕ್ತು.

    ಇನ್ನು ಅವರ ವೃತ್ತಿ ಬದುಕಿಗೆ ಹೊಸ ತಿರುವನ್ನ ನೀಡಿದವರು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ. ಚೇತನ್ ನಲ್ಲಿದ್ದ ಪ್ರತಿಭೆಯನ್ನ ಗುರುತಿಸಿದ ಅರ್ಜುನ್, ತಮ್ಮ ಸಂಗೀತ ನಿರ್ದೇಶನದ, ಕಿಚ್ಚ ಸುದೀಪ್ ಅಭಿನಯದ 'ವರದನಾಯಕ' ಚಿತ್ರದ ಹಾಡೊಂದಕ್ಕೆ ಸಾಹಿತ್ಯ ಬರೆಯುವಂತೆ ಹೇಳಿದರು.

    Chethan Kumar

    ಅರ್ಜುನ್ ಮಾತಿನಂತೆ ''ಬೈಟೇ ಬೈಟೇ...'' ಹಾಡನ್ನ ಚೇತನ್ ಬರೆದುಕೊಟ್ಟರು. ಚೇತನ್ ಅದೃಷ್ಟದಂತೆ ಹಾಡು ಸಿಕ್ಕಾಪಟ್ಟೆ ಸೌಂಡ್ ಮಾಡ್ತು. ದಿನಬೆಳಗಾದರೆ ಎಫ್.ಎಂ ನಲ್ಲಿ ''ಬೈಟೇ ಬೈಟೇ..'' ಬಾತ್ ಎಲ್ಲರನ್ನ ರಂಜಿಸುತ್ತಿತ್ತು. ಆ ವರ್ಷದ ಜನಪ್ರಿಯ ಹಾಡುಗಳ ಪೈಕಿ ಒಂದಾದ ''ಬೈಟೇ ಬೈಟೇ...'' ಚೇತನ್ ರನ್ನ ಗೀತ ಸಾಹಿತಿ ಮಾಡಿತು.

    'ವರದನಾಯಕ' ಚಿತ್ರದ ನಂತ್ರ 'ಆಟೋ ರಾಜ' ಚಿತ್ರದ ''ಆಟೋ ರಾಜ...ಮೀಟರ್ ನ ಕಳ್ಕೊಂಡ...'', 'ಸ್ವೀಟಿ' ಚಿತ್ರದ ''ಐ ವಾನಾ ಸಿಂಗ್ ಎ ಸಾಂಗು...'', ಸೇರಿದಂತೆ 'ರಜನಿಕಾಂತ', 'ಶತ್ರು', 'ಪುಲಿಕೇಶಿ', ಸೇರಿದಂತೆ 25 ಕ್ಕೂ ಹೆಚ್ಚು ಚಿತ್ರಗಳಿಗೆ ಹಾಡು ಬರೆದಿದ್ದಾರೆ.

    Chethan Kumar

    ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಭಜರಂಗಿ' ಚಿತ್ರದ ''ಬಾಸು ನಮ್ ಬಾಸು...'', ತಮ್ಮ ನಿರ್ದೇಶನದ 'ಬಹದ್ದೂರ್' ಚಿತ್ರದ ''ಆರಾಮಾಗಿರಿ ಸುಬ್ಬಲಕ್ಷ್ಮೀ....'', ''ಸ್ಟಾರ್ ಆದೆ ನಂಗೆ ನೀನು...'' ಹಾಡುಗಳನ್ನ ಬರೆದವರು ಇದೇ ಚೇತನ್ ಕುಮಾರ್. [ಕ್ಲಾಸ್+ಮಾಸ್ ಚಿತ್ರ ಸಾಹಿತಿ ಹೃದಯ ಶಿವಗಿರೊದೊಂದೇ ಆಸೆ!]

    ತುಷಾರ್ ರಂಗನಾಥ್, ಎ.ಪಿ.ಅರ್ಜುನ್, ಮಹೇಶ್ ಬಾಬು, ನಾಗಶೇಖರ್, ಪ್ರೀತಂ ಗುಬ್ಬಿ ಗರಡಿಯಲ್ಲಿ ಪಳಗಿರುವ ಚೇತನ್, ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದೂ ಕೂಡ ಆಕ್ಸಿಡೆಂಟ್ ಸ್ಟೋರಿನೇ.

    'ಅದ್ದೂರಿ' ಚಿತ್ರಕ್ಕಾಗಿ ಎ.ಪಿ.ಅರ್ಜುನ್ ಗೆ ಚೇತನ್ ಸಹಾಯಕ ನಿರ್ದೇಶಕನಾಗಿ ಸೇರಿಕೊಂಡರು. ಎರಡು ವರ್ಷಗಳ ಕಾಲ ನಡೆದ 'ಅದ್ದೂರಿ' ಶೂಟಿಂಗ್ ಗ್ಯಾಪ್ ನಲ್ಲಿ 'ಮಂಜುಳಾ ಟಾಕೀಸ್' ಅನ್ನುವ ಕಥೆಯನ್ನ ಚೇತನ್ ರೆಡಿಮಾಡಿದ್ದರು. ಅಲ್ಲದೇ, ಆ ಚಿತ್ರವನ್ನ ನಾಗಶೇಖರ್ ಮತ್ತು ರಮ್ಯಾ ನಟಿಸಬೇಕು ಅನ್ನುವ ಹಂಬಲ ಹೊಂದಿದ್ದರು.

    Chethan Kumar

    'ಮಂಜುಳಾ ಟಾಕೀಸ್' ಕಥೆಯನ್ನ ಕೇಳಿ ಇಂಪ್ರೆಸ್ ಆಗಿದ್ದ ಧೃವ ಸರ್ಜಾ, ತಮಗೂ ಒಂದು ಕಥೆ ಮಾಡಿ ಕೊಡುವಂತೆ ಕೇಳಿದ್ದರು. ಅದರ ಪ್ರಕಾರ, ಚೇತನ್ 'ಬಹದ್ದೂರ್' ಕಥೆ ರೆಡಿಮಾಡಿ ಧೃವ ಸರ್ಜಾಗೆ ಒಪ್ಪಿಸಿದರು. 'ಬಹದ್ದೂರ್' ಕಥೆ ಇಷ್ಟ ಪಟ್ಟ ಅರ್ಜುನ್ ಸರ್ಜಾ 'ನೀವೇ ಡೈರೆಕ್ಟ್ ಮಾಡಿ' ಅಂತ ಹುರಿದುಂಬಿಸಿದರಂತೆ. [ಬಹದ್ದೂರ್ ವಿಮರ್ಶೆ : ಅದ್ದೂರಿ, ಕಲರ್ ಫುಲ್ ಪ್ರೇಮ ಪಯಣ]

    ಎಲ್ಲರ ಸಹಕಾರದಿಂದ ನಿರ್ದೇಶಕನಾದ ಚೇತನ್, ಮೊದಲ ಚಿತ್ರದಲ್ಲೇ ಧೃವ ಸರ್ಜಾ ಮತ್ತು ರಾಧಿಕಾ ಪಂಡಿತ್ ಗೆ ಆಕ್ಷನ್ ಕಟ್ ಹೇಳಿ ಸೆಂಚುರಿ ಬಾರಿಸಿದ್ದಾರೆ. ಸಕ್ಸಸ್ ಜೊತೆ ಜವಾಬ್ದಾರಿ ಕೂಡ ಹೆಚ್ಚಾಗಿರುವ ಕಾರಣ ಚೇತನ್, ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆ ಹೆಚ್ಚು ಗಮನಹರಿಸುತ್ತಿದ್ದಾರೆ.

    'ಜೇಮ್ಸ್' ಚಿತ್ರಕಥೆಯನ್ನ ರೆಡಿಮಾಡಿಕೊಂಡಿರುವ ಚೇತನ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಥವಾ ರಾಕಿಂಗ್ ಸ್ಟಾರ್ ಯಶ್ ಗೆ ಆಕ್ಷನ್ ಕಟ್ ಹೇಳುವ ಉತ್ಸುಕದಲ್ಲಿದ್ದಾರೆ.

    Chethan Kumar

    ನಿರ್ದೇಶನದ ಜೊತೆಗೆ ಸಂಭಾಷಣೆ ಬರೆಯುವುದರಲ್ಲೂ ಚೇತನ್ ಗೆ ಭಾರಿ ಡಿಮ್ಯಾಂಡ್ ಇದೆ. ಕೆ.ಮಂಜು ಬ್ಯಾನರ್ ನಲ್ಲಿ ಇಮ್ರಾನ್ ಸರ್ದಾರಿಯಾ ನಿರ್ದೇಶಿಸುವ ಚಿತ್ರಕ್ಕೆ ಮತ್ತು ಅಲೆಮಾರಿ ಸಂತು ಹೊಸ ಪ್ರಾಜೆಕ್ಟ್ ಗೆ ಸಂಭಾಷಣೆ ಬರೆಯುವುದಕ್ಕೆ ಒಪ್ಪಿಕೊಂಡಿದ್ದಾರಂತೆ ಚೇತನ್.

    ಇದಲ್ಲದೇ ಚೇತನ್ ಹಾಡುಗಳಿಗೂ ಭಾರಿ ಬೇಡಿಕೆ ಇದೆ. ಮೊನ್ನೆಮೊನ್ನೆಯಷ್ಟೇ ರಿಲೀಸ್ ಆದ ದುನಿಯಾ ವಿಜಿ ಅಭಿನಯದ 'ಜಾಕ್ಸನ್' ಚಿತ್ರದ ''ಆಪೋಸಿಟ್ ಹೌಸು ಕುಮುದಾ....'', ''ಈ ದಿನ ನಿನ್ನ ಬರ್ತಡೇ....'' ಸೇರಿದಂತೆ ಒಟ್ಟು ಮೂರು ಹಾಡುಗಳಿಗೆ ಸಾಹಿತ್ಯ ಬರೆದಿರುವ ಚೇತನ್, ಇದೀಗ 'ಚಾರ್ಲಿ', 'ಜ್ವಲಂತಂ', 'ಕಲಿಯುಗ' ಮತ್ತು ಕಿಚ್ಚ ಸುದೀಪ್ ನಟಿಸುತ್ತಿರುವ 'ರನ್ನ' ಚಿತ್ರದ ಹಾಡುಗಳಿಗೆ ಪದಪುಂಜ ಕಟ್ಟುತ್ತಿದ್ದಾರೆ.

    Chethan Kumar

    'ಬಹದ್ದೂರ್' ಚಿತ್ರದವರೆಗೂ ಟೈಟಲ್ ಕಾರ್ಡ್ ನಲ್ಲಿ ಎಲ್ಲೂ ಹೆಸರು ಕಾಣದ ಚೇತನ್, ಇದೀಗ ಎಲ್ಲಾ ಸಂಗೀತ ನಿರ್ದೇಶಕರಿಗೂ ಬೇಕಾಗಿರುವ ಸಾಹಿತಿ. [ಸಹಸ್ರ ಸಂಭ್ರಮದಲ್ಲಿ ಕನ್ನಡ ಗೀತಸಾಹಿತಿ 'ಕವಿರಾಜ್']

    ಅಮ್ಮನ ಇಚ್ಛೆಯಂತೆ ಲೆಕ್ಚರರ್ ಆಗಬೇಕಿದ್ದ ಚೇತನ್, ಅಕಸ್ಮಾತ್ ಆಗಿ ಚಿತ್ರರಂಗಕ್ಕೆ ಕಾಲಿಟ್ಟು ಅನೇಕ ಪ್ರಯೋಗಗಳನ್ನ ಮಾಡಿ ನಿರ್ದೇಶಕನಾಗಿದ್ದಾರೆ. ಯಶಸ್ಸಿನ ಏಣಿ ಹತ್ತುತ್ತಿರುವ ಚೇತನ್, ಹೀಗೆ ಯಶಸ್ಸಿನ ಏಣಿಯ ಎತ್ತರೆತ್ತರಕ್ಕೇರಲಿ ಅನ್ನುವುದೇ ನಮ್ಮ ಹಾರೈಕೆ. (ಫಿಲ್ಮಿಬೀಟ್ ಕನ್ನಡ)

    English summary
    Lyricist cum Director Chethan Kumar of Bahaddur fame is in Demand. Chethan Kumar, who is all set to direct his next 'James', is also roped in as Script-writer and Lyricist for many movies.
    Sunday, January 25, 2015, 18:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X