Interview: 'ಮಾಯಾ ಬಜಾರ್' ಮೋಡಿಗಾರನ ಸಂಗೀತಮಯ ಪಯಣ
'ಮಾಯಾ ಬಜಾರ್' ಸಿನಿಮಾದ ಹಾಡುಗಳು ಕೇಳುಗರಿಗೆ ಬಹಳ ಇಷ್ಟ ಆಗಿದೆ. ಪುನೀತ್ ರಾಜ್ ಕುಮಾರ್ ನಿರ್ಮಾಣದ ಎರಡನೇ ಸಿನಿಮಾದ ಹಾಡುಗಳು ತುಂಬ ಹೊಸತನದಿಂದ ಕೂಡಿವೆ.
ಅಂದಹಾಗೆ, ಈ ಹಾಡಗಳನ್ನು ನೀಡಿರುವುದು ಸಂಗೀತ ನಿರ್ದೇಶಕ ಮಿಧುನ್ ಮುಕುಂದನ್. ಒಂದರ ನಂತರ ಒಂದು ಒಳ್ಳೆಯ ಹಾಡುಗಳನ್ನು ಮಿಧುನ್ ನೀಡುತ್ತಿದ್ದಾರೆ. ತಮ್ಮ ಪ್ರತಿಭೆ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿದ್ದಾರೆ.
'ಮಾಯಾ ಬಜಾರ್' ಮಿಧುನ್ ಮುಕುಂದನ್ ಸಂಗೀತ ನಿರ್ದೇಶನದ 10ನೇ ಸಿನಿಮಾವಾಗಿದೆ. ಎಸ್ ಪಿ ಬಾಲಸುಪ್ರಬ್ರಹ್ಮಣ್ಯಂ ರಂತಹ ಮಹಾನ್ ಗಾಯಕರ ಜೊತೆಗೆ ಮಿಧುನ್ ಕೆಲಸ ಮಾಡಿದ್ದಾರೆ. ಮ್ಯೂಸಿಕ್ ಡೈರೆಕ್ಟರ್ ಆಗಬೇಕು ಎಂದು ಬೆಂಗಳೂರಿಗೆ ಬಂದ ಅವರ ಕನಸು ಈಡೇರಿದೆ. ಕೈ ತುಂಬ ಸಿನಿಮಾ ಅವಕಾಶಗಳು ಇವೆ.
ಅಂದಹಾಗೆ, ತಮ್ಮ ಚಿತ್ರರಂಗದ ಪ್ರಯಾಣದ ಬಗ್ಗೆ 'ಮಾಯಾ ಬಜಾರ್' ಸಂಗೀತ ನಿರ್ದೇಶಕ ಮಿಧುನ್ ಮುಕುಂದನ್ 'ಫಿಲ್ಮಿಬೀಟ್ ಕನ್ನಡ'ದ ಜೊತೆಗೆ ಮಾತನಾಡಿದ್ದಾರೆ.

ಮಲೆಯಾಳಿ ಎನ್ನುವುದಕ್ಕಿಂತ ಕನ್ನಡಿಗ
''ನಾನು ಹುಟ್ಟಿದ್ದು ಕೇರಳದ ಕಣ್ಣೂರಿನಲ್ಲಿ. ನಂತರ ವಿದೇಶದಲ್ಲಿ ಬೆಳೆದೆ, ಅಲ್ಲೇ ಓದಿದೆ. ಬಳಿಕ ಮಂಗಳೂರಿಗೆ ಬಂದು ಆರು ವರ್ಷ ಇದ್ದೆ. ಅಲ್ಲಿ ನಮ್ಮದೇ ಮ್ಯೂಸಿಕ್ ಬ್ಯಾಂಡ್ ಇತ್ತು. ಸಿನಿಮಾ ಮ್ಯೂಸಿಕ್ ಅಂದ್ರೆ ನನಗೆ ತುಂಬ ಇಷ್ಟ. ಸಿನಿಮಾಗಳಿಗೆ ಸಂಗೀತ ನೀಡಬೇಕು ಎನ್ನುವ ಆಸೆಯಿಂದ 2012ರಲ್ಲಿ ಬೆಂಗಳೂರಿಗೆ ಬಂದೆ. ಈಗ ನಾನು ಮಲೆಯಾಳಿ ಎನ್ನುವುದಕ್ಕಿಂತ ಹೆಚ್ಚಾಗಿ ಕನ್ನಡಿಗ.''- ಮಿಧುನ್ ಮುಕುಂದನ್, ಸಂಗೀತ ನಿರ್ದೇಶಕ

ರಘು ದೀಕ್ಷಿತ್ ರೊಂದಿಗೆ ಕೆಲಸ
''ಸಿನಿಮಾಗಳಿಗೆ ಸಂಗೀತ ನೀಡಬೇಕು ಎನ್ನುವ ಆಸೆ ಇತ್ತು. ಆದರೆ, ಚಿತ್ರರಂಗದಲ್ಲಿ ಯಾರ ಪರಿಚಯ ಇರಲಿಲ್ಲ. ಮೊದಲು ರಘು ದೀಕ್ಷಿತ್ ಸರ್ ಜೊತೆಗೆ ಕೆಲಸ ಮಾಡುತ್ತಿದ್ದೆ. ನಂತರ 'ಕಹಿ' ಸಿನಿಮಾದ ಮೂಲಕ ಜರ್ನಿ ಶುರುವಾಯಿತು. ಅಲ್ಲಿಂದ ಈಗ 'ಮಾಯ ಬಜಾರ್'ವರೆಗೆ ಬಂದಿದೆ. 10 ಸಿನಿಮಾಗಳು ಆಗಿವೆ. ಒಂದಷ್ಟು ಅವಕಾಶಗಳು ಕೈ ನಲ್ಲಿ ಇವೆ. ಖುಷಿ ಇದೆ.'' - ಮಿಧುನ್ ಮುಕುಂದನ್, ಸಂಗೀತ ನಿರ್ದೇಶಕ

'ಶ್ರೀನಿವಾಸ ಕಲ್ಯಾಣ, ಒಂದು ಮೊಟ್ಟೆಯ ಕಥೆ
''ನನ್ನ ಕಸನೇ ಸಿನಿಮಾಗೆ ಸಂಗೀತ ನೀಡಬೇಕು ಎನ್ನುವುದಾಗಿತ್ತು. ಕಾಲೇಜು ಮುಗಿದ ಮೇಲೆ ಸಂಗೀತ ನಂಬಿಕೊಂಡು ಬೆಂಗಳೂರಿಗೆ ಬಂದೆ. ಮೊದಲ ಸಿನಿಮಾ 'ಕಹಿ' ಆಯ್ತು. ನಂತರ ಶ್ರೀನಿ ನಿರ್ದೇಶನದ 'ಶ್ರೀನಿವಾಸ ಕಲ್ಯಾಣ', 'ಒಂದು ಮೊಟ್ಟೆಯ ಕಥೆ', 'ಅಳಿದು ಉಳಿದವರು', ರಿಷಿ ಅವರ 'ಸಾರ್ವಜನಿಕರಿಗೆ ಸುವರ್ಣಾವಕಾಶ' ಹೀಗೆ ಸಿನಿಮಾಗಳು ಸಾಗುತ್ತಿವೆ.''- ಮಿಧುನ್ ಮುಕುಂದನ್, ಸಂಗೀತ ನಿರ್ದೇಶಕ

'ಮಾಯಾ ಬಜಾರ್' ಹಾಡುಗಳು
''ಮಾಯಾ ಬಜಾರ್' ಚಿತ್ರದಲ್ಲಿ ನಾಲ್ಕು ಹಾಡುಗಳು ಇವೆ. ಎರಡು ಹಾಡು ಬಿಡುಗಡೆಯಾಗಿದೆ. ಪುನೀತ್ ಸರ್ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಎಸ್ ಪಿ ಬಾಲಸುಪ್ರಬ್ರಹ್ಮಣ್ಯಂ ಸರ್ ಹಾಡಿದ್ದಾರೆ. ಯೋಗರಾಜ್ ಭಟ್ ಸರ್ ಹಾಗೂ ಪವನ್ ಭಟ್ ಚಿತ್ರದ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ರಾಧಕೃಷ್ಣ ರೆಡ್ಡಿ ಸರ್ ಸಿನಿಮಾದ ನಿರ್ದೇಶನ ಮಾಡಿದ್ದಾರೆ.'' - ಮಿಧುನ್ ಮುಕುಂದನ್, ಸಂಗೀತ ನಿರ್ದೇಶಕ

ಪುನೀತ್ ಮೆಚ್ಚಿದ ಹಾಡು
''ಸಿನಿಮಾದ 'ನೀನ್ಯಾರೋ..' ಹಾಡು ಪುನೀತ್ ಸರ್ ಗೆ ಬಹಳ ಇಷ್ಟ. ಇದೇ ಹಾಡನ್ನು ಮೊದಲು ಕಂಪೋಸ್ ಮಾಡಿದ್ದು. ಪುನೀತ್ ಸರ್ ಪೋನ್ ನಲ್ಲಿ ಈ ಹಾಡು ಇದೆ ಎಂದು ನಿರ್ದೇಶಕರು ಹೇಳಿದಾಗ ಖುಷಿ ಆಯ್ತು. ಉಳಿದಂತೆ, 'ಲೋಕ ಮಾಯಾ ಬಜಾರ್..' ಹಾಡಿನಲ್ಲಿ ಅವರೇ ಡ್ಯಾನ್ಸ್ ಮಾಡಿದ್ದಾರೆ. ಸಾಧು ಕೋಕಿಲ ಅವರ ಹಾಡು ಕೂಡ ಇಲ್ಲಿ ಇದೆ.'' - ಮಿಧುನ್ ಮುಕುಂದನ್, ಸಂಗೀತ ನಿರ್ದೇಶಕ

ಮುಂದಿನ ಸಿನಿಮಾಗಳು
''ರಾಜ್ ಬಿ ಶೆಟ್ಟಿ ಹಾಗೂ ರಿಷಭ್ ಶೆಟ್ಟಿ ಅವರ 'ಗರುಡ ಗಮನ ವೃಷಭ ವಾಹನ', ಸಂಗೀತ ಅರವಿಂದ್ ಶಾಸ್ತ್ರಿ ನಿರ್ದೇಶನದ, ಶರ್ಮಿಳಾ ಮಾಂಡ್ರೆ ನಿರ್ಮಾಣದ 'ವೈತರಣಿ' ಸುಹಾನ್ ಪ್ರಸಾದ್ ಅವರ ಹೊಸ ಸಿನಿಮಾ 'ರೂಪಾಂತರ', ಹಾಗೂ 'ಆಗಸ್ಟ್' ಮಿಧನ್ ಮುಂದಿನ ಸಿನಿಮಾಗಳಾಗಿವೆ. ಇನ್ನು ಕೆಲವು ಸಿನಿಮಾಗಳ ಮಾತುಕತೆ ಹಂತದಲ್ಲಿವೆ. ಇನ್ನು ಒಳ್ಳೆಯ ಸಿನಿಮಾಗಳು ಸಿನಿಮಾಗಳು ಬರುತ್ತದೆ ಎನ್ನುವ ನಂಬಿಕೆಯಲ್ಲಿ ಕೆಲಸ ಮಾಡುತ್ತಿದ್ದೇನೆ.'' - ಮಿಧುನ್ ಮುಕುಂದನ್, ಸಂಗೀತ ನಿರ್ದೇಶಕ


Click it and Unblock the Notifications











