ನಾಗರಹಾವೆ ಹಾವೊಳು ಹೂವೆ ಬಾಗಿಲ ಬಿಲದಲಿ...

ಕತೆ, ಕವನ, ಹರಟೆ, ಪತ್ತೇದಾರಿ ಕಾದಂಬರಿ, ಐತಿಹಾಸಿಕ ಕಥೆ, ಸಂಶೋಧನೆ, ವೈಚಾರಿಕ ಲೇಖನ... ಇತ್ಯಾದಿ ಸಾಹಿತ್ಯ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡಿರುವ ಮಂಗೇಶರಾಯರು ಶಿಶು ಸಾಹಿತ್ಯದಲ್ಲಿ ತಮ್ಮದೇ ಆದಂತಹ ವಿಶೇಷತೆಗಳಿಂದ ಜನಾನುರಾಗಿಯಾಗಿದ್ದರು. ಕನ್ನಡ ಪಾಠಗಳಿಗೆ ಪದ್ಯಗಳು ಬೇಕಾದ ಆ ಕಾಲದಲ್ಲಿ ಪ್ರಥಮವಾಗಿ ಪದ್ಯಗಳನ್ನು ಸಂಪಾದಿಸಿದರು.
ತಾನೊಬ್ಬ ಕವಿಯ ಶಿಷ್ಯನಷ್ಟೆ ಎಂಬ ವಿನಯ ಅವರದಾಗಿತ್ತು. ಹಾಗಾಗಿ ತಮ್ಮ ಕಾವ್ಯನಾಮವನ್ನು 'ಕವಿಶಿಷ್ಯ' ಎಂದು ಇಟ್ಟುಕೊಂಡಿದ್ದರು. 'ಹರಟೆಮಲ್ಲ', 'ರಾ.ಮ.ಪಂ' ಎಂಬ ಗುಪ್ತನಾಮಗಳಿಂದಲೂ ಸಾಹಿತ್ಯ ಕೃಷಿ ಮಾಡಿದ್ದಾರೆ.
"ನಾಗರಹಾವೆ ಹಾವೊಳು ಹೂವೆ" ಪಂಜೆ ಮಂಗೇಶರಾಯರದ ಜನಪ್ರಿಯ ಶಿಶುಗೀತೆ. ಆಂಗ್ಲರನ್ನು ಪ್ರತಿಮಾರೂಪದಿಂದ ಉದ್ದೇಶಿಸಿ ಬರೆದ ಗೀತೆ ಇದಾಗಿದೆ. ಇಂದಿನ ಮಕ್ಕಳಿಗೆ ಈ ರೀತಿಯ ಸಾಹಿತ್ಯ ಸಿಗುವುದು ಬಹಳ ಕಷ್ಟ. ಹಾಗೆಯೇ ಬಹಳ ನೇಮ, ನಿಷ್ಠೆಯಿಂದ ಆಚರಿಸುವ ಪಂಚಮಿಹಬ್ಬ, ಒಡಹುಟ್ಟಿದವರ ಹಬ್ಬ ಎಂದು ಕರೆಯುವ 'ನಾಗರ ಪಂಚಮಿ' (ಜುಲೈ 23) ನಿಮಿತ್ತ ಈ ಜನಪ್ರಿಯ ಗೀತೆಯ ಸಾಹಿತ್ಯವನ್ನು ಇಲ್ಲಿ ನೀಡುತ್ತಿದ್ದೇವೆ.
ಪಂಜೆಯವರು ಕನ್ನಡಕ್ಕೆ ಕೊಟ್ಟ ಸೇವೆ ಅನನ್ಯ. ಮನೆಮಾತು ಕೊಂಕಣಿ, ಊರ ಜನಬಳಕೆಯ ನುಡಿ ತುಳು, ಶಾಲೆಯಲ್ಲಿ ಕಲಿತದ್ದು ಕನ್ನಡ, ಉನ್ನತ ವ್ಯಾಸಂಗಗಳಲ್ಲಿ ಇಂಗ್ಲಿಷ್. ಹೀಗೆ ಹಲವಾರು ಭಾಷೆಗಳ ಪ್ರಭಾವ-ಪರಿಣಿತಿಗಳು ಅವರ ಸಾಹಿತ್ಯ ಸೃಷ್ಟಿಯಲ್ಲಿ ಪರಿಣಾಮವನ್ನು ಬೀರಿವೆ.
ಈ ಜನಪ್ರಿಯ ಶಿಶುಗೀತೆಯನ್ನು ಸಪ್ತಸಾಗರದಾಚೆಗೆ ಪರಿಚಯಿಸಿದ ಖ್ಯಾತಿ ಸುನಿತಾ ಮತ್ತು ಅನಿತಾ ಅನಂತಸ್ವಾಮಿ (ಚಿತ್ರದಲ್ಲಿರುವವರು) ಅವರದು. ಅಮೆರಿಕಾದಲ್ಲಿರುವ ಮಕ್ಕಳಿಗೆ ಸುಗಮ ಸಂಗೀತ ಪಾಠಗಳನ್ನು ಹೇಳಿಕೊಡುತ್ತಾ ಕನ್ನಡದ ದೀಪ ಬೆಳಗುತ್ತಿದ್ದಾರೆ. ನಾಗರಹಾವೆ ಹಾಡಿಗೆ ಸಂಗೀತ ಸಂಯೋಜಿಸಿದ ಇಂದಿನ ಮಕ್ಕಳಿಗೂ ಪರಿಚಯಿಸಿದ್ದಾರೆ.
ನಾಗರಹಾವೇ ಹಾವೊಳು ಹೂವೇ
ಬಾಗಿಲ ಬಿಲದಲಿ ನಿನ್ನಯ ಠಾವೆ
ಕೈಯನು ಮುಗಿವೆ ಹಾಲನೀವೆ
ಬಾ ಬಾ ಬಾ
ಹಳದಿಯ ಹೆಡೆಯನು ಬಿಚ್ಚೋ ಬೇಗ
ಒಳಗಿನಿಂದಲೆ ಕೂಗೋ ರಾಗ
ಕೊಳಲನೂದುವೆ ಆಲಿಸು ರಾಗ
ನೀ ನೀ ನೀ ನೀ
ಎಲೆ ನಾಗಣ್ಣ ಹೇಳೆಲೋ ನಿನ್ನ
ತಲೆಯಲ್ಲಿರುವ ನಿಜವನ್ನ
ಬಡುಬಗ್ಗರಿಗೆ ಕೊಪ್ಪರಿಗೆಯ ಚಿನ್ನ
ತಾ ತಾ ತಾ ತಾ ತಾ
ಬರೀ ಮೈ ಸಣ್ಣಗೆ ಮೊಗದಲಿ ಬಿಸಿ ಹಗೆ
ಎರಡಲೆ ನಾಲಗೆ ಇದ್ದರೂ ಸುಮ್ಮಗೆ
ಎರಗುವೆ ನಿನಗೆ ಈಗಲೆ ಹೊರಗೆ
ಪೋ ಪೋ ಪೋ ಪೋ ಪೋ (ಒನ್ ಇಂಡಿಯಾ ಕನ್ನಡ)


Click it and Unblock the Notifications











