Don't Miss!
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- News ಮಂಡ್ಯದ ‘ಹಲವು ಸುಮಲತಾ’ ತಂತ್ರ ಬೆಂಗಳೂರು ಗ್ರಾಮಾಂತದಲ್ಲೂ ಬಂತಾ? ಮತ್ತೊಬ್ಬ ಡಾ ಸಿಎನ್ ಮಂಜುನಾಥ್ ಕಣಕ್ಕೆ!
- Sports IPL 2024: ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ರೋಚಕ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಣ್ಣಾವ್ರ ಜೊತೆ ಒಂದು ಬೆಳಗ್ಗೆ: ಹೃದಯಶಿವ
ಗುರುಕಿರಣ್ ರನ್ನು ನಾವೆಲ್ಲಾ ಸಾಮಾನ್ಯವಾಗಿ ಗುರೂಜಿ ಅಂತೀವಿ. ಇಂಥ ಗುರೂಜಿ ಒಂದು ಬೆಳಗ್ಗೆ ತಮ್ಮ ಜೊತೆ ನನ್ನನ್ನೂ ಆಕಾಶ್ ಆಡಿಯೋಗೆ ಕರೆದುಕೊಂಡು ಹೋಗಿದ್ದರು. ಆಗಿನ್ನೂ ಒಂದೇ ಒಂದು ಹಾಡು ಸೈತ ಸಿನಿಮಾಗೆ ಬರೆದಿರಲಿಲ್ಲ ನಾನು. ಚಿತ್ರಗೀತೆ ಬರೆಯುವುದರ ಕುರಿತು ಆಗಷ್ಟೇ ಕಲಿಕೆಯ ಹಂತದಲ್ಲಿದ್ದ ನನಗೆ ರೆಕಾರ್ಡಿಂಗ್ ಸಂದರ್ಭದಲ್ಲಿ ಸ್ಟುಡಿಯೋ ಒಳಗೆ ಜರುಗುವ ವಿದ್ಯಮಾನಗಳ ಬಗ್ಗೆ ತೀರಾ ಕುತೂಹಲವಿತ್ತು.
ಗಾಯಕ/ಗಾಯಕಿ ಬಂದು ಸಾಹಿತಿಯ ಮುಖೇನ ಸಾಹಿತ್ಯವನ್ನು ತಮ್ಮ ಡೈರಿಯಂಥ ಪುಸ್ತಕದಲ್ಲಿ ಬರೆದುಕೊಳ್ಳುವುದು, ನಂತರ ಟ್ರ್ಯಾಕ್ ಕೇಳುವುದು, ಟ್ಯೂನಿಗನುಗುಣವಾಗಿ ತಾವು ಬರೆದುಕೊಂಡ ಸಾಹಿತ್ಯದ ಸಾಲುಗಳ ತಲೆಯ ಮೇಲೆ ನೊಟೇಷನ್ ಅನ್ನೋದನ್ನ ತಮ್ಮದೇ ಗಂಧರ್ವ ಭಾಷೆಯಲ್ಲಿ ಪುಟ್ಟದಾಗಿ ಬರೆದುಕೊಳ್ಳುವುದು, ಮತ್ತೊಂದು ಸಲ ಕೇಳುವುದು, ಅಗತ್ಯಬಿದ್ದರೆ ಯಾವ ರಾಗದಲ್ಲಿ ಕಂಪೋಸ್ ಮಾಡಿದ್ದಾರೆ ಅನ್ನುವಂಥದ್ದನ್ನ ಮ್ಯೂಸಿಕ್ ಡೈರೆಕ್ಟರ್ ಬಳಿ ಕೇಳಿಕೊಳ್ಳುವುದು.
ಆನಂತರ ಒಳಕ್ಕೆ ಹೋಗಿ ಹೆಡ್ಗೆ ಹೆಡ್ ಫೋನ್ ಹಾಕಿಕೊಳ್ಳುವುದು, ಅದರ ಸೌಂಡ್ ವಾಲ್ಯೂಮ್ ಪರೀಕ್ಷಿಸಿಕೊಳ್ಳುವುದು, ತದನಂತರ ತಮ್ಮ ಬಾಯಿಗೂ ಮೈಕಿಗೂ ನಡುವಿನ ಅಂತರ ಎಷ್ಟಿರಬೇಕು ಅನ್ನೋದನ್ನ ಮ್ಯೂಸಿಕ್ ಡೈರೆಕ್ಟರ್ ಹಾಗೂ ಸೌಂಡ್ ಎಂಜಿನಿಯರ್ ಜೊತೆ ಚರ್ಚಿಸಿ ತಾವು ಹಾಡುವಾಗ ನಿಂತುಕೊಳ್ಳಬೇಕಾದ ಪಕ್ಕಾ ಪೊಸಿಸನ್ ನೋಡಿಕೊಳ್ಳುವುದು, ಒಂದೆರಡು ಮಾನಿಟರು ತೆಗೆದುಕೊಳ್ಳುವುದು, ಕಡೆಗೆ ಟೇಕ್.
ಈ 'ಟೇಕ್' ಅನ್ನೋದಿದೆಯಲ್ಲಾ ಆಗ ಸಾಹಿತಿಯ ಎರಡೂ ಕಿವಿಗಳು ಓಪನ್ನಾಗಿದ್ದು ಕಾಗುಣಿತ ಅಥವಾ ಉಚ್ಚಾರಣಾ ದೋಷಗಳೂ ಸಂಭವಿಸಿದರೆ ಸರಿಮಾಡುವುದು ಮುಖ್ಯವಾಗುತ್ತದೆ. ಏಕೆಂದರೆ ಗಾಯಕ/ಗಾಯಕಿ ಶ್ರುತಿ, ತಾಳ, ಎಮೋಷನ್ನುಗಳ ಕಡೆ ಚಿತ್ತವನ್ನು ಕೇಂದ್ರೀಕರಿಸಿ ಹಾಡುತ್ತಿರಬೇಕಾದರೆ ಒಮ್ಮೊಮ್ಮೆ ಕಣ್ತಪ್ಪಿನಿಂದ ಇಂಥ ಅತಿಗಂಭೀರ ಅಪಾಯಗಳು ಸಂಭವಿಸುವುದುಂಟು. ಪರಭಾಷಾ ಗಾಯಕ/ಗಾಯಕಿಯರ ಕೈಗೆ ಕನ್ನಡದ ಮೈಕು ಕೊಟ್ಟಾಗ ಈ ಕುರಿತು ಅಪಾಯ ಡಬ್ಬಲ್ಲು. ಹೀಗೆ, ಮೇಲಿನಿಂದ ಹಂತಹಂತವಾಗಿ ಸಾಧ್ಯವಾದಷ್ಟು ಹೇಳಿಕೊಂಡು ಬಂದೆನಲ್ಲಾ, ಇಂಥವುಗಳ ಬಗ್ಗೆನೇ ಆ ಕಾಲಕ್ಕೆ ಕುತೂಹಲವಿದ್ದದ್ದು ನನಗೆ.
ಡಾ.ರಾಜ್ ಕುಮಾರ್ ಬಂದರು. ಹೌದು, ಬಂದವರು ನಿಜಕ್ಕೂ ಅಣ್ಣಾವ್ರೇ! ತಮ್ಮದೇ ಬ್ಯಾನರಿನಡಿ ಜೀ ಕನ್ನಡಕ್ಕಾಗಿ ನಿರ್ಮಾಣವಾಗುತ್ತಿದ್ದ 'ಸೃಷ್ಟಿ' ಧಾರಾವಾಹಿಯ ಟೈಟಲ್ ಸಾಂಗ್ ಹಾಡಲು ಸ್ಟುಡಿಯೋಗೆ ಬಂದಿದ್ದರು. ತಮ್ಮ ಎಂದಿನ ಬಿಳಿಪಂಚೆ, ಬಿಳಿಯಂಗಿ, ನಿಷ್ಕಲ್ಮಶ ನಗು, ಬದುಕಿನ ಸಾಕ್ಷಾತ್ಕಾರದ ಸಾಕ್ಷಿಯೆಂಬಂತೆ ಹೊಳೆಯುತ್ತಿದ್ದ ಕಣ್ಣುಗಳು ನನ್ನನ್ನು ಥಟ್ಟನೆ ಸೆಳೆದುದರಲ್ಲಿ ಅನುಮಾನವಿಲ್ಲ. ಅವರಿಗೆ ತೀರಾ ಸಮೀಪದಲ್ಲಿ ನಿಂತಿದ್ದ ಆ ಕ್ಷಣ, ಮಿಂಚು ಅನ್ನುತ್ತಾರಲ್ಲ ಅಂಥಾದೊಂದು ನನ್ನ ಮೈಮನಗಳಲ್ಲಿ ಸಂಚಲಿಸಿತ್ತು.
ಹಿರಣ್ಯಕಶಿಪುವಿನ ಕಣ್ಣುಗಳಲ್ಲಿ ಉಕ್ಕಿ ಹರಿಯುತ್ತಿದ್ದ ರೌದ್ರರಸವಾಗಲೀ, ಬಬ್ರುವಾಹನನ ಖಡಕ್ ಡೈಲಾಗುಗಳಲ್ಲಿ ಪುಟಿದೇಳುತ್ತಿದ್ದ ವೀರರಸವಾಗಲೀ, ಕವಿರತ್ನನಾಗುವ ಮೊದಲು ಕುರಿ ಕಾಯುತ್ತಿದ್ದವನು ಚಿಮ್ಮಿಸುತ್ತಿದ್ದ ಹಾಸ್ಯರಸವಾಗಲೀ, ಪದ್ಮಾವತಿ ಪ್ರಿಯ ಶ್ರೀನಿವಾಸನ ಮುಖಾರವಿಂದದಲ್ಲಿ ತುಳುಕುತ್ತಿದ್ದ ಶಾಂತರಸವಾಗಲೀ- ಹೀಗೆ ಒಂಭತ್ತಕ್ಕೆ ಒಂಭತ್ತೂ ರಸಗಳನ್ನು ತಮ್ಮ ಸಹಜಾಭಿನಯದ ಮೂಸೆಯಿಂದ ಹೆಕ್ಕಿ ತೆಗೆದು ಚಿತ್ರರಸಿಕರಿಗೆ ಉಣಬಡಿಸುತ್ತಿದ್ದುದರ ಜೊತೆಗೆ ತಮ್ಮ ದೈವದತ್ತ ಕಂಠಸಿರಿಯಿಂದ ಹಾಡುಗಳಿಗೆ ನಿಜವಾದ ಜೀವ ಕೊಡುತ್ತಿದ್ದಂತಹ ಡಾ.ರಾಜ್ ಕುಮಾರ್ ನಿಜಕ್ಕೂ ಇವರೇನಾ?