ಆಸ್ಕರ್ ವಿಜೇತ ಸಂಗೀತ ನಿರ್ದೇಶಕನಿಗೆ ನಡುಕ ತಂದ 'ಚಂದ್ರಮುಖಿ': ಗುರುಕಿರಣ್ ಮೊರೆ ಹೋಗಿದ್ದೇಕೆ ಕೀರವಾಣಿ?
'ನಾಟು ನಾಟು' ಗೀತೆಗಾಗಿ ಎಂ. ಎಂ ಕೀರವಾಣಿ ಆಸ್ಕರ್ ಪ್ರಶಸ್ತಿ ಗೆದ್ದಿದ್ದು ಗೊತ್ತೇಯಿದೆ. ಕಳೆದ ವರ್ಷ ಈ ಹಾಡು ಸೃಷ್ಟಿಸಿದ ಸಂಚಲನ ಅಷ್ಟಿಷ್ಟಲ್ಲ. ಆಸ್ಕರ್ ವೇದಿಕೆಯಲ್ಲೂ ಈ ಹಾಡು ಮಾರ್ದನಿಸಿತ್ತು. ಇಂತಾದೊಂದು ಸೂಪರ್ ಹಿಟ್ ಹಾಡು ಕೊಟ್ಟ ಕೀರವಾಣಿ ಈಗ ಕನ್ನಡ ಸಂಗೀತ ನಿರ್ದೇಶಕ ಗುರುಕಿರಣ್ ಅವರನ್ನು ನೆನೆದಿದ್ದಾರೆ. ಅದಕ್ಕೆ ಕಾರಣವೂ ಇದೆ.
ಆಸ್ಕರ್ ವಿಜೇತ ಎಂ. ಎಂ ಕೀರವಾಣಿ ಸಾಲು ಸಾಲು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಬಹುನಿರೀಕ್ಷಿತ 'ಚಂದ್ರಮುಖಿ'-2 ಚಿತ್ರಕ್ಕೂ ಕೀರವಾಣಿ ಟ್ಯೂನ್ ಹಾಕುತ್ತಿದ್ದಾರೆ. ಹಾಡುಗಳಿಗೆ ಮಾತ್ರವಲ್ಲ ಚಿತ್ರಕ್ಕೆ ಹಿನ್ನೆಲೆ ಸಂಗೀತ ಕೂಡ ಒದಗಿಸುತ್ತಿದ್ದಾರೆ. ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. 'ಆಪ್ತಮಿತ್ರ' ಹಾಗೂ 'ಆಪ್ತರಕ್ಷಕ' ಸಿನಿಮಾ ಕೊಟ್ಟ ಪಿ. ವಾಸು ಈ ಚಿತ್ರಕ್ಕೂ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಬಾರಿ ರಾಘವ ಲಾರೆನ್ಸ್ ಹಾಗೂ ಕಂಗನಾ ರಾಣಾವತ್ ಲೀಡ್ ರೋಲ್ಗಳಲ್ಲಿ ಮಿಂಚಿದ್ದಾರೆ.

ಲೈಕಾ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ 'ಚಂದ್ರಮುಖಿ'-2 ಸಿನಿಮಾ ಕೂಡ ನಿರ್ಮಾಣವಾಗುತ್ತಿದೆ. ರಾಧಿಕಾ ಶರತ್ಕುಮಾರ್, ವಡಿವೇಲು, ಲಕ್ಷ್ಮಿ ಮೆನನ್, ರಾವ್ ರಮೇಶ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಇದೊಂದು ಹಾರರ್ ಕಾಮಿಡಿ ಸಿನಿಮಾ ಆಗಿದ್ದು 'ಆಪ್ತಮಿತ್ರ' ಹಾಗೂ 'ಚಂದ್ರಮುಖಿ' ಸಿನಿಮಾಗಳ ಛಾಯೆ ಈ ಸಿನಿಮಾದಲ್ಲೂ ಇರಲಿದೆ. ಸದ್ಯ ಚಿತ್ರದ ಫಸ್ಟ್ ರಿವ್ಯೂ ಬಂದಿದೆ. ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿರುವ ಎಂ. ಎಂ ಕೀರವಾಣಿ ಚಿತ್ರ ನೋಡಿ ಬೆರಗಾಗಿದ್ಧಾರೆ. ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.
"ನಾನು 'ಚಂದ್ರಮುಖಿ-2' ಸಿನಿಮಾ ವೀಕ್ಷಿಸಿದೆ. ಚಿತ್ರದ ಪಾತ್ರಗಳಿಗೆ ಜೀವಭಯದಿಂದ ನಿದ್ರೆ ಮಾಡುವುದಿಲ್ಲ. ನನ್ನ ಪರಿಸ್ಥಿತಿ ಕೂಡ ಹಾಗೇ ಇತ್ತು. ಅದ್ಭುತ ಸನ್ನಿವೇಶಗಳಿಗೆ ಸಂಗೀತದಿಂದ ಜೀವ ತುಂಬಲು 2 ತಿಂಗಳು ನಿದ್ದೆ ಇಲ್ಲದೇ ಕೆಲಸ ಮಾಡಿದೆ. ಗುರುಕಿರಣ್ ಹಾಗೂ ವಿದ್ಯಾಸಾಗರ್ ನನಗೆ ಗೆಲುವು ಸಿಗಲಿ ಎಂದು ಹಾರೈಸಿ" ಎಂದು ಕೀರವಾಣಿ ಟ್ವೀಟ್ ಮಾಡಿದ್ದಾರೆ. ಆ ಟ್ವೀಟ್ ವೈರಲ್ ಆಗ್ತಿದೆ.

ಮಲಯಾಳಂನ 'ಮಣಿ ಚಿತ್ರತ್ತಾಳ್' ಚಿತ್ರವನ್ನು 2004ರಲ್ಲಿ ಪಿ. ವಾಸು 'ಆಪ್ತಮಿತ್ರ' ಆಗಿ ಕನ್ನಡಕ್ಕೆ ರೀಮೆಕ್ ಮಾಡಿದ್ದರು. ಚಿತ್ರದಲ್ಲಿ ಸಾಹಸಸಿಂಹ ವಿಷ್ಣುವರ್ಧನ್, ಸೌಂದರ್ಯ, ಪ್ರೇಮಾ, ರಮೇಶ್ ಅರವಿಂದ್ ನಟಿಸಿದ್ದರು. ಚಿತ್ರಕ್ಕೆ ಗುರುಕಿರಣ್ ಸಂಗೀತ ಸಂಯೋಜನೆ ಮಾಡಿದ್ದರು. ಬಳಿಕ ಇದೇ ಚಿತ್ರವನ್ನು ಒಂದಷ್ಟು ಬದಲಾವಣೆ ಜೊತೆಗೆ ತಮಿಳಿಗೆ ರೀಮೆಕ್ ಮಾಡಲಾಗಿತ್ತು. ಪಿ. ವಾಸು ನಿರ್ದೇಶನದ ಆ ಚಿತ್ರದಲ್ಲಿ ರಜನಿಕಾಂತ್, ಜ್ಯೋತಿಕಾ, ನಯನತಾರಾ ನಟಿಸಿ ಗೆದ್ದಿದ್ದರು. ತಮಿಳಿನಲ್ಲಿ ವಿದ್ಯಾಸಾಗರ್ ಮ್ಯೂಸಿಕ್ ಮಾಡಿದ್ದರು.
'ಆಪ್ತಮಿತ್ರ' ಚಿತ್ರಕ್ಕೆ ಗುರುಕಿರಣ್ ನೀಡಿದ ಸಂಗೀತಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಅದರಲ್ಲೂ 'ರಾ ರಾ' ಗೀತೆ ಮತ್ತು ಹಿನ್ನೆಲೆ ಸಂಗೀತಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ತಮಿಳಿನಲ್ಲಿ ವಿದ್ಯಾಸಾಗರ್ ಕೂಡ ಉತ್ತಮ ಪ್ರಯತ್ನ ಮಾಡಿದ್ದರು. ಆದರೆ ಅಲ್ಲಿ 'ಆಪ್ತಮಿತ್ರ' ಸಂಗೀತದ ಛಾಯೆ ಎದ್ದು ಕಾಣುತ್ತಿತ್ತು. ಇದೀಗ 'ಚಂದ್ರಮುಖಿ-2' ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿರುವ ಎಂ. ಎಂ ಕೀರವಾಣಿ ಶುಭ ಹಾರೈಸುವಂತೆ ಇವರಿಬ್ಬರನ್ನು ಕೋರಿದ್ದಾರೆ. ಅಂದರೆ ನಿಮಗೆ ಸಿಕ್ಕ ಗೆಲುವು ನನಗೂ ಸಿಗಬೇಕು ಎಂದಿದ್ದಾರೆ.
ಗಣೇಶ ಹಬ್ಬಕ್ಕೆ 'ಚಂದ್ರಮುಖಿ-2' ಸಿನಿಮಾ ತೆರೆಗೆ ಬರುತ್ತಿದೆ. ಚಿತ್ರದ ಡಿಜಿಟಲ್ ರೈಟ್ಸ್ ನೆಟ್ಫ್ಲಿಕ್ಸ್ ಪಾಲಾಗಿದೆ. ಕಳೆದ ವರ್ಷ ಮೈಸೂರಿನಲ್ಲಿ ಸಿನಿಮಾ ಚಿತ್ರೀಕರಣ ಆರಂಭವಾಗಿತ್ತು. ಇದೀಗ ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೀತಿದೆ. ರಾಜಮೌಳಿ ಹಾಗೂ ಮಹೇಶ್ ಬಾಬು ಕಾಂಬಿನೇಷನ್ ಚಿತ್ರಕ್ಕೂ ಕೀರವಾಣಿ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ. ಮೌಳಿ ನಿರ್ದೇಶನದ ಬಹುತೇಕ ಎಲ್ಲಾ ಸಿನಿಮಾಗಳಿಗೆ ಇವರೇ ಟ್ಯೂನ್ ಹಾಕಿದ್ದಾರೆ. ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ 'RRR' ಚಿತ್ರದ 'ನಾಟು ನಾಟು' ಗೀತೆಗಾಗಿ ಆಸ್ಕರ್ ಪ್ರಶಸ್ತಿ ಕೂಡ ಗೆದ್ದಿದ್ದಾರೆ.


Click it and Unblock the Notifications











