PB Srinivas Birthday: ಅಣ್ಣಾವ್ರ ಶಾರೀರ ಪಿಬಿ ಶ್ರೀನಿವಾಸ್.. ವರನಟನಿಗೆ ಹಾಡುವ ಅವಕಾಶ ಕಳೆದುಕೊಳ್ಳಲು ಕಾರಣ ಇಳಯರಾಜ!
"ನಾನು ಶರೀರ, ಅವರು ಶಾರೀರ.." ಬಹುಭಾಷಾ ಗಾಯಕ ಪಿ ಬಿ ಶ್ರೀನಿವಾಸ್ ಬಗ್ಗೆ ಅಣ್ಣಾವ್ರು ಹೇಳುತ್ತಿದ್ದ ಮಾತಿದು. ಇದು ಅಕ್ಷರಶ: ನಿಜ ಅಲ್ಲವೇ ಅಂತ ಸಂಗೀತ ಜ್ಞಾನ ಇಲ್ಲದವರೆಗೂ ಅನಿಸೋದು ಸಹಜ. ಪಿ ಬಿ ಶ್ರೀನಿವಾಸ್ ಹಾಗೂ ಅಣ್ಣಾವ್ರ ಕಾಂಬಿನೇಷನ್ನಲ್ಲಿ ಬಂದು ಹಾಡುಗಳು ಅಷ್ಟು ಹೋಲಿಕೆಯಾಗುತ್ತಿತ್ತು.
ಪಿ ಬಿ ಶ್ರೀನಿವಾಸ್ ಕಂಠ ಸಿರಿಗೆ ಮರುಳಾಗದವರು ಯಾರಿಲ್ಲ ಹೇಳಿ. ಅವರು ಇಂದು ಭೌತಿಕವಾಗಿ ಇಲ್ಲದೇ ಇರಬಹುದು. ಆದರೆ, ಅವರ ಹಾಡುಗಳನ್ನು ಮರೆಯೋಕೆ ಸಾಧ್ಯವೇ. ಕಂಚಿನ ಕಂಠದ ಪಿ ಬಿ ಶ್ರೀನಿವಾಸ್ ಹಾಡುಗಳು ಇಂದಿಗೂ ಮೋಡಿ ಮಾಡುತ್ತಿವೆ. 22ನೇ ವಯಸ್ಸಿನಲ್ಲೇ ಗಾಯನ ಕ್ಷೇತ್ರಕ್ಕೆ ಕಾಲಿಟ್ಟ ಪಿಬಿ ಶ್ರೀನಿವಾಸ್ ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಪದಗಳಲ್ಲಿ ವರ್ಣಿಸಲು ಅಸಾಧ್ಯ.

ಪಿ ಬಿ ಶ್ರೀನಿವಾಸ್ ಬದುಕಿದ್ದರೆ ಇಂದು (ಸೆಪ್ಟೆಂಬರ್ 22) 93ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. 1930ರ ಸೆಪ್ಟೆಂಬರ್ 22ರಂದು ಆಂಧಪ್ರದೇಶದ ಗೋದಾವರಿ ಜಿಲ್ಲೆಯಲ್ಲಿ ಜನಿಸಿದ್ದ ಪಿಬಿಎಸ್ ಅವರ ಜನ್ಮದಿನ. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲಿಯೇ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಯಾವುದೇ ಭಾಷೆಯಲ್ಲಿ ಹಾಡಿದ್ದರೂ ಕನ್ನಡ ಹಾಡುಗಳ ಮೂಲಕ ಜನಪ್ರಿಯರಾಗಿದ್ದೇ ಹೆಚ್ಚು.
ಅದರಲ್ಲೂ ಡಾ.ರಾಜ್ಕುಮಾರ್ ಹಾಗೂ ಪಿ ಬಿ ಶ್ರೀನಿವಾಸ್ ಕಾಂಬಿನೇಷನ್ ಅಂದರೆ, ಆ ಸಿನಿಮಾದ ಹಾಡುಗಳು ಗೆದ್ದಂತೆಯೇ.. ರಾಜ್ಕುಮಾರ್ಗೆ ಪಿ ಬಿ ಶ್ರೀನಿವಾಸ್ ಧ್ವನಿ ಹೊಂದಿಕೆಯಾಗುತ್ತಿತ್ತೋ.. ಇಲ್ಲ ಪಿಬಿಎಸ್ ಕಂಠಸಿರಿಗೆ ಅಣ್ಣಾವ್ರು ಹೊಂದಿಕೊಳ್ಳುತ್ತಿದ್ದರೋ ಅನ್ನುವಷ್ಟು ಅನುಮಾನ ಮೂಡುವಂತಿರುತ್ತಿತ್ತು. ಸುಮಾರು 20 ವರ್ಷಗಳ ಕಾಲ ಅಣ್ಣಾವ ಸಿನಿಮಾಗಳಿಗೆ ಹಾಡಿದ್ದು ಇದೇ ಪಿಬಿ ಶ್ರೀನಿವಾಸ್.
ಡಾ.ರಾಜ್ಕುಮಾರ್ ಧ್ವನಿಗೆ ಕನ್ನಡಿಗರಿಂದ ಬೇಡಿಕೆ ಹೆಚ್ಚಾಗುವವರೆಗೂ ಪಿ ಬಿ ಶ್ರೀನಿವಾಸ್ ಮೇರು ನಟ ಡಾ.ರಾಜ್ಕುಮಾರ್ಗೆ ಹಾಡುತ್ತಲೇ ಇದ್ದರು. ಆದರೆ, ಅಣ್ಣಾವ್ರು ಹಾಡಿದ ಒಂದೇ ಒಂದು ಹಾಡು ಪಿಬಿಎಸ್ ವೃತ್ತಿ ಬದುಕಿಗೆ ಹಿನ್ನೆಡೆಯಾಗಿಬಿಡ್ತು. ಹಾಗಂತ ಇಲ್ಲಿ ಯಾರ ತಪ್ಪೂ ಇರಲಿಲ್ಲ. ಯಾರ ಸ್ವಾರ್ಥವೂ ಇರಲಿಲ್ಲ. ಸಂದರ್ಭ ಹಾಗೇ ಸೃಷ್ಟಿಯಾಗಿತ್ತು. ಅಣ್ಣಾವ್ರ ಸಿನಿಮಾಗಳಿಗೆ ಪಿಬಿಎಸ್ ಹಾಡೋದು ಕಡಿಮೆ ಆಯ್ತು. ಅಷ್ಟಕ್ಕೂ ಯಾಕೆ ಹೀಗಾಯ್ತು ಅಂತ ಹುಡುಕುತ್ತಾ ಹೋದರೆ, ಇಳಯರಾಜ ಎದುರಾಗುತ್ತಾರೆ.

ಜಿಕೆ ವೆಂಕಟೇಶ್ ಅವರ ಬಳಿ ಇಳಯರಾಜ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಕನ್ನಡ ಸಿನಿಮಾಗಳಲ್ಲಿ ಹಾಡುಗಳ ಮಹತ್ವ ಬಗ್ಗೆ ಚೆನ್ನಾಗಿಯೇ ಅರಿವಿತ್ತು. ಅಣ್ಣಾವ್ರ 'ಸಂಪತ್ತಿಗೆ ಸವಾಲ್' ಸಿನಿಮಾಗೆ ಜಿ ಕೆ ವೆಂಕಟೇಶ್ ಟ್ಯೂನ್ ಹಾಕುತ್ತಿದ್ದರು. ಈ ವೇಳೆ ಡಾ.ರಾಜ್ಕುಮಾರ್ಗಾಗಿ ಆಗಿನ ಕಾಲದ ಮಾಸ್ ಸಾಂಗ್ ಅನ್ನು ಕಂಪೋಸ್ ಮಾಡಲಾಗಿತ್ತು. ಅದುವೇ "ಯಾರೇ ಕೂಗಾಡಲಿ.. ಊರೇ ಹೋರಾಡಲಿ..".
ಈ ಹಾಡು ಮಾಸ್ ಫೀಲ್ನಲ್ಲಿ ಇದ್ದಿದ್ದರಿಂದ ಜಿ ಕೆ ವೆಂಕಟೇಶ್ ಗಾಯಕರೊಬ್ಬರ ಹೆಸರನ್ನು ಸೂಚಿಸಿದ್ದರು. ಆದರೆ, ಆ ಧ್ವನಿ ಅಣ್ಣಾವ್ರ ಕಾಣಿಸಿಕೊಳ್ಳುವ ಈ ಹಾಡಿಗೆ ಸರಿಹೊಂದುವುದಿಲ್ಲ ಎಂದು ಎನಿಸಿತ್ತು. ಇದನ್ನು ಇಳಯರಾಜ ತಮ್ಮ ಗುರುಗಳಾದ ಜಿ ಕೆ ವೆಂಕಟೇಶ್ಗೆ ಹೇಳಿದ್ದರು. ಬೇರೆ ಬೇರೆ ಭಾಷೆಯ ಗಾಯಕರನ್ನು ನೆನೆಸಿಕೊಂಡರೂ ಸೂಟ್ ಆಗುತ್ತಾರೆ ಎಂದು ಅನಿಸಿರಲಿಲ್ಲ. ಹೀಗಾಗಿ ತಲೆಕೆಡಿಸಿಕೊಂಡು ಕೂತಿದ್ದಾಗ, ಜಿ ಜೆ ವೆಂಕಟೇಶ್ ಅವರೇ ಅಣ್ಣಾವ್ರ ಹೆಸರನ್ನು ಸೂಚಿಸಿದ್ದರು.
ಹೀಗೆ ಇಳಯರಾಜ ಒತ್ತಾಯದ ಮೇರೆಗೆ ಡಾ.ರಾಜ್ಕುಮಾರ್ "ಯಾರೇ ಕೂಗಾಡಲಿ.. ಊರೇ ಹೋರಾಡಲಿ" ಎಂದು ಹಾಡಿದ್ದರು. ಇಲ್ಲಿಂದ ಅಣ್ಣಾವ್ರ ಧ್ವನಿಗೆ ಅಭಿಮಾನಿಗಳು ಥ್ರಿಲ್ ಆಗಿಬಿಟ್ಟರು. ಇನ್ಮುಂದೆ ಅಣ್ಣಾವರೇ ಹಾಡುವಂತೆ ಅಭಿಮಾನಿಗಳು ಹಾಗೂ ಸಿನಿಮಾ ಮಂದಿಯ ಒತ್ತಡ ಹೆಚ್ಚಾಯ್ತು. ಹೀಗಾಗಿ ಪಿ ಬಿ ಶ್ರೀನಿವಾಸ್ ಅವರಿಗೆ ಅಣ್ಣಾವ್ರ ಸಿನಿಮಾಗಳಲ್ಲಿ ಹಾಡುವ ಅವಕಾಶಗಳು ಸಹಜವಾಗಿಯೇ ಕಡಿಮೆಯಾಗ ತೊಡಗಿತ್ತು.
ಆ ಸಂದರ್ಭದಲ್ಲಿ ಅಣ್ಣಾವ್ರು ತಾವು ಹಾಡುವುದಿಲ್ಲ. ಇನ್ನೊಬ್ಬರ ಕೆಲಸವನ್ನು ಕಿತ್ತುಕೊಂಡಂತೆ ಆಗುತ್ತೆ ಎಂದು ಹೇಳಿದ್ದರೂ, ಯಾರೂ ಹೇಳುವಂತೆ ಇರಲಿಲ್ಲ. ಹೀಗೆ ಕ್ರಮೇಣವಾಗಿ ಅಣ್ಣಾವ್ರ ಸಿನಿಮಾಗಳಿಂದ ಪಿ ಬಿ ಶ್ರೀನಿವಾಸ್ ದೂರ ಉಳಿಯಬೇಕಾಯ್ತು. ಹೀಗಾಗಿ ಬೇರೆ ನಟರಿಗೂ ಹಾಡಲು ಆರಂಭಿಸಿದ್ದರು. ಬೇರೆ ಭಾಷೆಗಳಲ್ಲಿ ಬ್ಯುಸಿಯಾದರು. ಆದರೂ, ಪಿ ಬಿ ಶ್ರೀನಿವಾಸ್ ಅವರಿಗೆ ಅಣ್ಣಾವ್ರಿಗೆ ಹಾಡಬೇಕು ಅನ್ನುವ ಆಸೆ ಬೆಟ್ಟದಷ್ಟಿತ್ತು. ಆದರೆ, ಸಂದರ್ಭ ಇವರನ್ನು ತಡೆದಿಟ್ಟಿತ್ತು.


Click it and Unblock the Notifications











