'ಪೂಜಿಸಲೆಂದೆ ಹೂಗಳ ತಂದೆ' ಹಾಡಿಗೆ ತಲೆಬಾಗಿದ ಪ್ರಧಾನಿ: ಮೋದಿ ಮೆಚ್ಚಿದ ಗಾಯಕಿ 'ಶಿವಶ್ರೀ' ಬಗ್ಗೆ ಮಾಹಿತಿ
ಅಯೋಧ್ಯೆ ರಾಮಮಂದಿರದ 'ಪ್ರಾಣ ಪ್ರತಿಷ್ಠಾ' ಸಮಾರಂಭಕ್ಕೆ ಕೇವಲ ಒಂದು ವಾರ ಬಾಕಿಯಿದ್ದು, ದೇಶವೇ ಈ ಸಂಭ್ರಮಕ್ಕಾಗಿ ಕಾತರದಿಂದ ಕಾಯುತ್ತಿದೆ. ಭಗವಾನ್ ರಾಮ ಮತ್ತು ರಾಮ ಭಜನೆಗಳ ಕಥೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದೇ ವೇಳೆ ಭಕ್ತರು ತಮ್ಮ ತಮ್ಮ ಮಾತೃಭಾಷೆಯಲ್ಲಿ ವಿಭಿನ್ನ ಪ್ರಕಾರದಲ್ಲಿ ರಾಮ ಭಜನೆಗಳನ್ನು ಹಾಡುತ್ತಿದ್ದಾರೆ.
ಈ ಹಾಡುಗಳನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಟ್ವಿಟ್ಟರ್ ಹ್ಯಾಂಡಲ್ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಸುಮಧುರ ಮತ್ತು ಭಕ್ತಿಯ ಕಾರಣಕ್ಕೆ ಅವರೆಲ್ಲರನ್ನು ಹೊಗಳಿದ್ದಾರೆ. ಇದೇ ರೀತಿ ಕನ್ನಡದ ಫೇಮಲ್ "ಪೂಜಿಸಲೆಂದೆ ಹೂಗಳ ತಂದೆ..." ಹಾಡನನು ಪ್ರಧಾನಿ ಮೋದಿ ಶೇರ್ ಮಾಡಿದ್ದಾರೆ. ಇದನ್ನು ನರ್ತಕಿ ಮತ್ತು ಸಂಗೀತಗಾರ ಶಿವಶ್ರೀ ಸ್ಕಂದಪ್ರಸಾದ್ ಹಾಡಿದ್ದಾರೆ.

"ಪೂಜಿಸಲೆಂದೆ ಹೂಗಳ ತಂದೆ..." ಎಂದು ಶಿವಶ್ರೀ ಸ್ಕಂದಪ್ರಸಾದ್ಗೆ ಮೋದಿ ಮೆಚ್ಚುಗೆ
ಅಯೋಧ್ಯೆಯಲ್ಲಿ ಜನವರಿ 22 ರಂದು ರಾಮ ಮಂದಿರದಲ್ಲಿ ರಾಮ ಲಲ್ಲನ ಪ್ರಾಣ ಪ್ರತಿಷ್ಠಾ ನಡೆಯಲಿದೆ. ಇದೇ ಸಂದರ್ಭದಲ್ಲಿ ನರ್ತಕಿ ಮತ್ತು ಸಂಗೀತಗಾರ ಶಿವಶ್ರೀ ಸ್ಕಂದಪ್ರಸಾದ್ ಹಾಡಿರುವ "ಪೂಜಿಸಲೆಂದೆ ಹೂಗಳ ತಂದೆ..." ಹಾಡನ್ನು ಪ್ರಧಾನಿ ಹಂಚಿಕೊಂಡಿದ್ದು, ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಂಗಳವಾರ (ಜನವರಿ 16) ಶಿವಶ್ರೀ ಸ್ಕಂದಪ್ರಸಾದ್ ಅವರ ಯೂಟ್ಯೂಬ್ ಲಿಂಕ್ ಅನ್ನು ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, "ಕನ್ನಡದಲ್ಲಿ ಶಿವಶ್ರೀ ಸ್ಕಂದಪ್ರಸಾದ್ ಅವರ ಈ ಹಾಡು ಪ್ರಭು ಶ್ರೀರಾಮನ ಮೇಲಿನ ಭಕ್ತಿಯ ಮನೋಭಾವವನ್ನು ಸುಂದರವಾಗಿ ಎತ್ತಿ ತೋರಿಸುತ್ತದೆ. ಇಂತಹ ಪ್ರಯತ್ನಗಳು ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವಲ್ಲಿ ಬಹಳ ದೂರ ಸಾಗುತ್ತವೆ" ಎಂದು ಶ್ಲಾಘಿಸಿದ್ದಾರೆ.
ಪ್ರಧಾನಿ ಮೋದಿ ಅವರ ಟ್ವೀಟ್ ಬಳಿಕ ಗಾಯಕಿ ಶಿವಶ್ರೀ ಪ್ರಧಾನಿಗೆ ಧನ್ಯವಾದ ತಿಳಿಸಿದ್ದಾರೆ. ಈ ಗೌರವವು ಕಲ್ಪನೆಗೂ ಮೀರಿದೆ ಂದು ಹೇಳಿರುವ ಅವರು, "ಪ್ರಧಾನಿ ಮೋದಿಯವರ ಟ್ವೀಟ್ ಬಗ್ಗೆ ನನಗೆ ತಿಳಿದಿರಲಿಲ್ಲ. ನನ್ನ ಕುಟುಂಬ ಮತ್ತು ಸ್ನೇಹಿತರಿಂದ ಕರೆಗಳು ಬರಲು ಪ್ರಾರಂಭಿಸಿದ ನಂತರವೇ ನನಗೆ ಅದರ ಬಗ್ಗೆ ತಿಳಿಯಿತು. ನಾನು ಇದನ್ನು ಎಂದಿಗೂ ನಿರೀಕ್ಷಿಸಿರಲಿಲ್ಲ ಮತ್ತು ನನ್ನ ಕಲ್ಪನೆಯನ್ನು ಮೀರಿದೆ. ಇಂತಹ ಗೌರವಕ್ಕಾಗಿ ನಾನು ಭಗವಾನ್ ರಾಮನಿಗೆ ಧನ್ಯವಾದ ಹೇಳುತ್ತೇನೆ. ನಾನು ಈ ಬಗ್ಗೆ ಕನಸು ಕಂಡಿರಲಿಲ್ಲ" ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ ಯಾರು..?
ಗಾಯಕಿ ಶಿವಶ್ರೀ ಕಂಪೋಸರ್, ಗಾಯಕ ಮತ್ತು ನರ್ತಕಿ. ಶಾಸ್ತ್ರೀಯ ಸಂಗೀತದಲ್ಲಿ ಒಲವು ಹೊಂದಿದ್ದಾರೆ. ತಮಿಳುನಾಡಿನ ತಂಜಾವೂರಿನ ಶಾಸ್ತ್ರ ವಿಶ್ವವಿದ್ಯಾಲಯದಿಂದ ಬಿ.ಟೆಕ್ (ಬಯೋ-ಎಂಜಿನಿಯರಿಂಗ್) ಪೂರ್ಣಗೊಳಿಸಿದ್ದಾರೆ. ಶಿವಶ್ರೀ ಅವರು ಮದ್ರಾಸ್ ವಿಶ್ವವಿದ್ಯಾಲಯದಿಂದ ಭರತನಾಟ್ಯದಲ್ಲಿ ಎಂಎ ಪದವಿಯನ್ನೂ ಪಡೆದಿದ್ದಾರೆ.
ಪ್ರಸ್ತುತ ಮದ್ರಾಸ್ ಸಂಸ್ಕೃತ ಕಾಲೇಜಿನಲ್ಲಿ ಸಂಸ್ಕೃತದಲ್ಲಿ ಎಂಎ ಓದುತ್ತಿದ್ದಾರೆ. 64 ಭಾರತೀಯ ಕಲಾ ಪ್ರಕಾರಗಳಲ್ಲಿ ವ್ಯಕ್ತಿಗಳಿಗೆ ತರಬೇತಿ ನೀಡುವ ಗುರಿ ಹೊಂದಿರುವ 'ಆಹುತಿ' ಸಂಸ್ಥೆಯ ಸಂಸ್ಥಾಪಕರು ಕೂಡ ಗಾಯಕಿ ಶಿವಶ್ರೀ. ಇವರು ಯೂಟ್ಯೂಬ್ ಚಾನೆಲ್ ನಡೆಸುತ್ತಾರೆ. ತಮ್ಮ 300 ಕ್ಕೂ ಹೆಚ್ಚು ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ. ಅವರ ಚಾನೆಲ್ 1,54,000 ಚಂದಾದಾರರನ್ನು ಹೊಂದಿದೆ. ಮೋದಿ ಅವರ ಟ್ವೀಟ್ ಬಳಿಕ ಫಾಲೋವರ್ಸ್ ಜಾಸ್ತಿಯಾಗುವ ಸಂಭವವಿದೆ. ಪೂಜಿಸಲೆಂದೆ ಹಾಡು ಒಂದು ವರ್ಷದ ಹಿಂದೆ ಪೋಸ್ಟ್ ಮಾಡಲಾಗಿತ್ತು.
'ಎರಡು ಕನಸು' ಸಿನಿಮಾದ ಪೂಜಿಸಲೆಂದೆ ಹಾಡು
ಶಿವಶ್ರೀ ಹಾಡಿರುವ ಭಕ್ತಿಗೀತೆಯು 1974 ರಲ್ಲಿ ಬಂದ ಡಾ ರಾಜ್ಕುಮಾರ್, ಕಲ್ಪನಾ ಮತ್ತು ಮಂಜುಳಾ ಅವರರು ನಟಿಸಿದ್ದ ಚಲನಚಿತ್ರ 'ಎರಡು ಕನಸು' ಸಿನಿಮಾದ್ದು. ಚಿತ್ರದಲ್ಲಿನ ಎಲ್ಲಾ ಹಾಡುಗಳನ್ನು ರಾಜನ್-ನಾಗೇಂದ್ರ ಸಂಯೋಜಿಸಿದ್ದಾರೆ. ಈ ಹಾಡನ್ನು ಎವರ್ ಗ್ರೀನ್ ಹಿಟ್ ಎಂದು ಪರಿಗಣಿಸಲಾಗಿದೆ. ಈ ಜೋಡಿಗೆ 1974-75ರ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಸಿಕ್ಕಿದೆ.


Click it and Unblock the Notifications











