ರಾಘವ - ಜಾನಕಿ ಪ್ರೇಮಕಾವ್ಯ: ಮತ್ತೊಂದು 'ಸಿಂಗಾರ ಸಿರಿಯೇ' ಆಗುತ್ತಾ 'ರಾಮ್ ಸೀತಾ ರಾಮ್' ?
ಪ್ರಭಾಸ್ ನಟನೆಯ 'ಆದಿಪುರುಷ್' ಸಿನಿಮಾ 5 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಟೀಸರ್, ಟ್ರೈಲರ್ ನಂತರ ಮೊತ್ತೊಂದು ವಿಡಿಯೋ ರಿಲೀಸ್ ಆಗಿದೆ. 'ರಾಮ್ ಸೀತಾ ರಾಮ್' ಎಂದು ಶುರುವಾಗುವ ಸಾಂಗ್ ಪ್ರೇಕ್ಷಕರನ್ನು ಹೊಸ ಪ್ರಪಂಚಕ್ಕೆ ಕೊಂಡೊಯ್ಯುತ್ತದೆ. ಸಾಂಗ್ ನಿಜಕ್ಕೂ ವಿಷ್ಯುವಲ್ ಟ್ರೀಟ್ ಎನ್ನುವಂತಿದೆ. ಸೀತಾ-ರಾಮರ ಅನುಬಂಧವನ್ನು ಈ ಹಾಡಿನಲ್ಲಿ ಕಟ್ಟಿಕೊಡಲಾಗಿದೆ.
ಓಂ ರಾವುತ್ ನಿರ್ದೇಶನದ 'ಆದಿಪುರುಷ್' ಚಿತ್ರಕ್ಕೆ ಸಚೇತ್ ಪರಂಪರ ಸಂಗೀತವಿದೆ. 5 ಭಾಷೆಗಳಲ್ಲಿ 'ರಾಮ್ ಸೀತಾ ರಾಮ್' ಸಾಂಗ್ ರಿವೀಲ್ ಆಗಿದೆ. ಕನ್ನಡದಲ್ಲಿ ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದು ಕಾರ್ತಿಕ್, ಸಚೇತ್ ತಂದೊನ್, ಪರಂಪರ ತಂದೊನ್ ಹಾಡಿದ್ದಾರೆ. ಚಿತ್ರದಲ್ಲಿ ರಾಮನಾಗಿ ಪ್ರಭಾಸ್, ಸೀತೆಯಾಗಿ ಕೃತಿ ಸನೂನ್ ನಟಿಸಿದ್ದಾರೆ. ಇವರಿಬ್ಬರ ಪ್ರೀತಿಯನ್ನು ಈ ಹಾಡಿನಲ್ಲಿ ಸಾರಿ ಹೇಳಲಾಗಿದೆ. ಚಿತ್ರದ ಒಂದಷ್ಟು ದೃಶ್ಯಗಳನ್ನು ಸೇರಿಸಿ ವಿಡಿಯೋ ಸಾಂಗ್ ಕಟ್ಟಿಕೊಡಲಾಗಿದೆ.

ವನವಾಸದಲ್ಲಿ ರಾಮ, ಸೀತೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡ ರೀತಿ, ಸೀತೆಯನ್ನು ರಾವಣಾಸುರ ಕೊಂಡೊಯ್ದ ಬಳಿಕ ಇಬ್ಬರೂ ಪರಿತಪಿಸಿದ್ದನ್ನು ಹಾಡಿನಲ್ಲಿ ಚಿತ್ರಿಸಲಾಗಿದೆ. "ರಾಜಕುಮಾರಿ ಜಾನಕಿ ನೀನು ಇರಬೇಕಾದ ಸ್ಥಳ ಅರಮನೆ, ನನ್ನ ರಾಘವ ಎಲ್ಲಿ ಇರುತ್ತಾರೋ ಅದೇ ನನ್ನ ಅರಮನೆ. ನಿಮ್ಮ ನೆರಳು ನಿಮ್ಮನ್ನು ಬಿಟ್ಟು ಹೋಗಬಹುದೇನೋ ನಿಮ್ಮ ಜಾನಕಿ ಬಿಟ್ಟು ಹೋಗಲ್ಲ" ಎನ್ನುವ ಡೈಲಾಗ್ನೊಂದಿಗೆ ಹಾಡು ಶುರುವಾಗುತ್ತದೆ.
ಡೈಲಾಗ್ಗಳು ಸೂಪರ್
ಅಶೋಕವನದಲ್ಲಿ ರಾಮನಿಗಾಗಿ ಕಾಯುವ ಸೀತೆ, ಲಂಕೆಯಲ್ಲಿ ಸೀತೆ ಹೇಗಿದ್ದಾಳೋ, ಆಕೆಯನ್ನು ಎಷ್ಟು ನೋಡುತ್ತೀನೋ ಎಂದು ಹಂಬಲಿಸುವ ರಾಮನ ಚಿತ್ರಣವನ್ನು ಹಾಡಿನಲ್ಲಿ ನೋಡಬಹುದು. "ಜಾನಕಿ ರಾಘವನಿಗೆ ಸ್ವಂತ, ರಾಘವನಿಗೆ ಮಾತ್ರವೇ ಸೇರಿದವಳು, ನನ್ನ ರಾಘವ ಯಾರೆಂದು ಅವರನ್ನೇ ಕೇಳಿ ತಿಳಿದುಕೋ" ಎಂದು ರಾವಣನಿಗೆ ಜಾನಕಿ ಹೇಳುವ ಡೈಲಾಗ್ ಕೂಡ ಹಾಡಿನ ಮಧ್ಯೆ ಗಮನ ಸೆಳೆಯುತ್ತದೆ.
ಪ್ರಮೋದ್ ಮರವಂತೆ ಸಾಹಿತ್ಯ
ಹಾಡಿನಲ್ಲಿ ಹನುಮಂತ ಲಂಕೆಗೆ ಹಾರಿ ಸೀತಾಮಾತೆಯನ್ನು ಭೇಟಿ ಆಗಿ ಬರುವ ಸನ್ನಿವೇಶದ ಝಲಕ್ ಕೂಡ ಇದೆ. 'ರಾಮ್ ಸೀತಾ ರಾಮ್' ವಿಡಿಯೋ ಸಾಂಗ್ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಎಲ್ಲಾ ಭಾಷೆಗಳಲ್ಲೂ ಸಖತ್ ಸದ್ದು ಮಾಡುತ್ತಿದೆ. 'ಕಾಂತಾರ' ಚಿತ್ರದಲ್ಲಿ 'ಸಿಂಗಾರ ಸರಿಯೇ' ಹಾಡಿಗೆ ಸಾಹಿತ್ಯ ಬರೆದು ಗೆದ್ದಿದ್ದ ಪ್ರಮೋದ್ ಮತ್ತೊಮ್ಮೆ ತಮ್ಮ ಸಾಹಿತ್ಯದಿಂದ ಗಮನ ಸೆಳೆದಿದ್ದಾರೆ. ಅಭಿಮಾನಿಗಳು ರಿಪೀಟ್ ಮೋಡ್ನಲ್ಲಿ ಸಾಂಗ್ ಕೇಳಲು ಆರಂಭಿಸಿದ್ದಾರೆ.

ಭಾರೀ ನಿರೀಕ್ಷೆ ಹುಟ್ಟಾಕಿದ ಚಿತ್ರ
ಈಗಾಗಲೇ ಹಲವು ರೂಪಗಳಲ್ಲಿ ರಾಮಾಯಣ ಕಾವ್ಯವನ್ನು ಜನ ನೋಡಿದ್ದಾರೆ, ಕೇಳಿದ್ದಾರೆ. ಈ ಹಿಂದೆ ಕೂಡ ಸಿನಿಮಾಗಳಲ್ಲಿ ಈ ಕಥೆ ಬಂದಿದೆ. ಆದರೂ ಇಂದಿನ ತಂತ್ರಜ್ಞಾನ ಬಳಸಿ 'ಆದಿಪುರುಷ್' ಸಿನಿಮಾ ಹೇಗೆ ಕಟ್ಟಿಕೊಟ್ಟಿದ್ದಾರೆ ಎನ್ನುವ ನಿರೀಕ್ಷೆ ಸಿನಿರಸಿಕರಲ್ಲಿದೆ. ಚಿತ್ರದ ಪ್ರೀ ರಿಲೀಸ್ ಬ್ಯುಸಿನೆಸ್ ಜೋರಾಗಿದೆ. ಚಿತ್ರದ ಆಂಧ್ರ, ತೆಲಂಗಾಣ 180 ಕೋಟಿ ರೂ.ಗೆ ಮಾರಾಟವಾಗಿ ಎನ್ನಲಾಗ್ತಿದೆ. ತಿರುಪತಿಯಲ್ಲಿ ಜೂನ್ 6ಕ್ಕೆ ಪ್ರೀ ರಿಲೀಸ್ ಈವೆಂಟ್ ನಡೆಯಲಿದೆ.
ಜೂನ್ 16ಕ್ಕೆ ಸಿನಿಮಾ ರಿಲೀಸ್
ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ಸೈಫ್ ಅಲಿಖಾನ್, ಲಕ್ಷ್ಮಣನಾಗಿ ಸನ್ನಿ ಸಿಂಗ್, ಹನುಮಂತನಾಗಿ ದೇವದತ್ತ ನಟಿಸಿದ್ದಾರೆ. 500 ಕೋಟಿ ರೂ.ಗೂ ಅಧಿಕ ಬಜೆಟ್ನಲ್ಲಿ ಟೀ ಸೀರಿಸ್ ಹಾಗು ರೆಟ್ರೊಪ್ಲಿಲ್ಸ್ ಸಂಸ್ಥೆಗಳು ಸಿನಿಮಾ ನಿರ್ಮಾಣ ಮಾಡಿವೆ. ಕಳೆದ ವರ್ಷ ಬಂದಿದ್ದ ಟೀಸರ್ ಕೊಂಚಮಟ್ಟಿಗೆ ನಿರಾಸೆ ಮೂಡಿಸಿತ್ತು. ಆದರೆ ಟ್ರೈಲರ್ ಅಭಿಮಾನಿಗಳ ಗಮನ ಸೆಳೆದಿದೆ. ಜೂನ್ 16ಕ್ಕೆ ವಿಶ್ವದಾದ್ಯಂತ ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ.


Click it and Unblock the Notifications











