"ಹೊಕ್ಕಳ ಕೆಳಗೆ ಸೀರೆ ಉಡಬೇಕಂತೆ, ಸುಮ್ನೆ ಟಾರ್ಗೆಟ್ ಮಾಡ್ತಾರೆ"; ಸಂಗೀತ ಕಾರ್ಯಕ್ರಮದ ಕರಾಳ ಮುಖ ತೆರೆದಿಟ್ಟ ಗಾಯಕಿ
ಕಿರುತೆರೆಯಲ್ಲಿ ಮ್ಯೂಸಿಕ್ ರಿಯಾಲಿಟಿ ಶೋಗಳ ಕಾರುಬಾರು ಜೋರಾಗಿದೆ. 'ಎದೆ ತುಂಬಿ ಹಾಡುವೆನು' ಶೋನಿಂದ ಆರಂಭವಾಗಿ 'ಸರಿಗಮಪ'ವರೆಗೆ ಸಾಕಷ್ಟು ಶೋಗಳು ಪ್ರಸಾರವಾಗಿವೆ. ಸಾಕಷ್ಟು ಪ್ರತಿಭೆಗಳಿಗೆ ಒಳ್ಳೆ ವೇದಿಕೆ ಸಿಕ್ಕಿದಂತಾಗಿದೆ. ಇಲ್ಲಿ ತಮ್ಮನ್ನು ಸಾಬೀತುಪಡಿಸಿಕೊಂಡವರು ಚಿತ್ರರಂಗದಲ್ಲಿ ಅವಕಾಶ ಪಡೆದಿರುವುದು ಇದೆ.
ಇನ್ನು ರಿಯಾಲಿಟಿ ಶೋಗಳ ಬಗ್ಗೆ ಕೆಲವೊಮ್ಮೆ ಆರೋಪಗಳು ಕೇಳಿಬರುತ್ತವೆ. ಸ್ವಜನ ಪಕ್ಷಪಾತದ ಆರೋಪವೇ ಹೆಚ್ಚು. ಸದ್ಯ 'ಪಾಡುತಾ ತೀಯಗಾ' ತೆಲುಗು ಕಿರುತೆರೆ ಕಾರ್ಯಕ್ರಮದ ಬಗ್ಗೆ ಗಾಯಕಿ ಪ್ರವಸ್ತಿ ಆರಾಧ್ಯ ಬೇಸರ ಹೊರ ಹಾಕಿದ್ದಾರೆ. ಯೂಟ್ಯೂಬ್ನಲ್ಲಿ ವಿಡಿಯೋ ಮಾಡಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ತೀರ್ಪುಗಾರರಾದ ಎಂ. ಎಂ ಕೀರವಾಣಿ, ಸುನಿತಾ ಹಾಗೂ ಚಂದ್ರಬೋಸ್ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಸದ್ಯ ವೀಡಿಯೋ ವೈರಲ್ ಆಗುತ್ತಿದೆ.

ಈಟಿವಿ ಕನ್ನಡ ವಾಹಿನಿಯಲ್ಲಿ 'ಎದೆ ತುಂಬಿ ಹಾಡುವೆನು' ಸಂಗೀತ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ಇದರ ತೆಲುಗು ವರ್ಷನ್ 'ಪಾಡುತಾ ತೀಯಗಾ'. ಎಸ್. ಬಿ ಬಾಲಸುಬ್ರಮಣ್ಯಂ ನೇತೃತ್ವದಲ್ಲಿ ಈ ಕಾರ್ಯಕ್ರಮ ಆರಂಭವಾಗಿತ್ತು. 20ಕ್ಕೂ ಅಧಿಕ ಸೀಸನ್ಗಳಾಗಿ ಕಾರ್ಯಕ್ರಮ ಮೂಡಿ ಬಂದಿದೆ. ಇತ್ತೀಚೆಗೆ 'ಪಾಡುತಾ ತೀಯಗಾ' ಸಿಲ್ವರ್ ಜೂಬ್ಲಿ ಸೀರಿಸ್ ಬಂದಿತ್ತು. ಇದರಲ್ಲಿ ಗಾಯಕಿ ಪ್ರವಸ್ತಿ ಆರಾಧ್ಯ ಕೂಡ ಭಾಗವಹಿಸಿದ್ದರು.
ಶೋ ವೇಳೆ ತೀರ್ಪುಗಾರರು ನನ್ನನ್ನು ಟಾರ್ಗೆಟ್ ಮಾಡುತ್ತಿದ್ದರು. ಬೇಕಂತಲೇ ನನಗೆ ನೆಗೆಟಿವ್ ಕಾಮೆಂಟ್ಸ್ ಕೊಡುತ್ತಿದ್ದರು. ಇನ್ನು ಪ್ರೊಡಕ್ಷನ್ ಡಿಪಾರ್ಟ್ಮೆಂಟ್, ಕಾಸ್ಟ್ಯೂಮರ್ಸ್ ಕೂಡ ಕೆಟ್ಟಾಗಿ ನಡೆದುಕೊಂಡಿದ್ದರು ಎಂದು ಪ್ರವಸ್ತಿ ಆರೋಪಿಸಿದ್ದಾರೆ. ಒಂದು ವೇಳೆ ನನಗೇನಾದರೂ ಆದರೆ ಅದಕ್ಕೆ ಸಂಗೀತ ನಿರ್ದೇಶಕ ಕೀರವಾಣಿ, ಗಾಯಕಿ ಸುನಿತಾ ಜವಾಬ್ದಾರಿ ಎಂದು ಆಕೆ ವೀಡಿಯೋದಲ್ಲಿ ಹೇಳಿರುವುದು ಸಂಚಲನ ಸೃಷ್ಟಿಸಿದೆ.
"ಮೊದಲಿಗೆ ತೀರ್ಪುಗಾರ್ತಿ ಗಾಯಕಿ ಸುನಿತಾ ಅವರಿಂದ ಆರಂಭಿಸುತ್ತೇನೆ. ಆಕೆ ನೋಡಲು ಬಹಳ ಸುಂದರವಾಗಿದ್ದಾರೆ. ಹಾಗಂತ ತುಂಬಾ ಒಳ್ಳೆಯವರು ಅಂದುಕೊಳ್ಳಬೇಡಿ, ಅದ್ಯಾಕೆ ಆಕೆಗೆ ನನ್ನನ್ನು ಕಂಡರೆ ಆಗುತ್ತಿರಲಿಲ್ಲ. ನಾನು ವೇದಿಕೆ ಏರುತ್ತಿದ್ದಂತೆ ಹ್ಯಾಪುಮೋರೆ ಹಾಕಿಕೊಳ್ಳುತ್ತಿದ್ದರು. ನಮ್ಮಿಬ್ಬರ ನಡುವೆ ಏನಾದರೂ ಗೊಂದಲ ಇದ್ಯಾ ಎಂದು ಕೆಲವರು ಕೇಳಿದ್ದರು. 'ಅಂತಾ ರಾಮಮಯಂ' ಹಾಡು ಹಾಡುವಾಗ ನನಗೆ ಈ ವಿಚಾರ ಗೊತ್ತಾಯಿತು. ಆಕೆ ಯಾರಿಗೂ ಕೇಳಿಸಲ್ಲ ಎಂದು ಕೀರವಾಣಿ ಬಳಿ ನನ್ನ ಬಗ್ಗೆ ಮಾತನಾಡಿದ್ದರು. ಆದರೆ ಅದು ನನಗೆ ಚೆನ್ನಾಗಿ ಕೇಳಿಸಿತ್ತು" ಎಂದು ಪ್ರವಸ್ತಿ ಹೇಳಿದ್ದಾರೆ.
"ಈಕೆಗೆ ಹಾಡೋಕೆ ಬರಲ್ಲ, ಹೈ ರೇಂಜ್ ಹಾಡೋಕೆ ಆಗಲ್ಲ, ಈ ಹಾಡಿನಲ್ಲಿ ಎಲ್ಲಾ ಗೊತ್ತಾಗುತ್ತದೆ ನೋಡಿ ಎಂದು ಕೀರವಾಣಿ ಅವರ ಬಳಿ ಹೇಳುತ್ತಿದ್ದರು. ಅದನ್ನು ಕೇಳಿ ನನಗೆ ಬೇಸರವಾಗಿತ್ತು. ಅದನ್ನೆಲ್ಲಾ ಮೀರಿ ನಾನು ಹಾಡು ಹಾಡಿದೆ. ಅದಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ನನ್ನ ಪ್ರತಿ ಹಾಡಿಗೂ ಸುನಿತಾ ಅವರು ನೆಗೆಟಿವ್ ಕಾಮೆಂಟ್ಸ್ ಕೊಟ್ಟಿದ್ದಾರೆ. ಆದರೆ ಬೇರೆಯವರು ಹಾಡುವಾಗ ಮಾತ್ರ ಈ ರೀತಿ ಮಾಡುತ್ತಿರಲಿಲ್ಲ. ಅವರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದರು. ನನ್ನ ಮೇಲೆ ದ್ವೇಷ ಯಾಕೆ? ಚಂದ್ರಬೋಸ್ ಅವರು ಆರಂಭದಲ್ಲಿ ನನ್ನ ಗಾಯನ ಮೆಚ್ಚಿದ್ದರು. ಆದರೆ ಈ ಹಾಡು ಹಾಡುವಾಗ ನನ್ನ ಗಾಯನದಲ್ಲಿ ಆದ್ರತೆ ಇಲ್ಲ ಎಂದರು. ಅದೇ ರೌಂಡ್ನಲ್ಲಿ ಒಬ್ಬಾಕೆ ಸಾಹಿತ್ಯ ಮರೆತುಬಿಟ್ಟಳು, ಅದನ್ನು ಅವರು ಮಾತ್ರ ಕೇಳಲಿಲ್ಲ ಯಾಕೆ? ಎಂದು ಪ್ರವಸ್ತಿ ಪ್ರಶ್ನಿಸಿದ್ದಾರೆ.
ಕೀರವಾಣಿ ಅವರು ನನಗೆ ನೆಗೆಟಿವ್ ಕಾಮೆಂಟ್ಸ್ ಕೊಡಲಿಲ್ಲ. ಆದರೆ ಮೆಲೋಡಿ ಸಾಂಗ್ಸ್, ಅವರು ಸಂಗೀತದ ಸಾಂಗ್ಸ್ ಹಾಡಿದರೆ ಮೆಚ್ಚಿಕೊಳ್ಳುತ್ತಿದ್ದರು. ಒಳ್ಳೆ ಅಂಕ ಕೊಡುತ್ತಿದ್ದರು. ಸುನಿತಾ ಹಾಗೂ ಚಂದ್ರಬೋಸ್ ಕೂಡ ತಮ್ಮ ಹಾಡುಗಳನ್ನು ಹಾಡಿದರೆ ಒಳ್ಳೆ ಕಾಮೆಂಟ್ಸ್, ಅಂಕ ಕೊಡುತ್ತಾರೆ. ನಮ್ಮ ಬಡ ಕುಟುಂಬ. ಹಾಗಾಗಿ ನಾನು ಮದುವೆ ಸಮಾರಂಭಗಳಲ್ಲಿ ಹಾಡು ಹಾಡುತ್ತಿದ್ದೆ. ಈ ಬಗ್ಗೆ ಕೀರವಾಣಿ ಅವರು ಪರೋಕ್ಷವಾಗಿ ಮಾತನಾಡಿ ಮದುವೆಗಳಲ್ಲಿ ಹಾಡುವವರು ನನ್ನ ಪ್ರಕಾರ ಗಾಯಕರೇ ಅಲ್ಲ, ನನಗೆ ಅಸಹ್ಯ, ಸಂಗೀತಕ್ಕೆ ಅವಮಾನ ಎಂದಿದ್ದರು. ಇದು ನನಗೆ ಬೇಸರ ತಂದಿತ್ತು" ಎಂದು ಪ್ರವಸ್ತಿ ತಿಳಿಸಿದ್ದಾರೆ.
ಸಂಗೀತ ಕಾರ್ಯಕ್ರಮದಲ್ಲಿ ಗೆಲ್ಲುವ ಕೆಲವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳುತ್ತಾರೆ, ಈ ಬಗ್ಗೆ ಮಾತನಾಡಿ ನನ್ನ ಬಳಿಕ ಬಂದು ಕೆಲವರಯ ಚಾಕ್ರಿ ಮಾಡುತ್ತಾರೆ ಎಂದು ಕೀರವಾಣಿ ಹೇಳಿದ್ದರು. ಅದು ನನಗೆ ಇಷ್ಟವಾಗಲಿಲ್ಲ. ಎಸ್ಪಿಬಿ ಸರ್ ಇದ್ದಾಗ ಇಂತಹದ್ದೆಲ್ಲಾ ಇರಲಿಲ್ಲ, ಸ್ಪರ್ಧಿಗಳ ಬಗ್ಗೆ ಫನ್ನಿ ಜೋಕ್ಸ್ ಹೇಳುತ್ತಿರಲಿಲ್ಲ. ಆದರೆ ಇತ್ತೀಚೆಗೆ ಇದೆಲ್ಲಾ ನಡೆಯುತ್ತಿದೆ" ಆಕೆ ತಿಳಿಸಿದ್ದಾರೆ.
ಕಾರ್ಯಕ್ರಮದ ಪ್ರೊಡಕ್ಷನ್ಸ್ ತಂಡ ಬಹಳ ಕೆಟ್ಟದಾಗಿ ನಡೆದುಕೊಳ್ಳುತ್ತದೆ. ಅವರು ನಮಗೆ ಕಾಸ್ಟ್ಯೂಮ್ಸ್ ಕೊಟ್ಟು ಹೊಕ್ಕಳು ಕಾಣಿಸುವಂತೆ ಸೊಂಟದಿಂದ ಕೆಳಕ್ಕೆ ಸೀರೆ ಉಡಬೇಕು, ಎಕ್ಸ್ಪೋಸ್ ಮಾಡಿ ಎಂದು ಹೇಳುತ್ತಿದ್ದರು. ಇನ್ನು ಕಾಸ್ಟ್ಯೂಮ್ ಡಿಸೈನರ್ಗಳು ನಿನ್ನ ದೇಹಕ್ಕೆ ಇನ್ನೇನು ಕೊಡೋಕೆ ಸಾಧ್ಯ, ಇದನ್ನು ಹಾಕ್ಕೋ ಎನ್ನುತ್ತಿದ್ದರು. ಇವರ ಮಾತುಗಳಿಂದ ನಾನು ಮಾನಸಿಕವಾಗಿ ಬಹಳ ನೊಂದಿದ್ದೇನೆ. ಇನ್ನು ನನಗೆ ಅವಕಾಶ ಸಿಗಲ್ಲ ಎನ್ನುವುದು ಗೊತ್ತು. ಇಷ್ಟು ದೊಡ್ಡವರ ಹೆಸರು ತೆಗೆದುಕೊಂಡು ಆರೋಪ ಮಾಡುತ್ತಿದ್ದೇನೆ. ಇದರ ಪರಿಣಾಮ ಏನಾಗಬಹುದು ಎನ್ನುವುದು ಗೊತ್ತು ಎಂದು ಪ್ರವಸ್ತಿ ಆರಾಧ್ಯ ವಿವರಿಸಿದ್ದಾರೆ.


Click it and Unblock the Notifications











