ಮರಿ ಟೈಗರ್ ಹಾಡು ಹಾಡಲಿರುವ 'ಜೋಗಿ' ಪ್ರೇಮ್

'ಮರಿ ಟೈಗರ್' ಚಿತ್ರಕ್ಕೆ ನಿರ್ದೇಶಕ ಪ್ರೇಮ್ ಹಾಡಲಿರುವ ಹಾಡು ಇಂದು (13 ಸೆಪ್ಟೆಂಬರ್) ಸಂಗೀತ ನಿರ್ದೇಶಕ ರಾಜೇಶ್ ರಾಮನಾಥ್ ಸ್ಟುಡಿಯೋದಲ್ಲಿ ರೆಕಾರ್ಡ್ ಆಗಲಿದೆ. ಈ ಹಾಡನ್ನು ಯುವ ಗೀತಸಾಹಿತಿ ಕಮಲ್ ಸಾರಥಿ ರಚಿಸಿದ್ದಾರೆ. 'ಯಾವ ಕವಿಯು ತಂದೆ ತಾಯಿಯ ದೇವರೆಂದು ಕರೆದುಬಿಟ್ಟನೋ...' ಎಂದು ಪ್ರಾರಂಭವಾಗುವ ಹಾಡಿನ ಸಾಲು ಇದಾಗಿದ್ದು, ಪ್ರೇಮ್ ಅದನ್ನು ಹಾಡಲಿರುವುದು ವಿಶೇಷ.
ಈ ಮೊದಲು ನಿರ್ದೇಶಕ ಪ್ರೇಮ್ ತಮ್ಮ ನಿರ್ದೇಶನ ಹಾಗೂ ಶಿವರಾಜ್ ಕುಮಾರ್ ನಾಯಕತ್ವದ 'ಜೋಗಿ' ಚಿತ್ರದಲ್ಲಿ 'ಬೇಡುವೆನು ವರವನ್ನು ಕೊಡು ತಾಯೆ ಜನ್ಮವನು...' ಹಾಡನ್ನು ಹಾಡಿದ್ದರು. ಆ ಚಿತ್ರ ಸೂಪರ್ ಹಿಟ್ ಆದ ಕಾರಣಕ್ಕೋ ಅಥವಾ ಹಾಡನ್ನು ಪ್ರೇಮ್ ಹಾಡಿದ್ದಕ್ಕೋ, ಒಟ್ಟಿನಲ್ಲಿ ಹಾಡೂ ಕೂಡ ಜನರ ಬಾಯಲ್ಲಿ ನಲಿದಾಡಿ ಭಾರಿ ಪ್ರಶಂಸೆ ಗಳಿಸಿತ್ತು. ಆ ನಂತರ ಕೂಡ ಪ್ರೇಮ್ ತಮ್ಮ ನಟನೆಯ 'ಪ್ರೀತಿ ಏಕೆ ಭೂಮಿ ಮೇಲಿದೆ' ಚಿತ್ರಕ್ಕಾಗಿ ಹಾಡಿದ್ದರು.
ಇದೀಗ ಆರ್ ಚಂದ್ರು ನಿರ್ದೇಶನದ 'ಚಾರ್ಮಿನಾರ್' ಚಿತ್ರಕ್ಕೆ ನಿರ್ದೇಶಕ ಪ್ರೇಮ್ ಹಾಡಲಿರುವ ಹಾಡು ಹಾಗೂ ಸಾಹಿತ್ಯ ಸಾಕಷ್ಟು ಗಮನಸೆಳೆದಿದೆ. ಅವರು ಹಾಡುತ್ತಾರೆ ಎಂದರೆ ಸುದ್ದಿಯಾಗುವುದಂತೂ ಗ್ಯಾರಂಟಿ ಎಂಬುದು ಇಡೀ ಸ್ಯಾಂಡಲ್ ವುಡ್ ಗೇ ಗೊತ್ತಿದೆ. ಪ್ರೇಕ್ಷಕರಂತೂ ಪ್ರೇಮ್ ಕುಂತರೂ ನಿಂತರೂ ಗಮನಿಸುತ್ತಾರೆ ಎನ್ನಬಹುದು. ಅದಿರಲಿ, ಹಾಡು ಹಿಟ್ ಆಗಬಹುದೇ ಎಂಬುದಷ್ಟೇ ಸದ್ಯದ ಪ್ರಶ್ನೆ! (ಒನ್ ಇಂಡಿಯಾ ಕನ್ನಡ)


Click it and Unblock the Notifications











