ಸರಿಗಮಪ ಸೀಸನ್ 15ರ ಸ್ಪರ್ಧಿ ಧಾರಾವಾಹಿ, ಸಿನಿಮಾಗಳಿಗೆ ಹಿನ್ನೆಲೆ ಗಾಯಕಿ: ಯಾರಿವರು?
ಆಸೆ ಆಸೆ ನನಗೊಂದು ಆಸೆ.. ಅದನ್ನೀಗ ನಾ ಹೇಳಲೇ.. ಇದು ಸ್ಟಾರ್ ಸುವರ್ಣ ವಾಹಿನಿಯಲ್ಲಿ, ರಮೇಶ್ ಅರವಿಂದ್ ನಿರ್ಮಾಣದಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ಆಸೆ'ಯ ಶೀರ್ಷಿಕೆ ಹಾಡಿನ ಸಾಲುಗಳಿವು. ಈ ಸುಂದರವಾದ ಸಾಲುಗಳಿಗೆ ಅಷ್ಟೇ ಸುಮಧುರವಾಗಿ ದನಿ ನೀಡಿದ್ದಾರೆ ಗಾಯಕಿ ಪೃಥ್ವಿ ಭಟ್.
ಕನ್ನಡ ಕಿರುತೆರೆಯ ಜನಪ್ರಿಯ ಸಂಗೀತ ರಿಯಾಲಿಟಿ ಶೋ 'ಸರಿಗಮಪ ಸೀಸನ್ 15'ರ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದ ಪೃಥ್ವಿ ಭಟ್ ಆಡಿಶನ್ನಲ್ಲಿಯೇ ಕಿರುತೆರೆ ವೀಕ್ಷಕರ ಜೊತೆಗೆ ತೀರ್ಪುಗಾರರ ಮನ ಸೆಳೆದಾಕೆ.

"ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ" ಎಂದು ಹಾಡಿನ ಮೂಲಕ ಕಿರುತೆರೆಗೆ ಕಾಲಿಟ್ಟ ಪೃಥ್ವಿ ಭಟ್ ಸುಮಧುರ ಕಂಠದ ಮೂಲಕ ಸಂಗೀತ ಪ್ರಿಯರನ್ನು ರಂಜಿಸಿ ಸೈ ಎನಿಸಿಕೊಂಡಿದ್ದಾರೆ. ಸಣ್ಣ ವಯಸ್ಸಿನಿಂದಲೂ ಸಂಗೀತದೆಡೆಗೆ ವಿಶೇಷ ಒಲವು ಹೊಂದಿದ್ದ ಪೃಥ್ವಿ ಭಟ್ ಟಿವಿಯಲ್ಲಿ ಬರುತ್ತಿದ್ದ ಹಾಡುಗಳನ್ನು ಹಾಗೆಯೇ ಗುನುಗುನಿಸುತ್ತಿದ್ದರು. ಮಗಳಿಗಿರುವ ಸಂಗೀತ ಪ್ರೇಮ ಕಂಡ ಪೃಥ್ವಿ ಭಟ್ ತಾಯಿ ಆಕೆಗೆ ಕೆಲವು ಪದ್ಯಗಳನ್ನು ಹೇಳಿಕೊಡಲಾರಂಭಿಸಿದರು.
ತದ ನಂತರ ಶಾಸ್ತ್ರೀಯ ಸಂಗೀತ ತರಗತಿಗೆ ಸೇರಿದ ಪೃಥ್ವಿ ಜಯಲಕ್ಷ್ಮಿ ಭಟ್ ಅವರಿಂದ ಶಾಸ್ತ್ರೀಯ ಸಂಗೀತ, ಹಿಂದೂಸ್ಥಾನಿ ಸಂಗೀತವನ್ನು ಪಂಡಿತ್ ಪರಮೇಶ್ವರ್ ಹೆಗಡೆ ಹಾಗೂ ಲೈಟ್ ಮ್ಯೂಸಿಕ್ ಅನ್ನು ನರಹರಿ ದೀಕ್ಷಿತ್ ಅವರ ಬಳಿ ಕಲಿತಿದ್ದಾರೆ. "ಸಂಗೀತವೇ ನನ್ನ ಜೀವನ. ನಾನೆಷ್ಟು ಸಂಗೀತವನ್ನು ಇಷ್ಟಪಡುತ್ತೇನೆ ಎಂದರೆ ಅದನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ" ಎಂದು ಸಂತೋಷದಿಂದ ಫಿಲ್ಮಿಬೀಟ್ ಜೊತೆಗೆ ಗಾಯಕಿ ಪೃಥ್ವಿ ಭಟ್ ಹೇಳಿಕೊಳ್ಳುತ್ತಾರೆ .

"ನಾನಿಂದು ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದೇನೆ ಎಂದರೆ ಅದಕ್ಕೆ ಹೆತ್ತವರೆ ಕಾರಣ. ಅವರಿಗಿದ್ದ ಸಂಗೀತ ಪ್ರೇಮವೇ ನನ್ನನ್ನು ಗಾಯಕಿಯನ್ನಾಗಿ ಮಾಡಿದೆ. ತಂದೆ ತಾಯಿಯ ಪ್ರೋತ್ಸಾಹ, ಗುರುಗಳ ಆಶೀರ್ವಾದ, ಸ್ನೇಹಿತರ ಹಾಗೂ ಸರಿಗಮಪ ಸೀಸನ್ 15 ರ ಬೆಂಬಲದಿಂದ ನಾನು ಇಂದು ಗಾಯಕಿಯಾಗಿ ಗುರುತಿಸಿಕೊಂಡಿದ್ದೇನೆ" ಎಂದು ಹೇಳುವ ಪೃಥ್ವಿ ಭಟ್ ಹಿನ್ನಲೆ ಗಾಯಕಿಯಾಗಿ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯ 'ಕನ್ಯಾಕುಮಾರಿ' ಧಾರಾವಾಹಿಯ ಶೀರ್ಷಿಕೆ ಗೀತೆಯನ್ನು ಹಾಡುವ ಮೂಲಕ ಹಿನ್ನಲೆ ಗಾಯಕಿಯಾಗಿ ಕಿರುತೆರೆಗೆ ಕಾಲಿಟ್ಟ ಪೃಥ್ವಿ ಭಟ್ ಮುಂದೆ ಸ್ಟಾರ್ ಸುವರ್ಣ ವಾಹಿನಿಯ 'ಅರ್ಧಾಂಗಿ', ಸ್ಟಾರ್ ಸುವರ್ಣ ವಾಹಿನಿಯ 'ಓ ಮುದ್ದು ಮನಸೇ', ಸಿರಿ ಕನ್ನಡದ 'ಅಮೃತ ಘಳಿಗೆ', ಸ್ಟಾರ್ ಸುವರ್ಣದ 'ಅವನು ಮತ್ತು ಶ್ರಾವಣಿ' ಹಾಗೂ ಜೀ ಕನ್ನಡ ವಾಹಿನಿಯ ಜೋಡಿ ನಂ 1 ಶೋ ಟೈಟಲ್ ಟ್ರ್ಯಾಕ್ ಹಾಡಿದ್ದಾರೆ.
'ರೈಡರ್' ಸಿನಿಮಾದ "ರಾಧೆ ರಾಧೆ.." ಹಾಡಿನ ಮೂಲಕ ಸ್ಯಾಂಡಲ್ವುಡ್ನಲ್ಲೂ ಹಿನ್ನಲೆ ಗಾಯಕಿಯಾಗಿ ಕಾಣಿಸಿಕೊಂಡಿರುವ ಪೃಥ್ವಿ ಭಟ್ 'ಶಿವ 143' ಸಿನಿಮಾದ "ಮಳೆ ಹನಿಯೇ..", 'ಕಾಣೆಯಾದವರ ಬಗ್ಗೆ ಪ್ರಕಟಣೆ' ಸಿನಿಮಾದ "ಕಾ.. ಕಾ.. ಕೋ..", 'ಸೌತ್ ಇಂಡಿಯನ್ ಹೀರೋ' ಸಿನಿಮಾದ "ಘಮ.. ಘಮ..", 'ಕೌಸಲ್ಯ ಸುಪ್ರಜಾ ರಾಮ'ದ ಪ್ರೀತಿಸುವೆ, ಹಾಗೇ ಇದೇ ಸಿನಿಮಾದ ಟೈಟಲ್ ಟ್ರ್ಯಾಕ್ ಹಾಗೂ 'ಅರ್ಧಂಬರ್ಧ ಪ್ರೇಮಕಥೆ'ಯ "ಹುಚ್ಚು ಮನಸ ಹುಡುಗಿ.." ಹಾಡಿಗೆ ದನಿಯಾಗಿದ್ದಾರೆ.


Click it and Unblock the Notifications











