'ಶ್ರೀದೇವಿ' ಎಂದಿದ್ದ 'ಪುಷ್ಪ' ಸಿನಿಮಾದ ಹಾಡು 'ಶ್ರೀವಲ್ಲಿ' ಆಗಿದ್ದು ಹೇಗೆ?
ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಸಿನಿಮಾ ಬಹುದೊಡ್ಡ ಹಿಟ್ ಆಗಿದೆ. ಸಿನಿಮಾದ ಹಾಡಂತೂ ಭಾರಿ ಜನಪ್ರಿಯತೆ ಗಳಿಸಿದೆ. ಸಾಮಾಜಿಕ ಜಾಲತಾಣದ ತುಂಬೆಲ್ಲ 'ಶ್ರೀವಲ್ಲಿ'ಯೇ ತುಂಬಿಕೊಂಡಿದ್ದಾಳೆ.
ದೇವಿಶ್ರೀಪ್ರಸಾದ್ ಸಂಗೀತ ಸಂಯೋಜಿಸಿರುವ 'ಶ್ರೀವಲ್ಲಿ' ಹಾಡು ಬಹಳ ವೈರಲ್ ಆಗಿದೆ. ತೆಲುಗು, ಕನ್ನಡ, ಹಿಂದಿ, ಮಲಯಾಳಂ ಎಲ್ಲ ಭಾಷೆಗಳಲ್ಲಿಯೂ ಹಾಡು ಹಿಟ್ ಆಗಿದೆ. ಆದರೆ ಹಿಂದಿಯಲ್ಲಿ ಬಹಳ ದೊಡ್ಡ ಹಿಟ್ ಆಗಿದೆ.
ತೆಲುಗಿನಲ್ಲಿ ಜನಪ್ರಿಯ ಹಾಡುಗಾರ ಸಿದ್ ಶ್ರೀರಾಮ್ ಈ ಹಾಡನ್ನು ಹಾಡಿದ್ದಾರೆ. ಆದರೆ ತೆಲುಗಿಗಿಂತ ಹಿಂದಿ ಭಾಷೆಯ 'ಶ್ರೀವಲ್ಲಿ' ಹಾಡು ಹೆಚ್ಚು ಹಿಟ್ ಆಗಿದೆ. ಯೂಟ್ಯೂಬ್ನಲ್ಲಿ 'ಶ್ರೀವಲ್ಲಿ' ಹಿಂದಿ ವರ್ಷನ್ ಹಾಡನ್ನು 25 ಕೋಟಿಗೂ ಹೆಚ್ಚು ಬಾರಿ ನೋಡಲಾಗಿದೆ. ಅದೂ ಒಂದು ತಿಂಗಳಲ್ಲಿ ಅದೇ ತೆಲುಗು ಹಾಡನ್ನು 4 ಕೋಟಿ ಬಾರಿ ಮಾತ್ರವೇ ನೋಡಲಾಗಿದೆ.
ವಿಶೇಷವೆಂದರೆ ಹಿಂದಿ ವರ್ಷನ್ನಲ್ಲಿ ಈ ಹಾಡು 'ಶ್ರೀವಲ್ಲಿ' ಎಂದಲ್ಲ ಬದಲಿಗೆ 'ಶ್ರೀದೇವಿ' ಎಂದು ರೆಕಾರ್ಡ್ ಮಾಡಲಾಗಿತ್ತು. ಹಿಂದಿಯಲ್ಲಿ ಶ್ರೀವಲ್ಲಿ ಹಾಡನ್ನು ಜಾವೇದ್ ಅಲಿ ಹಾಡಿದ್ದು, ಅವರೇ ಈ ಆಸಕ್ತಿಕರ ವಿಷಯವನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ಈ ಬದಲಾವಣೆ ಮಾಡಿದ್ದು ಸಂಗೀತ ನಿರ್ದೇಶಕ ದೇವಿ ಶ್ರೀಪ್ರಸಾದ್ ಅಂತೆ. ಆದರೆ ನಂತರ ಬದಲಾಯಿಸಿಬಿಟ್ಟರು.

''ಶ್ರೀದೇವಿ ಎಂದು ಹಾಡಿ ರೆಕಾರ್ಡ್ ಸಹ ಮಾಡಿದ್ದೆವು''
ದಕ್ಷಿಣ ಭಾರತದಲ್ಲಿ ಶ್ರೀವಲ್ಲಿ ಎಂದರೆ ಎಲ್ಲರಿಗೂ ಕನೆಕ್ಟ್ ಆಗುತ್ತದೆ ಆದರೆ ಉತ್ತರ ಭಾರತದವರಿಗೆ ಶ್ರೀವಲ್ಲಿ ಹೆಸರು ಕನೆಕ್ಟ್ ಆಗುವುದಿಲ್ಲ ಅದರ ಬದಲು ಶ್ರೀದೇವಿ ಎಂದರೆ ಹೇಗೆ? ಹೇಗೋ ಶ್ರೀದೇವಿ ಬಾಲಿವುಡ್ನ ಪ್ರಮುಖ ನಟಿಯರಲ್ಲಿ ಒಬ್ಬರು ಎಂದು ದೇವಿಶ್ರೀ ಪ್ರಸಾದ್ ಸಲಹೆ ಕೊಟ್ಟರು ಅಂತೆಯೇ ನಾನು ಶ್ರೀದೇವಿ ಎಂದೇ ಹಾಡಿದೆ ಅದನ್ನು ರೆಕಾರ್ಡ್ ಸಹ ಮಾಡಿದರು ಆದರೆ ಅದು ಹಾಡಿಗೆ ಸರಿಯಾಗಿ ಹೊಂದಿಕೆ ಆಗಲಿಲ್ಲ ಹಾಗೂ ನಿರ್ದೇಶಕರು ಸಹ ಶ್ರೀದೇವಿ ಹೆಸರು ಬೇಡ ಎಂದ ಕಾರಣ ನಾವು ಶ್ರೀವಲ್ಲಿಯನ್ನೇ ಉಳಿಸಿಕೊಂಡೆವು ಎಂದಿದ್ದಾರೆ.

ನನಗೆ ಜನಪ್ರಿಯತೆ ತಂದುಕೊಟ್ಟ ಹಾಡಿದು: ಜಾವೇದ್ ಅಲಿ
ತಮಗೆ ಹಾಡು ಹಾಡುವ ಅವಕಾಶ ಸಿಕ್ಕ ಬಗ್ಗೆಯೂ ಹೇಳಿರುವ ಜಾವೇದ್, ನಾನು ಅಂಡರ್ರೇಟೆಡ್ ಗಾಯಕನಾಗಿದ್ದೆ. ನನಗೆ ದೊಡ್ಡ ಮಟ್ಟದ ಗುರುತು ಗಳಿಸಿಕೊಟ್ಟಿದ್ದು ಇದೇ ಹಾಡು. ನಾನು ಇಳಯರಾಜ ಅವರ ಸಂಗೀತ ನಿರ್ದೇಶನದ ಹಾಡೊಂದನ್ನು ಹಾಡಲು ಚೆನ್ನೈಗೆ ಬಂದಿದ್ದೆ. ಇಳಯರಾಜ ಅವರು ಕರೆ ಮಾಡಲೆಂದು ಕಾಯುತ್ತಾ ಹೋಟೆಲ್ ಒಂದರಲ್ಲಿ ಕುಳಿತಿದ್ದೆ ಆಗಲೇ ನನಗೆ ದೇವಿ ಶ್ರೀ ಪ್ರಸಾದ್ ಕರೆ ಮಾಡಿ ಹಾಡು ಹಾಡಲು ಬರಲು ಹೇಳಿದರು'' ನೆನಪು ಮಾಡಿಕೊಂಡಿದ್ದಾರೆ ಜಾವೇದ್ ಅಲಿ.

''ಇಳಯರಾಜಗೆ ಹಾಡಲು ಹೋಗಿ ಈ ಹಾಡು ಹಾಡಿದೆ''
''ಇಳಯರಾಜ ಅವರಿಗಾಗಿ ಹಾಡುವುದು ನನ್ನ ಬಹುವರ್ಷಗಳ ಕನಸಾಗಿತ್ತು. ಆದರೆ ಈಗ ದೇವಿಶ್ರೀಪ್ರಸಾದ್ ಕರೆಯುತ್ತಿದ್ದಾರೆ ಏನು ಮಾಡುವುದೆಂದು ಆತಂಕದಲ್ಲಿದ್ದೆ. ಅಷ್ಟರಲ್ಲಿ ದೇವಿಶ್ರೀ ಪ್ರಸಾದ್ ಅವರೇ, ನೀನು ನಮಗಾಗಿ ಹಾಡು, ಒಂದೊಮ್ಮೆ ಮಧ್ಯದಲ್ಲಿ ಇಳಯರಾಜಾ ಅವರು ಕರೆ ಮಾಡಿದರೆ ನೀನು ರೆಕಾರ್ಡಿಂಗ್ ಬಿಟ್ಟು ಹೊರಟು ಬಿಡು ಎಂದರು. ನಾನೂ ಒಪ್ಪಿಕೊಂಡೆ ಕೆಲವೇ ನಿಮಿಷಗಳಲ್ಲಿ ಗಾಡಿ ಬಂತು. ತಯಾರಾಗಿ ಹೋಗಿ ಕೆಲವೇ ಗಂಟೆಗಳಲ್ಲಿ ಹಾಡು ಹಾಡಿ ರೆಕಾರ್ಡ್ ಮಾಡಿಬಿಟ್ಟೆವು'' ಎಂದಿದ್ದಾರೆ ಜಾವೇದ್ ಅಲಿ.

ಕನ್ನಡದಲ್ಲಿ ಸಿದ್ ಶ್ರೀರಾಮ್ ಹಾಡಿದ್ದಾರೆ
ಶ್ರೀವಲ್ಲಿ ಹಾಡನ್ನು ಒಂದೊಂದು ಭಾಷೆಯಲ್ಲಿ ಒಬ್ಬೊಬ್ಬ ಪ್ರಮುಖ ಹಾಡುಗಾರರು ಹಾಡಿದ್ದಾರೆ. ತೆಲುಗು ಹಾಗೂ ತಮಿಳು, ಮಲಯಾಳಂನಲ್ಲಿ ಜನಪ್ರಿಯ ಗಾಯಕ ಸಿದ್ ಶ್ರೀರಾಮ್ ಹಾಡಿದ್ದಾರೆ. ಹಿಂದಿಯಲ್ಲಿ ಜಾವೇದ್ ಅಲಿ ಹಾಡಿದ್ದಾರೆ. ಅದೇ ಸಿನಿಮಾದ 'ದಾಕ್ಕೊ ದಾಕ್ಕೋ ಮೇಕ' ಹಾಡನ್ನು ಕನ್ನಡದಲ್ಲಿ 'ಜೋಕೆ ಜೋಕೆ ಮೇಕೆ' ಎಂದು ವಿಜಯಪ್ರಕಾಶ್ ಹಾಡಿದ್ದಾರೆ. ಆ ಹಾಡೂ ಸಹ ಹಿಟ್ ಆಗಿದೆ. ಇದೀಗ 'ಪುಷ್ಪ' ಸಿನಿಮಾದ ಮೊದಲ ಭಾಗವಷ್ಟೆ ಬಿಡುಗಡೆ ಆಗಿದ್ದು ಸಿನಿಮಾದ ಎರಡನೇ ಭಾಗ ಈ ವರ್ಷಾಂತ್ಯಕ್ಕೆ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ನಾಯಕಿಯಾಗಿ ಕನ್ನಡತಿ ರಶ್ಮಿಕಾ ಮಂದಣ್ಣ ನಟಿಸಿದ್ದು, ವಿಲನ್ ಪಾತ್ರದಲ್ಲಿ ಕನ್ನಡದ ನಟ ಡಾಲಿ ಧನಂಜಯ್ ನಟಿಸಿದ್ದಾರೆ.


Click it and Unblock the Notifications











