ಆಲ್ಓಕೆ vs ರಾಹುಲ್ ಡಿಟ್ಟೋ ಜಗಳ ಸರಿನಾ? ಕನ್ನಡದ ಫಸ್ಟ್ ರ್ಯಾಪರ್ ರಾಕೇಶ್ ಅಡಿಗ ಹೇಳಿದ್ದಿಷ್ಟು!
ಕನ್ನಡದಲ್ಲಿ ಆಗೊಮ್ಮೆ ಈಗೊಮ್ಮೆ ಸ್ಟಾರ್ ವಾರ್ ನೋಡಿದ್ವಿ, ಫ್ಯಾನ್ ವಾರ್ಗಳನ್ನಂತೂ ಪ್ರತಿನಿತ್ಯ ನೋಡ್ತಾನೆ ಇರುತ್ತೇವೆ. ಆದರೆ ಮನರಂಜನಾ ಕ್ಷೇತ್ರಕ್ಕೆ ಈಗ ಹೊಸ ವಾರ್ ಸೇರ್ಪಡೆಗೊಂಡಿದೆ. ಅದುವೇ ರ್ಯಾಪರ್ಗಳ ವಾರ್. ಹೌದು, ಕನ್ನಡ ಮ್ಯೂಸಿಕ್ ಪ್ರಪಂಚದಲ್ಲಿ ಸದ್ಯ ಸಕ್ರಿಯರಾಗಿರುವ ರ್ಯಾಪರ್ಗಳೆಂದರೆ ತಕ್ಷಣ ತಲೆಗೆ ಬರುವ ಹೆಸರುಗಳಲ್ಲಿ ಆಲ್ಓಕೆ ಹಾಗೂ ರಾಹುಲ್ ಡಿಟ್ಟೋ ಕೂಡ ಇರಲಿದ್ದಾರೆ.
ತಮ್ಮದೇ ಶೈಲಿಯ ಹಾಡುಗಳನ್ನು ರಚಿಸಿ, ಹಾಡುವ ಮೂಲಕ ಕೇಳುಗರ ಹೃದಯ ಗೆದ್ದು ಅಭಿಮಾನಿಗಳನ್ನೂ ಸಹ ಹೊಂದಿರುವ ಈ ಇಬ್ಬರೂ ತಮ್ಮದೇ ಪ್ರತ್ಯೇಕ ಯುಟ್ಯೂಬ್ ಚಾನೆಲ್ ಹೊಂದಿದ್ದು, ಲಕ್ಷಾಂತರ ಚಂದಾದಾರರನ್ನೂ ಸಹ ಪಡೆದುಕೊಂಡಿದ್ದಾರೆ. ಹೀಗೆ ಪ್ರತ್ಯೇಕವಾಗಿ ಹಾಡುಗಳನ್ನು ತಯಾರಿಸಿ ಒಳ್ಳೆಯ ಹೆಸರು ಗಳಿಸಿರುವ ಈ ಆಲ್ಓಕೆ ಹಾಗೂ ರಾಹುಲ್ ಡಿಟ್ಟೋ ಈ ಹಿಂದೆ ಒಂದೇ ರ್ಯಾಪ್ ಗ್ಯಾಂಗ್ನ ಸದಸ್ಯರಾಗಿದ್ದವರು.

ಹೌದು, ನಂದೇ ರೆಕಾರ್ಡ್ ಎಂದು ಸದ್ಯ ಅಬ್ಬರಿಸುತ್ತಿರುವ ರಾಹುಲ್ ಡಿಟ್ಟೋ ಈ ಹಿಂದೆ ಟೀಮ್ ಆಲ್ಓಕೆ ಸದಸ್ಯನಾಗಿ ಕೆಲ ಹಾಡು ಹಾಗೂ ಲೈವ್ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದವರು. ಆದರೆ ಈ ತಂಡ 2018ರ ಫೆಬ್ರವರಿ 1ರಂದು ಬಿಡುಗಡೆ ಮಾಡಿದ ನಂಗನ್ಸಿದ್ದು ಹಾಡು ಈ ಇಬ್ಬರನ್ನೂ ಬೇರೆ ಮಾಡಿಬಿಟ್ಟಿತು. ಹಾಡಿನಲ್ಲಿ ಚಂದನ್ ಶೆಟ್ಟಿಯನ್ನು ಟ್ರೋಲ್ ಮಾಡಿದ ಸಾಲುಗಳು ತುಂಬಿದ್ದವುಲ. ಪರೋಕ್ಷವಾಗಿ ಚಂದನ್ ಶೆಟ್ಟಿಯ ಕಾಲೆಳೆಯಲಾಗಿತ್ತು.
ಈ ಹಾಡು ವಿವಾದದ ರೂಪ ಪಡೆದುಕೊಂಡ ಬಳಿಕ ಆಲ್ಓಕೆ ಹಾಗೂ ಚಂದನ್ ಶೆಟ್ಟಿ ಒಂದಾದರು ಹಾಗೂ ಡಿಟ್ಟೋ ತನ್ನದೇ ಸ್ವಂತ ಚಾನೆಲ್ ಕಟ್ಟಿದರು. ಹೀಗೆ ಇಬ್ಬರು ದೂರಾಗಿ ತಮ್ಮ ಪಾಡಿಗೆ ಹಾಡುಗಳನ್ನು ರಚಿಸುತ್ತಿರುವಾಗಲೇ ಮೊನ್ನೆ ಡಿಟ್ಟೋ 'ನಂಗನ್ಸಿದ್ದು 2' ಹಾಡನ್ನು ಬಿಡುಗಡೆಗೊಳಿಸಿ ಆಲ್ಓಕೆ ಮೇಲೆ ನೇರವಾಗಿ ಚಾಟಿ ಬೀಸಿದರು. ಈ ಹಾಡಿನಲ್ಲಿ ತಾನು ಆಲ್ಓಕೆ ದೂರಾಗಲು ಕಾರಣವೇನು, ನಂಗನ್ಸಿದ್ದು ಮೊದಲ ಹಾಡು ಬಿಡುಗಡೆಯಾದ ಬಳಿಕ ಏನೆಲ್ಲಾ ಆಯಿತು ಎಂಬುದನ್ನು ತಿಳಿಸಿದ್ದರು.
ಮಾಡಿದ ಕೆಲಸಕ್ಕಾಗಿ ದುಡ್ಡು ಕೊಡಲಿಲ್ಲ, ಚಂದನ್ ಶೆಟ್ಟಿ ವಿರುದ್ಧ ಹಾಡು ಮಾಡಿಸಿದ, ನಮ್ಮ ನಮ್ಮಲ್ಲೇ ತಂದಿಟ್ಟ ಎಂದು ಸಾಲುಗಳನ್ನು ರಾಹುಲ್ ಡಿಟ್ಟೋ ತಮ್ಮ ಹಾಡಿನಲ್ಲಿ ಆಲ್ಓಕೆ ವಿರುದ್ಧ ಬರೆದಿದ್ದರು. ಹೀಗೆ ಡಿಟ್ಟೋ ಆಕ್ರೋಶ ಹೊರಹಾಕಿದ ಬೆನ್ನಲ್ಲೇ ಆಲ್ಓಕೆ ಸಹ ಡೋಂಟ್ ವರಿ 2 ಹಾಡನ್ನು ಬಿಡುಗಡೆ ಮಾಡುವ ಮೂಲಕ ರಾಹುಲ್ ಡಿಟ್ಟೋ ಮಾಡಿದ ಆರೋಪಗಳಿಗೆ ತಿರುಗೇಟು ಕೊಡಲು ಮುಂದಾಗಿದ್ದಾರೆ. ಸದ್ಯ ಈ ಇಬ್ಬರ ಕಿತ್ತಾಟ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದ್ದು, ಕನ್ನಡದ ಮೊದಲ ರ್ಯಾಪರ್ ರಾಕೇಶ್ ಅಡಿಗ ಸಹ ಈ ಕುರಿತು ಪ್ರತಿಕ್ರಿಯಿಸಿದ್ದಾರೆ.

ಪೃಥ್ವಿ ಅಂಬಾರ್ ನಟನೆಯ ದೂರದರ್ಶನ ಚಿತ್ರದ ಪ್ರೀಮಿಯರ್ ಶೋಗೆ ಆಗಮಿಸಿದ್ದ ರಾಕೇಶ್ ಅಡಿಗ ದಿಗ್ವಿಜಯ ಸುದ್ದಿ ವಾಹಿನಿ ಜತೆ ಮಾತನಾಡಿ ರಾಹುಲ್ ಡಿಟ್ಟೋ ಹಾಗೂ ಆಲ್ಓಕೆ ನಡುವಿನ ಕಿತ್ತಾಟದ ಬಗ್ಗೆ ಪ್ರತಿಕ್ರಿಯಿಸಿದರು. ರ್ಯಾಪ್ ಪ್ರಪಂಚದಲ್ಲಿ ಈ ರೀತಿಯ ಕಿತ್ತಾಟ ಈ ಹಿಂದೆಯೂ ನಡೆದಿದೆ ಎಂದ ರಾಕೇಶ್ ಅಡಿಗ ಇದು ಅವರಿಬ್ಬರ ವೈಯಕ್ತಿಕ ವಿಷಯ ಇದನ್ನು ತಪ್ಪು ಅಥವಾ ಸರಿ ಎಂದು ಹೇಳುವ ಹಕ್ಕು ನನಗಿಲ್ಲ ಎಂದರು.
ಇನ್ನೂ ಮುಂದುವರಿದು ಮಾತನಾಡಿದ ರಾಕೇಶ್ ಅಡಿಗ ಪೋಸ್ಟ್ ಹಾಕಿಕೊಂಡು, ಕೋಲು ದೊಣ್ಣೆ ಹಿಡಿದುಕೊಂಡು ಕಿತ್ತಾಡುವುದಕ್ಕಿಂತ ಸಂಗೀತದ ಮೂಲಕವೇ ಜಗಳ ಮಾಡುತ್ತೇವೆ ಎಂದರೆ ಅದು ಒಳ್ಳೆಯದೇ ಎಂದು ರಾಕೇಶ್ ಅಡಿಗ ತಮ್ಮ ಅಭಿಪ್ರಾಯ ತಿಳಿಸಿದರು. ಇಷ್ಟು ದಿನಗಳಾದರೂ ಅವರಿಬ್ಬರು ಹಾಡಿನ ಮೂಲಕವೇ ಜಗಳ ಮಾಡುತ್ತಿದ್ದಾರೆ ಎಂದರೆ ಅವರ ನಡುವೆ ದ್ವೇಷವಿಲ್ಲ ಕೇವಲ ವೈಮನಸ್ಸು ಉಂಟಾಗಿದೆ, ಇವತ್ತು ಕಿತ್ತಾಡುವವರು ನಾಳೆ ಒಂದಾಗಬಹುದು ಎಂದು ಮಾತನಾಡಿದರು.


Click it and Unblock the Notifications











