ಸ್ನೇಹಿತರ ದಿನಾಚರಣೆಗೆ 'RRR' ಚಿತ್ರದಿಂದ 'ದೋಸ್ತಿ' ಹಾಡು ಗಿಫ್ಟ್
ತೆಲಗು ಸಿನಿಮಾರಂಗ ಮಾತ್ರವಲ್ಲದೆ ಇಡೀ ಭಾರತೀಯ ಸಿನಿಮಾರಂಗ ಕಾತರದಿಂದ ಕಾಯುತ್ತಿರುವ ಆರ್ ಆರ್ ಆರ್ ಸಿನಿಮಾದಿಂದ ದೋಸ್ತಿ ಹಾಡು ಬಿಡುಗಡೆಯಾಗಿದೆ. ಚಿತ್ರದ ಬಿಗ್ ಅಪ್ಡೇಟ್ಗಾಗಿ ಅಭಿಮಾನಿಗಳು ಸುಮಾರು 3 ವರ್ಷಗಳಿಂದ ಕಾಯುತ್ತಿದ್ದರು. ಇದೀಗ ಮೊದಲ ಹಾಡು ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳ ಮನತಣಿಸಿದ್ದಾರೆ.
ಸ್ನೇಹಿತರ ದಿನಾಚರಣೆಯ ವಿಶೇಷವಾಗಿ ಆರ್ ಆರ್ ಆರ್ ಸಿನಿಮಾದಿಂದ ದೋಸ್ತಿ ಹಾಡನ್ನು ಬಿಡುಗಡೆ ಮಾಡಲಾಗಿದೆ. ದೋಸ್ತಿ ಹಾಡು ಕೇವಲ ತೆಲುಗು ಮಾತ್ರವಲ್ಲದೆ ತಮಿಳು, ಮಲಯಾಳಂ, ಹಿಂದಿ ಮತ್ತು ಕನ್ನಡದಲ್ಲೂ ಬಿಡುಡೆಯಾಗಿದೆ. ವಿಶೇಷ ಎಂದರೆ ಹಾಡಿನಲ್ಲಿ ಎಂ ಎಂ ಕೀರವಾಣಿ ಜೊತೆಗೆ ಎಲ್ಲಾ ಭಾಷೆಯಲ್ಲೂ ಹಾಡಿರುವ ಗಾಯಕರು ಕಾಣಿಸಿಕೊಂಡಿದ್ದಾರೆ.
ಹಾಡಿನ ಕೊನೆಯಲ್ಲಿ ಚಿತ್ರದ ನಾಯಕರಾದ ರಾಮ್ ಚರಣ್ ಮತ್ತು ಜೂ.ಎನ್ ಟಿ ಆರ್ ಕಾಣಿಸಿಕೊಂಡಿದ್ದಾರೆ. ಕನ್ನಡದಲ್ಲಿ ಈ ಹಾಡಿಗೆ ಯಜಿನ್ ನಿಜಾರ್ ಧ್ವನಿಯಾಗಿದ್ದಾರೆ. ಹಾಡಿಗೆ ಅಜಾದ್ ವರದರಾಜ್ ಸಾಹಿತ್ಯ ರಚಿಸಿದ್ದಾರೆ. ಇನ್ನು ಉಳಿದಂತೆ ಬೇರೆ ಬೇರೆ ಭಾಷೆಯಲ್ಲಿ ಅನಿರುದ್ಧ್, ಅಮಿತ್ ತ್ರಿವೇದಿ, ವಿಜಯ್ ಜೇಸುದಾಸ್, ಹೇಮಚಂದ್ರ ಹಾಡಿದ್ದಾರೆ. ಎಲ್ಲರೂ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಹಾಡು ಬಿಡುಗಡೆ ಆಗುತ್ತಿದ್ದಂತೆ ಸಿಕ್ಕಾಪಟ್ಟೆ ವೀಕ್ಷಣೆ ಪಡೆದುಕೊಂಡಿದೆ. ಅಂದಹಾಗೆ ಆರ್ ಆರ್ ಆರ್ ಸಿನಿಮಾದ ಆಡಿಯಾ ದಾಖಲೆ ಮೊತ್ತಕ್ಕೆ ಮಾರಟವಾಗಿದೆ. ಆಡಿಯೋ ಮಾರಾಟವಾದ ಬೆನ್ನಲ್ಲೇ ಚಿತ್ರದಿಂದ ಮೊದಲ ಹಾಡು ಬಿಡುಗಡೆ ಮಾಡುವುದಾಗಿ ಅನೌನ್ಸ್ ಮಾಡಿ ಕುತೂಹಲ ಹೆಚ್ಚಿಸಿದ್ದರು. ಇದೀಗ ಹಾಡು ಅಭಿಮಾನಿಗಳ ಮುಂದೆ ಬಂದಿದೆ.
ಇನ್ನು ಆರ್ ಆರ್ ಆರ್ ಸಿನಿಮಾದ ಆಡಿಯೋ ಹಕ್ಕು ದಾಖಲೆ ಮಾರಾಟವಾಗಿದೆ. ಟಿ- ಸಿರೀಸ್ ಮತ್ತು ಲಹರಿ ಆಡಿಯೋ ಸಂಸ್ಥೆ RRR ಚಿತ್ರದ ಆಡಿಯೋವನ್ನು ತನ್ನದಾಗಿಸಿಕೊಂಡಿದೆ. ಮೂಲಗಳ ಪ್ರಕಾರ ಆರ್ ಆರ್ ಆರ್ ಆಡಿಯೋ ಬರೊಬ್ಬರಿ 25 ಕೋಟಿ ರೂ.ಗೆ ಮಾರಾಟವಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಚಿತ್ರದಲ್ಲಿ ಜೂ.ಎನ್ ಟಿ ಆರ್ ಕೋಮರಾಮ್ ಭೀಮ್ ಪಾತ್ರದಲ್ಲಿ ಕಾಣಿಸಿಕೊಂಡರೆ, ರಾಮ್ ಚರಣ್ ಅಲ್ಲೂರಿ ಸೀತರಾಮ ರಾಜು ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಇನ್ನು ವಿಶೇಷ ಎಂದರೆ ಚಿತ್ರದಲ್ಲಿ ಬಾಲಿವುಡ್ ಖ್ಯಾತ ನಟ ಅಜಯ್ ದೇವಗನ್ ಸಹ ವಿಶೇಷ ಪಾತ್ರದಲ್ಲಿ ಮಿಂಚಿದ್ದಾರೆ. ನಾಯಕಿಯಾಗಿ ಬಾಲಿವುಡ್ ಖ್ಯಾತ ನಟಿ ಅಲಿಯಾ ಭಟ್ ನಟಿಸಿದ್ದಾರೆ. ಮೊದಲ ಬಾರಿಗೆ ಅಲಿಯಾ ದಕ್ಷಿಣ ಭಾರತೀಯ ಸಿನಿಮಾರಂಗದಲ್ಲಿ ನಟಿಸಿದ್ದಾರೆ.
ಆರ್ಆರ್ಆರ್ ಚಿತ್ರದಲ್ಲಿ ಅಲಿಯಾ ಭಟ್ 'ಸೀತೆ' ಎನ್ನುವ ಪಾತ್ರ ನಿರ್ವಹಿಸಿದ್ದು, ರಾಮ್ ಚರಣ್ ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚಿಗೆ ಅಲಿಯಾ ತನ್ನ ಭಾಗದ ಚಿತ್ರೀಕರಣ ಮುಗಿಸಿ ಮುಂಬೈ ವಾಪಸ್ ಆಗಿದ್ದಾರೆ. ಆರ್ಆರ್ಆರ್ ಚಿತ್ರ ಹೊರತುಪಡಿಸಿ ಅಲಿಯಾ ಭಟ್ ಹಿಂದಿಯ ಹಲವು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 'ಗಂಗುಬಾಯಿ ಕಥಿಯಾವಾಡಿ' ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಬ್ರಹ್ಮಾಸ್ತ್ರ ಶೂಟಿಂಗ್ ಕೊನೆಯ ಹಂತದಲ್ಲಿದೆ. ಇದರ ಜೊತೆಗೆ ಡಾರ್ಲಿಂಗ್ಸ್ ಎಂಬ ಹೊಸ ಸಿನಿಮಾ ಆರಂಭಿಸಿದ್ದಾರೆ.
ಇನ್ನು ರಾಮ್ ಚರಣ್ ಮತ್ತು ಜೂ.ಎನ್ ಟಿ ಆರ್ ಭಾಗದ ಚಿತ್ರೀಕರಣ ಬಾಕಿ ಇದ್ದು, ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರೀಕರಣ ಮುಗಿಸಲಿದ್ದಾರೆ. ಈ ಸಿನಿಮಾ ಮುಗಿಸುತ್ತಿದ್ದಂತೆ ರಾಮ್ ಚರಣ್ ಶಂಕರ್ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾದಲ್ಲೂ ಬ್ಯುಸಿಯಾಗಲಿದ್ದಾರೆ. ಜೂ.ಎನ್ ಟಿ ಆರ್ ಸಹ ಮುಂದಿನ ಸಿನಿಮಾದಲ್ಲಿ ಬ್ಯುಸಿಯಾಗಲಿದ್ದಾರೆ. ಸದ್ಯ ಆರ್ ಆರ್ ಆರ್ ಸಿನಿಮಾ ಅಕ್ಟೋಬರ್ 13ಕ್ಕೆ ತೆರೆಗೆ ಬರಲಿದೆ ಎನ್ನುವ ಮಾತು ಕೇಳಿಬರುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಸಿನಿಮಾ ಅಂದುಕೊಂಡ ದಿನಕ್ಕೆ ತೆರೆಗೆ ಬರಲಿದೆ.


Click it and Unblock the Notifications











