ಮತದಾನ ಮಾಡಿ, ದೇಶದ ಮೇಲೆ ಅಭಿಮಾನ ಇಡಿ: ಯೋಗರಾಜ್ ಭಟ್ ಹೇಳ್ತಾವ್ರೆ ಕೇಳಿ..
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮತದಾನದ ಪ್ರಮಾಣವನ್ನ ಹೆಚ್ಚಿಸಲು ಕರ್ನಾಟಕ ಚುನಾವಣಾ ಆಯೋಗಕ್ಕೆ ಹೊಳೆದ ಹೊಸ ಪರಿಕಲ್ಪನೆಯೇ 'ಚುನಾವಣಾ ಗೀತೆ'.
ಜನರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲು 'ಚುನಾವಣಾ ಗೀತೆ' ಸಿದ್ಧ ಪಡಿಸಲು ನಿರ್ದೇಶಕ ಯೋಗರಾಜ್ ಭಟ್ ಹಾಗೂ 'ಪಂಚತಂತ್ರ' ಸಿನಿಮಾ ತಂಡವನ್ನ ಕರ್ನಾಟಕ ಚುನಾವಣಾ ಆಯೋಗ ಆಯ್ಕೆ ಮಾಡಿತು.
ಯೋಗರಾಜ್ ಭಟ್ ಸಾಹಿತ್ಯ, ವಿ.ಹರಿಕೃಷ್ಣ ಸಂಗೀತ ನೀಡಿರುವ 'ಚುನಾವಣಾ ಗೀತೆ' ಇಂದು ಸಂಜೆ 6.30ಕ್ಕೆ ಬಿಡುಗಡೆ ಆಗಲಿದೆ. ವಿಕಾಸ ಸೌಧದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಕೂಡ ಭಾಗವಹಿಸಲಿದ್ದಾರೆ.

ಅಷ್ಟಕ್ಕೂ, 'ಯಬಡ ತಬಡ' ಸಾಹಿತ್ಯಕ್ಕೆ ಫೇಮಸ್ ಆಗಿರುವ ಯೋಗರಾಜ್ ಭಟ್ರು, 'ಚುನಾವಣಾ ಗೀತೆ'ಯನ್ನ ಹೇಗೆ ಬರೆದಿರಬಹುದು ಎಂಬ ಕುತೂಹಲ ಇರುವವರಿಗೆ ಇದೋ.. ಇಲ್ಲಿದೆ ಭಟ್ರು ಬರೆದಿರುವ 'ಚುನಾವಣೆ ಗೀತೆ'ಯ ಸಾಹಿತ್ಯ....
ಪಲ್ಲವಿ:
ನಿನ್ನ ಬೆರಳಲಿ ನಾಡಿನ ಭವಿಷ್ಯ ಅಡಗಿಹುದೂ ಮಹನೀಯ....
ಶಾಹಿ ಚುಕ್ಕಿಯ ಧರಿಸು ಈ ದಿನ ತಪ್ಪದಲೇ ಮಹರಾಯ....
ಕರುನಾಡ ನಾಗರಿಕರೆಂದು, ಮತ ನೀಡುವಿಕೆಯಲ್ಲಿ ಮುಂದು
ಹೆಮ್ಮೆಯಿಂದ ತೋರಿ ನಿಮ್ಮ ತೋರು ಬೆರಳನ್ನಾ....
ಮಾಡಿ ಮಾಡಿ ಮಾಡಿ ಮತದಾನ
ಇರಲಿ ದೇಶದ ಮೇಲೆ ಅಭಿಮಾನ!
ಚರಣ 1 :
ವೋಟು ನಿನ್ನ ಅಧಿಕಾರ, ನೀನೇ ಆರಿಸು ಸರಕಾರ
ವೋಟು ನೀಡದೆ ನೀನು ಕುಂತರೆ
ನಿನಗೆ ನೀನೇ ಮಾಡಿಕೊಳ್ಳುವೆ ಅಪಚಾರ....
ಅರಸ ಯಾರೇ ಆಗಿರಲಿ, ಅವನು ನಮ್ಮ ಸೇವಕನು
ಇದನು ಅರಿತರೆ ಜನ್ಮ ಸಾರ್ಥಕ
ದಾಸನು ಅಲ್ಲ ಇಲ್ಲಿ ಯಾವುದೇ ಮತದಾರ...
ಹದಿನೆಂಟು ಆದವರೆ ಬನ್ನಿ
ಯುವಶಕ್ತಿ ತೋರ್ಬೆರಳ ತನ್ನಿ
ಐದು ಕೋಟಿ ವೋಟು ನೀಡಿ
ದಾಖಲೆ ಬರೆಯೋಣ....
ಮಾಡಿ ಮಾಡಿ ಮಾಡಿ ಮತದಾನ
ಇರಲಿ ದೇಶದ ಮೇಲೆ ಅಭಿಮಾನ
ಬನ್ನಿ ಹೊರಗೆ ಬೇಡ ಬಿಗುಮಾನ
ನಾಡು ದೊಡ್ಡದು ಸ್ವಾಮಿ ನಮಗಿನ್ನ
ಚರಣ 2 :
ಭ್ರಷ್ಟ ನಾಯಕರ ಹುಟ್ಟಿಗೆ ಕಾರಣ
ಮತ ನೀಡದ ಪ್ರಜೆಯು...
ಉತ್ತಮ ರಾಷ್ಟ್ರಕೆ ಕೆಚ್ಚಿನ ಪ್ರಜೆಯೇ
ಎಂದೆಂದಿಗು ಪ್ರಭುವು.....
ಬನ್ನಿ ಮನಸು ಮಾಡೋಣ
ಹೊಸದೇ ಕನಸು ಕಾಣೋಣ
ಇದು ಕರ್ತವ್ಯ ಇದು ಕರ್ತವ್ಯ
ರಾಷ್ಟ್ರ ರಚಿಸೋಣ.....
ಮಾಡಿ ಮಾಡಿ ಮಾಡಿ ಮತದಾನ
ಇರಲಿ ದೇಶದ ಮೇಲೆ ಅಭಿಮಾನ
ನಮ್ಮ ವೋಟು ನಮಗೇ ಬಹುಮಾನ
ತಿರುಗಿ ನೋಡಲಿ ನಮ್ಮನು ಶತಮಾನ..
- ಯೋಗರಾಜ್ ಭಟ್


Click it and Unblock the Notifications











