ಸಂಚಿತ್ ಹೆಗ್ಡೆ ಹೃದಯ ಹದಿನಾರು ಚೂರಾಗಿದೆಯಂತೆ
ಸರಿಗಮಪ ಕಾರ್ಯಕ್ರಮದ ನಂತರ ದೊಡ್ಡ ಜನಪ್ರಿಯತೆ ಗಳಿಸಿರುವ ಯುವ ಗಾಯಕ ಸಂಚಿತ್ ಹೆಗ್ಡೆ ಹೃದಯ ಈಗ ಹದಿನಾರು ಚೂರಾಗಿದೆಯಂತೆ. ಆದರೆ, ರಿಯಲ್ ಆಗಿ ಅಲ್ಲ. ಹಾಡಿನಲ್ಲಿ ಮಾತ್ರ. ಹೌದು, ಸಂಚಿತ್ ಈಗ ಕನ್ನಡದ ಮತ್ತೊಂದು ಹೊಸ ಹಾಡಿಗೆ ಧ್ವನಿ ನೀಡಿದ್ದಾರೆ.
ನಟಿ ಮೇಘನಾ ರಾಜ್ ಅಭಿನಯದ 'ಇರುವುದೆಲ್ಲವ ಬಿಟ್ಟು ಇರುವೆ ಬಿಟ್ಟುಕೊಳ್ಳುವುದೇ ಜೀವನ' ಸಿನಿಮಾಗೆ ಈಗ ಸಂಚಿತ್ ಹೆಗ್ಡೆ ಹಾಡಿದ್ದಾರೆ. ಹಾಡಿಗೆ ಕವಿರಾಜ್ ಸಾಹಿತ್ಯ ಹಾಗೂ ವಿ.ಶ್ರೀಧರ್ ಸಂಭ್ರಮ್ (ವಿ ಎಸ್ ಎಸ್) ಸಂಗೀತ ಇದೆ. 'ಹೃದಯ ಹದಿನಾರು ಚೂರಾಗಿದೆ ನಿನ್ನಿಂದ ಏನ್ ಚಂದ..' ಎಂಬ ಈ ಹಾಡು ಯುವಕ ಯುವತಿಯರನ್ನು ಸೆಳೆಯುವ ಹಾಗಿದೆ. 'ಕಾಲೇಜ್ ಕುಮಾರ್', 'ಚಮಕ್', 'ಟಗರು' ಬಳಿಕ ಮತ್ತೆ ಸಂಚಿತ್ ತಮ್ಮ ಗಾನಯಾನ ಮುಂದುವರೆಸಿದ್ದಾರೆ.

ಅಂದಹಾಗೆ, ಈ ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿವೆ. ಈಗಾಗಲೇ ಎರಡು ಹಾಡುಗಳು ಬಿಡುಗಡೆಯಾಗಿದ್ದು, ಯೂ ಟ್ಯೂಬ್ ನಲ್ಲಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ವಿಶೇಷ ಅಂದರೆ ಈ ಸಿನಿಮಾದಲ್ಲಿ ಹಾಡುವ ಮೂಲಕ ತಮಿಳು ನಟ ಸಿಂಬು ಮೊದಲ ಬಾರಿಗೆ ಕನ್ನಡಕ್ಕೆ ಕಾಲಿಟ್ಟಿದ್ದಾರೆ.

Bilwa Creations ಬ್ಯಾನರ್ ನಲ್ಲಿ ಚಿತ್ರ ನಿರ್ಮಾಣವಾಗಿದ್ದು, ದೇವರಾಜ್ ದಾವಣಗೆರೆ ಬಂಡವಾಳ ಹಾಕಿದ್ದಾರೆ. ಕಾಂತ ಕನ್ನಲಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಮೇಘನಾ ಜೊತೆಗೆ ತಿಲಕ್ ಸಿನಿಮಾದಲ್ಲಿ ನಟಿಸಿದ್ದಾರೆ.


Click it and Unblock the Notifications











