'ಊರಿಗೊಬ್ಬ ರಾಜ' ಹಾಡಿಗೆ ವಿರೋಧ: ಸಂತೋಷ್ ಆನಂದ್ ರಾಮ್ ಹೇಳಿದ್ದೇನು?
ಯುವರತ್ನ ಸಿನಿಮಾದ ಊರಿಗೊಬ್ಬ ರಾಜ ಹಾಡಿನ ವಿರುದ್ಧ ಕೆಲವು ಅಪ್ಪು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಅಪ್ಪು ಡ್ಯಾನ್ಸ್ಗೆ ತಕ್ಕಂತೆ ಈ ಹಾಡು ಬಂದಿಲ್ಲ. ಸಾಹಿತ್ಯ ಇಷ್ಟ ಆಗಿಲ್ಲ ಎಂದು ಟೀಕಿಸಿದ್ದರು.
ಈ ಕುರಿತು ನಿರ್ದೇಶಕ ಸಂತೋಷ್ ಆನಂದ್ ರಾಮ್ ಸ್ಪಷ್ಟನೆ ನೀಡಿದ್ದಾರೆ. ಯುವರತ್ನ ಸುದ್ದಿಗೋಷ್ಠಿಯಲ್ಲಿ ಈ ಹಾಡಿನ ಬಗ್ಗೆ ಮಾತನಾಡಿದ ಸಂತೋಷ್ ''ಈ ಹಾಡನ್ನು ಶೇಕಡಾ 30 ರಷ್ಟು ಜನಕ್ಕೆ ಇಷ್ಟ ಆಗಿಲ್ಲ ಅಂತಿರಬಹುದು. ಆದರೆ, ಶೇಕಡಾ 70ರಷ್ಟು ಮಂದಿಗೆ ಇಷ್ಟ ಆಗಿದೆ. ಸಿನಿಮಾನ ಒಂದೇ ವರ್ಗಕ್ಕೆ ಮಾಡಲು ಸಾಧ್ಯವಿಲ್ಲ. ಒಂದೊಂದು ಹಾಡು ಒಂದೊಂದು ವರ್ಗಕ್ಕಾಗಿ ಮಾಡಲಾಗಿದೆ'' ಎಂದರು.
''ಪವರ್ ಆಫ್ ಯೂತ್ ಯುವಕರಿಗೆ ಮಾಡಿದ್ದು, ನೀನಾದೇ ನಾ... ಕಪಲ್ಸ್ಗೆಮಾಡಿದ್ದು, ಊರಿಗೊಬ್ಬ ಹಾಡು ಮಕ್ಕಳಿಗಾಗಿ ಮಾಡಿದ್ದು. ಅಪ್ಪು ಅವರನ್ನು ಮಕ್ಕಳು ಹೆಚ್ಚು ಇಷ್ಟ ಪಡ್ತಾರೆ. ಇದು ಎಲ್ಲರ ಅಭಿಪ್ರಾಯವಲ್ಲ, ಇದು ಕೆಲವರು ಅಭಿಪ್ರಾಯ. ಇದಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಟ್ಟಾಗ ಹಾಗೆ ಅನಿಸುತ್ತದೆ. ಚಿತ್ರರಂಗದಲ್ಲಿ ಅಭಿಪ್ರಾಯ ಹಂಚಿಕೊಳ್ಳಲು ಎಲ್ಲರಿಗೂ ಸ್ವತಂತ್ರ ಇದೆ. ಅದನ್ನು ಗೌರವಿಸುತ್ತೇವೆ'' ಎಂದು ಟೀಕೆಗೆ ಉತ್ತರಿಸಿದ್ದಾರೆ.

ಫೆಬ್ರವರಿ 25 ರಂದು ಈ ಹಾಡು ರಿಲೀಸ್ ಆಗಿತ್ತು. ಎಸ್ ತಮನ್ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಈ ಹಾಡಿಗೆ ಸಂತೋಷ್ ಆನಂದ್ ರಾಮ್ ಸಾಹಿತ್ಯ ರಚಿಸಿದ್ದರು. ಆದರೆ, ಸಾಹಿತ್ಯ ಬಗ್ಗೆ ನಿರಾಸೆಯಾಗಿದ್ದ ಅಭಿಮಾನಿಗಳು, ಯುವರತ್ನ ಚಿತ್ರದಿಂದ ಈ ಹಾಡನ್ನು ತೆಗೆಯಿರಿ ಎಂದು ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಿದ್ದರು.
ಚಿತ್ರದ ಐದನೇ ಹಾಡು 'ಫೀಲ್ ದಿ ಪವರ್' ಮಾರ್ಚ್ 12 ರಂದು ಬಿಡುಗಡೆಯಾಗಲಿದೆ. ಬೆಳಗ್ಗೆ 10.12 ನಿಮಿಷಕ್ಕೆ ಹೊಸ ಹಾಡಿನ ಲಿರಿಕಲ್ ವಿಡಿಯೋ ಬರಲಿದೆ.
ಇನ್ನುಳಿದಂತೆ ಪುನೀತ್ ರಾಜ್ ಕುಮಾರ್, ಸಯೇಶ್ ಸೈಗರ್, ಧನಂಜಯ್, ದಿಗಂತ್, ಸೋನು ಗೌಡ, ಪ್ರಕಾಶ್ ರಾಜ್, ಪ್ರಕಾಶ್ ಬೆಳವಾಡಿ ಸೇರಿದಂತೆ ಹಲವರು ನಟಿಸಿದ್ದಾರೆ. ಸಂತೋಷ್ ಆನಂದ್ ರಾಮ್ ನಿರ್ದೇಶನದ ಈ ಚಿತ್ರವನ್ನು ಹೊಂಬಾಳೆ ಫಿಲಂಸ್ ನಿರ್ಮಿಸಿದ್ದಾರೆ.


Click it and Unblock the Notifications











