ನಾಯಕ ನಟ ಆಗಲಿದ್ದಾರೆ ಗಾಯಕ ಸಿದ್ ಶ್ರೀರಾಮ್: ಹಿಟ್ ನಿರ್ದೇಶಕನಿಂದ ಆಫರ್
ಗಾಯಕರುಗಳು ನಟರಾಗಿರುವುದು ತೀರ ವಿರಳ, ಅದರಲ್ಲಿಯೂ ನಾಯಕ ನಟರಾಗಿರುವುದು ಬಹಳ ಅಪರೂಪವೇ. ಇದೀಗ ಗಾಯಕರಾಗಿ ಸದ್ದು ಮಾಡುತ್ತಿರುವ ಸಿದ್ ಶ್ರೀರಾಮ್ಗೆ ಇಂಥ ಒಂದು ಅದೃಷ್ಟ ಒಲಿದು ಬಂದಿದೆ.
ಕನ್ನಡದಲ್ಲಿ 'ಹಾಯಾಗಿದೆ ಎದೆಯೊಳಗೆ' ಹಾಡಿನ ಮೂಲಕ ಅಲೆ ಎಬ್ಬಿಸಿದ ಸಿದ್ ಶ್ರೀರಾಮ್ ಇದೀಗ ನಾಯಕ ನಟನಾಗುವತ್ತ ಹೆಜ್ಜೆ ಇಟ್ಟಿದ್ದಾರೆ. ಭಾರತೀಯ ಚಿತ್ರರಂಗದ ಅತ್ಯುತ್ತಮ ನಿರ್ದೇಶಕರಲ್ಲಿ ಒಬ್ಬರೆನಿಸಿಕೊಂಡಿರುವ ಮಣಿರತ್ನಂ ಸಿನಿಮಾ ಮೂಲಕ ಸಿದ್ ಶ್ರೀರಾಮ್ ನಟರಾಗಲಿದ್ದಾರೆ ಎನ್ನಲಾಗುತ್ತಿದೆ.
ಮಣಿರತ್ನಂ ನಿರ್ದೇಶನದ ಸಿನಿಮಾ ಮೂಲಕವೇ ಸಿದ್ ಶ್ರೀರಾಮ್ ಮೊದಲ ಬಾರಿಗೆ ಸಿನಿಮಾಗಳಿಗೆ ಹಿನ್ನೆಲೆ ಗಾಯನ ಮಾಡಿದರು. ಆ ನಂತರ ಕೆಲವೇ ವರ್ಷಗಳ ಅವಧಿಯಲ್ಲಿ ಅತ್ಯುತ್ತಮ ಗಾಯಕರಲ್ಲಿ ಒಬ್ಬರಾಗಿ ಸಿದ್ ಶ್ರೀರಾಮ್ ಬೆಳೆದರು.

ಈ ಮೊದಲು ಕೇವಲ ಗಾಯಕರಾಗಿದ್ದ ಸಿದ್ ಶ್ರೀರಾಮ್ ಅನ್ನು ಸಂಗೀತ ನಿರ್ದೇಶಕರನ್ನಾಗಿ ಮಾಡಿದ ಶ್ರೇಯ ಸಹ ಮಣಿರತ್ನಂ ಅವರಿಗೇ ಸಲ್ಲಬೇಕು. ಮಣಿರತ್ನಂ ಚಿತ್ರಕತೆ ಬರೆದು, ನಿರ್ಮಾಣ ಮಾಡಿದ್ದ 'ವಾನಮ್ ಕೊಟ್ಟತುಮ್' ಸಿನಿಮಾದಲ್ಲಿ ಸಿದ್ ಶ್ರೀರಾಮ್ ಮೊದಲ ಬಾರಿಗೆ ಹಿನ್ನೆಲೆ ಸಂಗೀತ ನೀಡುವ ಜೊತೆಗೆ ಹಾಡುಗಳನ್ನೂ ಕಂಪೋಸ್ ಮಾಡಿದ್ದರು.
ಬ್ರೂಕ್ಲಿ ವಿವಿಯಲ್ಲಿ ಸಂಗೀತ ವಿದ್ಯಾರ್ಥಿಯಾಗಿದ್ದ ಸಿದ್ ಶ್ರೀರಾಮ್ ಅನ್ನು ಮೊದಲಿಗೆ ಗುರುತಿಸಿದ್ದು ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್. ಅವರೇ ಮಣಿರತ್ನಂ ನಿರ್ದೇಶನದ 'ಕಡಲ್' ಸಿನಿಮಾದಲ್ಲಿ 'ಅಡಿಯೇ' ಹಾಡು ಹಾಡಲು ಅವಕಾಶ ನೀಡಿದ್ದರು. ಆ ಸಿನಿಮಾ 2013 ರಲ್ಲಿ ಬಿಡುಗಡೆ ಆಗಿತ್ತು. ಈ ಒಂಬತ್ತು ವರ್ಷದಲ್ಲಿ ತಮಿಳು, ತೆಲುಗಿನಲ್ಲಿ ಹಲವು ಸೂಪರ್ ಹಿಟ್ ಹಾಡುಗಳನ್ನು ಸಿದ್ ಶ್ರೀರಾಮ್ ಹಾಡಿದ್ದಾರೆ. ಕನ್ನಡದಲ್ಲಿ 'ಟಾಮ್ ಆಂಡ್ ಜೆರ್ರಿ', 'ಭಜರಂಗಿ 2' 'ಲವ್ ಯು ರಚ್ಚು' ಹಾಗೂ ಗಣೇಶ್ ನಟನೆಯ 'ಸಖತ್' ಸಿನಿಮಾಗಳಿಗೆ ಹಾಡು ಹಾಡಿದ್ದಾರೆ.
ಮಣಿರತ್ನಂ ಪ್ರಸ್ತುತ 'ಪೊನ್ನಿಯಿನ್ ಸೆಲ್ವನ್' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಐಶ್ವರ್ಯಾ ರೈ, ವಿಕ್ರಂ, ಕಾರ್ತಿ, ಜಯಂ ರವಿ, ಪ್ರಕಾಶ್ ರೈ, ತ್ರಿಶಾ, ಐಶ್ವರ್ಯಾ ಲಕ್ಷ್ಮಿ, ಶೋಭಿತಾ, ಕಿಶೋರ್, ಶರತ್ಕುಮಾರ್, ಪಾರ್ತಿಬನ್, ಪ್ರಭು ಇನ್ನೂ ಹಲವು ದೊಡ್ಡ ನಟರ ದಂಡೇ ಈ ಸಿನಿಮಾದಲ್ಲಿದೆ. ಸಿನಿಮಾವು ಎರಡು ಭಾಗಗಳಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾದ ಮೊದಲ ಭಾಗದ ಚಿತ್ರೀಕರಣ ಬಹುತೇಕ ಮುಗಿದಿದೆ. ಸಿನಿಮಾಕ್ಕೆ ಎ.ಆರ್.ರೆಹಮಾನ್ ಸಂಗೀತ ನೀಡಿದ್ದಾರೆ.


Click it and Unblock the Notifications











