'ಈ ಮಗು ಈ ಹಾಡನ್ನು ಹಾಡೋಕೆ ಸಾಧ್ಯನಾ?'ಎಂದಿದ್ದರಂತೆ ನಾಗತಿಹಳ್ಳಿ- 'ಅಮೃತಧಾರೆ' ಹಾಡಿನ ಬಗ್ಗೆ ಚೈತ್ರಾ ಮಾತು
ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನ, ರಮ್ಯಾ ಮತ್ತು ಧ್ಯಾನ್ ಅಭಿನಯ, ಸ್ಯಾಂಡಲ್ ವುಡ್ ಗೆ ಬಿಗ್ ಬಿ ಅಮಿತಾಬ್ ಬಚ್ಚನ್ ಎಂಟ್ರಿ, ಮನೋ ಮೂರ್ತಿ ಸಂಗೀತದಲ್ಲಿ ಮೂಡಿಬಂದ ಅಮೃತಧಾರೆ ಸಿನಿಮಾವನ್ನು ಪ್ರೇಕ್ಷಕರು ಮರೆಯಲು ಸಾಧ್ಯನಾ? ಈ ಸಿನಿಮಾ ರಿಲೀಸ್ ಆಗಿ 15 ವರ್ಷಗಳು ಕಳೆದಿವೆ. 2005 ಅಕ್ಟೋಬರ್ 7ರಂದು ಸಿನಿಮಾ ರಿಲೀಸ್ ಆಗಿದೆ. ಪ್ರೇಕ್ಷಕರ ಮೆಚ್ಚುಗೆಯ ಜೊತೆಗೆ ಬಾಕ್ಸ್ ಆಫೀಸ್ ನಲ್ಲೂ ಅಮೃತಧಾರೆ ಭರ್ಜರಿ ಕಮಾಯಿ ಮಾಡಿತ್ತು.
ರಮ್ಯಾ ಮತ್ತು ಧ್ಯಾನ್ ಅಭಿನಯಕ್ಕೆ ಅಭಿಮಾನಿಗಳು ಮನಸೋತಿದ್ದರು. ಚಿತ್ರದ ಹಾಡುಗಳು ಸಹ ಅಷ್ಟೆ ಸಂಚಲನ ಸೃಷ್ಟಿ ಮಾಡಿತ್ತು. ಚಿತ್ರದ 'ಹುಡುಗ ಹುಡುಗ...' ಹಾಡನ್ನು ಹಾಡಿದ ಗಾಯಕಿ ಚೈತ್ರಾ ಹಾಡಿನ ಹಿಂದಿನ ಕಥೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಚೈತ್ರಾ ಹಾಡನ್ನು ಹಾಡಲು ಸ್ಟುಡಿಯೋಗೆ ಎಂಟ್ರಿ ಕೊಟ್ಟಾಗ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ 'ಈ ಮಗು ಈ ಹಾಡನ್ನು ಹಾಡೋಕೆ ಸಾಧ್ಯನಾ?' ಎಂದು ಕೇಳಿದ್ದರಂತೆ. ಈ ಬಗ್ಗೆ ಚೈತ್ರಾ ದೀರ್ಘವಾಗಿ ಬರೆದುಕೊಂಡಿದ್ದಾರೆ. ಮುಂದೆ ಓದಿ..

ಅಮೃತಧಾರೆ ಸಿನಿಮಾದ 'ಹುಡುಗ ಹುಡುಗ' ತುಂಬಾ ಸ್ಪೆಷಲ್
'ನಾನು ಹಾಡಿರುವ 950+ ಹಾಡುಗಳಲ್ಲಿ, ಅಮೃತಧಾರೆ ಸಿನಿಮಾದ 'ಹುಡುಗ ಹುಡುಗ' ತುಂಬಾ ಸ್ಪೆಷಲ್ ಹಾಗೂ ಮನಸ್ಸಿಗೆ ಹತ್ತಿರವಾದ ಹಾಡು. ಅಮೃತಧಾರೆ ಸಿನಿಮಾ ಬಿಡುಗಡೆಯಾಗಿ 15 ವರ್ಷಗಳು ಆಗಿದೆಯಂತೆ, ಇನ್ನೂ ಮೊನ್ನೆ ಹಾಡಿದ ಹಾಡು ಅಂತ ಅನ್ನಿಸುತ್ತದೆ. ಪ್ರಸಾದ್ ಸ್ಟುಡಿಯೋದಲ್ಲಿ ಒಂದು ಟ್ರ್ಯಾಕ್ ಹಾಡೋಡಿದೆ, ಬಂದು ಬಿಡಿ ಚೈತ್ರಾ ಅಂತ ಪ್ರವೀಣ್ ದುತ್ ಸ್ಟೀಫನ್ ಫೋನ್ ಮಾಡಿದ್ದು ಇನ್ನೂ ನೆನಪಿದೆ.'

ಚಂದ್ರಶೇಖರ್-ಮನೋ ಮೂರ್ತಿ ಅಂದ್ಮೇಲೆ ನಡುಕ ಶುರುವಾಯಿತು
'ಈ ಹಾಡು ಹಾಡಲು ಸ್ಟೀಫನ್ ಸರ್ ನನ್ನನ್ನು ಸೂಚಿಸಿದರು. ನನ್ನ ಸ್ಕೂಟಿಯಲ್ಲಿ ಪ್ರಸಾದ್ ಸ್ಟುಡಿಯೋಗೆ ಹೋದೆ. ಆಗ ನಾನು ಹಿನ್ನೆಲೆ ಗಾಯಕಿಯಾಗಿ 60-65 ಹಾಡುಗಳನ್ನ ಹಾಡಿದ್ದೆ, ಸುಮಾರು 150 ಚಿತ್ರಗಳಿಗೆ ಕೋರಸ್ ಹಾಡಿದ್ದೆ. ಸೋಲೋ ಸಿಂಗಿಂಗ್ ಎಂದರೆ ಭಯ, ಆತ್ಮವಿಶ್ವಾಸ ಕಮ್ಮಿ ಅಂತಾನೇ ಹೇಳಬಹುದು. ಅಲ್ಲಿ ಹೋದಾಗ ತಿಳಿಯಿತು ನಾಗತಿಹಳ್ಳಿ ಚಂದ್ರಶೇಖರ್ ಅವರ ಸಿನೆಮಾ, ಮನೋ ಮೂರ್ತಿ ಅವರ ಸಂಗೀತ ಅಂತ. ಕೈ ಕಾಲೆಲ್ಲ ನಡುಕ' ಶುರುವಾಗಿತ್ತಂತೆ.

ಈ ಮಗು ಈ ಹಾಡು ಹಾಡಲು ಸಾಧ್ಯನಾ? ಎಂದಿದ್ದರು
'ನಾನಿನ್ನೂ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದೆ. ಪುಟ್ಟ ಹುಡುಗಿಯಂತೆ ಕಾಣುತ್ತಿದ್ದೆ. ನಾಗತಿಹಳ್ಳಿ ಚಂದ್ರಶೇಖರ ಸರ್ ನನ್ನನ್ನು ನೋಡಿ 'ಈ ಮಗು ಈ ಹಾಡು ಹಾಡಲು ಸಾಧ್ಯನಾ?' ಅಂದಿದ್ದರು. ನನಗೇ ಇನ್ನೂ ಗಾಬರಿ ಶುರು ಆಯಿತು. ಆಗ ನನಗೆ ಧೈರ್ಯ ತುಂಬಿದ್ದು ಸ್ಟೀಫನ್ ಸರ್'
Recommended Video

ಈ ಹಾಡು ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿದೆ
'ನಾಗತಿಹಳ್ಳಿ ಚಂದ್ರಶೇಖರ ಕೂಡ ಮರಿ, ಮಗು ಅಂತ ಮಾತನಾಡಿಸಿ ಧೈರ್ಯ ಹೇಳಿದರು. ಮನೋ ಮೂರ್ತಿ ಸರ್ ಕೂಡ ಪ್ರೋತ್ಸಾಹಿಸಿದರು. ಆ ನಂತರ ಹಿಂದೆ ತಿರುಗಿ ನೋಡಲೇ ಇಲ್ಲ. ಈ ಹಾಡಿನಿಂದ ನನಗೆ ಸಾಕಷ್ಟು ಪ್ರಶಸ್ತಿಗಳು, ಅವಕಾಶಗಳು ದೊರೆತವು. ಆದರೆ ಇದೆಲ್ಲವನ್ನೂ ಮೀರಿಸಿದ ದೊಡ್ಡ ಪ್ರಶಸ್ತಿ "ಕನ್ನಡಿಗರ ಪ್ರೀತಿ ಮತ್ತು ಅವರ ಮನಸ್ಸಿನಲ್ಲಿ ಖಾಯಂ ಜಾಗ"ವನ್ನು ನಾನು ಪಡೆದುಕೊಂಡೆ'


Click it and Unblock the Notifications











