'ಕಾಂತಾರ' ಚಿತ್ರದಲ್ಲಿ ಬಳಕೆಯಾದ ಹದಿನಾರು ವರ್ಷದ ಹಿಂದಿನ ತುಳು ಹಾಡು!
ಭಾರತೀಯ ಚಿತ್ರರಂಗದಲ್ಲಿ 'ಕಾಂತಾರ' ಚಿತ್ರ ಸದ್ದು ಮಾಡುತ್ತಿದೆ. ತುಳುನಾಡಿನ ದೈವಾರಾಧನೆಯನ್ನು ಪ್ರಧಾನವಾಗಿರಿಸಿ ಮಾಡಿದ ಚಿತ್ರ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ.
'ಕಾಂತಾರಾ' ಚಿತ್ರದ ಕತೆ, ಮೇಕಿಂಗ್ ಜೊತೆಗೆ ಸಿನಿಮಾದ ಹಾಡು ಹಾಗೂ ಹಿನ್ನೆಲೆ ಸಂಗೀತ ಭಾರಿ ಮೆಚ್ಚುಗೆಗೆ ಕಾರಣವಾಗಿದೆ. ಅದರಲ್ಲಿಯೂ ಸಿನಿಮಾದಲ್ಲಿ ಬಳಕೆಯಾಗಿರುವ ತುಳು ಹಾಡೊಂದು ಬಹಳ ಗಮನ ಸೆಳೆಯುತ್ತಿದೆ. ಅಸಲಿಗೆ ಈ ಹಾಡನ್ನು ಹದಿನಾರು ವರ್ಷ ಹಿಂದೆ ಕಲಾವಿದ ಮೈಮ್ ರಾಮ್ ದಾಸ್ ಹಾಡಿದ್ದರು. ದೈವಾರಾಧನೆಗೆ ಸಂಬಂಧಿಸಿದ ವಾ ಪೊರ್ಲುಯಾ (ಏನು ಚಂದವೋ) ಎಂಬ ತುಳು ಹಾಡನ್ನು ಕಾಂತಾರಾ ಚಿತ್ರದಲ್ಲಿ ಬಳಕೆ ಮಾಡಲಾಗಿದೆ.
ತುಳು ಜನಪದೀಯ ಹಾಡುಗಾರ ಮೈಮ್ ರಾಮ್ ದಾಸ್ ಹಾಡಿರುವ ಈ ಹಾಡು ಯಥಾವತ್ತಾಗಿ ಕಾಂತಾರಾ ಚಿತ್ರದಲ್ಲಿ ಬಳಕೆಯಾಗಿದೆ. ಭಂಡಾರದ ಮನೆಯಲ್ಲಿ ದೈವದ ಕೋಲ ಆಗುವ ಸಂಧರ್ಭದಲ್ಲಿ ಈ ಹಾಡನ್ನು ಬಳಸಲಾಗಿದೆ. ಈ ಹಾಡನ್ನು ಹದಿನಾರು ವರ್ಷಗಳ ಹಿಂದ ದೀಪನಲಿಕೆ ಎಂಬ ಆಲ್ಬಮ್ಗಾಗಿ ರಚಿಸಲಾಗಿತ್ತು.

ಮೈಮ್ ರಾಮ್ ದಾಸ್ ಮಾತು
ವಾ ಪೊರ್ಲುಯಾ ಹಾಡು ಬಳಕೆ ಬಗ್ಗೆ ಗಾಯಕ ಮೈಮ್ ರಾಮ್ ದಾಸ್ ಖುಷಿ ವ್ಯಕ್ತಪಡಿಸಿದ್ದಾರೆ. ಈ ಹಾಡು ದೈವಾರಾಧನೆಗೆ ಸಂಬಂಧಿಸಿದ ಹಾಡಾಗಿದೆ. ಸಾಹಿತ್ಯ, ರಾಗವೂ ಅದೇ ಮಾದರಿಯಲ್ಲಿದೆ. ದೈವಾರಾಧನೆಯಲ್ಲಿ ಬಳಸುವ ವಾದ್ಯ, ತಾಸೆಯನ್ನು ಈ ಹಾಡಲ್ಲಿ ಬಳಸಲಾಗಿದೆ. ಈ ಹಿಂದೆಯೇ ಈ ಹಾಡನ್ನು ಬಳಸಲು ಮತ್ತು ಮಾರ್ಪಾಟು ಮಾಡಿ ಹಾಡಲು ಬೇರೆ ಬೇರೆ ನಾಟಕಗಳಿಂದ, ಸಿನಿಮಾಗಳಿಂದ ಆಫರ್ ಬಂದಿತ್ತು. ಆದರೆ ಸಾಧ್ಯವಾಗಿರಲಿಲ್ಲ. ಆದರೆ ರಿಷಬ್ ಶೆಟ್ಟಿ ಬಂದು ಕೇಳಿದಾಗ ಆಗಲ್ಲ ಅಂತಾ ಹೇಳಲು ಸಾಧ್ಯವಾಗಿಲ್ಲ ಅಂತಾ ಮೈಮ್ ರಾಮ್ ದಾಸ್ ಹೇಳಿದ್ದಾರೆ.

ಅಜನೀಶ್ಗೆ ಇಷ್ಟವಾಯ್ತು ಹಾಡು
ಲಾಕ್ ಡೌನ್ ಸಂಧರ್ಭದಲ್ಲಿ ರಿಷಬ್ ಶೆಟ್ಟಿ 'ಕಾಂತಾರಾ'ದ ಕಥೆ ಹೇಳಿ, ಈ ಚಿತ್ರಕ್ಕೆ ಜನಪದೀಯ ಸಂಗೀತದ ಸಹಾಯ ಕೇಳಿದರು. ಆ ಬಳಿಕ ಸಂಗೀತ ನಿರ್ದೇಶಕ ಅಜನೀಶ್ ಲೋಕೇಶ್ ಮುಂದೆ ಹಲವು ತುಳು ಹಾಡು, ಪಾಡ್ದನ, ಉರಲ್ ಹಾಡುಗಳನ್ನು ಹಾಡಿದೆ. ವಾ ಪೊರ್ಲುಯಾ ಹಾಡಿದಾಗ ಅಜನೀಶ್ ಅವರಿಗೆ ಹಾಡು ಇಷ್ಟ ಆಯಿತು. ಚಿತ್ರದಲ್ಲಿ ಬಳಸಿದರು ಎಂದು ಮೈಮ್ ರಾಮ್ ದಾಸ್ ಹೇಳಿದ್ದಾರೆ.

ಶತಮಾನದ ತುಳು ಹಾಡು 'ವಾ ಪೊರ್ಲುಯಾ'
ಜನಪದೀಯ ಹಿನ್ನಲೆಯುಳ್ಳ ವಾ ಪೊರ್ಲುಯಾ ಹಾಡು ದೈವಾರಾಧನೆಯನ್ನು, ದೈವವನ್ನು ಖುಷಿಯಿಂದ ಹೊಗಳಿ ಗೌರವಿಸುವ ಹಾಡು. ಈ ಹಾಡಿಗೆ ಕಾಪಿರೈಟ್ ಹಾಕಿಲ್ಲ. ಈ ಹಾಡಿಗೆ ಶಶಿ ರಾಜ್ ಕಾವೂರು ಅವರ ಸಾಹಿತ್ಯವಿದೆ. ಹದಿನಾರು ವರ್ಷ ಆದರೂ ಹಾಡು ಹಳೆಯದಾಗಿಲ್ಲ. ನನ್ನ ಗುರು ಭಾಸ್ಕರ್ ನೆಲ್ಲಿತೀರ್ಥ ಹೇಳಿದಂತೆ ವಾ ಪೊರ್ಲುಯಾ ಹಾಡು ಶತಮಾನದ ಹಾಡಾಗಿದೆ. ಕನ್ನಡ ಚಿತ್ರದಲ್ಲಿ ತುಳು ಹಾಡು ಬಳಕೆಯಾಗಿರೋದು ಖುಷಿ ತಂದಿದೆ ಅಂತಾ ಮೈಮ್ ರಾಮ್ ದಾಸ್ ಹೇಳಿದ್ದಾರೆ.

ಭರ್ಜರಿ ಹಿಟ್ ಆದ 'ಕಾಂತಾರ'
'ಕಾಂತಾರ' ಸಿನಿಮಾವನ್ನು ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ್ದಾರೆ. ಸಿನಿಮಾದಲ್ಲಿ ದೈವಾರಾಧನೆ ಕುರಿತ ಕತೆಯಿದೆ. ಸಿನಿಮಾದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಸಿನಿಮಾದಲ್ಲಿ ಸಪ್ತಮಿ ಗೌಡ ನಾಯಕಿಯಾಗಿ ನಟಿಸಿದ್ದಾರೆ. ಕಿಶೋರ್, ಅಚ್ಯುತ್ ಕುಮಾರ್ ಸೇರಿದಂತೆ ಹಲವು ತುಳು ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾಕ್ಕೆ ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ನಿರ್ಮಾಣ ಮಾಡಿರುವುದು ಹೊಂಬಾಳೆ ಫಿಲಮ್ಸ್.


Click it and Unblock the Notifications











