RRR ಆತ್ಮ ಹಿಡಿದು ಬೆಂಗಳೂರಿಗೆ ಬಂದ ರಾಜಮೌಳಿ
ಭಾರತದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ 'RRR' ಸಿನಿಮಾದ ನಿರ್ದೇಶಕ ಎಸ್ಎಸ್ ರಾಜಮೌಳಿ ಇಂದು ಬೆಂಗಳೂರಿಗೆ ಆಗಮಿಸಿದ್ದರು. ಅವರು 'ಆರ್ಆರ್ಆರ್' ಸಿನಿಮಾದ ಆತ್ಮವನ್ನು ಹಿಡಿದು ಇಲ್ಲಿಗೆ ಬಂದಿದ್ದಿದ್ದು ವಿಶೇಷ!
'RRR' ಸಿನಿಮಾದ ಮುಖ್ಯವಾದ ಹಾಡನ್ನು ಬಿಡುಗಡೆ ಮಾಡಲೆಂದು ರಾಜಮೌಳಿ ಅವರು ಬೆಂಗಳೂರಿಗೆ ಆಗಮಿಸಿದ್ದರು. ನಗರದ ಹೋಟೆಲ್ ಒಂದರಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಹಾಡನ್ನು ಬಿಡುಗಡೆ ಮಾಡಲಾಯಿತು.
ಹಾಡು ಬಿಡುಗಡೆಗೆ ಮುನ್ನ ಮಾತನಾಡಿದ ನಿರ್ದೇಶಕ ರಾಜಮೌಳಿ, ''ಇಲ್ಲಿ ನಾನು ಹಾಡು ಬಿಡುಗಡೆ ಮಾಡಲು ಬಂದಿಲ್ಲ. ಈ ಕಾರ್ಯಕ್ರಮ ಸಿನಿಮಾದ ಪ್ರಚಾರ ಕಾರ್ಯಕ್ರಮವೂ ಅಲ್ಲ. 'ಜನನಿ' ಹಾಡು ನಮ್ಮ 'ಆರ್ಆರ್ಆರ್' ಸಿನಿಮಾದ ಆತ್ಮ. ಆ ಆತ್ಮದೊಂದಿಗೆ ನಿಮ್ಮನ್ನು ಪರಿಚಯಿಸಲೆಂದು ಬಂದಿದ್ದೇನೆ ಎಂದರು ರಾಜಮೌಳಿ.
ನಮ್ಮ 'ಆರ್ಆರ್ಆರ್' ಸಿನಿಮಾದಲ್ಲಿ ಭಾವನೆಗಳದ್ದೇ ಪ್ರಧಾನ ಪಾತ್ರ. ಸಿನಿಮಾದ ಪ್ರತಿ ದೃಶ್ಯದಲ್ಲಿಯೂ ಒಂದೊಂದು ಎಮೋಷನ್ ಇದೆ. ಫೈಟ್ ದೃಶ್ಯಗಳಲ್ಲಿಯೂ ಎಮೋಷನ್ ಇದೆ. 'ಹಳ್ಳಿ ನಾಟು' ಹಾಡು ಮಾಸ್ ಹಾಡು ಆದರೆ ಆ ಹಾಡಿನಲ್ಲಿಯೂ ಎಮೋಷನ್ ಇದೆ. ಒಂದು ಸಿನಿಮಾದ ಎಮೋಷನ್ ಎಲ್ಲ ಎಲ್ಲಿ ಹೋಗಿ ಸೇರುತ್ತಿವೆಯೋ ಅದು ಆ ಸಿನಿಮಾ ಆತ್ಮವಾಗಿರುತ್ತದೆ. ನಮ್ಮ ಸಿನಿಮಾದ ಆತ್ಮ ಈ 'ಜನನಿ' ಹಾಡು ಎಂದರು ರಾಜಮೌಳಿ.

''ಸಿನಿಮಾದ ಆತ್ಮಕ್ಕೆ ಮೊದಲು ಸಂಗೀತ ನೀಡುತ್ತಾನೆ ಕೀರವಾಣಿ''
ಸಿನಿಮಾಕ್ಕೆ ರೀರೆಕಾರ್ಡಿಂಗ್ ಮಾಡುವುದು ನನಗೆ ಬಹಳ ಕಷ್ಟದ ಕೆಲಸ. ಅದರಲ್ಲಿಯೂ ನನ್ನ ಸಹೋದರ ಕೀರವಾಣಿ ಜೊತೆ ಸಿನಿಮಾಕ್ಕೆ ಸಂಗೀತ ಜೋಡಿಸಲು ಕುಳಿತುಕೊಳ್ಳುವುದು ಇನ್ನೂ ಕಷ್ಟ. ಅವನು ಸಿನಿಮಾದ ಹಾಡಿಗೆ, ಅಥವಾ ದೃಶ್ಯಗಳಿಗೆ ಸಂಗೀತ ನೀಡುವುದಿಲ್ಲ ಬದಲಿಗೆ ಸಿನಿಮಾದ ಆತ್ಮ ಯಾವುದು ಹುಡುಕಿ ಅದಕ್ಕೆ ಸಂಗೀತ ನೀಡುತ್ತಾನೆ. ಮತ್ತು ಅಲ್ಲಿಂದ ಸಿನಿಮಾದ ಎಲ್ಲ ದೃಶ್ಯ, ಹಾಡುಗಳಿಗೆ ಸಂಗೀತ ನೀಡಲು ಆರಂಭಿಸುತ್ತಾನೆ'' ಎಂದರು ರಾಜಮೌಳಿ.

'ಜನನಿ' ಹಾಡು ನಮ್ಮ ಸಿನಿಮಾದ ಆತ್ಮ
''ಆರ್ಆರ್ಆರ್' ಸಿನಿಮಾದ ಆತ್ಮ ಯಾವುದು ಎಂದು ಹುಡುಕಿ ಅದಕ್ಕೆ ಸಂಗೀತ ನೀಡಲು ಸುಮಾರು ಎರಡು ತಿಂಗಳ ಸಮಯ ಕೀರವಾಣಿ ತೆಗೆದುಕೊಂಡ. ಕೊನೆಗೆ ಒಂದು ದಿನ ಒಂದು ಮ್ಯೂಸಿಕ್ ಪೀಸ್ ನನಗೆ ಕೇಳಿಸಿದ. ನಂತರ ಅದನ್ನೇ ಬೆಳೆಸಿ ಅದ್ಭುತವಾದ ಹಾಡು ಮಾಡಿದ. ಆ ಹಾಡು ಅದೆಷ್ಟು ಅದ್ಭುವಾಗಿತ್ತೆಂದರೆ ಆ ಹಾಡೆ ನಮ್ಮ ಸಿನಿಮಾದ ಆತ್ಮವಾಗಿಬಿಟ್ಟಿತು. ಇಂದು ಸಹ ನಾನು ಹಾಡು ಬಿಡುಗಡೆ ಮಾಡುತ್ತಿದ್ದೇನೆ ಎಂದು ಹೇಳುತ್ತಿಲ್ಲ. ನಮ್ಮ ಸಿನಿಮಾದ ಆತ್ಮವನ್ನು ನಿಮಗೆ ಪರಿಚಯಿಸುತ್ತಿದ್ದೇನೆ'' ಎಂದರು ರಾಜಮೌಳಿ.

ಕನ್ನಡದಲ್ಲಿ ಮಾತು ಆರಂಭಿಸಿದ ರಾಜಮೌಳಿ
ಭಾಷಣದ ಆರಂಭದಲ್ಲಿ ಕನ್ನಡದಲ್ಲೇ ಮಾತನಾಡಿದ ರಾಜಮೌಳಿ, ''ಕ್ಷಮಿಸಿ ನನಗೆ ಕನ್ನಡ ಅಷ್ಟು ಚೆನ್ನಾಗಿ ಬರುವುದಿಲ್ಲ ಅಡ್ಜಸ್ಟ್ ಮಾಡಿಕೊಳ್ಳಿ ಎಂದರು. ಅಲ್ಲದೆ, ಈ ಕಾರ್ಯಕ್ರಮದಲ್ಲಿ ಕೇವಲ ನಾನು ಮಾತ್ರ ಮಾತನಾಡುತ್ತೇನೆ. ನಿಮ್ಮನ್ನೆಲ್ಲ ಮಾತನಾಡಿಸಲು ಸಿನಿಮಾದ ಎಲ್ಲ ಸ್ಟಾರ್ಗಳನ್ನು ಜೊತೆಗೆ ಕರೆದುಕೊಂಡು ಮುಂದಿನ ತಿಂಗಳು ಮತ್ತೆ ಬೆಂಗಳೂರಿಗೆ ಬರುತ್ತೇನೆ. ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಒಂದು ಪ್ರೀ ರಿಲೀಸ್ ಕಾರ್ಯಕ್ರಮ ನಡೆಯಲಿದೆ. ಆ ಕಾರ್ಯಕ್ರಮಕ್ಕೆ, ಜೂ ಎನ್ಟಿಆರ್, ರಾಮ್ ಚರಣ್, ಆಲಿಯಾ ಭಟ್ ಸಹ ಆಗಮಿಸುತ್ತಾರೆ'' ಎಂದರು ರಾಜಮೌಳಿ.

ಜನವರಿ 07ರಂದು ಸಿನಿಮಾ ಬಿಡುಗಡೆ ಆಗಲಿದೆ
'ಆರ್ಆರ್ಆರ್' ಸಿನಿಮಾವು ಭಾರತದ ಅತಿ ನಿರೀಕ್ಷಿತ ಸಿನಿಮಾಗಳಲ್ಲಿ ಒಂದು. 'ಆರ್ಆರ್ಆರ್' ಸಿನಿಮಾವು ತೆಲುಗು ರಾಜ್ಯದ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೋಮರಂ ಭೀಮ್ ಕುರಿತದ್ದಾಗಿದೆ. ಸಿನಿಮಾದಲ್ಲಿ ಜೂ ಎನ್ಟಿಆರ್ ಕೋಮರಂ ಭೀಮ್ ಪಾತ್ರದಲ್ಲಿ, ರಾಮ್ ಚರಣ್ ಅಲ್ಲೂರಿ ಸೀತಾರಾಮ ರಾಜು ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ಗಳಾದ ಆಲಿಯಾ ಭಟ್, ಅಜಯ್ ದೇವಗನ್ ಸಹ ಇದ್ದಾರೆ. ಶ್ರೆಯಾ ಶಿರಿನ್, ಅಜಯ್ ದೇವಗನ್ ಪತ್ನಿಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾವನ್ನು ರಾಜಮೌಳಿ ನಿರ್ದೇಶನ ಮಾಡಿದ್ದು, ಡಿವಿವಿ ದಯಾನಂದ್ ನಿರ್ಮಾಣ ಮಾಡಿದ್ದಾರೆ. ಸಂಗೀತ ನೀಡಿರುವುದು ಕೀರವಾಣಿ. ಸಿನಿಮಾವು ಜನವರಿ 07ಕ್ಕೆ ಬಿಡುಗಡೆ ಆಗಲಿದೆ.


Click it and Unblock the Notifications











